Friday, June 28, 2024

ಸತ್ಯ | ನ್ಯಾಯ |ಧರ್ಮ

ಅಂಬೇಡ್ಕರ್ ದಾರಿಯೇ ನಮ್ಮ ತಾತ್ವಿಕ ನೆಲಗಟ್ಟು: ಜಸ್ಟೀಸ್‌ ನಾಗಮೋಹನ್‌ ದಾಸ್

ಬೆಂಗಳೂರು: ಜನರ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು. ಒಬ್ಬೊಬ್ಬರಾಗಿಯೇ ಮಾತನಾಡಿದರೆ ಸರ್ಕಾರಕ್ಕೆ ಕೇಳಿಸಲ್ಲ. ನಾವೆಲ್ಲ ದಲಿತ ಸಂಘಟನೆಗಳು ಸೈದ್ಧಾಂತಿಕ ನೆಲಗಟ್ಟಿನಲ್ಲಿ ಒಂದಾಗಬೇಕು‌ ಎಂದು  ಇಂದು ನಡೆಯುತ್ತಿರುವ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಜಸ್ಟೀಸ್‌ ನಾಗಮೋಹನ್‌ ದಾಸ್‌ ಅವರು ಮಾತನಾಡಿದ್ದಾರೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಡಿಸೆಂಬರ್‌ 6, ಮಂಗಳವಾರದಂದು “ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ” ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಜಸ್ಟೀಸ್‌ ನಾಗಮೋಹನ್‌ ದಾಸ್‌ ಅವರು ಕೋಮುವಾದದ  ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ನ್ಯಾ.ಜಸ್ಟೀಸ್‌ ನಾಗಮೋಹನ್‌ ದಾಸ್‌ ಅವರು,ಈ ಸಂದರ್ಭದಲ್ಲಿ ಅಂಬೇಡ್ಕರ್‌ರವರಿಗೆ ಸಲಾಮ್ ಹೊಡೆದರೆ ಸಾಲುವುದಿಲ್ಲ, ನಾವು ಅಂಬೇಡ್ಕರ್ ಬಗ್ಗೆ ಅಹಂ ಬೆಳೆಸಿಕೊಳ್ಳಬಾರದು ಬದಲಿಗೆ ಅಂಬೇಡ್ಕರ್ ಬಗ್ಗೆ ಅರಿವು ಬೆಳೆಸಿಕೊಳ್ಳೋಣ. ಅಂದರೆ ಸಂವಿಧಾನದ ಅರಿವು ನಮ್ಮದಾಗಲಿ ಎಂದು ತಿಳಿಸಿದರು.

ʼಅಂಬೇಡ್ಕರ್‌ರವರು ಕಾರ್ಮಿಕ ಸಚಿವರಾಗಿ ಈ ದೇಶದ ಕಾರ್ಮಿಕರಿಗೆ ಹಕ್ಕುಗಳನ್ನು ನೀಡಿದರು. ಶ್ರೇಷ್ಟ ವಕೀಲರಾಗಿ, ಅರ್ಥಶಾಸ್ತ್ರಜ್ಞರಾಗಿ, ದಕ್ಷ ಆಡಳಿತಗಾರರಾಗಿ, ಸಂವಿಧಾನ ಶಿಲ್ಪಿಯಾಗಿ, ಮಾನವತಾವಾದಿಯಾಗಿ ಇಡೀ ದೇಶಕ್ಕೆ ಕೊಡುಗೆ ಕೊಟ್ಟವರನ್ನು ಈ ದೇಶ ಮರೆಯಬಾರದು ಎಂದು ಹೇಳಿದರು.

ಅಂಬೇಡ್ಕರ್ ಪರಿನಿಬ್ಬಾಣ ಹೊಂದಿದ ದಿನದಂದೇ ಬಾಬ್ರಿ ಮಸೀದಿಯನ್ನು ಕೆಡವಲಾಯಿತು. ಸಂವಿಧಾನ ಅಂಬೇಡ್ಕರ್‌ರವರು ಬರೆದಿಲ್ಲ ಎಂದು ಸುಳ್ಳು ಹಬ್ಬಿಸಲಾಗಿದೆ. ಸಂವಿಧಾನ ರಚನೆಯಾದ ಬಳಿಕ ಈ ದೇಶವನ್ನು ಕಟ್ಟಲಾಗಿದೆ. ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ನಾವೆಲ್ಲರೂ ನೇರವಾಗಿ, ಪರೋಕ್ಷವಾಗಿ ಪಾಲ್ಗೊಳ್ಳುತ್ತಿರುವುದಕ್ಕೆ ಅಂಬೇಡ್ಕರ್ ಅವರು ಬರೆದ ಸಂವಿಧಾನ ಕಾರಣ, ಸಂವಿಧಾನದಿಂದಾಗಿ ದಲಿತ ರಾಷ್ಟ್ರಪತಿ, ಉಪಪ್ರಧಾನಿಯಾದರು. ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆಗೈಯಲು ಸಂವಿಧಾನ ಕಾರಣವಾಗಿದೆ ಎಂದು ಮಾತನಾಡಿದದರು.

