Tuesday, July 2, 2024

ಸತ್ಯ | ನ್ಯಾಯ |ಧರ್ಮ

ಆಗಸ್ಟ್ 27 ರ ವರೆಗೂ ಕೊಡಗುನಲ್ಲಿ ನಿಷೇಧಾಜ್ಞೆ ಜಾರಿ

ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮಡಿಕೇರಿ ಚಲೋ’ ಕರೆ ಕೊಟ್ಟ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ನಾಳೆ (ಅ.24) ಯಿಂದ ಕೊಡಗುನಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 24 ರಿಂದ ಆಗಸ್ಟ್ 27 ರ ಸಂಜೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ ಮಾಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪೂರ್ವ ಯೋಜಿತ ಖಾಸಗಿ ಮತ್ತು ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸದಂತೆ, ಈಗಾಗಲೇ ಕರೆ ಕೊಟ್ಟಿದ್ದರೆ ಅದನ್ನು ರದ್ದುಪಡಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಪ್ರಮುಖವಾಗಿ ಯಾವುದೇ ಪ್ರತಿಭಟನೆ, ವಿಜಯೋತ್ಸವ, ರ್ಯಾಲಿ, ಜಾಥಾ ನಡೆಸದಂತೆ ಕಡ್ಡಾಯ ಆದೇಶ ಹೊರಡಿಸಿದ್ದಾರೆ.

ಇದರ ಜೊತೆಗೆ ಜಿಲ್ಲೆಯಲ್ಲಿ 5 ಜನಕ್ಕಿಂತ ಹೆಚ್ಚು ಮಂದಿ ಗುಂಪು ಸೇರದಂತೆ, ಪಟಾಕಿ ಸಿಡಿಸದಂತೆ, ಧ್ವನಿವರ್ದಕ ಬಳಸದಂತೆ, ಪ್ರಚೋದನಾಕಾರಿ ಘೋಷಣೆ ಕೂಗದಂತೆ, ಸಾರ್ವಜನಿಕವಾಗಿ ಆಯುಧಗಳನ್ನು ಹಿಡಿಯದಂತೆ, ಯಾವುದೇ ಸಂಘ ಸಂಘಟನೆಗಳ ಬಾವುಟ ಹಿಡಿಯದಂತೆ, ಸಂತೆ ಸಮಾರಂಭ ನಡೆಸದಂತೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ.

ಮಳೆಹಾನಿ ಮತ್ತು ನೆರೆಪೀಡಿತ ಪ್ರದೇಶಗಳ ವೀಕ್ಷಣೆಗೆ ಸಿದ್ದರಾಮಯ್ಯ ಭೇಟಿ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಸಾವರ್ಕರ್ ಫೋಟೋ ತೋರಿಸಿ, ಮೊಟ್ಟೆ ಎಸೆದು ಪ್ರತಿಭಟಿಸಿದ್ದರು. ಸಂಘಪರಿವಾರದ ಕಾರ್ಯಕರ್ತರ ಈ ನಡೆಯ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಬಹುತೇಕ ರಾಜಕೀಯ ನಾಯಕರು ಇದನ್ನು ಖಂಡಿಸಿದ್ದರು. ಆದರೆ ಬಿಜೆಪಿ ಪಕ್ಷದ ಕೆಲವು ಮುಖಂಡರು ಇದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದು, ಸಂಘಪರಿವಾರದವರ ನಡೆಗೆ ಸಿದ್ದರಾಮಯ್ಯ ನಿಲುವೇ ಕಾರಣ ಎಂಬುದಾಗಿ ಹೇಳಿಕೆ ಕೊಟ್ಟಿದ್ದರು.

ಸೂಕ್ತ ಭದ್ರತೆ ಒದಗಿಸದ ಮತ್ತು ಇಂಟೆಲಿಜೆನ್ಸ್ ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸಿದ ಜಿಲ್ಲಾ ಪೊಲೀಸರ ಕ್ರಮದ ವಿರುದ್ಧ ಸಿದ್ದರಾಮಯ್ಯ ಅಂದೇ ಆಕ್ರೋಶ ವ್ಯಕ್ತಪಡಿಸಿ, ಆಗಸ್ಟ್ 26 ಕ್ಕೆ SP ಕಛೇರಿ ಮುತ್ತಿಗೆ ಮತ್ತು ಬೃಹತ್ ಸಮಾವೇಶಕ್ಕೆ ಕರೆ ನೀಡಿದರು. ಮಾಹಿತಿಯ ಪ್ರಕಾರ ಕೊಡಗು ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಕ್ಕೂ ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರು ಈ ಸಮಾವೇಶಕ್ಕೆ ಸೇರುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಈ ಪ್ರತಿಭಟನೆ ಘೋಷಣೆ ಬೆನ್ನಲ್ಲೇ ಬಿಜೆಪಿ ಕೂಡಾ ಅದೇ ದಿನ ಜನಜಾಗೃತಿ ಸಭೆ ನಡೆಸುವುದಾಗಿ ಕರೆ ಕೊಟ್ಟಿದೆ. ಈ ಸಂಬಂಧ ಜಿಲ್ಲಾಡಳಿತ ಸೂಕ್ತ ಭದ್ರತೆ ಹಿನ್ನೆಲೆಯಲ್ಲಿ ನಾಳೆಯಿಂದಲೇ ಕೊಡಗುನಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು