Thursday, June 19, 2025

ಸತ್ಯ | ನ್ಯಾಯ |ಧರ್ಮ

ಅದಾನಿಯ ಬಂದರು ಯೋಜನೆ : ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದ ಮೀನುಗಾರರು

ಕೇರಳ: ತಿರುವನಂತಪುರಂ ಕರಾವಳಿ ಪ್ರದೇಶದಲ್ಲಿ ಅದಾನಿಯವರ ಬೃಹತ್‌ ಬಂದರು ನಿರ್ಮಾಣ ಕಾಮಾಗಾರಿಯ ವಿರುದ್ಧ ಪ್ರತಿಭಟಿಸುತ್ತಿರುವ ಮೀನುಗಾರರು ಭಾನುವಾರ ರಾತ್ರಿ ಸ್ಥಳೀಯ ಪೊಲೀಸ್‌ ಠಾಣೆಯ ಮೇಲೆ ದಾಳಿ ನಡೆಸಿದ್ದು, ಶನಿವಾರದ ಪ್ರತಿಭಟನೆಯ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಿದ್ದ ಐವರನ್ನು ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ.

ವಿಝಿಂಜಮ್‌ ಪ್ರದೇಶದಲ್ಲಿ ಪೊಲೀಸ್‌ಠಾಣೆಯ ನೆನ್ನೆ ರಾತ್ರಿ ದಾಳಿ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಸುಮಾರು 30 ಪೊಲೀಸರು ಗಾಯಗೊಂಡಿದ್ದು, ಹಲವಾರು ವಾಹನಗಳು ಜಖಂ ಆಗಿವೆ. ಮಹಿಳೆಯರೂ ಸೇರಿ ನಡೆಸುತ್ತಿರುವ ಈ ಪರಿಸ್ಥಿತಿಯನ್ನು ತಡೆಯಲು ಅಲ್ಲಿನ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ವಿಝಿಂಜಮ್ಮ ಮತ್ತು ಸುತ್ತಲಿನ ಪ್ರದೇಶಗಳಿಗೆ ಬೃಹತ್‌ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿದ್ದಾರೆ.

ಭಾರತದ ದಕ್ಷಿಣದ ತುದಿಯಲ್ಲಿರುವ ವಿಝಿಂಜಮ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಿಲಿಯನೇರ್‌ ಗೌತಮ್‌ ಅದಾನಿ ಅವರ ಬೃಹತ್‌ ಬಂದರು ನಿರ್ಮಾಣ ಕಾಮಗಾರಿ ಮುಂದುವರಸಿದ್ದು, ಈ ವಿರುದ್ಧವಾಗಿ ಕರಾವಳಿ ಪ್ರದೇಶದ ಮೀನುಗಾರರು ಕಳೆದ ಕೆಲವು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದು, ಭಾನುವಾರ ರಾತ್ರಿ ಏಕಾಏಕಿ ಪೊಲೀಸ್‌ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ.

2015ರಿಂದ ನಿರ್ಮಾಣಗೊಳ್ಳುತ್ತಿರುವ ಬಂದರು ಕಾಮಗಾರಿಯಿಂದಾಗಿ ಕರಾವಳೀ ಪ್ರದೇಶದಲ್ಲೆಡೆ ಬೃಹತ್‌ ಪ್ರಮಾಣದಲ್ಲಿ ಸವೆತಕ್ಕೆ ಕಾರಣವಾಗಿದೆ. ಅದಲ್ಲದೇ ಈ ಯೋಜನೆಯನ್ನು ಮುಂದುವರೆಸಿದರೆ ಈ ಪ್ರದೇಶಗಳಲ್ಲಿರುವ ಸುಮಾರು 56000 ಮೀನುಗಾರರ ಸಮುದಾಯ ಬೀದಿಗೆ ಬಂದು ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ಮಂಡಿಸಿದ್ದರು.

ಶನಿವಾರದಂದು ಬ್ರೇಕ್‌ ವಾಟರ್‌ ನಿರ್ಮಾಣಕ್ಕಾಗಿ ಬಂಡೆಗಳೊಂದಿಗೆ ಬಂದ 24 ಕ್ಕೂ ಹೆಚ್ಚು ಟ್ರಕ್‌ಗಳನ್ನು ಮೀನುಗಾರರಿಂದ ತೀವ್ರ ವಿರೋಧದಿಂದಾಗಿ ಯೋಜನಾ ಸ್ಥಳದಿಂದ ಹಿಂದಕ್ಕೆ ತೆಗೆದುಕೊಂಡಿದ್ದು,  ಪ್ರತಿಭಟನೆ ತೀವ್ರ ಗೊಂಡಿತ್ತು. ಈ ವಿಚಾರವಾಗಿ ಶನಿವಾರ ವಶಕ್ಕೆ ಪಡೆದ ಐವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

2015 ರಿಂದ ನಿರ್ಮಾಣ ಹಂತದಲ್ಲಿರುವ 7,500 ಕೋಟಿ ರೂ.ಗಳ ಬಂದರು ಪೂರ್ಣಗೊಳಿಸಲು ಒತ್ತಾಯಿಸುತ್ತಿರುವ ಸ್ಥಳೀಯ ಹಿಂದೂ ಗುಂಪುಗಳೊಂದಿಗೆ ಮುಖಾಮುಖಿಯಾದ ಶನಿವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಿರುವನಂತಪುರಂ ಆರ್ಚ್ ಬಿಷಪ್ ಥಾಮಸ್ ನೆಟ್ಟೊ, ಸಹಾಯಕ ಬಿಷಪ್ ಆರ್ ಕ್ರಿಸ್ಟುಡಾಸ್ ಮತ್ತು ಆರ್ಚ್ಡಿಯೋಸಿಸ್‌ನ  ಹಲವಾರು ಪಾದ್ರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, FIR ನಲ್ಲಿ ಆರ್ಚ್ ಬಿಷಪ್ ಅವರನ್ನು ಮೊದಲ ಆರೋಪಿ ಎಂದು ಹೇಳಲಾಗಿದೆ.

ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ), ಸೆಕ್ಷನ್ 147 (ಗಲಭೆ), ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ), ಮತ್ತು ಸೆಕ್ಷನ್ 353 (ಸರ್ಕಾರಿ ನೌಕರರನ್ನು ಅಧಿಕೃತ ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಹಲ್ಲೆ ಮಾಡುವುದು) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page