Wednesday, June 25, 2025

ಸತ್ಯ | ನ್ಯಾಯ |ಧರ್ಮ

ಪ್ರಭಾಕರ್ ಭಟ್ ಗೆ ಜಾಮೀನು : ಸರ್ಕಾರಕ್ಕೆ 35 ಲಕ್ಷ ಮುಸ್ಲಿಂ ಹೆಣ್ಣು ಮಕ್ಕಳ ಹಿತ ಬೇಕಿಲ್ಲ – ನಜ್ಮಾ ನಜೀರ್

ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಅವರು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ಶ್ರೀರಂಗಪಟ್ಟಣ ಕೋರ್ಟ್ ನಿಂದ ಪ್ರಭಾಕರ ಭಟ್ ಗೆ ಜಾಮೀನು ಮಂಜೂರು ಮಾಡಿದೆ. ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಭಾಕರ ಭಟ್ ಜಾಮೀನಿಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಮುಸ್ಲಿಮ್‌ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಅವರ ಜಾಮೀನಿನ ತೀರ್ಪಿನ ವಿಚಾರಣೆ ಜನವರಿ 10 ರಂದು ವಿಚಾರಣೆ ಮುಗಿದಿತ್ತು. ಜನವರಿ 17 ಕ್ಕೆ ಅರ್ಜಿ ಕಾಯ್ದಿರಿಸಿದ್ದ ಶ್ರೀರಂಗಪಟ್ಟಣ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.

“ಸೌಹಾರ್ದ ಸಮಾಜಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಕಂಟಕನಾಗಿದ್ದಾನೆ. ಬೇರೆ ಬೇರೆ ಕೋರ್ಟ್ ಗಳ ತೀರ್ಪುಗಳನ್ನು ಪರಾಮರ್ಶಿಸಿದರೆ ಈತನಿಗೆ ಜಾಮೀನು ನೀಡುವ ಸಾಧ್ಯತೆ ತೀರಾ ಕಡಿಮೆ ಇದೆ. ಅಷ್ಟೆ ಅಲ್ಲದೆ ಹೊಸದಾಗಿ ಜಾರಿಗೆ ತಂದ ನ್ಯಾಯ ಸಂಹಿತೆಗೂ ಸಹ ಪ್ರಭಾಕರ ಭಟ್ಟನಿಗೆ ಜಾಮೀನು ಕೊಡಿಸಲು ದಾರಿಗಳಿಲ್ಲ. ಈತ ಜಾಮೀನು ಪಡೆಯಲು ಸ್ಪಷ್ಟವಾಗಿ ಅನರ್ಹ ಎಂದು ನಜ್ಮಾ ನಜೀರ್ ಪರವಾಗಿ ವಾದ ಮಂಡಿಸಿದ ಬಾಲನ್ ಅಭಿಪ್ರಾಯ ಪಟ್ಟಿದ್ದರು.

ಆದರೆ ಈಗ ಶ್ರೀರಂಗಪಟ್ಟಣ ಕೋರ್ಟ್ ಕಲ್ಲಡ್ಕ ಪ್ರಭಾಕರ ಭಟ್ ಗೆ ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಹಿನ್ನೆಲೆಯಲ್ಲಿ ಪೀಪಲ್ ಮೀಡಿಯಾ ದೂರುದಾರೆ ನಜ್ಮಾ ನಜೀರ್ ಅವರನ್ನು ಸಂಪರ್ಕಿಸಿದಾಗ “ಯಾವ ಆಧಾರದಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂಬ ಬಗ್ಗೆ ನನಗೆ ಸ್ಪಷ್ಟವಾಗಿ ಮಾಹಿತಿ ಸಿಕ್ಕಿಲ್ಲ. ಆದರೆ ಪ್ರಭಾಕರ ಭಟ್ ಗೆ ಜಾಮೀನು ಸಿಗುವ ಬಗ್ಗೆ ಈ ಹಿಂದೆಯೇ ನನಗೆ ಸ್ಪಷ್ಟ ಮಾಹಿತಿ ಇತ್ತು. ಯಾಕೆಂದರೆ ಪ್ರಕರಣದ ರದ್ದತಿಗೆ ಕೋರಿ ಹಾಕಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಖುದ್ದು ರಾಜ್ಯ ಸರ್ಕಾರವೇ ಪ್ರಭಾಕರ ಭಟ್ ಬಂಧಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ರಾಜ್ಯ ಹೈಕೋರ್ಟ್ ನಲ್ಲೇ ಸರ್ಕಾರ ಈ ರೀತಿಯ ಅಭಿಪ್ರಾಯ ಪಟ್ಟಿದೆ ಎಂದರೆ, ಜಿಲ್ಲಾ ನ್ಯಾಯಾಲಯಗಳೂ ಸಹ ಹೈಕೋರ್ಟ್ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಬಹುದು ಎಂಬುದು ನನ್ನ ಗಮನಕ್ಕೆ ಬಂದಿತ್ತು” ಎಂದು ತಿಳಿಸಿದ್ದಾರೆ.

ಇದರ ಜೊತೆಗೆ “ಖುದ್ದು ಸರ್ಕಾರಕ್ಕೆ ಈ ಪ್ರಕರಣದ ಗಂಭೀರತೆ ಬಗ್ಗೆ ಸಡಿಲ ಭಾವನೆ ಇರುವಾಗ, ಸುಮಾರು 35 ಲಕ್ಷದಷ್ಟು ಇರುವ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ತೇಜೋವಧೆ ಸರ್ಕಾರಕ್ಕೆ ವಿಚಾರವೇ ಅಲ್ಲ ಎಂದು ಅಭಿಪ್ರಾಯ ಪಟ್ಟಿದೆ ಎಂದರೆ, ಪ್ರಕರಣದಲ್ಲಿ ಪ್ರಭಾಕರ ಭಟ್ ಗೆ ಜಾಮೀನು ಮಂಜೂರಾಗಿದ್ದು ತೀರಾ ಆಶ್ಚರ್ಯವೇನಲ್ಲ. ಹೀಗಾಗಿ ಸಮುದಾಯದ ಹೆಣ್ಣು ಮಕ್ಕಳು ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗೆಗಿನ ನಂಬಿಕೆ ಕಳೆದುಕೊಳ್ಳಬಹುದು” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ನ್ಯಾಯಾಲಯ ಏನು ಕಂಡೀಶನ್ ಹಾಕಿದೆ ಎಂಬುದನ್ನು ನೋಡಬೇಕು.. ಇದಲ್ಲದೇ ದ್ವೇಷ ಭಾಷಣ ಮಾಡಿ ಅಷ್ಟು ಸುಲಭಕ್ಕೆ ಬಚಾವಾಗಲು ಸಾಧ್ಯವಿಲ್ಲ ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ಇನ್ನು ಮುಂದೆಯೂ ಇಂತಹ ದ್ವೇಷ ಭಾಷಣ ಮಾಡುವವರ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಈ ಪ್ರಕರಣದ ಬಗ್ಗೆ ಮುಂದೇನು ಮಾಡಬಹುದು ಎಂಬುದನ್ನು ನನ್ನ ವಕೀಲರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page