Home ದೇಶ ದೆಹಲಿಯ ಬೆಂಬಲವಿಲ್ಲದೆ ಮಹಾರಾಷ್ಟ್ರದ ವಾಹನಗಳ ಮೇಲೆ ದಾಳಿ ಸಾಧ್ಯವಿಲ್ಲ: ಶಿವಸೇನಾ ಸಂಸದ ಸಂಜಯ್ ರಾವತ್

ದೆಹಲಿಯ ಬೆಂಬಲವಿಲ್ಲದೆ ಮಹಾರಾಷ್ಟ್ರದ ವಾಹನಗಳ ಮೇಲೆ ದಾಳಿ ಸಾಧ್ಯವಿಲ್ಲ: ಶಿವಸೇನಾ ಸಂಸದ ಸಂಜಯ್ ರಾವತ್

0

ಮಹಾರಾಷ್ಟ್ರ: ಕೇಂದ್ರದ ಬೆಂಬಲವಿಲ್ಲದೆ ಕರ್ನಾಟಕದ ಹಿರೇಬಾಗೇವಾಡಿಯಲ್ಲಿ ಮಹಾರಾಷ್ಟ್ರ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಮೇಲೆ ದಾಳಿ ನಡೆಸಲು ಸಾಧ್ಯವಿಲ್ಲ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಬುಧವಾರ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು ʼದೆಹಲಿಯ ಬೆಂಬಲವಿಲ್ಲದೆ ಬೆಳಗಾವಿಯಲ್ಲಿ ಮಹಾರಾಷ್ಟ್ರದ ವಾಹನಗಳ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ. ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದು ಮರಾಠಿ ಜನರ ಹೆಮ್ಮೆ ಮತ್ತು ಸ್ವಾಭಿಮಾನವನ್ನು ಕೊನೆಗಾಣಿಸುವ ಯೋಜನೆಯಾಗಿದೆ. ಬೆಳಗಾವಿಯಲ್ಲಿ ನಡೆದ ದಾಳಿಯು ಅದೇ ಪಿತೂರಿಯ ಒಂದು ಭಾಗವಾಗಿದೆ. ಮರಾಠರು ಇನ್ನಾದರು ಎಚ್ಚೆತ್ತುಕೊಳ್ಳಿʼ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಮೇಲೆ ಬೆಳಗಾವಿ ಸಮೀಪದ ಹಿರೇಬಾಗೇವಾಡಿ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಕರವೇ ಕಾರ್ಯಕರ್ತರಿಂದ ದಾಳಿ ನಡೆದಿದ್ದು, ಉಭಯ ರಾಜ್ಯಗಳ ನಡುವಿನ ಗಡಿ ವಿವಾದವು ಮಂಗಳವಾರ ಬೀದಿಗೆ ಬೀಳುತ್ತಿದ್ದಂತೆ ಹಲವಾರು ಜನರನ್ನು ಬಂಧಿಸಲಾಗಿದೆ. ವಿವಾದದ ಕೇಂದ್ರ ಬಿಂದುವಾಗಿರುವ ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿಗೆ, ಮಹಾರಾಷ್ಟ್ರದ ಇಬ್ಬರು ಸಚಿವರು ತಮ್ಮ ನಿಗದಿತ ಭೇಟಿಯನ್ನು ರದ್ದುಗೊಳಿಸಿದ ಕೆಲವು ದಿನಗಳಿಂದ ಭುಗಿಲೆದ್ದ ಉದ್ವಿಗ್ನತೆಯು ಉಲ್ಬಣಗೊಂಡಿದೆ.

ಎರಡೂ ರಾಜ್ಯಗಳ ನಡುವಿನ ಗಡಿ ವಿವಾದದ ನಡುವೆ, ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮಂಗಳವಾರ ರಾತ್ರಿ ದೂರವಾಣಿಯಲ್ಲಿ ಪರಸ್ಪರ ಮಾತನಾಡಿ, ಎರಡೂ ಕಡೆ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ಒಪ್ಪಿಕೊಂಡಿದ್ದಾರೆ. ಕರ್ನಾಟಕದೊಂದಿಗಿನ ರಾಜ್ಯದ ಗಡಿ ವಿವಾದವನ್ನು ಸಮನ್ವಯಗೊಳಿಸಲು ನೇಮಕಗೊಂಡಿರುವ ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಬೇಕಿತ್ತು, ಆದರೆ ಪ್ರವಾಸವು ಕಾರ್ಯರೂಪಕ್ಕೆ ಬರಲಿಲ್ಲ. ಈ ಇಬ್ಬರು ಸಚಿವರು  ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ ಮತ್ತು ದಶಕಗಳಷ್ಟು ಹಳೆಯದಾದ ಗಡಿ ವಿವಾದದ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

You cannot copy content of this page

Exit mobile version