Friday, June 20, 2025

ಸತ್ಯ | ನ್ಯಾಯ |ಧರ್ಮ

ಬಾಲಸೋರ್ ರೈಲು ಅಪಘಾತ: ಸಿಗ್ನಲಿಂಗ್‌ ದೋಷಗಳೇ ಅಪಘಾತಕ್ಕೆ ಕಾರಣವೆಂದ CRS ವರದಿ

ನವದೆಹಲಿ: 290 ಜನರ ಸಾವಿಗೆ ಕಾರಣವಾದ ಮತ್ತು 1,000ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಬಾಲಸೋರ್ ರೈಲು ದುರಂತದ ಬಗ್ಗೆ ಬಹುನಿರೀಕ್ಷಿತ ರೈಲ್ವೆ ಸುರಕ್ಷತಾ ಆಯೋಗ (CRS) ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ.

ಈ ವರದಿಯು ಸಿಬ್ಬಂದಿ ಸದಸ್ಯರ ಹೇಳಿಕೆಗಳು ಮತ್ತು ರೈಲ್ವೆ ಸ್ವತ್ತುಗಳಿಗೆ ಸಂಬಂಧಿಸಿದ ವಿವಿಧ ಅಂಶಗಳ ತನಿಖಾ ವರದಿಯನ್ನು ಹೊಂದಿದೆ.

ಪ್ರಸ್ತುತ ನಡೆಯುತ್ತಿರುವ ಸಿಬಿಐ ತನಿಖೆಯನ್ನು ಉಲ್ಲೇಖಿಸಿ ವರದಿಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ರೈಲ್ವೆ ಅಧಿಕಾರಿಗಳು ನಿರಾಕರಿಸಿದರೂ, ಮೂಲಗಳ ಮೂಲಕ ದಾಖಲೆಯ ಗಮನಾರ್ಹ ಭಾಗಗಳು ಮಾಧ್ಯಮಗಳಿಗೆ ಲಭ್ಯವಾಗಿವೆಯೆಂದು ವಾಹಿನಿಯೊಂದು ವರದಿ ಮಾಡಿದೆ.

ʼಈ ಅಪಘಾತವು ಪರಸ್ಪರ ಢಿಕ್ಕಿಯಿಂದ ಸಂಭವಿಸಿದ್ದು, ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲಿನ ಸ್ಪೀಡೋಮೀಟರ್‌ ರೀಡಿಂಗ್‌ ಇದ್ದಕ್ಕಿದ್ದ ಹಾಗೆ ಸೊನ್ನೆಗೆ ಇಳಿದಿದೆʼ ಎಂದು ವರದಿ ಸ್ಪಷ್ಟವಾಗಿ ಹೇಳುತ್ತದೆ. ಚೆನ್ನೈ-ಕೋಲ್ಕತಾ ಪ್ಯಾಸೆಂಜರ್ ರೈಲು ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ಬಹನಾಗ ಬಜಾರ್ ರೈಲ್ವೆ ನಿಲ್ದಾಣದ ಬಳಿ ಅಪ್-ಲೂಪ್ ಮಾರ್ಗವನ್ನು ಪ್ರವೇಶಿಸಿತ್ತು ಆದರೆ ಆ ಹಳಿಯಲ್ಲಿ ಈಗಾಗಲೇ ಗೂಡ್ಸ್‌ ರೈಲೊಂದು ಬಂದು ನಿಂತಿತ್ತು. ಇದು ರೈಲುಗಳ ಢಿಕ್ಕಿಗೆ ಕಾರಣವಾಯಿತು. ಈ ಘರ್ಷಣೆಯು ರೈಲು ಹಳಿ ತಪ್ಪಲು ಕಾರಣವಾಯಿತು. ಪರಿಣಾಮವಾಗಿ ಇನ್ನೊಂದು ಟ್ರ್ಯಾಕ್‌ನಲ್ಲಿದ್ದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಕೊನೆಯ ಕೆಲವು ಕೋಚ್‌ಗಳು ಉರುಳಿದವು.

“ಎಸ್ & ಟಿ (ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಷನ್) ಇಲಾಖೆಯಲ್ಲಿನ ಅನೇಕ ಹಂತಗಳಲ್ಲಿನ ಲೋಪಗಳು ಈ ಅಪಘಾತಕ್ಕೆ ಕಾರಣವಾಗಿದೆ” ಎಂದು ವರದಿ ತಿಳಿಸಿದೆ.

ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಅಪಘಾತದ ತನಿಖೆಯನ್ನು ಆರಂಭದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಗೆ (CRS) ಮತ್ತು ನಂತರ ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಲಾಯಿತು. ಆಗ್ನೇಯ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ ಅವರಿಗೆ ಈ ತನಿಖೆಯ ಉಸ್ತುವಾರಿ ವಹಿಸಲಾಗಿತ್ತು.

“ಈ ವಿಷಯದ ಕುರಿತು CBI ಇನ್ನೊಂದು ತನಿಖೆ ನಡೆಸುತ್ತಿರುವ ಕಾರಣ ನಾವು CRS Report ಕುರಿತು ಯಾವುದೇ ಮಾಹಿತಿಯನ್ನಾಗಲೀ, ಪ್ರತಿಕ್ರಿಯೆಯನ್ನಾಗಲೀ ನೀಡಲು ಸಾಧ್ಯವಿಲ್ಲವೆಂದು” ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದಾಗ್ಯೂ ಈ ವರದಿಯು ಅಪಘಾತದ ಕುರಿತಾದ ಗೊಂದಲಗಳ ತೆರೆಯನ್ನು ಸರಿಸಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page