Friday, June 14, 2024

ಸತ್ಯ | ನ್ಯಾಯ |ಧರ್ಮ

ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ


ದೇಶವನ್ನು ಹಸಿವು ಮುಕ್ತ ಮಾಡಲು ಪ್ರತಿಯೊಬ್ಬರೂ ತಮ್ಮ ತಮ್ಮ ನೆಲೆಯಲ್ಲಿ ಆಹಾರವನ್ನು ವ್ಯರ್ಥ ಮಾಡದಂತೆ ಒಂದಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಬೆಂಗಳೂರಿನಲ್ಲಿ ಈ ಮೂರು ದಿನಗಳಿಂದ ನಡೆಯುತ್ತಿರುವ ಆಹಾರ ಸಂರಕ್ಷಣಾ ಜಾಗೃತಿಯ ಸಂಘಟಕ ವಿವೇಕಾನಂದ ಎಚ್‌ ಕೆ.

ಅಕ್ಟೋಬರ್ 16 “ವಿಶ್ವ ಆಹಾರ ದಿನ”. 1945 ರಲ್ಲಿ ವಿಶ್ವಸಂಸ್ಥೆಯು ʼಆಹಾರ ಮತ್ತು ಕೃಷಿ ಸಂಸ್ಥೆʼ ಯನ್ನು (Food and agriculture organization -FAO) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ.

ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19,700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿರುವ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ. ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಎಷ್ಟು ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಸುಮಾರು 80 ಲಕ್ಷ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಭಾರತದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಊಟದ ಎಲೆಗಳಲ್ಲಿ ವ್ಯರ್ಥವಾಗುವ‌ ಆಹಾರ ಪ್ರಮಾಣ ಶೇಕಡಾ 25%. ಈಗ ಬಹುಶಃ ನಿಜವಾದ ಸಮಸ್ಯೆ ಅರ್ಥವಾಗಿರಬಹುದು.

ಇದಕ್ಕೆ ವಿವಿಧ ಆಯಾಮಗಳು ಇವೆ….

ವಿಶ್ವದ ಜನಸಂಖ್ಯೆ ಹೆಚ್ಚಾಗುತ್ತಲೇ ಇರುವುದು, ಅಥವಾ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರುವುದು, ಅಥವಾ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿರುವುದು, ಅಥವಾ ಭೂ ಪ್ರದೇಶಗಳ ಅಸಮಾನತೆ, ಅಥವಾ ಉಳಿತಾಯ ಮತ್ತು ಹಂಚಿಕೆಯ ಲೋಪದೋಷಗಳು, ಅಥವಾ ಆಹಾರದ ದುರುಪಯೋಗ…ಇವುಗಳಲ್ಲಿ ಯಾವುದು ಹೆಚ್ಚು ಕಾರಣ ಎಂಬುದನ್ನು ಗುರುತಿಸಿ ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ.

ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದ ಜನಸಂಖ್ಯೆ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ, ಕೃಷಿ ಚಟುವಟಿಕೆಗಳನ್ನು ಹೆಚ್ಚಿಸುವುದು, ಫಲವತ್ತತೆ ಕಾಪಾಡುವುದು, ಉಳಿತಾಯ ಮತ್ತು ಹಂಚಿಕೆ ಎಲ್ಲವೂ ಆಯಾ ದೇಶದ ಸರ್ಕಾರ ಮತ್ತು ಆಡಳಿತದ ಜವಾಬ್ದಾರಿ. ಆದರೆ ಆಹಾರ ವ್ಯರ್ಥವಾಗುವುದನ್ನು ತಡೆಯುವ ಕರ್ತವ್ಯ, ಜವಾಬ್ದಾರಿ ಮತ್ತು ಮಾನವೀಯತೆ ನಮ್ಮಂತ ಪ್ರತಿ ನಾಗರೀಕರಿಗೂ ಸಾಧ್ಯವಿದೆ.

ಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಾದರೆ…

ಆ ನಿಟ್ಟಿನಲ್ಲಿ ಯೋಚಿಸಿದಾಗ, ಭಾರತ ದೇಶದ ಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಾದರೆ-ಉತ್ತರ ಕರ್ನಾಟಕದ ಭಾಗದಲ್ಲಿ ಆಹಾರ ವ್ಯರ್ಥವಾಗುವುದು ಸ್ವಲ್ಪ ಕಡಿಮೆ. ಕಾರಣ ಶರಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅವರು ಆಹಾರವನ್ನು ಸಾಧ್ಯವಾದಷ್ಟು ದುರುಪಯೋಗ ಪಡಿಸಿಕೊಳ್ಳದೆ ಬಡಿಸಿದ ಸಂಪೂರ್ಣ ಆಹಾರ ತಿನ್ನುವ ಪ್ರಯತ್ನ ಮಾಡುವುದನ್ನು ಪಾದಯಾತ್ರೆಯ ಸಂದರ್ಭದಲ್ಲಿ ಗಮನಿಸಿದ್ದೇನೆ. ಅದಕ್ಕೆ ಕಾರಣ ಏನೇ ಇರಲಿ ಆ ಮನೋಭಾವ ಮಾತ್ರ ಸ್ವಾಗತಾರ್ಹ.

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉತ್ತರ ಕರ್ನಾಟಕದಷ್ಟು ಅಲ್ಲದಿದ್ದರೂ ಆಹಾರವನ್ನು ಸ್ವಲ್ಪ ಮಟ್ಟಿಗೆ ಗೌರವಿಸಿ ಹೆಚ್ಚು ವ್ಯರ್ಥ ಮಾಡುವುದಿಲ್ಲ. ಮುಖ್ಯವಾಗಿ ಮದುವೆ ಮುಂತಾದ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಯಥೇಚ್ಛವಾಗಿ ವ್ಯರ್ಥವಾಗುವುದು ದಕ್ಷಿಣ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ. ಅದರಲ್ಲೂ ಬೆಂಗಳೂರಿನಲ್ಲಿ ಅತಿಹೆಚ್ಚು ಆಹಾರವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಸ್ವತಃ ಅನುಭವದಿಂದ ಗಮನಿಸಿದ್ದೇನೆ. ಒಂದು ಕಾಲಕ್ಕೆ ಆಹಾರ ಅತ್ಯಮೂಲ್ಯವಾಗಿತ್ತು. ಆದರೆ ಜನರ ಹಣದ ಶಕ್ತಿ ಹೆಚ್ಚಾದಂತೆ ಆಹಾರದ ಪೋಲಾಗುವುದು ಹೆಚ್ಚಾಯಿತು. ಕೆಲವೊಮ್ಮೆ ನಿರ್ಲಕ್ಷ್ಯ ಮತ್ತೆ ಹಲವು ಕಡೆ ದುರಹಂಕಾರ ಇದಕ್ಕೆ ಕಾರಣ ಇರಬಹುದು.

ಆಹಾರ ಬೆಳೆಗಳ ದುರುಪಯೋಗ!

ರೈತರು ಬಿತ್ತನೆ ಮಾಡಿ, ಅದು ಬೆಳೆದು ಫಸಲಾಗಿ, ಕಟಾವು ಮಾಡಿ, ಸಂಗ್ರಹಿಸಿ, ಸಾಗಾಣಿಕೆ ಮಾಡಿ, ಮಾರಾಟ ಮಾಡಿ, ಅದು ಮನೆ ಮನೆಗೆ ಸೇರಿ, ಆಹಾರವಾಗಿ ನಮ್ಮ ಎಲೆ ಅಥವಾ ತಟ್ಟೆಗೆ ಸೇರುವ ವೇಳೆಗೆ ಸಾಕಷ್ಟು ಸಹಜವಾಗಿ ಮತ್ತು ಅನಿವಾರ್ಯವಾಗಿ ನಷ್ಟವಾಗಿರುತ್ತದೆ. ಮತ್ತೆ ಆಹಾರವನ್ನು ನಾವು ಬಡಿಸಿಕೊಂಡು ತಟ್ಟೆಯಲ್ಲಿ 25% ವ್ಯರ್ಥ ಮಾಡಿದರೆ ಒಟ್ಟು ಆಹಾರ ಬೆಳೆಗಳ ದುರುಪಯೋಗ ಎಷ್ಟಾಗಬಹುದು ಊಹಿಸಿ. ಭಾರತದಲ್ಲಿ 25% ವ್ಯರ್ಥ ಎಂದರೆ ಸುಮಾರು 35 ಕೋಟಿ ಜನಸಂಖ್ಯೆಯ ಆಹಾರವನ್ನು ನಾವು ಕಬಳಿಸಿದಂತೆ ಆಗುತ್ತದೆ ಮತ್ತು ಆಹಾರ ಬೆಳೆಯಲು ಉಪಯೋಗಿಸಿದ ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಂಡು ವ್ಯವಸಾಯದ ಮೇಲೆ ಅವಶ್ಯಕವಾಗಿ ಒತ್ತಡ ಹೇರಿದಂತೆ ಆಗುತ್ತದೆ ಹಾಗು ನಮ್ಮ ರೈತರ ಶ್ರಮಕ್ಕೆ ಅಗೌರವ ತೋರಿಸಿದಂತೆ ಆಗುತ್ತದೆ. ಹಿಂದೆ ಆಗಿದ್ದು ಆಗಿ ಹೋಯಿತು. ಕನಿಷ್ಠ ಈಗಲಾದರೂ ನಾವೆಲ್ಲರೂ ಜಾಗೃತರಾಗಿ ಈ ನಿಟ್ಟಿನಲ್ಲಿ ನಮ್ಮ ನಮ್ಮ ನೆಲೆಯಲ್ಲಿ – ವೈಯಕ್ತಿಕ ಆಸಕ್ತಿಯಿಂದ ಸಾಧ್ಯವಾದಷ್ಟು ಆಹಾರ ವ್ಯರ್ಥವಾಗುವುದನ್ನು ತಡೆಯಲು ಪ್ರಯತ್ನಿಸಬೇಕು. ಇದು ಅತ್ಯಂತ ಸರಳ ಮತ್ತು ಆತ್ಮ ತೃಪ್ತಿಯ ಕೆಲಸ.

ಸಮಾಜದ ದಿವ್ಯ ನಿರ್ಲಕ್ಷ್ಯ…

ಭತ್ತ ಬೆಳೆಯುವ ರೈತರಿಗಿಂತ ಅಕ್ಕಿ ಮಾರುವ, ಅನ್ನ ಮಾರುವ ವ್ಯಾಪಾರಿಗಳು ಹೆಚ್ಚು ಹಣಕಾಸಿನ ಲಾಭ ಮತ್ತು ಸಾಮಾಜಿಕ ಗೌರವ ಪಡೆಯುವ ಕಾಲಘಟ್ಟದಲ್ಲಿ, ಅತಿಯಾದ ಮಳೆ, ಬಹಳಷ್ಟು ಬೆಳೆಗಳ ನಾಶ ಒಂದು ಕಡೆ, ಮೀಸಲಾತಿ ಹೋರಾಟಗಳು, ಟಿಪ್ಪು ಸುಲ್ತಾನ್ – ಒಡೆಯರ್ ಹೆಸರುಗಳ ಕೆಸರೆರಚಾಟ, ಜನಸಂಖ್ಯೆಯ ನಿಯಂತ್ರಣ ಚರ್ಚೆ, ಭಾರತ್ ಜೋಡೋ ಪಾದಯಾತ್ರೆ ಹೀಗೆ ನಿರಂತರ ಸಂಘರ್ಷಮಯ ರಾಜಕೀಯ ವಾತಾವರಣದಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಬಹುಮುಖ್ಯವಾದ ಆಹಾರದ ಸದುಪಯೋಗದ ಬಗ್ಗೆ ಸಮಾಜ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ!

