Thursday, June 20, 2024

ಸತ್ಯ | ನ್ಯಾಯ |ಧರ್ಮ

ಬಂಡೆ ಕಲ್ಲುಗಳ ನಡುವೆ ಅರಳುವ ಹೂಗಳು

ಗಡ್ಡ, ಟೋಪಿ ಧರಿಸಿದವರೆಲ್ಲ ಭಯೋತ್ಪಾದಕರಲ್ಲ. ವಿಭೂತಿ, ದಾರ, ಮಾಲೆ ಧರಿಸಿದವರೆಲ್ಲ ಕೊಲೆಗಾರರಲ್ಲ. ಹಿಂದೆಂದೂ ಇಲ್ಲದ ಈ ಭಾವನೆ ಬೆಳೆಯಲು ಕಾರಣವಾದರೂ ಯಾವುದು? ಹಿಂದೆ ಜೊತೆಗೂಡಿ ಆಡಿದವರನ್ನು ಅನುಮಾನಿಸುವಷ್ಟರ ಮಟ್ಟಿಗೆ ಪರಿಸ್ಥಿತಿಯನ್ನು ಸೃಷ್ಟಿಸಿದವರಾದರೂ ಯಾರು? ಓದಿ.. ಸಿಹಾನ ಬಿ.ಎಂ. ಅಂಕಣ ಮೈಂಡ್‌ ಬ್ಲಾಕ್

ಕೊರೋನ ಕಾಲಾವಧಿಯ ಬಳಿಕ ಕೆಲಸದ ಒತ್ತಡದಲ್ಲಿ ಮೈಮರೆತ ಪತಿಯ ಪುರುಸೊತ್ತಿಲ್ಲದ ಬದುಕಿಗೆ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ ಸೀಮಾಳದು. ಅತ್ತ ಸೂರ್ಯೋದಯಕ್ಕೆ ಒಂದೂವರೆ ತಾಸು ಮುಂಚಿತವಾಗಿ ಮನೆ ಬಿಡುವವನು ಮುಸ್ಸಂಜೆ ಕಳೆದೇ ಗೂಡು ಸೇರುವುದು. ಇತ್ತ ಅವಳಿಗೂ ಮಕ್ಕಳಿಗೂ ಆನ್ ಲೈನ್ ಕ್ಲಾಸ್, ಮನೆಕೆಲಸ ಇದರಲ್ಲೇ ಇಡೀ ಕೊರೋನ ಕಾಲವನ್ನು ಕಳೆದು ತಲೆ ಚಿಟ್ಟು ಹಿಡಿದು ಹೋಗಿತ್ತು. ಕಾಲೇಜಿನ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದು ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಜೊತೆ ಕಾಲ ಕಳೆಯುತ್ತಿದ್ದ ಹಿತವನ್ನು ಕೊರೋನ ಬಲಿ ತೆಗೆದು ಕೊಂಡಿತು. ಇದರ ನಡುವೆ ಸಂಬಂಧಿಕರ, ಒಡಹುಟ್ಟಿದವರ, ವಿದ್ಯಾರ್ಥಿಗಳ, ಆಪ್ತರ ಫೋನ್ ಕಾಲ್, ಮೆಸೇಜ್ ಗಳು ಬದುಕಿಗೊಂದು ಆಶ್ವಾಸನೆ ಕೊಡುತ್ತಿತ್ತು.

ಇದೀಗ ಬದುಕಿನ ಮಗ್ಗುಲು ಮತ್ತೊಮ್ಮೆ ಬದಲಾವಣೆಗೆ, ಬೆಳಕಿನೆಡೆಗೆ ಹೊರಳಿದೆ. ಆನ್ ಲೈನ್ ಕ್ಲಾಸ್, ಹೋಂವರ್ಕ್, ಮೊಬೈಲ್, ಕಂಪ್ಯೂಟರ್ ಬೆರಳಾಟ, ಗೂಡೊಳಗಿನ ಜೀವನ ಮಕ್ಕಳಿಗೂ ಸಾಕಾಯಿತೇನೋ…ಜೀವ ಹಿಂಡಿ ಪ್ರಾಣ ತೆಗೆಯುವ ಕಾಲದಲ್ಲಿ ಬದುಕು ಸವೆಸುವ ಮಕ್ಕಳು ಬೆಳಗಾಗುತ್ತಲೇ ಅವಳತ್ತ ಬೀರುವ ಕಿರುನೋಟ,” ಬಂತೆಲ್ಲಿಗೆ…ಇನ್ನೆಲ್ಲಿಗೆ..” ದಾ.ರಾ.ಬೇಂದ್ರೆಯವರ ಕವನದ ಸಾಲುಗಳನ್ನು ನೆನಪಿಸಿ ಅಣಕಿಸುವಂತಿತ್ತು.

 ” ಅಂತು ಇಂತು ಪ್ರಾಣತಂತು ಹೆಣೆಯುತ್ತಿದೆ ಬಾಳಾ

  ಅಲ್ಲು ಇಲ್ಲು ಚೆಲುವು ನಿಂತು ಹಾಕುತ್ತಿತ್ತು ಬಾಳಾ

  ಬಂತೆಲ್ಲಿಗೆ ? ಕೇಳುತ್ತಿದ್ದ ನೀಯನಂತ ಕಾಲ.”

ಬೇಂದ್ರೆಯವರ ಸಾಲುಗಳಂತೆ ಚೆಲುವ ಸವಿಯುವ ಮಕ್ಕಳ ಆಸೆಗೆ ತಣ್ಣೀರೆರಚುವ ಮನಸ್ಸು ಬಾರದೆ ಪ್ರತಿದಿನ ಅವನೊಂದಿಗೆ ಮಗ್ಗುಲಲ್ಲಿ ಮಲಗಿ, ‘ನಾಳೆತ್ತ…’ ಎಂದು ಪಿಸುಗುಟ್ಟುತ್ತಿದ್ದಳು. ಕೊನೆಗೊಮ್ಮೆ ಮಸೆದ ಉಸಿರು ಪಕ್ಕ ಹಿಡಿದು ಮಿಂಚಿ ಮಾಯವಾಗಿ ಒಂದು ಮಂದಹಾಸ,” ನಾಳೆ ಹೊರಡೋಣ” ಎನ್ನುತ್ತಾ ಉಲಿಯಿತು.

 ಮರುದಿನ ಭಾನುವಾರ. ಮಕ್ಕಳು ಬಲು ಆನಂದದಿ ಬೆಳಗೆದ್ದು ಬೇಗ ಹೊರಡಲನುವಾದರು. “ಅಮ್ಮಾ..ಎಲ್ಲಿಗಮ್ಮಾ ಹೋಗುವುದು? ಅಲ್ಲಿ ಏನೇನು ಇವೆಯಮ್ಮಾ…?” ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಯಿತವಳಿಗೆ.” ನಿಮ್ಮಪ್ಪ ಎಲ್ಲಿಗೆ ಕರ್ಕೊಂಡು ಹೋಗ್ತಾರೋ ಅಲ್ಲಿಗೆ ಹೋಗೋಣ. ಈಗಂತು ದೂರದೂರಿಗೆ ಹೋಗುವಂತಿಲ್ಲ. ಈ ಲಾಕ್ ಡೌನ್, ಸೀಲ್ ಡೌನ್ ಆಟ ಮುಗಿದ ಮೇಲೆ ಊಟಿಗೋ ಮೈಸೂರಿಗೋ ಹೋಗೋಣ…” ಮಕ್ಕಳಿಗೆ ಹೀಗೆ ಹೇಳಿ ಭರವಸೆ ತುಂಬುತ್ತಿದ್ದಳು. ಇನ್ನು ಅವನ ವಿಷ್ಯ ಕೇಳುವುದೇ ಬೇಡ. ಹೀಗೆ ಊರೂರು ಸುತ್ತಾಡುವುದೆಂದರೆ ಅದರಲ್ಲಿ ಅವನಿಗೆ ಆಸಕ್ತಿ ಕಮ್ಮಿ. ಅವನ ಇಷ್ಟಗಳೇ ಬೇರೆ. ಪ್ರವಾಸೀಸ್ಥಳಗಳ ಹೆಸರು ಹೇಳಿದೊಡನೆ ಅನಾಥಾಶ್ರಮವೋ, ಸೇವಾಸಂಸ್ಥೆಗಳೋ, ಸಂಬಂಧಿಕರ ಸ್ನೇಹಿತರ ಮನೆಗಳನ್ನೋ ಎತ್ತಿ ತೋರಿಸುತ್ತಾನೆ. ಇದೀಗ ನೋಡಿದರೆ ಎಂದಿನ ಅದೇ ವರಸೆ ಮತ್ತೊಮ್ಮೆ ಎದ್ದಿತು.

” ಕಳೆದ ವಾರ ಗೆಳೆಯ ರಾಜೇಶ್ ಒತ್ತಾಯ ಮಾಡಿ ಮನೆಗೆ ಕರೆದಿದ್ದ. ಅವನ ಮನೆಗೆ ಹೋಗೋಣ..” ಕಾರನ್ನು ಹತ್ತುತ್ತಾ ಹೇಳಿದಾಗ ನಿರ್ವಾಹವಿಲ್ಲದೆ  ಹ್ಞೂಂಗುಟ್ಟಿದ್ದಳು. ಬಾಡಿದ ಮೂತಿಯೊಂದಿಗೆ ಜೊತೆಯಾದ ಮಕ್ಕಳು ಹೊರಟ ಪ್ರಯಾಣದುದ್ದಕ್ಕೂ ಸುಂದರ ಪ್ರಕೃತಿ ಸೌಂದರ್ಯ, ಐತಿಹಾಸಿಕ ವಾಸ್ತುಶಿಲ್ಪವನ್ನು ನೋಡುತ್ತಾ ಕಣ್ಮನ ತಂಪಾಗಿಸಿದರು. ರಸ್ತೆಯ ಮಗ್ಗುಲ ಪ್ರಕೃತಿ ಸೌಂದರ್ಯ, ದೂರದಲ್ಲಿ ಹೊಗೆಯಾಡುವ ಕಾರ್ಖಾನೆ, ಗಾಳಿಯ ಹೊಯ್ದಾಟ, ಸುಂದರ ಪೂಜಾಸ್ಥಳಗಳ ದರ್ಶನ ಎಲ್ಲವೂ ಆ ಊರಿಗೆ ಮೆರುಗು ಕೊಡುವ ದೃಶ್ಯಗಳು. ನಡುನಡುವೆ ಕಾರು ನಿಲ್ಲಿಸಿ ಪಾನಕ ಕುಡಿದು ದಣಿವನ್ನು ನಿವಾರಿಸಿಕೊಳ್ಳುವಂತೆ ಪ್ರಯಾಣದ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸುವುದು ಅವನ ಪ್ರೀತಿಯ ಭಾಗವಾಗಿತ್ತು.

