Home ರಾಜಕೀಯ ಜೆಡಿಎಸ್ ಜೊತೆಗಿನ ಮೈತ್ರಿ : ಬಿಜೆಪಿಯಲ್ಲಿ ಹೆಚ್ಚುತ್ತಿರುವ ಒಡಕು

ಜೆಡಿಎಸ್ ಜೊತೆಗಿನ ಮೈತ್ರಿ : ಬಿಜೆಪಿಯಲ್ಲಿ ಹೆಚ್ಚುತ್ತಿರುವ ಒಡಕು

0

ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಎದುರಿಸುವ ಬಿಜೆಪಿ ಕನಸಿಗೆ ದಿನೇ ದಿನೇ ವಿಘ್ನ ತಪ್ಪುತ್ತಿಲ್ಲ. ವಿಶೇಷವಾಗಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಬಿಜೆಪಿ ಪಕ್ಷದಲ್ಲೇ ಅಪಸ್ವರ ಎದ್ದಿದೆ. ಇದರ ಜೊತೆಗೆ ಬಿಜೆಪಿ ನಾಯಕರೇ ಈಗ ನೇರವಾಗಿ ಹೈಕಮಾಂಡ್ ಮೇಲೆ ತಿರುಗಿ ನಿಂತಿದ್ದಾರೆ.

ಒಂದು ಕಡೆ ಕಾಂಗ್ರೆಸ್ ಪಕ್ಷವನ್ನು ಎದುರಿಸಲೇಬೇಕು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲೋಕಸಭೆ ಸೀಟುಗಳನ್ನು ದೊರಕಿಸಲು ಮಾಸ್ಟರ್ ಪ್ಲಾನ್ ರೂಪಿಸಬೇಕು ಎಂದು ಬಿಜೆಪಿ ಹೈಕಮಾಂಡ್ ಇನ್ನಿಲ್ಲದ ಕಸರತ್ತು ಮಾಡತೊಡಗಿದೆ. ಇದೇ ಕಾರಣಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿ ಜೆಡಿಎಸ್ ಜೊತೆಗಿನ ಹೊಂದಾಣಿಕೆ ರಾಜಕಾರಣ ಈಗ ಬಿಜೆಪಿ ಪಕ್ಷದ ಒಡಕಿಗೆ ಪ್ರಮುಖ ಕಾರಣವಾಗಿದೆ.

ಇದರ ಜೊತೆಗೆ ಜೆಡಿಎಸ್ ಒಂದಷ್ಟು ಲೋಕಸಭೆ ಸ್ಥಾನಗಳನ್ನು ತಮಗೆ ಬಿಟ್ಟುಕೊಡುವಂತೆ ಇಟ್ಟ ಬೇಡಿಕೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಅಲ್ಲಿನ ಬಿಜೆಪಿ ನಾಯಕರು ಹೈಕಮಾಂಡ್ ನಿರ್ಧಾರಕ್ಕೆ ತಿರುಗಿ ನಿಂತಿದ್ದಾರೆ. ಅದರಲ್ಲೂ, ಹಾಸನ, ಬೆಂಗಳೂರು ಉತ್ತರ, ತುಮಕೂರು, ಮೈಸೂರು ಹಾಗೂ ಕೋಲಾರ ಭಾಗಗಳಲ್ಲಿನ ಬಿಜೆಪಿ ನಾಯಕರು ಸ್ಥಳೀಯವಾಗಿ ಜೆಡಿಎಸ್ ಪರವಾಗಿ ಕೆಲಸ ಮಾಡಲು ಅಪಸ್ವರ ಎತ್ತಿದ್ದಾರೆ. ಯಾವ ಕಾಂಗ್ರೆಸ್ ಎದುರಿಸಲು ಬಿಜೆಪಿ ಇಷ್ಟೆಲ್ಲಾ ಕಸರತ್ತು ನಡೆಸಿತೋ ಇದೇ ಈಗ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಜೆಡಿಎಸ್ : ಪಕ್ಷ ಬಿಡುವವರ ಸಂಖ್ಯೆ ಇನ್ನೂ ಇದೆ
ಜನತಾದಳ “ಜಾತ್ಯಾತೀತ” ಹೆಸರನ್ನಿಟ್ಟು ಆ ತತ್ವಕ್ಕೆ ವೈರುಧ್ಯವಾಗಿ ನಡೆದುಕೊಂಡರೆ ಜಾತ್ಯತೀತ ತತ್ವಗಳನ್ನೇ ಹೆಚ್ಚು ಅನುಸರಿಸುವ ಮಂದಿಗೆ ಆ ಜಾಗದಲ್ಲಿ ಉಸಿರುಗಟ್ಟುವ ವಾತಾವರಣವೇ ಹೆಚ್ಚು. ಸಧ್ಯ ಜೆಡಿಎಸ್ ಪಕ್ಷವನ್ನು ಈ ವರೆಗೆ ತೊರೆದವರು ಹಾಗೂ ತೊರೆಯುವ ಹಾದಿಯಲ್ಲಿ ಇರುವವರಿಗೆ ಈಗ ಇದು ಪ್ರಮುಖ ಕಾರಣವಾಗಿದೆ. ಹೇಳಿಕೇಳಿ ಬಿಜೆಪಿ ಹಿಂದುತ್ವದ ಪ್ರತಿಪಾದಕ ಪಕ್ಷ ಎಂದೇ ಗುರುತಿಸಿಕೊಂಡು ಬಂದಿರುವಾಗ ಆ ಪಕ್ಷವನ್ನು ಈ ವರೆಗೆ ಬೈದು ಏಕಾಏಕಿ ಬಿಜೆಪಿ ಜೊತೆಗೆ ಕೈ ಜೋಡಿಸಿರುವ ಜೆಡಿಎಸ್ ವರಿಷ್ಠರು ಇದಕ್ಕಿಂತ ಮುಂಚೆ ತಮ್ಮ ಪಕ್ಷದ ಯಾರೊಬ್ಬರ ಬಳಿಯೂ ಚರ್ಚಿಸಲು ಮುಂದಾಗಲಿಲ್ಲ. ಬೇರಾರೂ ಬೇಡ, ಸ್ವತಃ ತಮ್ಮ ಪಕ್ಷದ ರಾಜ್ಯಾಧ್ಯಕ್ಷರ ಬಳಿಯೂ ಸಹ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಚರ್ಚಿಸಿಲ್ಲ.

ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಹಿರಂಗವಾಗಿ ತಮ್ಮ ನೋವನ್ನು ಹೊರಹಾಕಿದ್ದಾರೆ. ಅಷ್ಟೆ ಅಲ್ಲ, ನನ್ನ ಹಾದಿ ಸಧ್ಯದಲ್ಲೇ ತಿಳಿಸುವೆ ಎಂದು ಪಕ್ಷ ಬಿಡುವ ಮುನ್ಸೂಚನೆ ತೋರಿದ್ದಾರೆ. ಅಷ್ಟೆ ಅಲ್ಲ, ಇನ್ನೂ ಹಲವಷ್ಟು ಮಂದಿ ಜೆಡಿಎಸ್ ಪಕ್ಷ ತೊರೆಯುವ ಹಾದಿಯಲ್ಲಿದ್ದಾರೆ. ವಿಶೇಷವಾಗಿ ರಾಜ್ಯದ ಹೊರಗೂ ಕೆಲವು ರಾಜ್ಯಗಳಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿರುವ ಜೆಡಿಎಸ್ ನ ನಾಯಕರೂ ಸಹ ಮುಂದಿನ ದಿನಗಳಲ್ಲಿ ಪಕ್ಷ ವಿಸರ್ಜಿಸುವ ಮಾತನ್ನಾಡಿದ್ದಾರೆ. ಸಿ.ಎಂ.ಇಬ್ರಾಹಿಂ ಹೇಳುವ ಪ್ರಕಾರ, ಈ ಮಟ್ಟಕ್ಕೆ ಪಕ್ಷ ತ್ಯಜಿಸಿದರೆ ಜೆಡಿಎಸ್ ಗೆ ಚಿಹ್ನೆ ಕೂಡಾ ಉಳಿಯುವ ಸಂಭವ ತುಂಬಾ ಕಡಿಮೆ ಎಂದಿದ್ದಾರೆ. ಇದು ಜೆಡಿಎಸ್ ತನ್ನೊಳಗಿನ ಕಿಚ್ಚು ತನ್ನನ್ನೇ ಸುಡುವ ಗಾಧೆ ಮಾತಿಗೆ ಹತ್ತಿರ ಎನ್ನಿಸುತ್ತದೆ.

