Sunday, June 29, 2025

ಸತ್ಯ | ನ್ಯಾಯ |ಧರ್ಮ

ಆಂಧಿಬ್ಯಾನ್ – ತುರ್ತು ಸ್ಥಿತಿ ಘೋಷಣೆ – ಸಂವಿಧಾನ ತಿದ್ದುಪಡಿ

“..ತುರ್ತು ಪರಿಸ್ಥಿತಿಯ ಕಾಲದಲ್ಲಿ ವಿರೋಧ ಪಕ್ಷಗಳ ಅನೇಕರು ಜೈಲು ಸೇರಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ರದ್ದಾಯಿತು. ಆದರೆ ಇವೆಲ್ಲವನ್ನೂ ಸಂವಿಧಾನದಲ್ಲಿ ಕೊಟ್ಟ ಅಧಿಕಾರವನ್ನು ಬಳಸಿಕೊಂಡು ಮಾಡಿದ್ದಾಗಿತ್ತು. ಇಂದಿನ ಹಾಗೆ ಅಘೋಷಿತ ತುರ್ತು ಪರಿಸ್ಥಿತಿ ಆಗಿರಲಿಲ್ಲ..” ಚಿಂತಕರಾದ ಶ್ರೀಪಾದ ಹೆಗ್ಡೆಯವರ ಬರಹದಲ್ಲಿ

ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಐವತ್ತು ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಹೇರಿದ ವರ್ಷವೇ ಗುಲ್ಜಾರ್ ಬರೆದು ನಿರ್ದೇಶಿಸಿದ ಅವರ ಪ್ರಸಿದ್ಧ ಸಿನಿಮಾ “ಆಂಧಿ”ಯೂ ಬಿಡುಗಡೆಯಾದದ್ದು. ಅದು ನಾಯಕಿ ಪ್ರಧಾನ ಚಿತ್ರವಾಗಿದ್ದು ಆ ಪಾತ್ರವನ್ನು ಇಂದಿರಾ ಗಾಂಧಿಯನ್ನು ಹೋಲುವಂತೆ ಚಿತ್ರಿಸಲಾಗಿತ್ತು. ಉಡುಗೆ ತೊಡುಗೆ, ಹೇರ್ ಸ್ಟೈಲ್, ನಡೆದಾಡುವ ರೀತಿ, ಭಾಷಣ ಮಾಡುವ ರೀತಿ ಎಲ್ಲವೂ ಅವರನ್ನೇ ಹೋಲುತ್ತಿತ್ತು. ಇದಲ್ಲದೆ ತನ್ನ ವಿವರದಲ್ಲದಿದ್ದರೂ ಸಾರಾಂಶದಲ್ಲಿ ಇಂದಿರಾರ ವಯಕ್ತಿಕ ಮತ್ತು ರಾಜಕೀಯ ಬದುಕನ್ನು ಅದು ಆಧಾರವಾಗಿಟ್ಟು ಕೊಂಡಂತೆ ಸಿನಿಮಾ ನೋಡಿದವರೆಲ್ಲರಿಗೆ ಭಾಸವಾಗುತ್ತಿತ್ತು. ಈ ಸಿನಿಮಾದ ನಾಯಕಿಯೂ ಇಂದಿರಾ ಗಾಂಧಿಯಂತೆ ಸಿರಿವಂತ ರಾಜಕೀಯ ಕುಟುಂಬದಲ್ಲಿ ಜನಿಸಿ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡವಳು ಮತ್ತು ತಾನು ಪ್ರೀತಿಸಿದವನೊಂದಿಗೆ ಮದುವೆಯಾಗಿದ್ದರೂ ಕೆಲವೇ ವರ್ಷಗಳಲ್ಲಿ ಅವಳ ಮಹತ್ವಾಕಾಂಕ್ಷೆಯ ಕಾರಣದಿಂದಲೇ ದಾಂಪತ್ಯ ಮುರಿದು ಬಿದ್ದು ತವರು ಸೇರಿ ದೊಡ್ಡ ರಾಜಕೀಯ ನಾಯಕಿಯಾಗಿ ಬೆಳೆದು ನಿಂತಿವಳು. ಇಂದಿರಾ ಬದುಕಿನಲ್ಲಿಯೂ ಸ್ಥೂಲವಾಗಿ ಇದೇ ರೀತಿಯ ಘಟನಾವಳಿಗಳು ನಡೆದಿದ್ದವು.  ಅಷ್ಟರ ಮಟ್ಟಿಗೆ ಹೋಲಿಕೆ ಇತ್ತು.

ಇದು ಬಯೋಫಿಕ್ ಅಲ್ಲದ್ದರಿಂದ ವಿವರಗಳಲ್ಲಿ ಇಂದಿರಾ ಬದುಕಿನ ಘಟನಾವಳಿಗಳ ಮರು ಸೃಷ್ಟಿ ಆಗಿರಲಿಲ್ಲ. ಆದರೆ ತಮ್ಮ ಸಿನಿಮಾದ ನಾಯಕಿಯ ಪಾತ್ರವನ್ನು ಗುಲ್ಜಾರ್ ತುಂಬ ಸಶಕ್ತವಾಗಿ ಕತೆಯಲ್ಲಿ ಕಟ್ಟಿಕೊಟ್ಟಿದ್ದು ಮಾತ್ರವಲ್ಲ ಅಷ್ಟೇ ಪರಿಣಮಕಾರಿಯಾಗಿ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಹಾಗೆ ನೋಡಿದರೆ ಇದೊಂದು Women empowerment ನ್ನು theme ಆಗಿ ಉಳ್ಳ ಕತೆಯಾಗಿತ್ತು. ಜೀವನದಲ್ಲಿ ಮಹತ್ವಾಕಾಂಕ್ಷೆಗಳನ್ನಿಟ್ಟು ಕೊಂಡ ಮಹಿಳೆಯೊಬ್ಬಳು ತನ್ನ ಕೌಟುಂಬಿಕ ಬದುಕಿನಲ್ಲಿ ಎದುರಿಸಬೇಕಾಗಿ ಬರುವ ಬಿಕ್ಕಟ್ಟುಗಳನ್ನು ಸಿನಿಮೀಯ ಉತ್ಪ್ರೇಕ್ಷೆಗಳಿಲ್ಲದೆ ವಾಸ್ತವದ ನೆಲೆಯಲ್ಲಿ ಹೆಣೆದ, ಆದಷ್ಟು ಕಡಿಮೆ ಮಸಾಲೆ ಬೆರೆತ ಸಿನಿಮಾ ಇದಾಗಿತ್ತು. ದೃಶ್ಯಗಳನ್ನು ಹೃದಯ ಸ್ಪರ್ಶಿ ಮಾಡುವ ಸಲುವಾಗಿ ಹಾಡುಗಳಿದ್ದವು. ಭಾರತೀಯ ಸಿನಿಮಾದ ಜೀವಾಳವಾದ ಇಂತಹ ಸೂತ್ರಗಳನ್ನು ಬಿಟ್ಟುಕೊಟ್ಟ off-beat ಮಾದರಿಯ ಸಿನಿಮಾ ಇದಾಗಿರಲಿಲ್ಲ. Commercial ಮತ್ತು Art ಸಿನಿಮಾ ಜಗತ್ತುಗಳ ಮಧುರ ಮಿಲನದಂತೆ ಈ ಸಿನಿಮಾ ಕಂಡು ಬರುತ್ತಿತ್ತು. ಸುಚಿತ್ರ ಸೇನ್ ಮತ್ತು ಸಂಜೀವ ಕುಮಾರ ಅಭಿನಯ ಶ್ರೇಷ್ಟ ದರ್ಜೆಯದಾಗಿತ್ತು. ನೋಡಿದವರು ತಮ್ಮ ಜೀವಮಾನವಿಡಿ ನೆನಪಿಟ್ಟು ಕೊಳ್ಳುವ ಸಿನಿಮಾ  ಆಗಿ ಇದು ಮೂಡಿ ಬಂತು. ಸಿನಿಮಾದ ಕೊನೆಯ ಘಟ್ಟದಲ್ಲಿ ನಾಯಕಿ ತನ್ನ ಚಾರಿತ್ರ್ಯ ವಧೆ ಮಾಡುತ್ತಿದ್ದ ವಿರೋಧ ಪಕ್ಷಗಳವರ ಚುನಾವಣಾ ಪ್ರಚಾರದ ವೇದಿಕೆ ಏರಿ ಸಾರ್ವಜನಿಕರನ್ನುದ್ದೇಶಿಸಿ ಆಡುವ ಮಾತುಗಳಂತೂ ಮನಕಲಕುವಂತಿತ್ತು ಮತ್ತು ಚಾರ್ಲಿ ಚಾಪ್ಲಿನ್ ನ The Great Dictator ಸಿನಿಮಾದ ಕೊನೆಯ ದೃಶ್ಯವನ್ನು ನೆನಪಿಸಿತ್ತಿತ್ತು.

ಇಂದಿರಾರವರ ವಯಕ್ತಿಕ ಬದುಕಿನ ಕತೆಯ ಮೇಲೆ ಸಿನಿಮಾ ಇತ್ತಾದ್ದರಿಂದ ಅದು ಬ್ಯಾನ್ ಆಗಬಹುದು ಎನ್ನುವ ವದಂತಿಯ ನಡುವೆಯೇ ಫೆಬ್ರುವರಿ 1975 ರಲ್ಲಿ ಅದು ಬಿಡುಗಡೆಯಾಯಿತು. 22 ವಾರಗಳ ಕಾಲ ಅದು ಚಿತ್ರ ಮಂದಿರಗಳಲ್ಲಿ ನಡೆದ ನಂತರ ಜುಲೈ ಎರಡನೇಯ ವಾರದಲ್ಲಿ ಅಂದಿನ ಸರ್ಕಾರ ಇದನ್ನು ಬ್ಯಾನ್ ಮಾಡಿತು. ಏಕೆ 22 ವಾರಗಳ ನಂತರ ಬ್ಯಾನ್ ಮಾಡಿದ್ದು ಎನ್ನುವುದಕ್ಕೆ ಈ ಸಿನಿಮಾವನ್ನಿಟ್ಟುಕೊಂಡು ಆ ನಡುವೆ ನಡೆದ ರಾಜಕೀಯ ಘಟನಾವಳಿಗಳು ಕಾರಣವಾದವು.

ಆ 22 ವಾರಗಳಲ್ಲಿ ದೇಶದ ರಾಜಕೀಯದಲ್ಲಿ ಮಹತ್ವದ  ಘಟನೆಗಳು ನಡೆದದ್ದೆಂದರೆ : ಗುಜರಾತದ ವಿಧಾನ ಸಭೆ ಚುನಾವಣೆಯಲ್ಲಿ ಇಂದಿರಾ ಪಕ್ಷಕ್ಕೆ ಸೋಲಾಗಿದ್ದು, ಇಂದಿರಾ ಚುನಾವಣಾ ಆಯ್ಕೆಯನ್ನು ರದ್ದು ಮಾಡಿದ ಅಲಹಬಾದ್ ಹೈಕೋರ್ಟ್ ತೀರ್ಪು ಮತ್ತು ತುರ್ತು ಪರಿಸ್ಥಿತಿಯ ಘೋಷಣೆ ಮುಖ್ಯವಾದವು. ಈ ಸಿನಿಮಾದಲ್ಲಿ ನಾಯಕಿ ತನ್ನ ಯೌವ್ವನದಲ್ಲಿ (ಆಗಿನ್ನೂ ಅವಳು ರಾಜಕೀಯಕ್ಕೆ ಇಳಿದಿರದ ಕಾಲದಲ್ಲಿ) ಹೊಟೆಲ್ ಒಂದರಲ್ಲಿ ಉಳಿದುಕೊಂಡಾಗ ಅತಿಯಾಗಿ ಡ್ರಿಂಕ್ಸ್ ಮಾಡುವ ದೃಶ್ಯವಿತ್ತು.  ಈ ದೃಶ್ಯವನ್ನು ಇಟ್ಟುಕೊಂಡು ಇದು ಇಂದಿರಾ ಬದುಕಿನಲ್ಲಿಯೇ ನಡೆದ ಘಟನೆಯೆಂದು ಮತ್ತು ಇಂದಿರಾ ಒಬ್ಬ ಶೀಲಗೆಟ್ಟ ಹೆಣ್ಣು ಎಂದು ವಿರೋಧ ಪಕ್ಷಗಳು ಗುಜರಾತದ ಚುನಾವಣೆಯಲ್ಲಿ ಪ್ರಚಾರ ಮಾಡಿದವು. ಅಂದಿನ ಸಾಂಪ್ರದಾಯಿಕ ಸಮಾಜ ಭಾರತೀಯ ನಾರಿಯೊಬ್ಬಳು ಮದ್ಯ ಪಾನ ಮಾಡುವುದನ್ನು ಒಪ್ಪಿಕೊಳ್ಳುವ ಸಾಮಾಜಿಕ ಸಂದರ್ಭ ಇರಲಿಲ್ಲ. ಈ ಅಪಪ್ರಚಾರ ಇಂದಿರಾ ಇಮೇಜಿನ ಮೇಲೆ ತುಂಬ ಕೆಟ್ಟ ಪರಿಣಾಮವನ್ನುಂಟು ಮಾಡಿತು. ಇಂದಿರಾ ಬದುಕಿನಲ್ಲಿ ನಡೆದಿದ್ದ ವಿವಾಹ ವಿಚ್ಛೇದನದ ಸಂಗತಿಯನ್ನೂ ಕೆದಕಿ ಅದಕ್ಕೆ ರಂಜನೀಯ ಬಣ್ಣಗಳನ್ನು ಬಳಿಯಲಾಯಿತು.

ಆಗ ಗುಜರಾತಿನಲ್ಲಿ ಕಾಂಗ್ರೆಸ್ ಸೋತಿತು. ಇಂದಿರಾ ಗಾಂಧಿಯವರ ಚಾರಿತ್ರ್ಯ ನಿಂದನೆಯೇ ಈ ಸೋಲಿಗೆ ಕಾರಣವೆಂದು ಕಾಂಗ್ರೆಸ್ ನಿರ್ಣಯಕ್ಕೆ ಬಂದು ಸಿನಿಮಾವನ್ನು ನಿಷೇಧಿಸುವಂತೆ ಚುನಾವಣಾ ಆಯೋಗದ ಮೇಲೆ ಒತ್ತಡ ತಂದಿತು. 1975 ಜುಲೈ 12 ರಂದು ಸಿನಿಮಾ ನಿಷೇಧವಾಯಿತು. ಈ ಸಿನಿಮಾವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಇಂದಿರಾ ಚಾರಿತ್ರ್ಯ ಹರಣ ಮಾಡಿದ್ದರಿಂದಲೇ ಇದು ಬ್ಯಾನ್ ಆಯಿತು. ಅದಿಲ್ಲದಿದ್ದರೆ ಆಗಲೇ 22 ವಾರ ಚಿತ್ರ ಮಂದಿರಗಳಲ್ಲಿ ನಡೆದ ಆ ಸಿನಿಮಾವನ್ನು ಅಷ್ಟು ತಡವಾಗಿ ಬ್ಯಾನ ಮಾಡುವ ಕಾರಣಗಳಿರುತ್ತಿರಲಿಲ್ಲ. ಅಪಪ್ರಚಾರದ ಮೂಲಕ ಈ ಅನಿವಾರ್ಯ ಪರಿಸ್ಥಿತಿಯನ್ನುಂಟು ಮಾಡಿದವರು ವಿರೋಧ ಪಕ್ಷಗಳವರಾಗಿದ್ದರು. ಚುನಾವಣಾ ಪ್ರಚಾರದ ಸಮಯದಲ್ಲಿ ಇಂದಿರಾ ಚಾರಿತ್ರ್ಯ ಹನನಕ್ಕಾಗಿ ಅವರು ಎಲ್ಲಾ ಸಭ್ಯತೆಯನ್ನು ಮೀರಿದ್ದರು. ಇಂದಿರಾ ಜಾಗದಲ್ಲಿ ಅವರ ಬದಲು ಯಾರೇ ಇದ್ದರೂ ಇದೇ ನಿರ್ಣಯವನ್ನು ಕೈಗೊಳ್ಳುತ್ತಿದ್ದರು. ಇಂದಿನ ಸನ್ನಿವೇಶದಲ್ಲಿಯಂತೂ ಅಂತಹ ಒಂದು ಸಿನಿಮಾ ಬಿಡುಗಡೆಯಾಗುವ ಊಹೆಯನ್ನೂ ಮಾಡಿಕೊಳ್ಳಲಾಗದು. ಆ ಸಿನಿಮಾ ಬಿಡುಗಡೆಯಾಗಿ ನಾಲ್ಕು ತಿಂಗಳು ಓಡಿತ್ತು ಎನ್ನುವುದೇ ಇಂದಿರಾರ ಉದಾರ ವ್ಯಕ್ತಿತ್ವವನ್ನು ತೋರಿಸುತ್ತದೆ.