ಹೀಗೆ ಸುತ್ತಾಡಿ ಗೆಳೆಯ ರಾಜೇಶನ ಮನೆ ತಲುಪಿದಾಗ ಮಧ್ಯಾಹ್ನದ ಗಡಿ ದಾಟಿತು. ರಾಜೇಶ್ ಮತ್ತು ಆತನ ಪತ್ನಿ ಸುನೀತಾರ ಪ್ರೀತಿಯ ಆತಿಥ್ಯ ಹಳೆಯ ಅದೇ ಕೊಂಡಿಯನ್ನು ಬೆಸೆಯುವಂತಿತ್ತು.  ಜಗತ್ತು ಬದಲಾಗಿದೆ. ಜನ ಬದಲಾಗಿದ್ದಾರೆ ಎಂದು ದಿನನಿತ್ಯ ಆಡುವ ಮಾತು ಇವರನ್ನು ಸ್ಪರ್ಶಿಸಿಲ್ಲ. ಬೆಸೆದಿದ್ದ, ಗಟ್ಟಿಗೊಳಿಸಿದ್ದ ಸೌಹಾರ್ದ ಗೆಳೆತನಕ್ಕೆ ಮೂವತ್ತು ವರ್ಷಗಳ ಹಿಂದಿನ ಇತಿಹಾಸವೂ ಇತ್ತು. ಹೊಡೆದಾಡಿ, ಬಡಿದಾಡಿ, ರಕ್ತ ಹರಿಸುವ  ವಾರ್ತೆಗಳಿಗೆ ಕೊರತೆಯಿಲ್ಲದ ದಿನಗಳಲ್ಲಿ ಬೇವು ಬೆಲ್ಲದಂತೆ ಸವಿದಿದ್ದ ಸಂಬಂಧ ರಾಜೇಶ ಮತ್ತು ಬಶೀರನದ್ದು. ಸೂಫಿಯಂತೆಯೂ, ಬುದ್ಧನಂತೆಯೂ ಶುದ್ಧನಗುವನ್ನು ಹರಡುವ ಅದೆಷ್ಟೋ ಶಾಂತಚಿತ್ತದ ಮನಸ್ಸುಗಳು  ಸುತ್ತಲಿರುವುದರಿಂದಲೇ ಅನ್ಯಾಯವನ್ನು ಕಂಡಾಗಲೆಲ್ಲ ಮುಖ ಸಿಂಡರಿಸುವವರೂ ಇದ್ದಾರೆ. ಅವರು ಒಳಿತು ಕೆಡುಕಿನ ಪಾಠಗಳನ್ನು ಚೆನ್ನಾಗಿ ಅರೆದು ಕುಡಿದಿರುವರು. ಬಗ್ಗಿಸಿದರೂ ಜಗ್ಗಿಸಿದರೂ ಒಲ್ಲೆಯೆನ್ನುತ್ತಾ ಧರ್ಮದ ಗೋಡೆಯಿಂದ ಹೊರ ಬಂದು ಸೌಹಾರ್ದತೆಯ ಸೇತುವೆಯನ್ನು ಕಟ್ಟುವರು. ಅದೇ ಸೇತುವೆ ಬಶೀರ್ ಮತ್ತು ರಾಜೇಶರ ನಡುವೆ ಭದ್ರವಾಗಿಯೇ ನಿಂತಿದೆ.

ರಾಜೇಶ್ ಮತ್ತು ಸುನೀತಾರ ಸಾಂಗತ್ಯವು ಅಲ್ಲಿದ್ದಷ್ಟು ಕಾಲ ಉಲ್ಲಸಿತವಾಗಿಸಿತು. ಅವರ ಆತಿಥ್ಯದಲ್ಲಿ ಪ್ರಯಾಣದ ದಣಿವು ಮರೆಯಾಯಿತು. ಸುಂದರ ಕಂಗು, ತೆಂಗು, ಬಾಳೆಗಿಡಗಳಿಂದ ಕಂಗೊಳಿಸುತ್ತಿದ್ದ ಹಿತವಾದ ಗಾಳಿ ಸೆಖೆತಾಪದ ಬಿಸಿ ತಾಗಿಸದೆ ವೈವಿಧ್ಯಮಯ ಖಾದ್ಯಗಳನ್ನು ಸವಿಯುತ್ತಾ ಅವರ ಉಪಚಾರದಲ್ಲಿ ಸಮಯ ಸರಿದದ್ದೇ ತಿಳಿಯಲಿಲ್ಲ. ಅದರ ನಡುವೆ ಹಳೆಯ ದಿನಗಳ ಸವಿನೆನಪುಗಳನ್ನು ಸವಿಯ ತೊಡಗಿದರು. ವರ್ಷದ ದೀಪಾವಳಿಯ ದಿನ ರಾಜೇಶನ ಅಮ್ಮನ  ಅಡುಗೆಯಲ್ಲಿ ಇವರಿಗೆ ಪಾಲಿದ್ದರೆ ಇವರ ರಮಝಾನ್ ಹಬ್ಬದ ದಿನ ಅವರ ಮನೆಯ ಒಲೆ ಉರಿಯುತ್ತಿರಲಿಲ್ಲ. ಹಲವಾರು ವರ್ಷಗಳಿಂದ ನಡೆದು ಬಂದ ಪದ್ಧತಿಯಿದು. ಈಗ ಇಂತಹದೆಲ್ಲ ಸುದ್ದಿಯಾಗುತ್ತಿದ್ದರೆ ಆ ದಿನಗಳಲ್ಲಿ ಇದೆಲ್ಲ ಸಾಮಾನ್ಯ ಸಂಗತಿ. 

ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಏಳುತ್ತಿದ್ದ ಅಲೆಗಳಲ್ಲಿ ಕರಿಹೊಗೆ ತುಂಬಿದೆ. ಗಲಭೆಗಳಿಗೆ ತುತ್ತಾಗುವ, ಗೋಲಿಬಾರ್ ಗಳಿಗೆ ಬಲಿಯಾಗುವ, ನಡುರಸ್ತೆಯಲ್ಲಿ, ಜನಜಂಗುಳಿಯ ನಡುವೆ ವಿನಾಕಾರಣ ಹತ್ಯೆಯಾಗುವ ಘಟನೆಗಳಿಗೆ ಕಾರಣವೂ ಇರುತ್ತಿರಲಿಲ್ಲ‌. ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಮೆಸೇಜ್ ಗಳನ್ನು ನಂಬಿ ದೊಣ್ಣೆ, ತಲವಾರುಗಳನ್ನು ಶೇಖರಿಸಿಡುವ ಒಂದು ಗುಂಪು ಬೆಳೆಯುತ್ತಿರುವುದು ಭಯದ ವಾತಾವರಣವನ್ನು ಸೃಷ್ಟಿಸಿದೆ. ಬೆಳೆಯುತ್ತಿರುವ ಮಕ್ಕಳಿಗೆ ಬಹುಬೇಗನೇ ಹರಡಿದ ಈ ವಿಷಗಾಳಿ ಕೆಟ್ಟ ವಾಸನೆಯನ್ನು ನೀಡುತ್ತಿದೆಯೆಂದು ಗೆಳೆಯರಿಬ್ಬರು ಆಡಿಕೊಳ್ಳುತ್ತಿದ್ದ ಮಾತನ್ನು ಒಳಗಿನಿಂದ ಆಲಿಸುತ್ತಿದ್ದ ಸೀಮಾಳ ಎದೆಯಲ್ಲಿ ಸಣ್ಣನೆಯ ನಡುಕವನ್ನು ಉಂಟು ಮಾಡಿತು. 

ಒಂದಿಡೀ ತಲೆಮಾರನ್ನು ನಾಶಪಡಿಸುವ ಗಲಭೆಗಳು, ಕೊಲೆಗಳು ಮುಂದೊಂದು ದಿನ ಜೋಡಿಸಿ ಕೊಂಡಿದ್ದ ಸಮಾಜವನ್ನು ಪೂರ್ತಿಯಾಗಿ ಒಡೆದು ಹಾಕುವುದರಲ್ಲಿ ಸಂಶಯವಿಲ್ಲ. ರಾಜಕೀಯ ತೆವಲುಗಳಿಗೆ ಬಲಿಯಾಗುತ್ತಿರುವ ಅಮಾಯಕ ಜನರ ಸಾವು, ಅವರನ್ನು ಹತ್ಯೆಗೊಳಿಸುವ ಯುವಕರ ವಯಸ್ಸು, ಸಹಜವಾಗಿ ಸೌಹಾರ್ದದಿಂದ ಬದುಕಿದ್ದ ಸಂಬಂಧಗಳಲ್ಲಿ ಮನೆ ಮಾಡಿದ ಜಟಿಲತೆ ಇದೆಲ್ಲವೂ ಸಿಲ್ಲಿ ವಿಷಯಗಳಲ್ಲ. ಎಲ್ಲೆಲ್ಲೋ ನಡೆದುದನ್ನು ಇಲ್ಲಿ ಎಳೆದು ತಂದು ವಾದಿಸುತ್ತಾ, ನೂರಾರು ಹಿಂದಿನ ಕತೆಗಳಿಗೆ ಕಾಲ್ಪನಿಕತೆಯನ್ನು ತುಂಬಿ ಶುದ್ಧವಾದ ಮನಸ್ಸಿನಲ್ಲಿ ವಿಷಬೀಜವನ್ನು ಬಿತ್ತುವವರ ಒಂದು ಸಂಗ ಸದ್ದಿಲ್ಲದೆ ನುಸುಳಿಯಾಗಿದೆ. 

“ದಕ್ಷಿಣದಲ್ಲಿ ಹಾಗೆ ಮಾಡಿದರು, ಉತ್ತರದಲ್ಲಿ ಹೀಗೆ ಮಾಡಿದರು, ಅವರ ಹುಡುಗರು ಇವರ ಹುಡುಗಿಯರನ್ನು ಎತ್ಕೊಂಡು ಹೋದ್ರು, ಅವರು ವಿಷ ಬೆರೆಸುವವರು, ಇವರು ಕೊಲ್ಲುವವರು, ಟೊಪ್ಪಿ- ಗಡ್ಡವಿರುವವರು ಭಯೋತ್ಪಾದಕರು, ವಿಭೂತಿ- ದಾರ ಕಟ್ಟಿದವರು ಕೊಲೆಗಾರರು” ಇವೆಲ್ಲ ಅಂತೆಕಂತೆಗಳಿಗೆ ಸೊಪ್ಪು ಹಾಕುವವರ, ಎಣ್ಣೆ ಸುರಿಯುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಇದನ್ನೇ ನಂಬಿದ ಮುಗ್ಧ ಮಕ್ಕಳಿಗೆ ಎಂತಹ ಸಮಾಜವನ್ನು ಕೊಡಲು ಸಾಧ್ಯ ? ಈಗೀಗ ಹುಡುಗರ ಮಾತಿನಲ್ಲಿ ರೋಷ, ದ್ವೇಷ, ಕ್ರಿಯೆಗೆ ಪ್ರತಿಕ್ರಿಯೆಯ ಶೀಘ್ರ ಕಾವು ಹೆಚ್ಚಾಗಿದೆ. ಇದರಿಂದ ನಮ್ಮ ಮಕ್ಕಳನ್ನು ಹೇಗಾದರು ಪಾರು ಮಾಡಬೇಕು‌.” ಹೀಗೆ ಗೆಳೆಯರಿಬ್ಬರ ಮಾತು ಸಾಗುತ್ತಿದ್ದಂತೆ ಸಣ್ಣಪುಟ್ಟ ವಿಷಯಗಳನ್ನು ಬಹು ಬೇಗನೆ ತಲೆಗೆ ಹಚ್ಚಿಕೊಳ್ಳುವ ಸೀಮಾಳಿಗಾದ  ಆತಂಕ ನೂರುಪಟ್ಟು ಹೆಚ್ಚೇ. ಶ್ಯಾವಿಗೆ ಪಾಯಸ ಹೀರುತ್ತಿದ್ದವಳಿಗೆ ತುಪ್ಪದ ಪರಿಮಳ, ಗೋಡಂಬಿಯ ಸ್ವಾದ, ಹಾಲಿನ ಕೆನೆಯ ಸಿಹಿ ನಾಲಗೆಗೆ ರುಚಿಸಲಿಲ್ಲ. ಮುಂದೇನು ಅನ್ನುವ ಅಭದ್ರತಾ ಭಾವ, ನಮ್ಮವರೆನ್ನುವವರು ಶತ್ರುಗಳಾಗುವ ಭಯ ಆಕೆಯನ್ನು ಕಾಡತೊಡಗಿತು.

