ದೆಹಲಿ: ಚುನಾವಣಾ ಪ್ರಚಾರದ ವೇಳೆ ಈಶಾನ್ಯ ದೆಹಲಿಯ ಕಾಂಗ್ರೆಸ್ ಮತ್ತು ಇಂಡಿಯಾ ಬ್ಲಾಕ್ ಅಭ್ಯರ್ಥಿ ಕನ್ನಯ್ಯ ಕುಮಾರ್ ಮೇಲೆ ಹಲ್ಲೆ ನಡೆದಿದೆ.
ಮಾಲೆ ಹಾಕುವ ನೆಪದಲ್ಲಿ ಬಂದ ಯುವಕ ಕನ್ನಯ್ಯ ಕುಮಾರ್ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ. ಇದರಿಂದ ಅಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಈಶಾನ್ಯ ದೆಹಲಿಯ ಉಸ್ಮಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ತಾರ್ ನಗರದಲ್ಲಿ ಈ ಘಟನೆ ನಡೆದಿದ್ದು, ಕನ್ನಯ್ಯ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಪಕ್ಷದ ಕಾರ್ಯಕರ್ತರು ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಮಹಿಳಾ ಕೌನ್ಸಿಲರ್ ಛಾಯಾ ಶರ್ಮಾ ಅವರ ಜೊತೆಯಲ್ಲೂ ಅನುಚಿತವಾಗಿ ವರ್ತಿಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೇಶವನ್ನು ವಿಭಜಿಸುವ ಬಗ್ಗೆ ಯಾರೇ ಮಾತನಾಡಿದರೂ ಅವರನ್ನು ಕನ್ನಯ್ಯನನ್ನು ನಡೆಸಿಕೊಂಡಂತೆಯೇನಡೆಸಿಕೊಳ್ಳಲಾಗುವುದು ಎಂದು ಹಲ್ಲೆಕೋರ ವಿಡಿಯೋದಲ್ಲಿ ಹೇಳಿದ್ದಾನೆ.
ನಮಗೆ ಯಾವುದೇ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹಲ್ಲೆಕೋರ ಹೇಳುತ್ತಿದ್ದು, ಯಾವುದೇ ಸಂಘಟನೆಯ ಆದೇಶದ ಮೇರೆಗೆ ಈ ಕೆಲಸ ಮಾಡಿಲ್ಲ ಎಂದಿದ್ದಾನೆ. ಆದರೆ ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.