Monday, June 17, 2024

ಸತ್ಯ | ನ್ಯಾಯ |ಧರ್ಮ

ತೀರ್ಥಹಳ್ಳಿ ಸಜೀವ ದಹನ ಪ್ರಕರಣ : ಮೂವರ ವಿರುದ್ಧ ಎಫ್ಐಆರ್ ದಾಖಲು

ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಎಂಬಲ್ಲಿ ಒಂದೇ ಕುಟುಂಬದ ಮೂವರ ಸಜೀವ ದಹನ ಹಾಗೂ ಇನ್ನೊಬ್ಬರ ಸಾವಿನ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಾಯಾದಿ ಕಲಹದ ಹಿನ್ನೆಲೆಯಲ್ಲಿ ಈ ಪ್ರಕರಣ ನಡೆದಿದೆ ಎಂದು ಹೇಳಲಾಗಿದೆ.

ಘಟನೆ ಹಿನ್ನೆಲೆ
ಅ. 8 ರಂದು ರಾಘವೇಂದ್ರ ಕೇಕುಡ, ಅವರ ಪತ್ನಿ ನಾಗರತ್ನ, ಮಗ ಶ್ರೀರಾಮ್ ಮತ್ತು ಎರಡನೆಯ ಮಗ ಭರತ್ ಎಂಬ ಒಂದೇ ಕುಟುಂಬದ ನಾಲ್ವರು ಮನೆಯ ಕೊಠಡಿಯೊಂದರಲ್ಲಿ ಕಟ್ಟಿಗೆ ಜೋಡಿಸಿಕೊಂಡು ಸಜೀವ ದಹನಕ್ಕೆ ಮುಂದಾಗಿದ್ದರು. ತಂದೆ, ತಾಯಿ ಹಾಗೂ ಮಗ ಶ್ರೀರಾಮ್ ಮನೆಯ ಒಳಗಡೆಯೇ ಸಾವಿಗೀಡಾದರೆ ಇನ್ನೊಬ್ಬ ಮಗ ಭರತ್ ಬೆಂಕಿಯಲ್ಲಿ ಅರೆಬರೆ ಸುಟ್ಟು ನಂತರ ಅಕ್ಕಪಕ್ಕದವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಮಗ ಭರತ್ ಮೊದಲು ತೀರ್ಥಹಳ್ಳಿ ಆಸ್ಪತ್ರೆಗೆ ನಂತರ ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಂಕಿಯಲ್ಲಿ ಸುಟ್ಟ ಪರಿಣಾಮ ಹೆಚ್ಚೇ ಇದ್ದುದರಿಂದ ಮಗ ಭರತ್ ಕೂಡಾ ಸಾವಿಗೆ ಶರಣಾಗಬೇಕಾಯಿತು. ಈ ನಡುವೆ ಪೊಲೀಸರು ಭರತ್ ನ ಕೆಲವು ಹೇಳಿಕೆಗಳನ್ನು ಸಾಕ್ಷಿಯ ರೂಪದಲ್ಲಿ ಪಡೆದುಕೊಂಡಿದ್ದರು.

ಭರತ್ ಸಾವಿನ ನಂತರ ಪ್ರಕರಣವನ್ನು ಯುಡಿಆರ್ (ಅಸಹಜ ಸಾವಿನ ವರದಿ) ಎಂದು ದಾಖಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಭರತ್ ಸಾವಿನ ನಂತರ ರಾಘವೇಂದ್ರ ಅವರ ಪತ್ನಿಯ ಸಹೋದರನ ಹೇಳಿಕೆಯ ಮೇಲೆ ಎಫ್‌ಐಆರ್ ದಾಖಲಾಗಿದೆ. ಅದರಲ್ಲಿ ಮೃತ ರಾಘವೇಂದ್ರ ಅವರ ಸಹೋದರ ಡಾ.ಸುಧೀಂದ್ರ, ಪಾ.ರಾ ಕೃಷ್ಣಮೂರ್ತಿ ಮತ್ತು ರಾಘವೇಂದ್ರ ಅವರ ನಾದನಿ ವಿನೋದರವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಾಘವೇಂದ್ರ ಕೇಕುಡರಿಗೆ, ಕೃಷ್ಣಮೂರ್ತಿ, ಮಂಜುನಾಥ, ರಾಮಕೃಷ್ಣ ಹಾಗೂ ಡಾ, ಸುಧೀಂದ್ರ ಎಂಬ ನಾಲ್ವರು ಸಹೋದರರಿದ್ದು ಇವರ ಪೈಕಿ ಮಂಜುನಾಥ ಈಗಾಗಲೇ ವಿಧಿವಶರಾಗಿದ್ದಾರೆ.

ಮಂಜುನಾಥ್ ಅವರ ಪತ್ನಿ ವಿನೋದ ಇವರಿಗೆ ಜಮೀನುಗಳಿಗೆ ಸಂಬಂಧಿಸಿದಂತೆ ಆಸ್ತಿ ಬಾಬ್ತು 10 ಲಕ್ಷ ರೂಪಾಯಿ ಕೊಡಲಾಗಿತ್ತು. ಆದರೆ ಯಾವುದೇ ಪತ್ರ ವ್ಯವಹಾರ ಆಗಿರಲಿಲ್ಲ ಎಂದು ತಿಳಿದು ಬಂದಿದೆ. ಇವರ ಇನ್ನೊಬ್ಬ ಸಹೋದರ ರಾಮಕೃಷ್ಣ ಕೇಕುಡ ಇವರು ಆಸ್ತಿಯಲ್ಲಿ ಭಾಗ ತೆಗೆದುಕೊಂಡು ಬೇರೆ ವಾಸವಾಗಿದ್ದರು ಎನ್ನಲಾಗಿದೆ.

ಉಳಿದ ಸಹೋದರರಾದ ಡಾ.ಸುಧೀಂದ್ರ, ಮತ್ತು ಪಾರಾ ಕೃಷ್ಣಮೂರ್ತಿ ರಾಘವೇಂದ್ರ ಕೇಕುಡರೊಂದಿಗೆ ಜಮೀನಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಿಪಿಎ ಮಾಡಿಕೊಂಡಿದ್ದರು. ಜಿಪಿಎ ಮಾಡಿಕೊಂಡ ಹಿನ್ನೆಲೆಯಲ್ಲಿ ರಾಘವೇಂದ್ರ ಕೇಕುಡ ಜಮೀನಿನ ಅಭಿವೃದ್ಧಿಗಾಗಿ ಸಾಲ ಮಾಡಿದ್ದರು.

ಸುಮಾರು 2 ವರ್ಷಗಳ ಹಿಂದಿನಿಂದಲೂ ಜಮೀನಿನ ಮೇಲೆ ಮಾಡಿದ ಸಾಲದ ವಿಚಾರದಲ್ಲಿ ಡಾ, ಸುದೀಂದ್ರ, ಪಾರಾ ಕೃಷ್ಣ ಮೂರ್ತಿ ಹಾಗೂ ಮಂಜುನಾಥ್ ಪತ್ನಿ ವಿನೋದ ರಾಘವೇಂದ್ರರ ಕುಟುಂಬಕ್ಕೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಧ್ಯ ಜಮೀನಿನ ಮೇಲೆ ಮಾಡಿದ ಕೃಷಿ ಅಭಿವೃದ್ಧಿ ಸಾಲ ತೀರಿಸದಿದ್ದರೆ ಮನೆ ಖಾಲಿ ಮಾಡುವಂತೆ ಬೆದರಿಸಿ ಮನೆ ಖಾಲಿ ಮಾಡದಿದ್ದರೆ ಶಿವಮೊಗ್ಗದಿಂದ ಗೂಂಡಾಗಳನ್ನು ಕರೆಸಿ ಮನೆಯಿಂದ ಹೊರ ಹಾಕಿಸುವುದಾಗಿಯೂ ಹಾಗೂ ಬ್ಯಾಂಕಿನ ಸಾಲವನ್ನು ಕಟ್ಟಬೇಕೆಂದು ಬೆದರಿಸಿದ್ದರು.

ಈ ವಿಚಾರದಲ್ಲಿ ರಾಘವೇಂದ್ರ ಕುಟುಂಬ ಅವರುಗಳ ಬೆದರಿಕೆಗೆ ಮನನೊಂದು ಮಾನಸಿಕ ಹಿಂಸೆ ತಡೆಯಲಾಗದೇ ದೇಹ ತ್ಯಾಗವಾಗಿರುತ್ತದೆ ಎಂದು ಮೃತ ನಾಗರತ್ನ ಅವರ ಸಹೋದರ ತೇಜ್ ಪ್ರಕಾಶ್ ದೂರಿನಲ್ಲಿ ದಾಖಲಿಸಿದ್ದಾರೆ.

ಅದ್ದರಿಂದ ರಾಘವೇಂದ್ರ ಕುಟುಂಬ ವರ್ಗದವರ ದುರ್ಮರಣಕ್ಕೆ ಕಾರಣರಾದ ಡಾ, ಸುದೀಂದ್ರ, ಪಾ.ರಾ ಕೃಷ್ಣಮೂರ್ತಿ, ವಿನೋದ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಾ.ಸುಧೀಂದ್ರ ಶಿವಮೊಗ್ಗದ ಮೆಗ್ಗಾನ್ ನಲ್ಲಿ ವೈದ್ಯರಾಗಿದ್ದಾರೆ. ಪಾರಾ ಕೃಷ್ಣಮೂರ್ತಿ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ವ್ಯಕ್ತಿಯಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು