Friday, June 20, 2025

ಸತ್ಯ | ನ್ಯಾಯ |ಧರ್ಮ

ಆದೇಶ ಇಲ್ಲದಿದ್ದರೂ ದುಬಾರಿ ಶುಲ್ಕ: ತೂಗುಯ್ಯಾಲೆಯಲ್ಲಿ ಬೆಂಗಳೂರು ಉತ್ತರ ವಿವಿ ದಲಿತ ಮಕ್ಕಳ ಭವಿಷ್ಯ

ಡಿಸೆಂಬರ್ 18, 19, 20 ರಂದು 2023 ನೇ ಸಾಲಿನ ಸ್ನಾತಕೋತ್ತರ ಪದವಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಕೌನ್ಸಿಲಿಂಗ್ ಮತ್ತು ಪ್ರವೇಶಾತಿ ನಡೆದಿದೆ. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ರೀತಿಯ ಶುಲ್ಕ ಪಾವತಿಗೆ ಬೆಂಗಳೂರು ಉತ್ತರ ವಿವಿ ಅಧಿಕಾರಿಗಳು ಒತ್ತಾಯಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಕಡೆಯಿಂದ SC/ST ವಿದ್ಯಾರ್ಥಿಗಳಿಗೆ ನಿರ್ವಹಣಾ ವೆಚ್ಚ ಹೊರತುಪಡಿಸಿ ಬೇರಾವ ಹೆಚ್ಚುವರಿ ಶುಲ್ಕ ನಿಗದಿ ಮಾಡಬಾರದು ಎಂಬ ನಿಯಮಗಳನ್ನು ವಿಶ್ವವಿದ್ಯಾಲಯದ ಗಾಳಿಗೆ ತೂರಿದ್ದು ಬೆಳಕಿಗೆ ಬಂದಿದೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಎಲ್ಲ ವಿಶ್ವವಿದ್ಯಾಲಯಗಳ ಹಾಗೆಯೇ ಇಲ್ಲಿಯವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಂದ ಪ್ರವೇಶಾತಿಯ ಸಂದರ್ಭದಲ್ಲಿ 330 ರೂಪಾಯಿಗಳನ್ನಷ್ಟೆ ಕಟ್ಟಿಸಿಕೊಳ್ಳುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯ ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೂ 15,050ಗಳನ್ನು ಕಡ್ಡಾಯವಾಗಿ ಕಟ್ಟಬೇಕೆಂದು ಹೇಳಿ ಕಟ್ಟಿಸಿಕೊಂಡಿದ್ದಾರೆ.

ಇದನ್ನು ನಿರೀಕ್ಷೆ ಮಾಡದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಕಡೆಯಿಂದಲೂ 15,050ಗಳನ್ನು ಕಟ್ಟಬೇಕೆಂದು ಕಾಲೇಜು ಆಡಳಿತ ಮಂಡಳಿ ಕಡೆಯಿಂದ ಕಟ್ಟಿಸಿಕೊಂಡಿದ್ದಾರೆ. ಇದರ ನಡುವೆ ಪೂರ್ಣ ಪ್ರಮಾಣದ ಶುಲ್ಕವನ್ನು ಕಟ್ಟದೇ ಇರುವವರನ್ನು ಪ್ರವೇಶಾತಿ ಕೊಡದೆ ವಾಪಸ್ ಕಳಿಸಿದ ಪ್ರಸಂಗವೂ ನಡೆದಿದೆ.

