‘ಬೇಲಿಯೇ ಎದ್ದು ಹೊಲ ಮೇಯ್ದಂತೆ’, ಬ್ಯಾಂಕ್ ಲಾಕರ್ಗಳಲ್ಲಿ ಗ್ರಾಹಕರು ಇಟ್ಟಿದ್ದ ಚಿನ್ನವನ್ನೇ ಬ್ಯಾಂಕ್ ಮ್ಯಾನೇಜರ್ ಒಬ್ಬರು ಲಪಟಾಯಿಸಿದ್ದಾರೆ. ಸುಮಾರು 2.7 ಕೆಜಿ ಚಿನ್ನಾಭರಣಗಳನ್ನು ಕದ್ದು, ಆ ಹಣವನ್ನು ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಬಳಸಿದ್ದಾರೆ.
ಫೆಬ್ರವರಿ 2 ರಂದು ಬ್ಯಾಂಕ್ ಗ್ರಾಹಕರು ತಾವು ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಳ್ಳಲು ಬಂದಾಗ ಈ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರಿನ ರಾಷ್ಟ್ರೀಕೃತ ಬ್ಯಾಂಕ್ ಒಂದರ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಕುಮಾರ್ (34) ಎಂಬುವವರನ್ನು ಬಂಧಿಸಲಾಗಿದೆ.
ತನಿಖೆಯ ವೇಳೆ ಬ್ಯಾಂಕ್ ಗ್ರಾಹಕರಿಗೆ ಸೇರಿದ ಒಟ್ಟು 2,783 ಗ್ರಾಂ ಚಿನ್ನಾಭರಣ ಕಳ್ಳತನವಾಗಿರುವುದು ದೃಢಪಟ್ಟಿದೆ. ಆರೋಪಿಯು ಲಾಕರ್ ಕೀಗಳನ್ನು ದುರುಪಯೋಗಪಡಿಸಿಕೊಂಡು, ಬ್ರಾಂಚ್ ಮ್ಯಾನೇಜರ್ ಇಲ್ಲದ ಸಮಯದಲ್ಲಿ ಕಳೆದ ಕೆಲವು ಸಮಯದಿಂದ ಅಡವಿಟ್ಟಿದ್ದ ಚಿನ್ನವನ್ನು ಹಂತಹಂತವಾಗಿ ಕಳ್ಳತನ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.