ಮನೆಯ ಗಂಡಸರನ್ನು ಹೊರ ಕಳಿಸಲು ಭಯಪಡುವ ಹೆಂಗಳೆಯರು ಉಸಿರು ಬಿಗಿಹಿಡಿದು ಅವರು ಹಿಂತಿರುಗುವವರೆಗೂ ಮನೆಬಾಗಿಲಲ್ಲಿ ಕಾದು ನಿಲ್ಲುವ ಪರಿಸ್ಥಿತಿ ಈಗಾಗಲೇ ಸೃಷ್ಟಿಯಾಗಿಬಿಟ್ಟಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿ ಬದುಕುವವರಿಗೆ ಬದುಕುವಂತಿಲ್ಲ. ಮುಂಜಾನೆಯ ಕುಶಲೋಪರಿ ಮಾತುಕತೆಗಳಿಲ್ಲ. ಮುಸ್ಸಂಜೆಯ ಮೆಲು ಹರಟೆಗಳಿಲ್ಲ. ಎಲ್ಲಾ ಕಡೆ ಸಂಶಯದ ಹುತ್ತಗಳು. ಅನುಮಾನದ ನೋಟಗಳು. ಕೊಲೆ, ಕ್ರೌರ್ಯಗಳದೇ ಅಟ್ಟಹಾಸ. ಕೊಲ್ಲುವವನಿಗೆ ಯಾಕೆ ಕೊಲ್ಲುತ್ತಿದ್ದೇನೆಂದು ಗೊತ್ತಿಲ್ಲ. ಹತ್ಯೆಯಾದವನಿಗೆ ತನ್ನ ಕೊಲೆಗೆ ಕಾರಣವೇನೆಂದು ಗೊತ್ತಿಲ್ಲ. ಕರಾವಳಿಯ ಸುತ್ತ ಒಂದಲ್ಲದಿದ್ದರೆ ಒಂದು ಹೆಣ ಬೀಳುತ್ತಲೇ ಇದೆ. ಯಾರನ್ನೂ ನಂಬದಂತಹ ಸ್ಥಿತಿ ತಾನಾಗಿ ಹುಟ್ಟಿ ಬೆಳೆಯುತ್ತಲಿದೆ. ಯಾರು ವಿದ್ಯಾವಂತರು, ಯಾರು ಪ್ರಜ್ಞಾವಂತರು ಅರಿಯದಷ್ಟು ಕಾಲ ಕೆಟ್ಟು ಹೋಗಿದೆ. 

ಯಾಕೋ ಆಕೆಯ ಮನಸ್ಸಿನಲ್ಲಿ ಭಯ ಮೆಲ್ಲಮೆಲ್ಲನೆ ಹೆಚ್ಚಾಗತೊಡಗಿತು. ಒಮ್ಮೆ ಕತ್ತಲಾಗುವ ಮೊದಲು ಮನೆ ಸೇರಿದರೆ ಸಾಕು ಎಂದು ಮನ ಮಿಡಿಯುತ್ತಿತ್ತು. ಬಂದಾಗ ಇದ್ದ ಉತ್ಸಾಹ ಈಗಿಲ್ಲ. ಅದಕ್ಕೊಂದು ಬಲವಾದ ಕಾರಣವೂ ಇತ್ತು. ಕಳೆದ ಎರಡು ವಾರದ ಹಿಂದೆ ಇದೇ ಪರಿಸರದಲ್ಲೊಬ್ಬ ಅಮಾಯಕ ಯುವಕ ದ್ವೇಷದ ಕೊಲೆಗೆ ಬಲಿಯಾಗಿದ್ದ. ಆ ನೋವು ಪರಿಸರದ ಸುತ್ತ ಈಗಲೂ ಕವಿದಿತ್ತು. ಆ ಆತಂಕ, ತಲ್ಲಣವನ್ನು ಹೊತ್ತಿದ್ದ ರಾಜೇಶ ಆತ್ಮೀಯ ಗೆಳೆಯನಲ್ಲಿ ಹೇಳಿ ಮನಸ್ಸು ಹಗುರವಾಗಿಸುತ್ತಿದ್ದ. ಒಳಗಿದ್ದ ಇವಳ ಕಿವಿ ನೆಟ್ಟಗಾದ ಪ್ರಜ್ಞೆ ಅವರಿಗಿನ್ನೂ ತಟ್ಟಲಿಲ್ಲ. ಮರಳಿ ಹಿಂತಿರುಗುವಾಗ ಕಡಲ ಕಿನಾರೆ ಕಡೆಯ ಪ್ರಯಾಣವನ್ನು ಮೊಟಕುಗೊಳಿಸಿ ಸೀದಾ ಮನೆಯ ದಾರಿಯತ್ತ ಹೋದರಾಯಿತೆಂದು ಮನಸ್ಸಿನಲ್ಲಿಯೇ ನಿರ್ಧರಿಸಿದಳು. ಹಾಗೆಯೇ ಹೊರಡುವಂತೆ ಅವಳಾಗಿಯೇ ಧೃತಿ ತೋರಿಸಿದಳು. ಹೋದ ಕಡೆಯೆಲ್ಲ ಬೇಗನೆ ಎದ್ದೇಳದ, ಮಾತಿಗೆ ನಿಂತರೆ ಅದರಲ್ಲೇ ಮುಳುಗುವ ಸೀಮಾಳ ವರ್ತನೆಯಲ್ಲಿ ಹಿಂದೆಂದೂ ಇಲ್ಲದ ಇಂದಿನ ಧಾವಂತವನ್ನು ಗಮನಿಸಿದ ಬಶೀರನ ನೋಟದಲ್ಲಿದ್ದ ಪ್ರಶ್ನೆಯನ್ನು ಲೆಕ್ಕಿಸದೆ ಹೇಗೋ ರಾಜೇಶನ ಕುಟುಂಬಕ್ಕೆ ಧನ್ಯವಾದ ಹೇಳಿ ಸೀಮಾ ಮಕ್ಕಳೊಂದಿಗೆ ಕಾರು ಹತ್ತಿದಳು.