ಅಲಹಬಾದ್ ಹೈಕೋರ್ಟ್ ಇಂದಿರಾ ಆಯ್ಕೆಯನ್ನು ರದ್ದು ಮಾಡಿದ್ದಕ್ಕೆ ಕೊಟ್ಟ ಕಾರಣಗಳು ಎರಡು. ಅವು ಸರ್ಕಾರಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಸಂಗತಿಗೆ ಸಂಬಂಧಿಸಿದ್ದು.  ಯಶಪಾಲ್ ಎಂಬ ಐಏಎಸ್ ಅಧಿಕಾರಿ ತನ್ನ ರಾಜಿನಾಮೆ ಅಂಗೀಕಾರವಾಗುವ ಕೆಲವು ಘಂಟೆಗಳ ಮೊದಲು ಇಂದಿರಾ ಚುನಾವಣಾ ಸಭೆಯಲ್ಲಿ ಕಾಣಿಸಿಕೊಂಡ ಎನ್ನುವುದು ಒಂದಾದರೆ ಯಾವುದೋ ಊರಿನಲ್ಲಿ ಒಂದೆರಡು ಪೋಲೀಸ್ ಸಿಬ್ಬಂದಿ ಇಂದಿರಾ ಗಾಂಧಿ ಭಾಷಣ ಮಾಡಲಿದ್ದ ಚುನಾವಣಾ ವೇದಿಕೆಯನ್ನೋ ಅಥವಾ ಅದರ ಮೆಲೆ ಕುರ್ಚಿ ಹಾಕುವುದಕ್ಕೋ ಸಹಾಯ ಮಾಡಿದರು ಎನ್ನುವುದು ಇನ್ನೊಂದು. ಇದು ಅವಳ ಚುನಾವಣಾ ಆಯ್ಕೆಯನ್ನೇ ರದ್ದು ಮಾಡುವುದಕ್ಕೆ ಸಬಲ ಕಾರಣಗಳೇ ಅಲ್ಲ. ಹೀಗೆ ಭಾಗವಹಿಸಿದ ಸರ್ಕಾರಿ ಅಧಿಕಾರಿಗಳ ಮೇಲೆ ಇದು ಶಿಸ್ತು ಕ್ರಮ ಕೈಗೊಳ್ಳ ಬೇಕಾದ ವಿಷಯವೇ ಹೊರತು ಇದನ್ನು ಸಂಪೂರ್ಣವಾಗಿ ಸರ್ಕಾರಿ ಯಂತ್ರದ ದುರುಪಯೋಗವೆಂದು ವ್ಯಾಖ್ಯಾನಿಸಿ ತೀರ್ಪು ಕೊಟ್ಟದು ನ್ಯಾಯ ಸಮ್ಮತವಾದುದಲ್ಲ ಎಂದು ಯಾವುದೇ ನಿಷ್ಪಕ್ಷ ವ್ಯಕ್ತಿ ಅಭಿಪ್ರಾಯ ಪಡಬಹುದಾಗಿದೆ.

ಈ ನಿರ್ಣಯವನ್ನು ಜಾಗತಿಕ ಸುದ್ದಿ ಮಾಧ್ಯಮಗಳು “Indian Prime minister fired for traffic voilation” ಮುಂತಾಗಿ ವರದಿ ಮಾಡಿದ್ದವು ಎನ್ನುವುದೇ ತೀರ್ಪು ಅದೆಷ್ಟು disproportionate ಆಗಿತ್ತು ಎನ್ನುವುದನ್ನು ತೋರಿಸುತ್ತವೆ. ಈ ತೀರ್ಪಿನ ನಂತರ ಆಗಲೇ ಕುಲುಷಿತವಾಗಿದ್ದ ರಾಜಕೀಯ ವಾತಾವರಣ ಇನ್ನಷ್ಟು ಹದಗೆಟ್ಟಿತು. ಅರಾಜಕತೆ ಎಲ್ಲೆಲ್ಲೂ ತಲೆದೋರುವ ಎಲ್ಲ ಲಕ್ಷಣಗಳೂ ಗೋಚರವಾದವು. ಜೆಪಿ ಚಳವಳಿಗಾರರು ಪೋಲಿಸ್ ಮತ್ತು ಸೈನ್ಯಕ್ಕೆ ಸರಕಾರದ ಆದೇಶವನ್ನು ಧಿಕ್ಕರಿಸಿ ಎಂದು ಕರೆ ನೀಡುವವರೆಗೆ ಹೋಯಿತು. ತುರ್ತು ಪರಿಸ್ಥಿತಿ ಘೋಷಣೆಯಾಯಿತು.