ಬೆಂಗಳೂರು ಉತ್ತರ ; ಸೀಟು ಉಳಿಸಿಕೊಳ್ಳೋದಕ್ಕಿಂತ ಕಳೆದುಕೊಳ್ಳೋ ಸಾಧ್ಯತೆಯೇ ಹೆಚ್ಚು
ಕಳೆದ ಲೋಕಸಭೆ ಚುನಾವಣೆಯಿಂದ ಈ ವರೆಗೂ ಬಿಜೆಪಿ ಪಕ್ಷಕ್ಕೆ ಭದ್ರಕೋಟೆಯಂತೆ ಬಂದ ಕ್ಷೇತ್ರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ಕೆಲವೇ ದಿನಗಳ ಕೆಳಗೆ ಈ ಕ್ಷೇತ್ರದ ಹಾಲಿ ಸಂಸದ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಕೂಡಾ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದರ ಜೊತೆ ಮಾತನಾಡಿದ ಅವರು, ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ನಾಯಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿಯ ಶೇಕಡ 75ರಷ್ಟು ಮಂದಿಗೆ ಈ ಮೈತ್ರಿ ಇಷ್ಟವಿಲ್ಲ ಎಂದು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತು ಸುಣ್ಣವಾಗಿದ್ದೇವೆ. ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿತ್ತು. ಈಗ ಜೆಡಿಎಸ್ ಜೊತೆ ಮೈತ್ರಿಯಿಂದಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಎರಡನೇ ದರ್ಜೆ ನಾಗರಿಕರಂತೆ ಆಗುತ್ತಾರೆ. ಪಕ್ಷದಲ್ಲಿ ಒಕ್ಕಲಿಗ ನಾಯಕರ ಮಾತುಗಳಿಗೆ ಬೆಲೆಯೇ ಇಲ್ಲದ ಸ್ಥಿತಿ ನಿರ್ಮಾಣ ಆಗಲಿದೆ ಎಂದು ಹೇಳಿದ್ದಾರೆ.

ಇತ್ತ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಕೂಡಾ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಅಸಮಾಧಾನ ಹೊರಹಾಕಿದ್ದು ಪಕ್ಷ ತೊರೆಯುವ ಮಾತನ್ನಾಡಿದ್ದಾರೆ. ನಾವು ಹಿಂದಿನಿಂದಲೂ ಜೆಡಿಎಸ್ ಜೊತೆಗೆ ಗುದ್ದಾಟ ಮಾಡಿಕೊಂಡೇ ಬಂದಿದ್ದೇವೆ. ಮೈತ್ರಿ ವಿಚಾರ ಯಾವ ಬಿಜೆಪಿ ಮುಖಂಡರಿಗೂ ತಿಳಿಸದೇ ನಡೆದಿದೆ. ಈಗ ಏಕಾಏಕಿ ಜೆಡಿಎಸ್ ಜೊತೆಗೆ ಕೈ ಜೋಡಿಸಬೇಕು ಎಂದು ಪಕ್ಷದ ವರಿಷ್ಠರು ಸೂಚಿಸಿದರೆ ಇದು ಒಪ್ಪುವ ಮಾತಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಬಿಜೆಪಿಯ ಇನ್ನೊಬ್ಬ ನಾಯಕ ಸಿ.ಪಿ.ಯೋಗೇಶ್ವರ್ ಎಸ್.ಟಿ.ಸೋಮಶೇಖರ್ ಪಕ್ಷ ಬಿಡುವುದಿದ್ದರೆ ಬಿಡಲಿ ಎಂದು ನೇರವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನಿಗೂಢವಾಗಿರುವ ವಿ.ಸೋಮಣ್ಣ ನಡೆ
ಚುನಾವಣೆಗೂ ಮುನ್ನ ಸೋಮಣ್ಣ ಇನ್ನೇನು ಬಿಜೆಪಿ ತೊರೆಯಬಹುದು ಎಂಬ ಮಾತುಕತೆಯ ನಡುವೆಯೇ ಎರಡೆರಡು ಕ್ಷೇತ್ರದ ಅಭ್ಯರ್ಥಿ ಮಾಡುವ ಮೂಲಕ ಬಿಜೆಪಿ ಪಕ್ಷ ಸೋಮಣ್ಣರಿಗೆ ಪರೋಕ್ಷವಾಗಿ ದೊಡ್ಡ ಖೆಡ್ಡಾ ತೋಡಿತ್ತು. ನಿರೀಕ್ಷೆಯಂತೆಯೇ ಸೋಮಣ್ಣ ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರದಲ್ಲಿ ಸೋಲುಂಡ ಹಿನ್ನೆಲೆಯಲ್ಲಿ ಈಗ ರಾಜ್ಯಾಧ್ಯಕ್ಷ ಹುದ್ದೆಗೆ ಪಟ್ಟು ಹಿಡಿದಿದ್ದಾರೆ. ಸೋಮಣ್ಣರಿಗೆ ಈಗ ರಾಜ್ಯಾಧ್ಯಕ್ಷ ಹುದ್ದೆ ಕೊಡದೇ ಹೋದರೆ ಸೋಮಣ್ಣ ಪಕ್ಷ ಬಿಡುವ ಬಗ್ಗೆಯೂ ನಿರ್ಧಾರ ತಗೆದುಕೊಂಡರೆ ಅಚ್ಚರಿಯಿಲ್ಲ.

ಹಾಸನದಲ್ಲೇ ಜೆಡಿಎಸ್ ಬಿಜೆಪಿ ಮೈತ್ರಿಗೆ ಅಸಮಾಧಾನ
ಜೆಡಿಎಸ್ ನ ಭದ್ರಕೋಟೆ ಎಂದೇ ಗುರುತಿಸಿಕೊಂಡು ಬಂದ ಹಾಸನದಲ್ಲಿ ಮೈತ್ರಿಯ ಬಗ್ಗೆ ಅಪಸ್ವರ ಎದ್ದಿದೆ. ಮಾಜಿ ಶಾಸಕ ಪ್ರೀತಮ್ ಗೌಡ ‘ಜೆಡಿಎಸ್ ನಮ್ಮ ಜೊತೆಗೆ ಮೈತ್ರಿ ಮಾಡಿಕೊಂಡಿದೆಯೇ ಹೊರತು, ನಾವು ಜೆಡಿಎಸ್ ಜೊತೆಗಲ್ಲ. ಹಾಗಾಗಿ ಹಾಸನ ಕ್ಷೇತ್ರದಲ್ಲೂ ನಮ್ಮದೇ ಆಟ ನಡೆಯುವುದು ಎಂದು ಸಣ್ಣಗೆ ಮೈತ್ರಿ ಬಗ್ಗೆ ಕಿಡಿ ಹೊತ್ತಿಸಿದ್ದಾರೆ.

ಲೋಕಸಭೆಗೆ ಸ್ಪರ್ಧಿಸಿಯೇ ತೀರುತ್ತೇನೆಂದ ಎಂ.ಪಿ.ರೇಣುಕಾಚಾರ್ಯ
ಮಾಜಿ ಶಾಸಕ, ಯಡಿಯೂರಪ್ಪರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಎಂ.ಪಿ.ರೇಣುಕಾಚಾರ್ಯ ಕೂಡಾ ಬಿಜೆಪಿ ನಿಲುವುಗಳ ಬಗ್ಗೆ ನಿರಂತರವಾಗಿ ತಮ್ಮ ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ. ಬಿಜೆಪಿಯಲ್ಲಿನ ನಾಯಕತ್ವದ ಬದಲಾವಣೆ, ಹೊಸ ರಾಜ್ಯಾಧ್ಯಕ್ಷರ ನೇಮಕ, ಪ್ರತಿಪಕ್ಷ ನಾಯಕನ ಆಯ್ಕೆ, ಲಿಂಗಾಯತ ಸಮುದಾಯದ ಮೇಲಿನ ಅಸಡ್ಡೆಯಂತಹ ವಿಚಾರದಲ್ಲಿ ಬಿಜೆಪಿ ನಿಲುವನ್ನು ಇತ್ತೀಚಿನ ದಿನಗಳಲ್ಲಿ ಖಂಡತುಂಡವಾಗಿ ಖಂಡಿಸಿದ್ದಾರೆ. ಇದು ನೇರವಾಗಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಷ್ಟೆ ಅಲ್ಲದೆ ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮೂಲದಿಂದ ಬಿಜೆಪಿ ಹೈಕಮಾಂಡ್ ಆಜ್ಞೆಯ ನಂತರವಷ್ಟೆ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸುವುದು ಎಂಬ ಅಲಿಖಿತ ನಿಯಮ ಇದ್ದರೂ ಬಿಜೆಪಿಯಲ್ಲೇ ಇದ್ದು ರೇಣುಕಾಚಾರ್ಯ ಪರೋಕ್ಷವಾಗಿ ಹೀಗೆ ತಿರುಗಿ ನಿಂತಿರುವುದೂ ಸಹ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅದ್ಯಾವ ಉದ್ದೇಶಕ್ಕೆ ಬಿಜೆಪಿ ಪಕ್ಷ ಜೆಡಿಎಸ್ ಜೊತೆಗೆ ಮೈತ್ರಿಗೆ ಮುಂದಾಯ್ತೋ.. ಆದರೆ ಮೈತ್ರಿಯ ಉದ್ದೇಶಕ್ಕಿಂತ ಬೇರೆ ರೀತಿಯಲ್ಲೇ ಬಿಜೆಪಿ ಒಳಗೆ ಒಡಕು ಉಂಟಾಗಿರೋದು ಸತ್ಯ. ಈ ಹಿನ್ನೆಲೆಯಲ್ಲಿ ಇನ್ನೆಷ್ಟು ನಾಯಕರು ಪಕ್ಷ ತೊರೆಯುವರೋ, ಇನ್ನೆಷ್ಟು ನಾಯಕರು ತೊರೆಯುವ ಹಂತದಲ್ಲಿದ್ದಾರೋ ಕಾದು ನೋಡಬೇಕು.

You cannot copy content of this page

Exit mobile version