ಧರ್ಮಗಳ ಆಧ್ಯಾತ್ಮಿಕ ಗುರುಗಳು ವಕ್ಫ್ ಆಸ್ತಿ ಬೆಳೆಸುವಲ್ಲಿ, ಚರ್ಚ್‌ಗಳನ್ನು ನಿರ್ಮಿಸುವ, ಶಿವ – ನಾಗ ಪ್ರತಿಮೆಗಳನ್ನು ಸ್ಥಾಪಿಸುವಲ್ಲಿ ನಿರತರಾಗಿದ್ದಾರೆ. ಆಹಾರವನ್ನು ಮರೆತಿದ್ದಾರೆ. ಕೃಷಿಯನ್ನು, ರೈತರನ್ನು ನಿರ್ಲಕ್ಷಿಸಿದ್ದಾರೆ. ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಗಳಲ್ಲಿ ಮೈ ಮರೆತಿದ್ದಾರೆ…..

ಯುವ ಪೀಳಿಗೆಗೆ ಆಹಾರದ ಮಹತ್ವವೇ ಅರ್ಥವಾಗುತ್ತಿಲ್ಲ. ಸ್ವಿಗ್ಗಿ, ಜೊಮೇಟೋಗಳೆಂಬ ಮೊಬೈಲ್ ಕಂಪ್ಯೂಟರ್ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಪೇಟಿಎಮ್, ಫೋನ್‌ ಪೇ, ಗೂಗಲ್ ಪೇ ಮುಂತಾದ ಬ್ಯಾಂಕಿಂಗ್ ತಂತ್ರಜ್ಞಾನದ ಮುಖಾಂತರ ಹಣ ವರ್ಗಾಯಿಸಿ ಮನೆಯ ಬಾಗಿಲಿಗೆ ಇಷ್ಟಪಟ್ಟ ಊಟ ತಿಂಡಿಗಳನ್ನು ಸುಲಭವಾಗಿ ತರಿಸಿಕೊಂಡು ತಿಂದು ಆಹಾರದ ಪಾವಿತ್ರ್ಯವನ್ನೇ ಅವರು ಮರೆತಿದ್ದಾರೆ. ಅದರ ಉತ್ಪಾದನೆ, ಹಂಚಿಕೆ, ಸಂಗ್ರಹ, ಭವಿಷ್ಯದ ಬಗ್ಗೆ ಅವರಿಗೆ ಕನಿಷ್ಠ ತಿಳಿವಳಿಕೆಯೇ ಇಲ್ಲ. ಆಡಳಿತ ವ್ಯವಸ್ಥೆ, ಮಾಧ್ಯಮಗಳು, ಅದಕ್ಕೆ ಸಂಬಂಧಿಸಿದ ಇತರರು ತುಂಬಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.

ಬಹಳ ಮುಖ್ಯ ವಿಷಯವೊಂದನ್ನು ಇಲ್ಲಿ ಗಮನಿಸಬೇಕು. ಆಹಾರ ಒಂದು ರಾಷ್ಟ್ರೀಯ ಸಂಪನ್ಮೂಲ. ಒಮ್ಮೆ ಅ ಸಂಪನ್ಮೂಲದ (ಆಹಾರದ) ಕೊರತೆ ಉಂಟಾದರೆ ಇಡೀ ದೇಶದಲ್ಲೇ ಹಾಹಾಕಾರ ಉಂಟಾಗುತ್ತದೆ. ಆದ್ದರಿಂದ ಕನಿಷ್ಠ ನಾವುಗಳು ಒಂದು ಎಚ್ಚರಿಕೆಯನ್ನಾದರೂ ವಹಿಸಬೇಕು. ಅದಕ್ಕಾಗಿ ವಿಶ್ವ ಆಹಾರ ದಿನಾಚರಣೆ.

ವಿವೇಕಾನಂದ ಎಚ್.ಕೆ
(ಲೋಕ ಹಿತದ ಪರ ಸದಾಶಯಗಳಿಂದ ಕೂಡಿದ ಸರಣಿ ಬರೆಹಗಳ ಮೂಲಕ ಮತ್ತು ಪಾದಯಾತ್ರೆಯ ಮೂಲಕ ನಾಡಿನಾದ್ಯಂತ ಪರಿಚಿತರು.)

Related Articles

ಇತ್ತೀಚಿನ ಸುದ್ದಿಗಳು