ಕಾರ್ಮಿಕ ಕಾನೂನು ಉಲ್ಲಂಘನೆ ಮಾಡಿದಕ್ಕಾಗಿ ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ಪುರಸ್ಕೃತ, ಗ್ರಾಮೀಣ್ ಟೆಲಿಕಾಂನ ಅಧ್ಯಕ್ಷ ಮುಹಮ್ಮದ್ ಯೂನಸ್ ಮತ್ತು ಇತರ ಮೂವರಿಗೆ ಢಾಕಾ ನ್ಯಾಯಾಲಯವು ಸೋಮವಾರ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ರಾಷ್ಟ್ರೀಯ ಮತದಾನಕ್ಕೆ 6 ದಿನಗಳ ಮೊದಲು ಈ ತೀರ್ಪು ಬಂದಿದೆ.
83ರ ಹರೆಯದ ಯೂನಸ್ ಅವರು ತಮ್ಮ ಮೈಕ್ರೋ ಫಿನಾನ್ಸ್ ಬ್ಯಾಂಕ್, ಗ್ರಾಮೀಣ್ ಬ್ಯಾಂಕ್ ಮೂಲಕ ಲಕ್ಷಾಂತರ ಬಾಂಗ್ಲಾದೇಶೀಯರನ್ನು ಬಡತನದಿಂದ ಮೇಲಕ್ಕೆತ್ತಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು. 2006 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದ ಇವರು, ಬಾಂಗ್ಲಾದೇಶದ ಶೇಖ್ ಹಸೀನಾ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಹಸೀನಾ ಅವರು “ಬಡವರ ರಕ್ತ ಹೀರುತ್ತಿದ್ದಾರೆ” ಎಂದು ಆರೋಪ ಮಾಡಿದ್ದಾರೆ.
ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್ ಗುಂಪನ್ನು ಸೇರಿ : ಪೀಪಲ್ ಮೀಡಿಯಾ
ಯೂನಸ್ ವಿರುದ್ಧದ ಮಾಡಿರುವ ಹಲವಾರು ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ 170 ಕ್ಕೂ ಹೆಚ್ಚು ಜಾಗತಿಕ ನಾಯಕರು ಹಸೀನಾ ಅವರ ವಿರುದ್ಧದ ಎಲ್ಲಾ ಕಾನೂನು ಕ್ರಮಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಯೂನಸ್ ವಿರುದ್ಧದ ಆರೋಪಗಳನ್ನು ಒಳಗೊಂಡ ದಾಖಲೆಗಳನ್ನು ಪರಿಶೀಲಿಸಲು ಬಾಂಗ್ಲಾದೇಶಕ್ಕೆ ಬಂದಿರುವ ಅಂತರರಾಷ್ಟ್ರೀಯ ತಜ್ಞರು ಮತ್ತು ವಕೀಲರನ್ನು ತಾನು ಸ್ವಾಗತಿಸುತ್ತೇನೆ ಎಂದು ಹಸೀನಾ ಪ್ರತಿಕ್ರಿಯಿಸಿದ್ದಾರೆ.
ಢಾಕಾ ಲೇಬರ್ ಕೋರ್ಟ್-3ರ ನ್ಯಾಯಾಧೀಶ ಶೇಖ್ ಮರೀನಾ ಸುಲ್ತಾನಾ ಸೋಮವಾರ ತೀರ್ಪು ಪ್ರಕಟಿಸಿದ್ದರು. ಸದ್ಯ ಯೂನಸ್ ಮತ್ತು ಇತರರಿಗೆ ಜಾಮೀನು ನೀಡಲಾಗಿದೆ.
ನ್ಯಾಯಾಲಯವು ಅವರಿಗೆ ಒಂದು ಸೆಕ್ಷನ್ ಅಡಿಯಲ್ಲಿ ಬಾಂಗ್ಲಾದೇಶಿ ಟಾಕಾ 5,000 ಮತ್ತು ಇನ್ನೊಂದು ಸೆಕ್ಷನ್ ಅಡಿಯಲ್ಲಿ ಟಾಕಾ 25,000 ದಂಡ ವಿಧಿಸಿದೆ. ದಂಡ ಕಟ್ಟಲು ನಿರಾಕರಿಸಿದರೆ ಹೆಚ್ಚುವರಿ 10 ಮತ್ತು 15 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್ ಗುಂಪನ್ನು ಸೇರಿ : ಪೀಪಲ್ ಮೀಡಿಯಾ
ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ನ್ಯಾಯಾಧೀಶರು ಒಂದು ತಿಂಗಳ ಕಾಲಾವಕಾಶ ನೀಡಿದ್ದಾರೆ.
