‘ರಾಷ್ಟ್ರಧ್ವಜವನ್ನು ನಿರಾಕರಿಸಿದ ವಿಚಾರದಲ್ಲಿ ನಾನು ಅಮಿತ್ ಷಾ ಮಗನನ್ನು ಟೀಕೆ ಮಾಡಿದ ಕಾರಣಕ್ಕೆ ನನ್ನ ಮೇಲೆ ED ಸಂಸ್ಥೆಯ ಕಡೆಯಿಂದ ಬಿಜೆಪಿ ಕಟ್ಟಿ ಹಾಕಲು ಪ್ರಯತ್ನಿಸುತ್ತಿದೆ. ಹಾಗೊಂದು ವೇಳೆ ED ದಾಳಿಯ ಮೂಲಕ ನನ್ನ ಮೇಲೆ ಬಲಪ್ರಯೋಗ ನಡೆಸಿ ನನ್ನನ್ನು ಭಯಪಡಿಸುವ ಉದ್ದೇಶ ಹೊಂದಿದ್ದರೆ ಅದು ನಿಮ್ಮ ಭ್ರಮೆ ಅಷ್ಟೆ’ ಇದು ಕಲ್ಲಿದ್ದಲು ಕಳ್ಳಸಾಗಣೆ ಆರೋಪದ ಮೇಲೆ ಇಂದು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿ ಬಂದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮಾತು.
ಕಲ್ಲಿದ್ದಲು ಕಳ್ಳ ಸಾಗಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿ ಇಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಈ ಬಗ್ಗೆ 30 ಬಾರಿ ಬೇಕಾದರೂ ವಿಚಾರಣೆ ಎದುರಿಸಲು ಸಿದ್ದನಿದ್ದೇನೆ. ಬಿಜೆಪಿ ಪಕ್ಷದ ಇಂತಹ ಬೆದರಿಕೆಗಳಿಗೆ ಬಗ್ಗುವ ಮಾತಿಲ್ಲ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅಭಿಷೇಕ್ ಬ್ಯಾನರ್ಜಿ ಅವರನ್ನು ವಿಚಾರಣೆ ನಡೆಸಲು ಐವರು ಅಧಿಕಾರಿಗಳ ಇಡಿ ಅಧಿಕಾರಿಗಳ ತಂಡ ಗುರುವಾರ ರಾತ್ರಿ ಕೊಲ್ಕತ್ತಾಕ್ಕೆ ಆಗಮಿಸಿದ್ದರು. ಇದಕ್ಕಿಂತ ಮೂರು ದಿನಗಳ ಮುಂಚೆ ಅಭಿಷೇಕ್ ಬ್ಯಾನರ್ಜಿ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು.