Tuesday, July 2, 2024

ಸತ್ಯ | ನ್ಯಾಯ |ಧರ್ಮ

ಮೋದಿ ಸರ್ನೇಮ್‌ ವಿವಾದ: ಜು: 21ಕ್ಕೆ ಸುಪ್ರೀ ಕೋರ್ಟಿನಿಂದ ರಾಹುಲ್‌ ಗಾಂಧಿಯವರ ಅರ್ಜಿಯ ವಿಚಾರಣೆ

ಮೋದಿ ಉಪನಾಮದ ಕುರಿತಾದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ವಿಧಿಸಲಾಗಿದ್ದ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಗುಜರಾತ್ ಹೈಕೋರ್ಟ್ ನೀಡಿದ ಜುಲೈ 7ರ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜುಲೈ 21ರಂದು ವಿಚಾರಣೆ ನಡೆಸಲಿದೆ.

ಗಾಂಧಿಯವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಅರ್ಜಿಯನ್ನು ಜುಲೈ 21 ಅಥವಾ ಜುಲೈ 24 ರಂದು ಪಟ್ಟಿ ಮಾಡುವಂತೆ ಕೋರಿದರು. ಇದಾದ ನಂತರ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠವು ಅರ್ಜಿಯ ವಿಚಾರಣೆಗೆ ಒಪ್ಪಿಕೊಂಡಿತು. ಜುಲೈ 21ರಂದು ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.

ಜುಲೈ 15ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ರಾಹುಲ್ ಗಾಂಧಿಯವರು ಜುಲೈ 7ರ ಆದೇಶವನ್ನು ತಡೆಹಿಡಿಯದಿದ್ದರೆ, ಅದು ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮುಕ್ತ ಚಿಂತನೆ ಮತ್ತು ಮುಕ್ತ ಅಭಿವ್ಯಕ್ತಿಯನ್ನು ಹತ್ತಿಕ್ಕುತ್ತದೆ ಎಂದು ಹೇಳಿದ್ದಾರೆ.

ಏಪ್ರಿಲ್ 13, 2019ರಂದು, ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಸಭೆಯಲ್ಲಿ, ರಾಹುಲ್ ಗಾಂಧಿಯವರು ಎಲ್ಲಾ ಕಳ್ಳರೂ ಮೋದಿ ಎನ್ನುವ ಉಪನಾಮವನ್ನೇ ಏಕೆ ಹೊಂದಿರುತ್ತಾರೆ? ಎಂದು ಕೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರದ ಮಾಜಿ ಸಚಿವ ಪೂರ್ಣೇಶ್ ಮೋದಿಯವರು 2019ರಲ್ಲಿ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಹೈಕೋರ್ಟ್‌ನ ತೀರ್ಪನ್ನು ತಡೆಹಿಡಿಯದಿದ್ದರೆ, ಅದು ವ್ಯವಸ್ಥಿತವಾಗಿ, ಪದೇ ಪದೇ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರಜಾಪ್ರಭುತ್ವದ ಉಸಿರುಗಟ್ಟುವಿಕೆಗೆ ಕಾರಣವಾಗುತ್ತದೆ, ಇದು ಭಾರತದ ರಾಜಕೀಯ ವಾತಾವರಣ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಮನವಿಯಲ್ಲಿ ಹೇಳಿದ್ದಾರೆ.

ಆಕ್ಷೇಪಾರ್ಹ ತೀರ್ಪನ್ನು ತಡೆಹಿಡಿಯದಿದ್ದರೆ, ಅದು ವಾಕ್ ಸ್ವಾತಂತ್ರ್ಯ, ಮುಕ್ತ ಅಭಿವ್ಯಕ್ತಿ, ಮುಕ್ತ ಚಿಂತನೆ ಮತ್ತು ಮುಕ್ತ ಅಭಿವ್ಯಕ್ತಿಯನ್ನು ಹತ್ತಿಕ್ಕುತ್ತದೆ ಎಂದು ಅತ್ಯಂತ ಗೌರವಯುತವಾಗಿ ಸಲ್ಲಿಸಲಾಗಿದೆ ಎಂದು ಅವರ ಮನವಿಯಲ್ಲಿ ತಿಳಿಸಲಾಗಿದೆ.

ಕ್ರಿಮಿನಲ್ ಮಾನನಷ್ಟದ ಈ ಪ್ರಕರಣದಲ್ಲಿ, ಎರಡು ವರ್ಷಗಳ ಗರಿಷ್ಠ ಶಿಕ್ಷೆಯನ್ನು ಅನಿರೀಕ್ಷಿತವಾಗಿ ವಿಧಿಸಲಾಯಿತು, ಇದು ಸ್ವತಃ ಅಪರೂಪ ಎಂದು ರಾಹುಲ್‌ ತಮ್ಮ ಮನವಿಯಲ್ಲಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ, ಮಾರ್ಚ್ 23ರಂದು, ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಐಪಿಸಿ ಸೆಕ್ಷನ್ 499 ಮತ್ತು 500 (ಕ್ರಿಮಿನಲ್ ಮಾನನಷ್ಟ) ಅಡಿಯಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿತು ಮತ್ತು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಪ್ರಕರಣದ ತೀರ್ಪಿನ ನಂತರ, ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಗಾಂಧಿ ಅವರನ್ನು ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ರಾಹುಲ್ ಗಾಂಧಿ ಅವರು 2019ರಲ್ಲಿ ಕೇರಳದ ವಯನಾಡಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

Related Articles

ಇತ್ತೀಚಿನ ಸುದ್ದಿಗಳು