ತುರ್ತು ಪರಿಸ್ಥಿತಿಯ ಕಾಲದಲ್ಲಿ ವಿರೋಧ ಪಕ್ಷಗಳ ಅನೇಕರು ಜೈಲು ಸೇರಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ರದ್ದಾಯಿತು. ಆದರೆ ಇವೆಲ್ಲವನ್ನೂ ಸಂವಿಧಾನದಲ್ಲಿ ಕೊಟ್ಟ ಅಧಿಕಾರವನ್ನು ಬಳಸಿಕೊಂಡು ಮಾಡಿದ್ದಾಗಿತ್ತು. ಇಂದಿನ ಹಾಗೆ ಅಘೋಷಿತ ತುರ್ತು ಪರಿಸ್ಥಿತಿ ಆಗಿರಲಿಲ್ಲ. ದೇಶದ ಜನರೆಲ್ಲರೂ ತುರ್ತು ಪರಿಸ್ಥಿತಿಯ ಹೇರಿಕೆಯ ವಿರುದ್ಧವಿದ್ದರು ಎಂದೆಲ್ಲ ಹೇಳುವುದು ಅರ್ಧ ಸತ್ಯ ಮಾತ್ರವಾಗುತ್ತದೆ. ನಂತರ ನಡೆದ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಮಾತ್ರ ಇಂದಿರಾ ಪಕ್ಷ ಸೋತಿತ್ತು, ದಕ್ಷಿಣದಲ್ಲಿ ಭಾರಿ ಬಹುಮತದಿಂದ ಆರಿಸಿ ಬಂದಿತ್ತು. ಉತ್ತರದವರು ಮಾತ್ರ ತುರ್ತು ಪರಿಸ್ಥಿತಿ ವಿರೋಧಿಸಿದರು ದಕ್ಷಿಣದವರು ವಿರೋಧಿಸಿಲ್ಲ ಏಕೆ ಎನ್ನುವುದನ್ನು ವಿಶ್ಲೇಷಣೆ ಮಾಡದೇ ಹೇಳುವ ಒಟ್ಟಾರೆ ಮಾತು ಇದಾಗುತ್ತದೆ. ಅಸಲಿ ಕಾರಣವೆಂದರೆ ತುರ್ತು ಪರಿಸ್ಥಿತಿಯ ಕಾಲದಲ್ಲಿ ದಕ್ಷಿಣದಲ್ಲಿ ಸರಕಾರಿ ಯಂತ್ರ efficient ಆಗಿ ಕೆಲಸ ಮಾಡಿತ್ತು. ಒಂದೆರಡು ಅಪವಾದ ಬಿಟ್ಟರೆ ಜನ ಸಾಮಾನ್ಯರ ಮೇಲೆ ಅತಿರೇಕದ ವರ್ತನೆಗಳಾಗಲಿಲ್ಲ. ಆದರೆ ಉತ್ತರದಲ್ಲಿ ಬಲತ್ಕಾರದಿಂದ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು, ಕೆಲವು ನಗರಗಳಲ್ಲಿ ಅಂದ ಹೆಚ್ಚಿಸಲಿ ಕೊಳಗೇರಿಗಳನ್ನು ರಾತ್ರೋ ರಾತ್ರಿ ನಾಶ ಮಾಡಿದ್ದು ಇಂತಹ ಅನೇಕ ಅತಿರೇಕದ ಸರಕಾರಿ ನಡೆಗಳು ಕಾರಣವಾದವು. ನಸಬಂದಿಯಂತೂ ಜನಸಾಮಾನ್ಯರ ನಿದ್ದೆಗೆಡಿಸಿತ್ತು. ತುರ್ತು ಪರಿಸ್ಥಿತಿ ಮುಗಿದ ಎರಡು ವರ್ಷಗಳ ನಂತರದ ಚುನಾವಣೆಯಲ್ಲಿ ಇಂದಿರಾ ಪಕ್ಷ ಉತ್ತರದಲ್ಲಿಯೂ ಭಾರಿ ಬಹುಮತ ಗಳಿಸಿದ್ದನ್ನು ಕಂಡಾಗ ಕಾರಣ ತುರ್ತು ಪರಿಸ್ಥಿತಿಯ ಹೇರಿಕೆಯಲ್ಲಿರಲಿಲ್ಲ ಬದಲಾಗಿ ಅದನ್ನು ನಿರ್ವಹಿಸಿದ ರೀತಿಯಲ್ಲಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಹಾಗಿಲ್ಲದಿದ್ದರೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಯನ್ನು ಅವರು ಅಷ್ಟು ಅಲ್ಪ ಕಾಲಾವಧಿಯಲ್ಲಿ ಕ್ಷಮಿಸಿ ಮನ್ನಿಸುವುದು ಸಾಧ್ಯವಿರಲಿಲ್ಲ.

Secular and Socialist  ಈ ಎರಡು ಪದಗಳು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲ್ಪಟ್ಟಿದ್ದೂ ಸಹ ತುರ್ತು ಪರಿಸ್ಥಿತಿಯ ಕಾಲದಲ್ಲಿಯೇ. ಇಂದಿರಾ ಸರಕಾರ ಈ ನಿಟ್ಟಿನಲ್ಲಿ ಧೃಡವಾದ ಹೆಜ್ಜೆ ಇಟ್ಟು ಆಗಲೇ ಅರ್ಧ ದಶಕ ಕಳೆದಿತ್ತು. ತುರ್ತು ಪರಿಸ್ಥಿತಿಯ ನಂತರದಲ್ಲಿ ಬಂದ ಜನತಾ ಸರ್ಕಾರದ ಭಾಗವಾಗಿದ್ದ ಇಂದಿನ ಬಿಜೆಪಿಯ ಯಾವ ನಾಯಕರೂ ಸಂವಿಧಾನದ ಈ ತಿದ್ದುಪಡಿಗೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಇದಲ್ಲದೆ ಎಂಬತ್ತರ ದಶಕದಲ್ಲಿ ಹಿಂದಿನ ಜನಸಂಘ ಬಿಜೆಪಿಯಾಗಿ ಹೊಸ ಹುಟ್ಟು ಪಡೆದಾಗ ಅವರ ಪಕ್ಷದ ಸಂವಿಧಾನದಲ್ಲಿಯೇ ಇವೆರಡನ್ನು ತಮ್ಮ ಧ್ಯೇಯ ವಾಕ್ಯಗಳಲ್ಲಿ ಬಳಸಿಕೊಂಡಿದ್ದಾರೆ. ಅದು ಇನ್ನೂ ಹಾಗೆಯೇ ಇದೆ. ಕಳೆದ ಹತ್ತು ವರ್ಷಗಳಿಂದ ಆಗಾಗ ಇವರು ಕ್ಯಾತೆ ತೆಗೆಯುತ್ತಿದ್ದಾರೆ. ಎಂಬತ್ತು ತೊಂಬತ್ತರ ದಶಕದಲ್ಲಿ Secular and Socialist  ಎನ್ನುವ ಈ ಎರಡೂ ಕಾನ್ಸೆಪ್ಟ್‍ಗಳು ಇವರ ಚುನಾವಣೆಗಳಿಗೆ ಅನುಕೂಲವಾಗುವಂತಿದ್ದವು. ಆ ಕಾರಣಕ್ಕೆ ತಮ್ಮ ಪಕ್ಷದ ಸಂವಿಧಾನದಲ್ಲಿಯೂ ಇವುಗಳನ್ನು ಬಳಸಿ ಕೊಂಡರು. ಹಾಗಾಗಿ ಇವರ ಇಂದಿನ ನಿಲುವಿಗೆ ಯಾವ ತರ್ಕ ಬದ್ಧತೆಯೂ ಇಲ್ಲ. ಇದೇ ಜನ ಭಾರತದ ಸಂವಿಧಾನ ರಚನೆಯಾಗಿ ಸ್ವೀಕಾರವಾದಾಗಲೂ ಅದನ್ನು ವಿರೋಧಿಸಿದ್ದರು. ಇದು ವಿದೇಶಿ ಕಾನ್ಸೆಪ್ಟ್ ಗಳು , ಇಡಿ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ ಎಂದು ಬೊಬ್ಬೆ ಹಾಕಿದ್ದರು. ಹಾಗಾಗಿ ಇಂದು Secular and Socialist   ಈ ಎರಡನ್ನು ತೆಗೆಯಬೇಕೆನ್ನುವವರು ತಮಗೆ ಅನುಕೂಲಕರ ಸನ್ನಿವೇಶ ಒದಗಿ ಬಂದಾಗ ( ಅಷ್ಟು ಬಹುಮತ ಬಂದಾಗ) ಮಿಸಲಾತಿ ಮತ್ತು ಡೆಮಾಕ್ರಸಿ ಸಹಿತ ಇಡಿ ಸಂವಿಧಾನವನ್ನೇ ಬದಲಿಸಲು ಮುಂದಾಗುವುದರಲ್ಲಿ ಯಾವ ಸಂಶಯವಿಲ್ಲ.