ʼಇಂದು ಬೆಲೆ ಏರಿಕೆಯಾಗುತ್ತಿದೆ. ಸರ್ಕಾರಕ್ಕೆ ಪ್ರಜ್ಞೆ ಇಲ್ಲ. ಪ್ರಶ್ನೆ ಮಾಡಿದರೆ ಯುಎಪಿಎ ಹಾಕುತ್ತಿದ್ದಾರೆ. ಎನ್ಕೌಂಟರ್ ಮಾಡುತ್ತಿದ್ದಾರೆ. ಪಿಟಿಸಿಎಲ್ ಕಾಯ್ದೆ ಅಪ್ರಸ್ತುತ ಮಾಡಲಾಗುತ್ತಿದೆ. ಖಾಸಗೀಕರಣ ಹೆಚ್ಚಾಗುತ್ತಿದ್ದೆ. ಮೀಸಲಾತಿ ಅಪ್ರಸ್ತುತ ಮಾಡುತ್ತಿದ್ದಾರೆ. ಮೀಸಲಾತಿ ಹೆಚ್ಚಳ ಕುರಿತು ಶಿಪಾರಸ್ಸು ಮಾಡಲು ಒಪ್ಪಿಕೊಂಡಿದೆ. ಆದರೆ ದೇಶದಲ್ಲಿ-ರಾಜ್ಯದಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ. ಹಾಗಾಗಿ ಎಷ್ಟು ಮೀಸಲಾತಿ ಹೆಚ್ಚಿಸಿದರೂ ಏನು ಪ್ರಯೋಜನ? ಖಾಲಿ ಹುದ್ದೆಗಳನ್ನು ತುಂಬಬೇಕು. ಮೀಸಲಾತಿ ಹೆಚ್ಚಿಸಿದರೂ ಖಾಸಗೀಕರಣ ಹೆಚ್ಚುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಾಗಿದೆʼ ಎಂದು ಕಿಡಿಕಾರಿದರು.

ಜನರ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು. ಒಬ್ಬೊಬ್ಬರಾಗಿಯೇ ಮಾತನಾಡಿದರೆ ಸರ್ಕಾರಕ್ಕೆ ಕೇಳಿಸಲ್ಲ. ನಾವೆಲ್ಲ ದಲಿತ ಸಂಘಟನೆಗಳು ಸೈದ್ಧಾಂತಿಕ ನೆಲಗಟ್ಟಿನಲ್ಲಿ ಒಂದಾಗಬೇಕು. ಅಂಬೇಡ್ಕರ್ ದಾರಿಯೇ ನಮ್ಮ ತಾತ್ವಿಕ ನೆಲಗಟ್ಟು. ಸಂವಿಧಾನವನ್ನು ಉಳಿಸಿಕೊಳ್ಳಬೇಕು. ನಾವು ಗಳಿಸಿದ್ದನ್ನು ಕಳೆದುಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ನಾವೆಲ್ಲ ಒಟ್ಟಿಗೆ ಸೇರಿ ಹೋರಾಡಿದರೆ ಮಾತ್ರ ಗಳಿಸಿದ್ದನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಒಗ್ಗಟ್ಟಿನ ಮಹತ್ವದ ಬಗ್ಗೆ ತಿಳಿಸಿದರು.

ಕೋಮುವಾದ ರಾರಾಜಿಸಿದ್ದಲ್ಲಿ ನಾವು ಬಾಯಿಗೆ ಬೀಗ ಹಾಕಿಕೊಂಡು ಇರಬೇಕಾಗುತ್ತದೆ. ಇಂದು ಮುಸ್ಲಿಮರು ಮಾರಾಟ ಮಾಡುವಂತಿಲ್ಲ ಎನ್ನುತ್ತಿದ್ದಾರೆ. ನಾಳೆ ದಲಿತರು ದೇವಾಲಯದ ಬಳಿ ತೆಂಗಿನಕಾಯಿ ಮಾರುವಂತಿಲ್ಲ, ಹೂ ಮಾರುವಂತಿಲ್ಲ ಎನ್ನುತ್ತಾರೆ. ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದರು.

Related Articles

ಇತ್ತೀಚಿನ ಸುದ್ದಿಗಳು