Wednesday, July 3, 2024

ಸತ್ಯ | ನ್ಯಾಯ |ಧರ್ಮ

ಏಷ್ಯಾ ಕಪ್:‌ ಪಾಕಿಸ್ತಾನ ವಿರುದ್ಧ ಭಾರತ ಜಯ ಭೇರಿ

ದುಬೈ: ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಟಿ20 ಪಂದ್ಯವನ್ನು ಭಾರತ ತಂಡ 5 ವಿಕೆಟ್‌ ಅಂತರದಿಂದ ಗೆದ್ದು ಬೀಗಿತು.

ದುಬೈನ ಅಂತಾರಾಷ್ಟೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಹಣಾಹಣಿಯಲ್ಲಿ ಭಾರತ ಜಯಗಳಿಸುವುದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್‌ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಭಾರತದ ವೇಗದ ಬೌಲರ್‌ ಗಳ ನಿಖರ ದಾಳಿಗೆ ಸಿಲುಕಿ ನಿಗದಿತ 19.5 ಓವರ್‌ಗಳಲ್ಲಿ 147 ರನ್‌ ಗಳಿಸುವುದರೊಂದಿಗೆ ಸರ್ವಪತನ ಕಂಡಿತು.

ಬಳಿಕ ಗುರಿ ಬೆನ್ನತ್ತಿದ ಭಾರತದ ಪರ ವಿರಾಟ್‌ ಕೋಹ್ಲಿ 35, ರವೀಂದ್ರ ಜಡೇಜಾ 35, ಹಾರ್ದಿಕ್‌ ಪಾಂಡ್ಯ 33 ರನ್‌ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಆಲ್‌ ರೌಂಡ್‌ ಪ್ರದರ್ಶನ ತೋರಿದ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ನಲ್ಲಿ ಮಿಂಚಿ ಮೂರು ವಿಕೆಟ್‌ ಗಳನ್ನು ಪಡೆದಿದ್ದಲ್ಲದೆ, ಬ್ಯಾಂಟಿಂಗ್‌ ನಲ್ಲೂ ಅಬ್ಬರಿಸಿ ಒಂದು ಸಿಕ್ಸರ್‌, ನಾಲ್ಕು ಬೌಂಡರಿಯೊಂದಿಗೆ ಅಜೇಯ 33 ರನ್‌ ಗಳನ್ನು ಗಳಿಸಿ ಗೆಲುವಿಗೆ ಕಾರಣರಾದರು. ಗೆಲುವಿನ ಹೊಡೆತವನ್ನು ಸಿಕ್ಸರ್‌ ನೊಂದಿಗೆ ಬಾರಿಸಿದ ಹಾರ್ದಿಕ್‌ ಪಾಂಡ್ಯ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಭಾರತದ ಪರ ವೇಗದ ಬೌಲರ್‌ ಭುವನೇಶ್ವರ ಕುಮಾರ್‌ ಪಾಕಿಸ್ತಾನದ ಅಪಾಯಕಾರಿ ಆಟಗಾರ ಬಾಬರ್‌ ಅಜಮ್‌ ವಿಕೆಟ್‌ ಸೇರಿದಂತೆ ನಾಲ್ಕು ವಿಕೆಟ್‌ ಗಳನ್ನು ಪಡೆದರು. ಯುವ ಆಟಗಾರ ಅರ್ಷದೀಪ್‌ ಸಿಂಗ್‌ ಎರಡು ವಿಕೆಟ್‌ ಗಳಿಸಿದರು. ಪಾಕಿಸ್ತಾನದ ಎಲ್ಲ ವಿಕೆಟ್‌ ಗಳನ್ನು ವೇಗದ ಬೌಲರ್‌ ಗಳೇ ಪಡೆದಿದ್ದು ವಿಶೇಷವಾಗಿತ್ತು. ಭಾರತದ ಪರ ಟಿ ಟ್ವಿಂಟಿ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಎಲ್ಲ ವಿಕೆಟ್‌ ಗಳನ್ನು ವೇಗದ ಬೌಲರ್‌ ಗಳೇ ಪಡೆದರು.

