Monday, June 24, 2024

ಸತ್ಯ | ನ್ಯಾಯ |ಧರ್ಮ

ಅತ್ಯಾಚಾರ ಆರೋಪ ಮಾಡಿರುವ ಬಾಲಕಿಯರಿಗೆ ʼನ್ಯಾಯ ದೊರೆಯಬೇಕಿದೆʼ: ಲೆಹರ್‌ ಸಿಂಗ್‌

ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠದ ಪೀಠಾಧೀಶ ಶಿವಮೂರ್ತಿ ಮುರುಘಾ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಬಾಲಕಿಯರಿಗೆ ‘ನ್ಯಾಯ’ ದೊರಕಬೇಕು ಎಂದು ಬಿಜೆಪಿಯ ಹಿರಿಯ ನಾಯಕ, ರಾಜ್ಯಸಭಾ ಸಂಸದ ಲೆಹರ್‌ ಸಿಂಗ್ ಸಿರೋಯ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆರೋಪ ‘ಸುಳ್ಳು’ ಎಂದು ಪ್ರತಿಪಾದಿಸಿ, ಆರೋಪಿಗೆ ಬೆಂಬಲ ನೀಡಿದ್ದರು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕೂಡ, ಶರಣರ ವಿರುದ್ಧ ಮಠದ ಒಳಗಿನಿಂದಲೇ ಪಿತೂರಿ ನಡೆದಂತಿದೆ ಎಂದು ಸಮರ್ಥನೆಯ ದಾಟಿಯ ಹೇಳಿಕೆ ನೀಡಿದ್ದರು. ಇದಾದ ಒಂದು ದಿನದ ನಂತರ ಲೆಹರ್‌ ಸಿಂಗ್ ಬಾಲಕಿಯರ ಪರವಾಗಿ ಹೇಳಿಕೆ ನೀಡಿದ್ದಾರೆ.

ಲೆಹರ್‌ ಸಿಂಗ್ ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಚಿತ್ರದುರ್ಗದ ಅತ್ಯಂತ ಪ್ರಭಾವಿ ಮುರುಘಾ ಮಠದ ಮಠಾಧೀಶರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಅಪ್ರಾಪ್ತ ಬಾಲಕಿಯರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಇದು ಅತ್ಯಂತ ಆಘಾತಕಾರಿ ಮತ್ತು ದುಃಖದ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಪ್ರತಿ ಬಾರಿ ಈ ರೀತಿಯಲ್ಲಿ ಏನಾದರೂ ಸಂಭವಿಸಿದಾಗ, ಅದು ನಮ್ಮ ಸ್ವಂತ ಮತ್ತು ಸುತ್ತಮತ್ತಲಿನ ಜನರಲ್ಲಿ ನಮ್ಮ ವಿಶ್ವಾಸವನ್ನು ಅಲುಗಾಡಿಸುತ್ತದೆ. ಈ ಆರೋಪಗಳನ್ನು ಸಂಪೂರ್ಣವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ನಾವು ಬದ್ಧರಾಗಿರಬೇಕು. ಹೀಗಿರುವಾಗ ಕರ್ನಾಟಕ ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಈ ಪ್ರಕರಣದಲ್ಲಿ ಯಾವುದೇ ಒತ್ತಡಗಳು ಮತ್ತು ರಾಜಕೀಯ ಹಸ್ತಕ್ಷೇಪಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಸಿಂಗ್ ತಿಳಿಸಿದ್ದಾರೆ.

‌ʼಹೆಣ್ಣುಮಕ್ಕಳಿಗೆ ನ್ಯಾಯದ ಹೊರತಾಗಿ ಬೇರೇನೂ ಅರ್ಹವಾಗಿಲ್ಲʼ. ಈ ಪ್ರಕರಣವನ್ನು ಕರ್ನಾಟಕದ ಹೊರಗೆ ವರ್ಗಾಯಿಸಿದರೆ ನ್ಯಾಯದ ಹಿತಾಸಕ್ತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಅನುಮಾನವಿದ್ದರೆ, ಅದನ್ನು ಸಹ ಪರಿಗಣಿಸಬೇಕು. ಈ ಸಂದರ್ಭದಲ್ಲಿ, ಗ್ರಹಿಕೆಗಳು ಮಾತ್ರ ಮುಖ್ಯವಲ್ಲ ಆದರೆ ನಮ್ಮ ಸಮಾಜದ ಆರೋಗ್ಯದಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ನಿರ್ಣಾಯಕ ಪಾತ್ರವಿದೆ ಎಂದಿದ್ದಾರೆ.

ಇಷ್ಟೇ ಅಲ್ಲದೆ, ನ್ಯಾಯದಾನದ ವಿಷಯದಲ್ಲಿ ಪ್ರಭಾವಗಳಿಗೆ ತನಿಖಾ ಸಂಸ್ಥೆಗಳು ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳು ಇದ್ದಲ್ಲಿ, ಪ್ರಕರಣವನ್ನು ಕರ್ನಾಟಕದಿಂದ ಹೊರಗಿನ ರಾಜ್ಯಕ್ಕೆ ವರ್ಗಾವಣೆ ಮಾಡುವುದು ಸೂಕ್ತ ಎಂದು ಲೆಹರ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು