Home ದೇಶ ಮಣಿಪುರ ಹಿಂಸಾಚಾರ ಪ್ರಕರಣ: ಇಂದು ಮಹತ್ವದ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌

ಮಣಿಪುರ ಹಿಂಸಾಚಾರ ಪ್ರಕರಣ: ಇಂದು ಮಹತ್ವದ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌

0

ನವ ದೆಹಲಿ: ಮಣಿಪುರ ಹಿಂಸಾಚಾರ ಪ್ರಕರಣದಲ್ಲಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಗುರುವಾರ ಅಫಿಡವಿಟ್ ಸಲ್ಲಿಸಿದೆ. ರಾಜ್ಯ ಸರ್ಕಾರದ ಒಪ್ಪಿಗೆ ಮೇರೆಗೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗುತ್ತಿದೆ ಎಂದು ಅದು ಹೇಳಿದೆ.

ಚಾರ್ಜ್ ಶೀಟ್ ಸಲ್ಲಿಸಿದ ದಿನದಿಂದ ಆರು ತಿಂಗಳೊಳಗೆ ತೀರ್ಪು ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡುವಂತೆ ಅಫಿಡವಿಟ್ ಕೋರಿದೆ. ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಸರ್ಕಾರ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ ಎಂದು ಗೃಹ ಸಚಿವಾಲಯ ಸಲ್ಲಿಸಿರುವ ಅಫಿಡವಿಟ್ ಹೇಳಿದೆ. ಅದೇ ಅಫಿಡವಿಟ್ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜ್ಯವು ಕೇಂದ್ರಕ್ಕೆ ತಿಳಿಸಿದೆ.

ಜಿಲ್ಲಾ ಮನೋವಿಜ್ಞಾನಿಗಳ ತಂಡಗಳು ಪರಿಹಾರ ಶಿಬಿರಗಳಲ್ಲಿ ಸಂತ್ರಸ್ತರಿಗೆ ಮಾನಸಿಕ ನೆರವು ನೀಡುತ್ತಿವೆ. ಅವರಿಗೆ ಆರಾಮದಾಯಕ ವಾತಾವರಣದಲ್ಲಿ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿದೆ.

ಜುಲೈ 20ರಂದು ಸುಪ್ರೀಂ ಕೋರ್ಟ್ ಈ ಘಟನೆಯನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿದ್ದು, ಅಪರಾಧಿಗಳನ್ನು ಕಾನೂನಿನ ವ್ಯಾಪ್ತಿಗೆ ತರಲು ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕೇಳಿದೆ .

ಇದೇ ವೇಳೆ, ಮಣಿಪುರದಲ್ಲಿ ಗುಂಪೊಂದು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿದ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಿದೆ. ಈ ಪ್ರಕರಣದ ವಿಚಾರಣೆಯನ್ನು ರಾಜ್ಯದ ಹೊರಗೆ, ನೆರೆಯ ರಾಜ್ಯ ಅಸ್ಸಾಂನಲ್ಲಿ ನಡೆಸುವಂತೆಯೂ ಸರ್ಕಾರ ಮನವಿ ಮಾಡಲಿದೆ. ಈ ಕುರಿತು ಅದು ಶುಕ್ರವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಸಾಧ್ಯತೆಯಿದೆ.

You cannot copy content of this page

Exit mobile version