ಪಾಕಿಸ್ತಾನ ಪೇರಿಸಿದ 147 ರನ್‌ ಗಳ ಸಾಮಾನ್ಯ ಮೊತ್ತವನ್ನು ಬೆನ್ನೆತ್ತಿದ್ದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ತಂಡದ ಉಪನಾಯಕ ಕೆ.ಎಲ್.ರಾಹುಲ್‌ ತಾವು ಎದುರಿಸಿದ ಮೊದಲ ಎಸೆತದಲ್ಲೇ ಬೌಲ್ಡ್‌ ಆಗಿ ಪೆವಿಲಿಯನ್‌ ಗೆ ಮರಳಿದರು. ಚೊಚ್ಚಲ ಟಿ ಟ್ವಿಂಟಿ ಪಂದ್ಯ ಆಡಿದ ನಸೀಮ್‌ ಶಾ ತಾವು ಎಸೆದ ಮೊದಲ ಓವರ್‌ ನಲ್ಲೇ ವಿಕೆಟ್‌ ಪಡೆದು ಸಂಭ್ರಮಿಸಿದರು.

ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಭಾರತದ ಇನ್ನಿಂಗ್ಸ್‌ ಕಟ್ಟಲು ಶ್ರಮಿಸಿದರಾದರೂ, ರೋಹಿತ್‌ ಶರ್ಮ ಸ್ಪಿನ್ನರ್‌ ನವಾಜ್‌ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸಲು ಹೋಗಿ ಇಫ್ತಿಕಾರ್‌ ಅವರಿಗೆ ಕ್ಯಾಚಿತ್ತು ಔಟಾದರು. ನಾಯಕ ರೋಹಿತ್‌ 18 ಚೆಂಡುಗಳಲ್ಲಿ ಕೇವಲ 12 ರನ್‌ ಗಳಿಸಲು ಶಕ್ತರಾದರು. ಇನ್ನೊಂದೆಡೆ ತಾಳ್ಮೆಯ ಆಟವಾಡಿದ ವಿರಾಟ್‌ ಕೊಹ್ಲಿ 34 ಎಸೆತಗಳಲ್ಲಿ 35 ರನ್‌ ಗಳಿಸಿ, ನವಾಜ್‌ ಅವರ ಬೌಲಿಂಗ್‌ ನಲ್ಲೇ ಇಫ್ತಿಕಾರ್‌ ಅವರಿಗೆ ಕ್ಯಾಚಿತ್ತು ಔಟಾದರು.

ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ಪಡೆದು ಆಡಲು ಬಂದ ರವೀಂದ್ರ ಜಡೇಜಾ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿ ಇರಿಸಿದ್ದಲ್ಲದೆ, 29 ಎಸೆತಗಳಲ್ಲಿ 35 ರನ್‌ ಗಳಿಸಿದರು. ಕೊನೆಯ ಓವರ್‌ ನಲ್ಲಿ ಗೆಲುವಿಗೆ ಏಳು ರನ್‌ ಗಳು ಬೇಕಾಗಿದ್ದಾಗ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಲ್ಡ್‌ ಆದರು.

ಪಂದ್ಯದ ಹೀರೋ ಹಾರ್ದಿಕ್‌ ಪಾಂಡ್ಯ ಒತ್ತಡದ ಸ್ಥಿತಿಯಲ್ಲಿ ಬ್ಯಾಟ್‌ ಬೀಸಿ ಕೇವಲ 17 ಎಸೆತಗಳಲ್ಲಿ 33 ರನ್‌ ಗಳಿಸಿ ಅಜೇಯರಾಗಿ ಉಳಿದರು.

Related Articles

ಇತ್ತೀಚಿನ ಸುದ್ದಿಗಳು