ಸರ್ಕಾರಿ ಆದೇಶದ ಪ್ರಕಾರ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನಿರ್ವಹಣಾ ವೆಚ್ಚ ಹೊರತುಪಡಿಸಿ ಹೆಚ್ಚುವರಿ ಶುಲ್ಕಕ್ಕೆ ಒತ್ತಾಯಿಸಬಾರದು ಎಂಬ ಉಲ್ಲೇಖವಿದೆ. 2013 ರಲ್ಲಿ ಸರ್ಕಾರ ಹೊರಡಿಸಿದ ಆದೇಶದಲ್ಲಿ ವಾರ್ಷಿಕ 2 ಲಕ್ಷದ ಮಿತಿ ಒಳಗಿನ ಆದಾಯ ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ವಿದ್ಯಾರ್ಥಿಗಳ ಕಡೆಯಿಂದ ತಾಲ್ಲೂಕು ತಹಶೀಲ್ದಾರರ ಕಡೆಯಿಂದ ಪಡೆದಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಆದರಿಸಿ ಶುಲ್ಕಕ್ಕೆ ಅರ್ಹರೋ ಅಥವಾ ಅಲ್ಲವೋ ಎಂಬುದನ್ನು ನಿಗದಿಪಡಿಸಬೇಕು. ಎಲ್ಲಾ ದಾಖಲಾತಿ ಹೊಂದಿದ್ದರೂ ವಿವಿ ಗಳು ಶುಲ್ಕ ವಸೂಲಿ ಮಾಡಿದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂಬ ಆದೇಶವಿದೆ. ಸರ್ಕಾರದಿಂದ ಈ ರೀತಿಯ ಆದೇಶ ಇದ್ದರೂ ಬೆಂಗಳೂರು ಉತ್ತರ ವಿವಿ ಆಡಳಿತ ಮಂಡಳಿ ಶುಲ್ಕ ವಸೂಲಿಗೆ ಒತ್ತಾಯಿಸಿದ ಬಗ್ಗೆ ವಿದ್ಯಾರ್ಥಿಗಳು ಆತಂಕಕ್ಕೆ ಕಾರಣವಾಗಿದೆ.

ಹೆಸರು ಹೇಳಲು ಇಚ್ಛಿಸದ ಒಬ್ಬ ವಿದ್ಯಾರ್ಥಿಯೊಬ್ಬರು ಹೇಳಿದ ಪ್ರಕಾರ “ನಮ್ಮದು ಗೌರಿಬಿದನೂರು ನಾವು ಕೂಲಿ ನಾಲಿ ಮಾಡಿ ಬದುಕುತ್ತಿದ್ದೇವೆ. ನಮ್ಮ ಸೀನಿಯರ್ಸ್ ಅನ್ನು ನಾನು ಕೇಳಿಕೊಂಡು ಇಲ್ಲಿ ಪ್ರವೇಶಾತಿಯನ್ನು ಪಡೆಯಲು ಬಂದೆ. ನಾನು  ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವಳು. 330 ರೂಗಳ ಪ್ರವೇಶಾತಿ ಎಂದುಕೊಂಡು ಬಂದೆ. ಇಲ್ಲಿ ನೋಡಿದರೆ 15,050 ರುಪಾಯಿಗಳು ಕಟ್ಟಬೇಕೆಂದು ಹೇಳಿದಾಗ ನನಗೆ ಹೃದಯವೇ ಹೊಡೆದ ಹಾಗೆ ಆಯಿತು. ಉನ್ನತ ಶಿಕ್ಷಣ ಪಡೆಯಬೇಕೆಂಬ ನನ್ನ ಕನಸು ನುಚ್ಚುನೂರಾಯಿತು. ಇಲ್ಲಿ ಇರುವ ಮಹಿಳಾ ಅಧಿಕಾರಿಯೊಬ್ಬರ ಬಳಿ ಕಡ್ಡಾಯ ಶುಲ್ಕ ನಿಗದಿ ಬಗ್ಗೆ ವಿಚಾರಿಸಿದಾಗ “ಸರ್ಕಾರದ ಆದೇಶ ಆಗಿದೆ” ಎಂಬ ಉತ್ತರ ಬಂದಿದೆ. ಕಂತುಗಳಲ್ಲಿ ಕಟ್ಟಲು ನನಗೆ ಅವಕಾಶ ಮಾಡಿಕೊಡಿ ಉನ್ನತ ಶಿಕ್ಷಣ ಪಡೆಯಲು ನನಗೆ ಅವಕಾಶ ಕೊಡಿ ಇದು ನನ್ನ ಬಹಳ ದೊಡ್ಡ ಕನಸು ಎಂದು ಬೇಡಿಕೊಂಡರೂ ಅವರು ಇದಕ್ಕೆ ಒಪ್ಪಲಿಲ್ಲ. ಎರಡು ದಿನದ ಒಳಗಡೆ ಶುಲ್ಕ ಕಟ್ಟಲು ಸಾಧ್ಯವಾದರೆ ಕಟ್ಟಿ ಇಲ್ಲದಿದ್ದರೆ ನಿಮ್ಮ ವರ್ಜಿನಲ್ ಡಾಕ್ಯೂಮೆಂಟ್ಸ್ ಅನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದರು. ನನಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಹಾಗಾಯಿತು” ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಇನ್ನೋರ್ವ ವಿದ್ಯಾರ್ಥಿ ಹೇಳಿದಂತೆ “ನಾನು ಎಂ.ಕಾಂ ಮಾಡಲು ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡೆ. ನಾನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವನು. ನಾನು ಉತ್ತಮ ರಾಂಕ್ ನಲ್ಲಿಯೇ ಇದ್ದೇನೆ. ನಾನು ಬಯಸಿದ ವಿಶ್ವವಿದ್ಯಾಲಯ ದಲ್ಲಿ ನನಗೆ ಸೀಟ್ ಕೂಡ ಸಿಕ್ಕಿದೆ. ಆದರೆ 19,550 ರೂಪಾಯಿ ಕಟ್ಟಲು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ನನಗೆ ಕಟ್ಟಲು ಸಾಧ್ಯವಿಲ್ಲ. ಅಷ್ಟೆ ಅಲ್ಲ ಒಂದು ವಾರ ಸಮಯ ಕೊಟ್ಟರೂ ಕೂಡ ನನಗೆ ಕಟ್ಟಲು ಅಸಾಧ್ಯ. ತುಂಬಾ ಹುಷಾರಿಲ್ಲದ ಅಮ್ಮ ಮನೆಯಲ್ಲಿದ್ದಾಳೆ . ನನಗೆ ಓದಬೇಕೆಂಬ ಆಸೆ ತುಂಬಾ ಇದೆ. ಬೆಟ್ಟದಷ್ಟು ಆಸೆಯನ್ನು ಇಟ್ಟುಕೊಂಡು ಉನ್ನತ ಶಿಕ್ಷಣ ಪಡೆಯಲು ಬಂದೆ ಆದರೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನನ್ನ ಕನಸಿಗೆ ಮಣ್ಣೆರೆಚ್ಚಿತು. ಇದ್ದಕ್ಕಿದ್ದ ಹಾಗೆ ಇಷ್ಟು ಮೊತ್ತದ ಹಣವನ್ನು ಹೆಚ್ಚಿಸಿದರೆ ಬಡ ವಿದ್ಯಾರ್ಥಿಗಳಾದ ನಾವು ಹೇಗೆ ಪಾವತಿಸುವುದು? ವಿದ್ಯಾರ್ಥಿವೇತನ ಬರುತ್ತದೆ ಎಂದು ಹೇಳುತ್ತಾರೆ ಆದರೆ ಈ ಸದ್ಯಕ್ಕೆ ಇಷ್ಟು ಹಣವನ್ನು ಪಾವತಿಸಲು ಸಾಧ್ಯವಾಗದ ಕಾರಣ ನಾನು ನನ್ನ ಅಂಕಪಟ್ಟಿಗಳನ್ನು ವಾಪಸ್ ಪಡೆದುಕೊಂಡು ಮನೆಗೆ ತೆರಳುತ್ತಿದ್ದೇನೆ” ಎಂದು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

ಈ ಬಗ್ಗೆ ಪೀಪಲ್ ಮೀಡಿಯಾ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳೂ ಸಹ ಕರೆಯನ್ನು ಸ್ವೀಕರಿಸಲು ಸಿದ್ಧರಿಲ್ಲ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಈ ನಡೆಯ ಹಿಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ಇಡುವ ತಂತ್ರವಿದೆ‌. ಇವರು ಸರ್ಕಾರದ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಧೋರಣೆಯಿಂದ ವಿದ್ಯಾರ್ಥಿಗಳನ್ನು ಶೋಷಿಸುತ್ತಿದ್ದಾರೆ. ಸರ್ಕಾರದ ಆದೇಶ ಕುಟುಂಬದ ವಾರ್ಷಿಕ ಆದಾಯ ಎರಡುವರೆ ಲಕ್ಷದ ಒಳಗಡೆ ಇರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಕೋರ್ಸುಗಳ ಪ್ರವೇಶಕ್ಕೆ ಅಥವಾ ವಿಶ್ವವಿದ್ಯಾಲಯಗಳಿಗೆ ಕಡ್ಡಾಯ ಶುಲ್ಕ ವಸೂಲಿ ಮಾಡುವಂತಿಲ್ಲ. ಕೌನ್ಸಿಲಿಂಗ್ ಸೀಟುಗಳಿಗೆ ಸಂಬಂಧಿಸಿದಂತೆ ಸರಕಾರಿ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳಿಂದಲೂ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳು ದೂರಿದ್ದಾರೆ.

“ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೀಶಿಪ್ ಕಾರ್ಡನ್ನು ಪಡೆದುಕೊಂಡು ಉಚಿತ ಪ್ರವೇಶತಿಯನ್ನು ಪಡೆಯಲು ಸರ್ಕಾರದ ಅನುಮತಿ ಇದೆ. ಈ ವಿಶ್ವವಿದ್ಯಾಲಯವು ಇವೆಲ್ಲವುಗಳನ್ನು ಗಾಳಿಗೆ ತೂರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಂದ ಪೂರ್ಣ ಪ್ರಮಾಣದ ಶುಲ್ಕವನ್ನು ತುಂಬಿಸಿಕೊಂಡು ವಿದ್ಯಾರ್ಥಿಗಳಿಗೆ ಮೋಸ ಮಾಡಿದೆ. ಹಾಗೆಯೇ ಪೂರ್ಣ ಪ್ರಮಾಣದ ಶುಲ್ಕವನ್ನು ಕಟ್ಟದೇ ಇರುವ ವಿದ್ಯಾರ್ಥಿಗಳನ್ನು ಪ್ರವೇಶಾತಿ ಕೊಡದೆ ವಿಶ್ವವಿದ್ಯಾಲಯದಿಂದ ಹೊರಗಟ್ಟಿದೆ. ಬೆಂಗಳೂರು ಉತ್ತರ ವಿವಿ ಯಲ್ಲಿ ದಲಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗಿ ಮಾಡುವವರಿಗೆ ಶಿಕ್ಷೆಯಾಗಲೇಬೇಕು ಎಂದು ವಿದ್ಯಾರ್ಥಿ ಸಮುದಾಯ ಒತ್ತಾಯಿಸುತ್ತಿದೆ.

ಸರ್ಕಾರ ಈ ಕಡೆ ಗಮನ ಕೊಡಬೇಕು, ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು. ಒಳ್ಳೆಯ ರಾಂಕಲ್ಲಿ ಇದ್ದು ಪ್ರವೇಶಾತಿ ಯನ್ನು ಪಡೆದುಕೊಳ್ಳಲು ಸೋತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಬೇಕು. ಹೆಚ್ಚು ಮೊತ್ತದ ಹಣವನ್ನು ಕಟ್ಟಿಸಿಕೊಂಡಿರುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮತ್ತೆ ಹಣವನ್ನು ವಾಪಸ್ ಕೊಡುವಂತೆ ಮಾಡಬೇಕೆಂದು  ನೊಂದ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ‌.

Related Articles

ಇತ್ತೀಚಿನ ಸುದ್ದಿಗಳು

You cannot copy content of this page