ಯೂನಸ್ ಮತ್ತು ಇತರ ಮೂವರು ಆರೋಪಿಗಳಾದ ಗ್ರಾಮೀಣ ಟೆಲಿಕಾಂ ಸಿಇಒ ಎಂಡಿ ಅಶ್ರಫುಲ್ ಹಸನ್, ವ್ಯವಸ್ಥಾಪಕ ನಿರ್ದೇಶಕ ಎಂ. ಶಾಜಹಾನ್ ಮತ್ತು ಟ್ರಸ್ಟಿ ನೂರ್ಜಹಾನ್ ಬೇಗಂ ಸೋಮವಾರ ಮಧ್ಯಾಹ್ನ 1:35 ಕ್ಕೆ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಡಿಸೆಂಬರ್ 24 ರಂದು ಪ್ರಕರಣದ ವಾದವನ್ನು ಮುಕ್ತಾಯಗೊಳಿಸಿ, ನ್ಯಾಯಾಲಯವು ತೀರ್ಪನ್ನು ಸೋಮವಾರಕ್ಕೆ ನಿಗದಿಪಡಿಸಿತ್ತು.
ಯೂನಸ್ ಅವರು ಕಾರ್ಮಿಕ ಕಾನೂನು ಉಲ್ಲಂಘನೆ ಆರೋಪದ ಮೇಲೆ 100 ಕ್ಕೂ ಹೆಚ್ಚು ಇತರ ಆರೋಪಗಳನ್ನು ಎದುರಿಸುತ್ತಿದ್ದರು. ಕಳೆದ ತಿಂಗಳು ನಡೆದ ವಿಚಾರಣೆಯೊಂದರ ನಂತರ, ಇವರು ಬಾಂಗ್ಲಾದೇಶದಲ್ಲಿ ತಾನು ಸ್ಥಾಪಿಸಿದ 50 ಕ್ಕೂ ಹೆಚ್ಚು ಸಾಮಾಜಿಕ ವ್ಯಾಪಾರ ಸಂಸ್ಥೆಗಳಲ್ಲಿ ಯಾವುದೇ ಲಾಭವನ್ನು ಪಡೆದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದರು.
84 ಪುಟಗಳ ತೀರ್ಪಿನಲ್ಲಿ ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ಕಂಡುಕೊಂಡಿದ್ದರೂ, ಮೇಲ್ಮನವಿಯ ಷರತ್ತಿನ ಮೇಲೆ ನಾಲ್ವರಿಗೆ ಒಂದು ತಿಂಗಳ ಕಾಲ ಜಾಮೀನು ನೀಡಲಾಗಿದ್ದಾರೆ. ಹಾಗಾಗಿ, ತಕ್ಷಣವೇ ಜೈಲಿಗೆ ಹೋಗುವ ಅಗತ್ಯವಿಲ್ಲ.
ತನ್ನ ಕಕ್ಷಿದಾರರಿಗೆ ನ್ಯಾಯ ಸಿಕ್ಕಿಲ್ಲ ಮತ್ತು ಈ ನಿರ್ಧಾರವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಯೂನಸ್ ಪರ ವಕೀಲ ಬ್ಯಾರಿಸ್ಟರ್ ಅಬ್ದುಲ್ಲಾ ಅಲ್ ಮಾಮುನ್ ಹೇಳಿದ್ದಾರೆ.
9 ಸೆಪ್ಟೆಂಬರ್, 2021 ರಂದು, ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯೂನಸ್ ಮತ್ತು ಇತರ ಮೂವರ ವಿರುದ್ಧ ಕಾರ್ಖಾನೆಗಳು ಮತ್ತು ಸ್ಥಾಪನೆಯ ತಪಾಸಣೆ ಇಲಾಖೆಯು ಪ್ರಕರಣವನ್ನು ದಾಖಲಿಸಿದೆ.
ಪ್ರಕರಣದ ದಾಖಲೆಗಳ ಪ್ರಕಾರ, ಗ್ರಾಮೀಣ್ ಟೆಲಿಕಾಂನಲ್ಲಿ ತಪಾಸಣೆಯ ಸಂದರ್ಭದಲ್ಲಿ ಇಲಾಖೆಯು ಹಲವಾರು ಕಾರ್ಮಿಕ ಕಾನೂನು ಉಲ್ಲಂಘನೆಗಳನ್ನು ಕಂಡುಕೊಂಡಿದೆ.
ಉಲ್ಲಂಘನೆಗಳಲ್ಲಿ 101 ಕಾರ್ಮಿಕರು ಮತ್ತು ಉದ್ಯೋಗಿಗಳ ಉದ್ಯೋಗಗಳನ್ನು ಖಾಯಂ ಮಾಡಲು ವಿಫಲವಾಗಿರುವುದು, ಕಾರ್ಮಿಕರ ಭಾಗವಹಿಸುವಿಕೆ ನಿಧಿ ಮತ್ತು ಕಲ್ಯಾಣ ನಿಧಿಯನ್ನು (workers’ participation fund and welfare fund ) ಮಾಡದಿರುವುದು ಮತ್ತು ಕಂಪನಿಯ ಲಾಭಾಂಶದ ಶೇಕಡಾ 5ನ್ನು ಕಾರ್ಮಿಕರಿಗೆ ನೀಡಲು ವಿಫಲವಾಗಿರುವುದೂ ಸೇರಿದೆ.