ತನ್ನ ಪ್ರತಿಕೃತಿಯನ್ನು ಸುಡುವಾಗ ಗಾಯಗೊಂಡ ಬಿಜೆಪಿ ಶಾಸಕಿಯನ್ನು ಭೇಟಿ ಮಾಡಿದ ಅಖಿಲೇಶ್ ಯಾದವ್

ಲಕ್ನೋ: ಸಮಾಜದಲ್ಲಿ ಸೌಹಾರ್ದಯುತ ರಾಜಕಾರಣ ನೆಲೆಸಬೇಕು, ದ್ವೇಷದ ರಾಜಕಾರಣ ಬೇಡ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಆಶಿಸಿದ್ದಾರೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ನಡವಳಿಕೆಯನ್ನು ಖಂಡಿಸಿ ಪ್ರಧಾನಿ ಮೋದಿ ನೀಡಿದ ಕರೆಯ ಮೇರೆಗೆ, ಉತ್ತರ ಪ್ರದೇಶದ ಬಹ್ರೈಚ್ ಪಟ್ಟಣದಲ್ಲಿ ಅಖಿಲೇಶ್ ಯಾದವ್ ಸೇರಿದಂತೆ ವಿರೋಧ ಪಕ್ಷದ ನಾಯಕರ ಪ್ರತಿಕೃತಿಗಳನ್ನು ಬಿಜೆಪಿ ಕಾರ್ಯಕರ್ತರು ದಹಿಸಿದ್ದರು.

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಸ್ಥಳೀಯ ಬಿಜೆಪಿ ಮಹಿಳಾ ಶಾಸಕಿ ಅನುಪಮಾ ಜೈಸ್ವಾಲ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಸ್ತುತ ಅವರು ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ಅಖಿಲೇಶ್ ಯಾದವ್ ಆಸ್ಪತ್ರೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ, ಅವರ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಸೌಹಾರ್ದಯುತ ಮತ್ತು ಸಕಾರಾತ್ಮಕ ರಾಜಕಾರಣವನ್ನು ಬಯಸುತ್ತೇವೆ ಎಂದು ತಿಳಿಸಿದರು. ಸಮಾಜದಲ್ಲಿ ದ್ವೇಷ ಹರಡುವುದು ಸರಿಯಲ್ಲ ಎಂದರು. ರಾಜಕೀಯ ಮತ್ತು ಮಾನವೀಯ ಸಂಬಂಧಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಹೇಳಿದ ಅವರು, ದ್ವೇಷದ ರಾಜಕಾರಣಕ್ಕಿಂತ ಮಾನವೀಯ ಸಂಬಂಧಗಳೇ ಮುಖ್ಯ ಎಂದು ಪ್ರತಿಪಾದಿಸಿದರು.

Related Articles

ಇತ್ತೀಚಿನ ಸುದ್ದಿಗಳು