ಅಲ್ಲಿಂದ ಪ್ರಯಾಣ ಊರ ಕಡೆ ಹೊರಟಿತು. ಸೀಮಾ ಜೀವ ಕೈಯಲ್ಲಿಡಿದವಳಂತೆ ಸೀಟಿನಲ್ಲಿ ಮುದುಡಿ ಕುಳಿತಿದ್ದಳು. ಭಯ, ದಿಗಿಲಿನಿಂದ ಮಾತಿಲ್ಲದೆ ಮೌನವಾಗಿದ್ದಳು. ಬಶೀರ್ ಅದೆಷ್ಟೇ ಅವಳಲ್ಲಿ ಧೈರ್ಯ ತುಂಬಿದರೂ ಪ್ರಯೋಜನವಾಗಲಿಲ್ಲ. ರಾಜೇಶನ ಊರು ದಾಟಿ ತಮ್ಮೂರ ಕಡೆ ಹೊರಟ ಕಾರು ಕ್ಷಣದಲ್ಲಿ ಕೆಟ್ಟಿತು. ಎಷ್ಟೇ ಪ್ರಯತ್ನಿಸಿದರೂ ಸ್ಟಾರ್ಟ್ ಆಗ್ತಿಲ್ಲ. ಆಗಲೇ ಮಬ್ಬುಗತ್ತಲು ಆವರಿಸಿತು. ಪರಿಚಯಸ್ಥರಿಲ್ಲದ ಪ್ರದೇಶ. ಬಶೀರನ ಪರದಾಟವೇ ಪರದಾಟ. ಪಾಪ ಬಸವಳಿದು ಹೋಗಿದ್ದ. ಜೊತೆಗೆ ಸೀಮಾಳಿಗೂ ಮಕ್ಕಳಿಗೂ ಧೈರ್ಯ ತುಂಬುತ್ತಲಿದ್ದ. ಇತ್ತ ಇವಳ ಪಾಡು ಕೇಳುವುದೇ ಬೇಡ. ಕಾರಿನ ಪಕ್ಕದಲ್ಲಿ ಯಾರೇ ಹಾದು ಹೋದರೂ ಭಯದಲ್ಲಿ ಇನ್ನಷ್ಟು ಗುಬ್ಬಚ್ಚಿಯಂತಾಗುತ್ತಿದ್ದಳು.

 ಕಾರು ಸರಿಪಡಿಸುವ ಅಂದರೆ ಹತ್ತಿರದಲ್ಲೆಲ್ಲೂ ಗ್ಯಾರೇಜಿಲ್ಲ. ಅದೇನು ಜನಸಂದಣಿಯಿಲ್ಲದ ಸ್ಥಳವೇನೂ ಅಲ್ಲ. ಬಳಿಯಲ್ಲಿ ಜನರ ಓಡಾಟ…ವಾಹನಗಳ ಕಿರುಚಾಟ…ಆದರೂ ಬಳಿ ಬಂದು ವಿಚಾರಿಸುವವರು ಬೇಕಲ್ಲವೇ ? ಇತ್ತೀಚೆಗೆ ದಾರಿಯಲ್ಲಿ ಒಬ್ಬ  ಹುಡುಗನಿಗೆ ನಾಲ್ಕೈದು ಜನ ಸೇರಿ ಚಾಕುವಿನಿಂದ ಕೊಚ್ಚಿ ಸಾಯಿಸಿದ ಸುದ್ದಿ ಇಡೀ ಊರು ಹಬ್ಬಿತು. ಇವಳಿಗೆ ಎಲ್ಲೆಲ್ಲೋ ನಡೆದ ಒಂದೊಂದೇ ಘಟನೆಗಳು ನೆನಪಾಗತೊಡಗಿದುವು. ಕೈ ಕಾಲುಗಳ ನಡುಕ ಹೆಚ್ಚಾಯಿತು. ಇದರ ನಡುವೆ ಬಶೀರನದ್ದು ತನ್ನವರತ್ತ ಕಾಳಜಿ. ಪ್ರಾರ್ಥನೆ, ದಿಕ್ರ್, ದುವಾಗಳಲ್ಲಿ ಮುಳುಗಿದ ಪತ್ನಿಯತ್ತ ನಗುಮುಖದಿ ಕಂಗಳಲ್ಲಿ ಧೈರ್ಯ ತುಂಬುತ್ತಿದ್ದ.

ಅಷ್ಟರಲ್ಲಿ ಅದ್ಯಾವನೋ ಪುಣ್ಯಾತ್ಮ ಕಾರ ಬಳಿ ಬಂದ. ಕೃಶ ಶರೀರ, ತುಸುಗಪ್ಪು ಬಣ್ಣದ ಯುವಕ. ಹಣೆಯಲ್ಲಿ ಉದ್ದನೆಯ ವಿಭೂತಿ. ಕೈಗೆ ಕೆಂಪು ಬಣ್ಣದ ದಾರ ಕಟ್ಟಿದ್ದ. ಇವಳ ಕಣ್ಣು ಮೊದಲು ಹೊರಳಿದ್ದು ಅದೆರಡರ ಮೇಲೆ. ಭಯ ಇಮ್ಮಡಿಯಾಗುತ್ತಲಿತ್ತು. ಕಂಪನ ಇನ್ನೂ ಹೆಚ್ಚಾಯಿತು. ಅಮ್ಮನನ್ನು ನೋಡಿ ಮಕ್ಕಳೂ ಹೆದರಿ ಒಂದು ಭಾಗಕ್ಕೆ ಸರಿದು ಮುದುಡಿ ಕುಳಿತಿದ್ದರು.

ಬಂದವನು ಬಶೀರನ ಜೊತೆ ಮಾತನಾಡಿ ಅವನ ಪಾಡಿಗೆ ಅವನು ತನಗೆ ತಿಳಿದಷ್ಟು ಸರಿಪಡಿಸಲು ಬಶೀರನಿಗೆ ಸಹಾಯಕ್ಕೆ ಮುಂದಾದ. ಹೇಗೋ ಅರ್ಧ ತಾಸಿನೊಳಗೆ ಕಾರು ಸರಿಯಾಯಿತು. ಇಬ್ಬರ ಮುಖದಲ್ಲಿ ಸಂತೃಪ್ತಿ. ಅವರಿಬ್ಬರು ಪರಸ್ಪರ ಆಲಂಗಿಸಿ ಬೀಳ್ಕೊಟ್ಟರು. ಇದನ್ನೆಲ್ಲ ಗಮನಿಸುತ್ತಿದ್ದ ಸೀಮಾಳಲ್ಲಿ ಅಪರಾಧ ಭಾವ ಕಾಡತೊಡಗಿತು. ‘ ಛೆ…ಎಂತಹ ತಪ್ಪು ಮಾಡಿದೆ ? ಎಲ್ಲರನ್ನು ಒಂದೇ ತಟ್ಟೆಯಲ್ಲಿ ತೂಗಿದೆನಲ್ಲಾ…ಗಡ್ಡ, ಟೋಪಿ ಧರಿಸಿದವರೆಲ್ಲ ಭಯೋತ್ಪಾದಕರಲ್ಲ. ವಿಭೂತಿ, ದಾರ,ಮಾಲೆ ಧರಿಸಿದವರೆಲ್ಲ ಕೊಲೆಗಾರರಲ್ಲ. ಹಿಂದೆಂದೂ ಇಲ್ಲದ ಈ ಭಾವನೆ ಬೆಳೆಯಲು ಕಾರಣವಾದರೂ ಯಾವುದು? ಹಿಂದೆ ಜೊತೆಗೂಡಿ ಆಡಿದವರನ್ನು ಅನುಮಾನಿಸುವಷ್ಟರ ಮಟ್ಟಿಗೆ ಪರಿಸ್ಥಿತಿಯನ್ನು ಸೃಷ್ಟಿಸಿದವರಾದರೂ ಯಾರು?

ಉಡುಪು, ಆಹಾರ, ವೇಷಭೂಷಣವನ್ನು ಮುಂದಿಟ್ಟು ಮಾನವೀಯತೆಗೆ ನಿಲುಕದಷ್ಟು ಸಂಕುಚಿತ ಮನಸ್ಸುಗಳು ಸುತ್ತಲು ತುಂಬಿದೆ. ಎಲ್ಲಾ ಧರ್ಮದವರಲ್ಲೂ ಹೃದಯವಂತರು ಇದ್ದಾರೆ. ಕೆಟ್ಟವರು, ಒಳ್ಳೆಯವರು ಎಲ್ಲಾ ಕಡೆ ಇದ್ದಾರೆ. ಇಂದು ಜೊತೆಯಾದ ಸಹೃದಯಿಯನ್ನು ಗುರುತಿಸದಷ್ಟು ಕೀಳಾಗಿ ಹೋದೆನಲ್ಲ…ಯಾರು ಎಷ್ಟೇ ತಲೆಯೊಳಗೆ ಏನೇನೋ ತುಂಬಿಸಿದರೂ ಮನುಷ್ಯತ್ವ ಇನ್ನೂ ಸತ್ತಿಲ್ಲ. ಸಂಕಷ್ಟದ ಸಮಯದಲ್ಲಿ ಜಾತಿ, ಧರ್ಮ ನೋಡದೆ ಸಹಾಯಹಸ್ತ ಚಾಚುವುದೇ ಮಾನವೀಯತೆಯ ಬಿಂದು. ಮನುಷ್ಯತ್ವದ ಪಾಠ. ಅವಳಿಗರಿಯದೆ ಅವಳ ನಾಲಗೆಯಿಂದ ಅವನಿಗಾಗಿ ಪ್ರಾರ್ಥನೆಯ ಸಾಲುಗಳು ಹೊರಟವು. ಕ್ಷಣದಲ್ಲಿ ಅವಳ ಮನದೊಳಗೆ ಸಣ್ಣನೆಯ ನಂಬಿಕೆ, ಭರವಸೆಯ ಸಸಿಯು ಮೆಲ್ಲನೆ ಮೊಳಕೆಯೊಡೆಯಲಾರಂಭಿಸಿತು.

 ಜೊತೆಗೆ ಅವಳ ಮನದಲ್ಲಿ ಪ್ರಶ್ನೆಗಳು ಏಳತೊಡಗಿದುವು. ನಮ್ಮವರು ಅನ್ನುವವರ ನಡುವೆ ಯಾಕಿಷ್ಟು ಕಚ್ಚಾಟ? ದಿನ ಬೆಳಗಾದರೆ ಹಿಂಸೆಗಳ ಸುದ್ದಿ. ಎತ್ತ ನೋಡಿದರತ್ತ ಹಕ್ಕುಗಳ ಕಸಿದಾಟ. ದಮನಿತರ ನರಳಾಟ. ನೋಯಿಸುವ ಮಾತುಗಳು. ಸೋತವನಿಗೆ ಮೇಲಿಂದ ಮೇಲೆ ಗುದ್ದು. ಪ್ರೀತಿಸುವ ಹೃದಯಗಳ ಕೊರತೆ. ಅಸಹಾಯಕ ಕರಗಳನ್ನು ಹಿಡಿದೆತ್ತುವವರಿಲ್ಲ. ಕಣ್ಣೀರು ಒರೆಸುವ ಕರಗಳಿಲ್ಲ. ಯಾಕೆ ಹೀಗಾಗುತ್ತಿದೆ? ಜನ ಸಂಶಯ, ಅನುಮಾನಗಳ ಹಿಂದೆ ಬೀಳುವುದಾದರೂ ಯಾತಕೆ? ತಮ್ಮ ಸುತ್ತಮುತ್ತಲಿನವರ 

ಒಡನಾಟವನ್ನು ಮುಂದಿಟ್ಟು ಚಿಂತಿಸ ಬಾರದೇ? ಎಲ್ಲೆಲ್ಲೋ ನಡೆದಿರುವುದನ್ನು ಇಲ್ಲಿ ಎಳೆದು ತಂದು ಅಪನಂಬಿಕೆಯನ್ನು ಬಿತ್ತುವುದೇತಕೆ ? ನೆರೆಯವನಿಗೆ ನೆರೆಯವನಲ್ಲದೆ ಇನ್ನ್ಯಾರು ಸಿಗುವರು? ಮನುಷ್ಯ ಪರಾವಲಂಬಿಯಲ್ಲದೆ ಬದುಕಲಾರ. ಕೊಡು ಕೊಳ್ಳುವಿಕೆ ಈ ನೆಲದ ಗುಣ. ಇನ್ನಾದರು ಜನ ಅರ್ಥ ಮಾಡಬಾರದೇ…? 

 ಪ್ರಯಾಣದುದ್ದಕ್ಕೂ ಅವಳು ಆ ಯುವಕನ ಕುರಿತು ಮಾತನಾಡುತ್ತಲೇ ಇದ್ದಳು. ಬಶೀರ್ ಇಂದಿನ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ವಿವರಿಸತೊಡಗಿದ ” ಇಂದು ಜನರಿಗೆ ಮಾಡುವ ಸಣ್ಣಪುಟ್ಟ ಸಹಾಯಗಳು ಗುರುತಿಸಲ್ಪಡಬೇಕು. ಅದು ಅನಿವಾರ್ಯ, ಅವಶ್ಯಕವೂ ಆಗಿದೆ. ಸಂಶಯ, ಅನುಮಾನಗಳು ದೂರವಾಗಬೇಕಾದರೆ ಹೆಚ್ಚೆಚ್ಚು ಸಹಕಾರದ ಸುದ್ದಿಗಳು ಮನೆಮಾತಾಗಬೇಕು. ಮುಖವಾಡ ಹೊತ್ತ ಈ ದಿನಗಳಲ್ಲಿ ಉತ್ಸಾಹದ ಚಿಲುಮೆ, ಹೃದಯಶೀಲ, ಉಪಕಾರಿ ಜೀವಿಯಾದ ಆ ಯುವಕ ಧರ್ಮದ ಮುಖವಾಡ ಹೊತ್ತಿಲ್ಲ. ಅವನ ವಸ್ತ್ರ, ವೇಷಭೂಷಣ ಅದವನ ಬದುಕಿನ ಭಾಗ. ಅವನು ಹೊಂದಿಕೊಂಡ ಜೀವನ ಪದ್ಧತಿಯ ಮೇಲೆ ಎಂದಿಗೂ ಸಂಶಯ ಪಡಬಾರದು. ಆತನ ಮುಖದಲ್ಲಿ ನಾವು ಪರರೆಂಬ ತಾತ್ಸಾರದ ನೋಟವಿಲ್ಲ. ತೊಟ್ಟ ಬುರ್ಖಾದ ಮೇಲೆ ಆತನಿಗೆ ಅಸಹ್ಯವಿಲ್ಲ. ಅವನ ಹೃದಯ ಸೌಹಾರ್ದತೆಯ ಒರತೆ. ಮಾನವೀಯತೆಯೆಂಬ ಧರ್ಮದ ನೆರಳು ಅವನ ಮೇಲೆ ಹಾಸಿದೆ.  ವೈಷಮ್ಯದಿ ಒಣಗಿದ ಎಲೆಗಳ ಮರಗಳಿಗೆ ಮನುಷ್ಯತ್ವದ ನೀರನ್ನು ಕುಡಿಸಿದನು‌. ಸುತ್ತ ಎದ್ದು ನಿಂತ ಬಂಡೆಕಲ್ಲುಗಳ ನಡುವೆ ಅರಳುವ ಹೂವುಗಳು ನಮ್ಮ ಸುತ್ತಲಿವೆ. ಅಲ್ಲಿ ಇನ್ನಷ್ಟು ಮೊಗ್ಗುಗಳು ಅರಳಬೇಕು. ಹಳೆಬೇರು, ಒಣಗಿದ ಬಳ್ಳಿಗಳು ಮಣ್ಣಾಗಿ ಹೊಸ ಚಿಗುರು ಮೊಳಕೆಯೊಡೆಯುತ್ತಲೇ ಇರಬೇಕು…” ಬಶೀರ್ ದಾರ್ಶನಿಕನಂತೆ ಹೇಳುತ್ತಲೇ ಇದ್ದ. ಅವಳು ಹೊರಗಡೆ ಬೀಸುವ ತಂಪಾದ ಗಾಳಿಗೆ ಮುಖವೊಡ್ಡಿ ಹ್ಞೂಂಗುಟ್ಟುತ್ತಿದ್ದಳು.

ಸಿಹಾನ ಬಿ.ಎಂ.

ಉದಯೋನ್ಮುಖ ಲೇಖಕಿ, ಕವಯಿತ್ರಿ            

Related Articles

ಇತ್ತೀಚಿನ ಸುದ್ದಿಗಳು