ವೈಯಕ್ತಿಕ ದ್ವೇಷಕ್ಕೆ ತಿರುಗಿದ ರಸ್ತೆ ಅಪಘಾತದ ಘಟನೆಯು ಮಂಗಳೂರು ಮೂಲದ ಆಟೋರಿಕ್ಷಾ ಚಾಲಕ ಮೊಹಮ್ಮದ್ ಶರೀಫ್ (59) ಅವರ ಭೀಕರ ಕೊಲೆಗೆ ಕಾರಣವಾಗಿದೆ. ಏಪ್ರಿಲ್ 10 ರಂದು ಮಂಜೇಶ್ವರದ ಕುಂಜತ್ತೂರು ಪಡುವಿನಲ್ಲಿ ಅವರ ಶವವನ್ನು ತೆರೆದ ಬಾವಿಯಲ್ಲಿ ಎಸೆಯಲಾಗಿತ್ತು.
ಪ್ರಕರಣದ ಸಂಬಂಧ ಕಾಸರಗೋಡು ಪೊಲೀಸರು ಸೋಮವಾರ ಮಂಗಳೂರಿನ ಹೊರವಲಯದ ಸುರತ್ಕಲ್ ಮೂಲದ ಅಭಿಷೇಕ್ ಶೆಟ್ಟಿಯನ್ನು ಬಂಧಿಸಿದ್ದಾರೆ. ಇತ್ತೀಚಿನವರೆಗೂ ರಯಾನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಶೆಟ್ಟಿ ಗಾಂಜಾದಂತಹ ಮಾದಕ ವಸ್ತುಗಳ ಸೇವನೆಯ ವ್ಯಸನಿಯಾಗಿದ್ದಾನೆ ಎಂದು ಕಾಸರಗೋಡು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿ ಬಾಲಕೃಷ್ಣನ್ ನಾಯರ್ ತಿಳಿಸಿದ್ದಾರೆ.
ಘಟನೆ ವಿವರ: ಮಂಗಳೂರಿನ ಟ್ರಾಫಿಕ್ ಜಂಕ್ಷನ್ನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ (ಟ್ರಾಫಿಕ್ ಜಾಮ್ ವಿಚಾರವಾಗಿ) ಅಭಿಷೇಕ ಶೆಟ್ಟಿ ಮತ್ತು ಆಟೋ ಚಾಲಕ ಶರೀಫ್ ನಡುವೆ ಕೈ ಕೈ ಮಿಲಾಯಿಸುವ ಹಂತದ ಗಲಾಟೆಗೆ ಕಾರಣವಾಗಿತ್ತು. ಘರ್ಷಣೆಯಲ್ಲಿ ದಾರಿ ಬಿಡದಿದ್ದಕ್ಕಾಗಿ ಆಟೋ ಚಾಲಕ ಶರೀಫ್, ಅಭಿಷೇಕ್ ಶೆಟ್ಟಿ ನಡುವೆ ತೀವ್ರ ವಾಗ್ವಾದ ನಡೆದಿದೆ ಮತ್ತು ಅಭಿಷೇಕ್ ಶೆಟ್ಟಿ ಕೊಳಕು ಶಬ್ದ ಬಳಸಿ ಅಸಭ್ಯವಾಗಿ ಮಾತನಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂತರ, ಮಂಗಳೂರು ನಗರದಲ್ಲಿನ ಆಟೋರಿಕ್ಷಾಗಳ ಚಾಲಕರು ಸೇರಿ ಅಭಿಷೇಕ್ ಶೆಟ್ಟಿ ಚಲಿಸುತ್ತಿದ್ದ 13ನೇ ಸಂಖ್ಯೆಯ ಬಸ್ಸಿನ ಮುಂದೆ ಉದ್ದೇಶಪೂರ್ವಕವಾಗಿ ವಾಹನಗಳನ್ನು ಅಡ್ಡಗಟ್ಟಿ ರಸ್ತೆ ತಡೆ ನಡೆಸಲು ಪ್ರಾರಂಭಿಸಿದವು. ಶರೀಫ್ ಆಟೋ ಚಾಲಕರ ಸಂಘದ ಮೂಲಕ ಇದನ್ನು ಆಯೋಜಿಸಿದ್ದಾನೆ ಎಂದು ಅಭಿಷೇಕ್ ಶೆಟ್ಟಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಅಷ್ಟೇ ಅಲ್ಲದೆ ಶರೀಫ್ ತನ್ನ ವಿರುದ್ಧ ಶಾಲೆಯ ಆಡಳಿತ ಮಂಡಳಿಗೂ ದೂರು ನೀಡಿರುವ ಕಾರಣ ಶಾಲೆಯ ಆಡಳಿತ ಮಂಡಳಿ ತನ್ನನ್ನು ಕೆಲಸದಿಂದ ವಜಾ ಮಾಡಿದೆ. ಆ ನಂತರ ಇದೇ ಕಾರಣಕ್ಕೆ ಸಾಂಸಾರಿಕವಾಗಿಯೂ ತನ್ನ ಜೀವನ ದಾರಿ ತಪ್ಪಿದಂತಾಯಿತು ಎಂದು ಅಭಿಷೇಕ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಅದಾದ ನಂತರ ಏಪ್ರಿಲ್ 9 ರ ರಾತ್ರಿ, ಅಭಿಷೇಕ್ ಶೆಟ್ಟಿ ಬೈಕಂಪಾಡಿಯಲ್ಲಿ ಶರೀಫ್ನನ್ನು ಗುರುತಿಸಿ ಮಧ್ಯರಾತ್ರಿಯ ಸುಮಾರಿಗೆ ಶರೀಫನ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಾನೆ. ರಸ್ತೆ ಗಲಾಟೆ ಘಟನೆಯ ಸಮಯದಲ್ಲಿ, ಶೆಟ್ಟಿಗೆ ಉದ್ದ ಕೂದಲು ಇತ್ತು. ಈಗ, ಅವನು ಕೂದಲನ್ನು ಚಿಕ್ಕದಾಗಿ ಕತ್ತರಿಸಿದ್ದನು, ಇದರಿಂದಾಗಿ ಶರೀಫ್ ಅಭಿಷೇಕ್ ನನ್ನು ಗುರುತಿಸದೇ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಶೆಟ್ಟಿ ಆಟೋರಿಕ್ಷಾವನ್ನು ಮಂಜೇಶ್ವರದ ಕುಂಜತ್ತೂರು ಪಡುವು ಎಂಬ ಪ್ರತ್ಯೇಕ ಪ್ರದೇಶಕ್ಕೆ ಹೋಗಲು ಹೇಳಿದ್ದಾನೆ, ನಗರದಿಂದ ಸುಮಾರು 36 ಕಿ.ಮೀ ದೂರದಲ್ಲಿರುವ ಆ ಜಾಗಕ್ಕೆ ಶೆಟ್ಟಿ ಮಾದಕವಸ್ತು ವ್ಯವಹಾರಕ್ಕಾಗಿ ಆಗಾಗ್ಗೆ ಹೋಗುತ್ತಿದ್ದನೆಂದು ಪೊಲೀಸರಿಗೆ ತನಿಖೆ ನಂತರ ಮಾಹಿತಿ ತಿಳಿದಿದೆ. ಅಲ್ಲಿ, ಶರೀಫ್ನ ಕುತ್ತಿಗೆಗೆ ಇರಿದು, ದೇಹವನ್ನು ಕಾಲ್ನಡಿಗೆಯಲ್ಲಿ ಮಾತ್ರ ತಲುಪಬಹುದಾದ ದೊಡ್ಡ, ಪ್ಯಾರಪೆಟ್ ಇಲ್ಲದ ಬಾವಿಯಲ್ಲಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಅವನು ಹಾದುಹೋಗುವ ಸ್ಕೂಟರ್ನಲ್ಲಿ ತಲಪಾಡಿಗೆ ಹೋಗಿ ಸಂಬಂಧಿಕರ ಮನೆಯಲ್ಲಿ ರಾತ್ರಿ ಕಳೆದಿದ್ದಾನೆ.
ಆ ನಂತರ ಶರೀಫ್ ಕಾಣೆಯಾದ ಬಗ್ಗೆ ದೂರು ಬಂದ ನಂತರ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ), 208 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿತು ಮತ್ತು ಆಟೋರಿಕ್ಷಾ ಚಾಲಕರು ಮತ್ತು ಸೈಬರ್ ಪೊಲೀಸರಿಂದ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿದೆ. ಮಂಗಳೂರು ಪೊಲೀಸರ ತಾಂತ್ರಿಕ ನೆರವಿನೊಂದಿಗೆ, ಅಭಿಷೇಕ್ ಶೆಟ್ಟಿಯನ್ನು ಗುರುತಿಸಿ ಮೂರು ದಿನಗಳಲ್ಲಿ ಬಂಧಿಸಲಾಯಿತು.
ಅಭಿಷೇಕ್ ಶೆಟ್ಟಿ ಈ ಹಿಂದೆಯೂ ಮಾದಕ ದ್ರವ್ಯ ಸಂಬಂಧಿತ ಅಪರಾಧಗಳಲ್ಲಿ ಭಾಗಿ ಆಗಿದ್ದಾನೆ. ಕೊಲೆಯ ಸಮಯದಲ್ಲೂ ಆತ ಮಾದಕ ದ್ರವ್ಯದ ಪ್ರಭಾವದಲ್ಲಿದ್ದ ಎಂದು ಎಎಸ್ಪಿ ಬಾಲಕೃಷ್ಣನ್ ನಾಯರ್ ಹೇಳಿದರು. ಅಪರಾಧಕ್ಕೆ ಬಳಸಲಾದ ಚಾಕು ಇನ್ನೂ ಸಿಕ್ಕಿಲ್ಲ, ಅಭಿಷೇಕ್ ಶೆಟ್ಟಿ ಹೇಳಿಕೆಯನ್ನು ದೃಢೀಕರಿಸಲು ತನಿಖೆ ನಡೆಯುತ್ತಿದೆ” ಎಂದು ಬಾಲಕೃಷ್ಣನ್ ನಾಯರ್ ಹೇಳಿದರು.