Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮಕ್ಕಳ ವಿದ್ಯಾರ್ಥಿವೇತನ ರದ್ದು ಮಾಡಿದ ಕೇಂದ್ರ ಸರ್ಕಾರದ ವಿರುದ್ಧ AIFRTE ಖಂಡನೆ

ಹೊಸದಿಲ್ಲಿ: ವಾರ್ಷಿಕ 8 ಲಕ್ಷ ರೂಪಾಯಿಗಳ ಆದಾಯದ ಮಿತಿಯ ಕೆಳಗಿರುವ ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ಕಲ್ಪಿಸಿರುವುದು ಮತ್ತು ಒಂದರಿಂದ ಎಂಟನೇ ತರಗತಿವರೆಗಿನ ಮಕ್ಕಳ ವಿದ್ಯಾರ್ಥಿ ವೇತನಗಳನ್ನು ಸ್ಥಗಿತಗೊಳಿಸಿರುವುದನ್ನು ಅಖಿಲ ಭಾರತ ಶಿಕ್ಷಣ ಹಕ್ಕುಗಳ ಸಂಘಟನೆ (AIFRTE) ತೀವ್ರವಾಗಿ ಖಂಡಿಸಿದ್ದು, ಮಕ್ಕಳ ಶಿಕ್ಷಣದ ಹಕ್ಕಿಗೆ ಕೇಂದ್ರ ಸರ್ಕಾರ ಮಾಡಿರುವ ಬಹುದೊಡ್ಡ ದಾಳಿ ಎಂದು ಸಂಘಟನೆ ತಿಳಿಸಿದೆ.

ದೇಶದ ಅತ್ಯಂತ ಪ್ರಮುಖ ಶಿಕ್ಷಣ ತಜ್ಙರು, ಶಿಕ್ಷಣ ಹಕ್ಕುಗಳ ಕಾರ್ಯಕರ್ತರು ಸೇರಿ ರೂಪಿಸಿಕೊಂಡಿರುವ ಸಂಘಟನೆಯಾದ ಅಖಿಲ ಭಾರತ ಶಿಕ್ಷಣ ಹಕ್ಕುಗಳ ಸಂಘಟನೆ, ಕೇಂದ್ರ ಸರ್ಕಾರ ಈ ಕೂಡಲೇ ತನ್ನ ಈ ಕ್ರೂರ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದೆ.

ಎಸ್‌ ಸಿ, ಎಸ್‌ ಟಿ, ಒಬಿಸಿ ಸಮುದಾಯಗಳಿಗೆ ಸೇರಿದ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ ಈಗ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನದ ಶೇ.75ರಷ್ಟನ್ನು ಕೇಂದ್ರ ಸರ್ಕಾರ ಭರಿಸುತ್ತಿದ್ದು, ಶೇ.25ರಷ್ಟನ್ನು ರಾಜ್ಯ ಸರ್ಕಾರಗಳು ನೀಡುತ್ತಿವೆ. ಕೇಂದ್ರ ಸರ್ಕಾರ ವಿದ್ಯಾರ್ಥಿ ವೇತನವನ್ನು ನಿಲ್ಲಿಸುತ್ತಿರುವುದರಿಂದ ಅನಿವಾರ್ಯವಾಗಿ ರಾಜ್ಯ ಸರ್ಕಾರಗಳೇ ಈ ಹೊಣೆಯನ್ನು ಹೊತ್ತುಕೊಳ್ಳಬೇಕಾಗಿದೆ ಎಂದು ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿದರೆ ಅದರಿಂದ ಆಗುವ ಪರಿಣಾಮ ಭೀಕರವಾಗಿರಲಿದೆ. ಮಕ್ಕಳು ಪಠ್ಯಪುಸ್ತಕ, ಸಮವಸ್ತ್ರ ಮತ್ತು ಇತರೆ ಖರ್ಚುಗಳಿಗೆ ಬಳಸುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಿದರೆ ಅವರು ಅನಿವಾರ್ಯವಾಗಿ ಶಾಲೆಗಳಿಂದ ಹೊರಗೆ ಉಳಿದು, ಬಾಲಕಾರ್ಮಿಕರಾಗುವ ಅಪಾಯವಿದೆ ಎಂದು ಸಂಘಟನೆ ಹೇಳಿದೆ.

ಈಗಾಗಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲ ಎಂದು ನಂಬಿಸಿ, ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ,ಮುಚ್ಚುವ ಕಾರ್ಯತಂತ್ರವು ದೇಶದೆಲ್ಲೆಡೆ ಜಾರಿಯಲ್ಲಿದೆ. ವಿದ್ಯಾರ್ಥಿವೇತನವನ್ನು ನಿಲ್ಲಿಸಲಾಗುತ್ತಿರುವ ಕಾರಣ ಮಕ್ಕಳು ಶಾಲೆಗಳಿಗೆ ಬರಲು ಅಸಾಧ್ಯವಾದಾಗ, ಕನಿಷ್ಠ ದಾಖಲಾತಿಯೂ ಆಗುತ್ತಿಲ್ಲವೆಂದು ನೆಪವೊಡ್ಡಿ ನೆರೆಹೊರೆಯ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಅಥವಾ ಸಂಪೂರ್ಣವಾಗಿ ಮುಚ್ಚಿ, ಸರ್ಕಾರಿ ಶಾಲೆಗಳ ಆಸ್ತಿಗಳನ್ನೂ, ಜಾಗವನ್ನು ಸೇರಿದಂತೆ ಒಟ್ಟಿನಲ್ಲಿ ಇಡೀ ಶಿಕ್ಷಣ ಕ್ಷೇತ್ರವನ್ನೇ ಖಾಸಗಿಯವರ ಮಡಿಲಿಗೆ ಹಾಕುವುದು ಇದರ ಹಿಂದಿನ ಹುನ್ನಾರ ಎಂದು ಸಂಘಟನೆ ತಿಳಿಸಿದೆ.

ಇಷ್ಟೆಲ್ಲಾ ತೊಂದರೆಗಳನ್ನು ತಂದೊಡ್ಡುವ ಈ ಜನವಿರೋಧಿ ಮತ್ತು ದುರುದ್ದೇಶಪೂರಿತ ನಿರ್ಧಾರವನ್ನು ಭಾರತ ಸರ್ಕಾರವು ಈ ಕೂಡಲೆ ಹಿಂಪಡೆಯಬೇಕು ಎಂದು AIFRTE ಒತ್ತಾಯಿಸಿದ್ದು, ವಾಸ್ತವವಾಗಿ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಅತ್ಯಂತ ಅಂಚಿನಲ್ಲಿರುವ ಮತ್ತು ತುಳಿತಕ್ಕೊಳಗಾದ ವರ್ಗಗಳ ಮಕ್ಕಳಿಗೆ ಶಿಕ್ಷಣದ ಮೂಲಭೂತ ಹಕ್ಕನ್ನು ನಿರಾಕರಿಸದಂತೆ ಒಂದರಿಂದ ಎಂಟನೇ ತರಗತಿಗೆ ಪ್ರೋತ್ಸಾಹ ನೀಡುವ ಪೂರ್ವ ವಿದ್ಯಾರ್ಥಿವೇತನವನ್ನು ಹೆಚ್ಚಿಸಬೇಕು ಎಂದು ಸಂಘಟನೆ ಆಗ್ರಸಿಹಿದೆ.

Related Articles

ಇತ್ತೀಚಿನ ಸುದ್ದಿಗಳು