ಇರಲಿ. ಆಂಧಿ ಸಿನಿಮಾದ ಎವರ್ ಗ್ರೀನ್ ಹಾಡುಗಳ ಬಗ್ಗೆ ಒಂದೆರಡು ಆಸಕ್ತಿಕರ ವಿಷಯ ತಿಳಿಸಿ ಬರಹ ಮುಗಿಸುವೆ. ಇದರಲ್ಲಿರುವ ’ತುಮ್ ಆಗಯೇ ಹೋ, ನೂರ್ ಆಗಯಾ ಹೈ’ ಮತ್ತು ’ತೇರೆ ಬಿನ ಜಿಂದಗಿಸೆ ಶಿಖವಾ ನಹಿ’ ಹಾಡುಗಳು ಮೊದಲಿಗೆ ಸ್ವರ ಸಂಯೋಜಿಸಿ ನಂತರ ಅದರ ಮೀಟರಿಗೆ ತಕ್ಕ ಹಾಗೆ ಬರೆದ ಹಾಡುಗಳಲ್ಲ. ಸಂಗೀತ ನಿರ್ದೇಶಕ ಪಂಚಮ್ ತಯಾರಿಸಿದ ಮೀಟರಿಗೆ ( ಛಂದಕ್ಕೆ) ಸರಿಯಾಗಿ ಗುಲ್ಜಾರರಿಗೆ ಪದ್ಯ ಬರೆಯಲಾಗಲೇ  ಇಲ್ಲವಂತೆ. ಪಂಚಮ್ ಕೊಟ್ಟ ಮೀಟರೇ ಬೇರೆ ಗುಲ್ಜಾರ್ ಬರೆದು ತಂದ ಗೀತೆಗಳ ಮೀಟರೇ ಬೇರೆಯಾಗಿ ಬಿಟ್ಟಿತಂತೆ. ಇಬ್ಬರಲ್ಲೂ ಇದರ ಬಗ್ಗೆ ವಾದವೇ ಆಯಿತಂತೆ. ಕತೆಯ ಸನ್ನಿವೇಶಕ್ಕೆ ತನ್ನ ಪದ್ಯದ ಆಶಯ ಹೊಂದುವುದರಿಂದ ಅದಕ್ಕೆ ತಕ್ಕಾಗಿ ಸಂಗಿತ ಸಂಯೋಜಿಸುವಂತೆ ಗುಲ್ಜಾರ್ ಪಟ್ಟು ಹಿಡಿದರಂತೆ. ಸ್ವಲ್ಪ unconventional ಆಗಿ ಸ್ವರ ರಚನೆ ಮಾಡಿದ ಹಾಡುಗಳನ್ನು ನೋಡಿ ಕಿಶೋರ್ ಮತ್ತು ಲತಾ ಇಬ್ಬರೂ ಚಕಿತರಾಗಿದ್ದರಂತೆ. ಅನೇಕ ಬಾರಿ ರಿಹರ್ಸಲ್ ಮಾಡಿ ಒಂದೇ ಸಲಕ್ಕೆ ಇವುಗಳನ್ನು ಧ್ವನಿ ಮುದ್ರಣ ಮಾಡಿ ಕೊಂಡರಂತೆ.  ತುಂಡು ತುಂಡಾಗಿ ದ್ವನಿ ಮುದ್ರಿಸಿದರೆ ಅಖಂಡವಾದ ಒಂದು ಭಾವ ಹೊರಟು ಹೋಗುತ್ತದೆ, ಸೂಕ್ಷ್ಮಗಳು ಕಾಣೆಯಾಗಿ ಬಿಡುತ್ತದೆ ಎಂದು ಕಿಶೋರ್ ಅಭಿಪ್ರಾಯ ಪಟ್ಟಿದ್ದರಿಂದ ಹೀಗೆ ಮಾಡಲಾಯಿತಂತೆ. ಇಷ್ಟೆಲ್ಲ ವಿಶೇಷತೆಗಳನ್ನು ಒಳಗೊಂಡ ಈ ಹಾಡುಗಳು ಇಂದು ಕೇಳಿದಾಗಲೂ ವಿಶೇಷ ಎನಿಸುವದರ ಹಿಂದೆ ಈ ವಿಶೇಷತೆ ಇದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page