ಬೆಂಗಳೂರು: ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರು ಬಸ್ ಹತ್ತುತ್ತಿದ್ದ ವೇಳೆ ಕಾಲುಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ಸೋಮವಾರ ನಡೆದಿದೆ.
ಬೆಳಗ್ಗೆ ಬಸ್ ಹತ್ತುತ್ತಿದ್ದ ಎಂಎಸ್ಸಿ ವಿದ್ಯಾರ್ಥಿನಿ ಕಾಲು ಜಾರಿ ಬಸ್ ಕೆಳಗೆ ಬಿದ್ದು ಗಾಯಗೊಂಡಿದ್ದಾಳೆ. ಈ ಹಿನ್ನಲೆಯಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಗಾಯಗೊಂಡಿರುವ ವಿದ್ಯಾರ್ಥಿ ಶಿಲ್ಪ(22) ಕೋಲಾರದ ಕೆಜಿಎಫ್ ಮೂಲದವರು ಎಂದು ತಿಳಿದು ಬಂದಿದೆ.
ಮಾಹಿತಿ ಪ್ರಕಾರ ವಿದ್ಯಾರ್ಥಿನಿಯ ಸೊಂಟದ ಕೆಳ ಭಾಗಕ್ಕೆ ತೀವ್ರವಾಗಿ ಗಾಯವಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದು ಬಂದಿದೆ.
ಘಟನೆಯ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ಸಾರ್ವಜನಿಕ ಬಸ್ಗಳ ಸಂಚಾರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಎರಡೂ ಗೇಟ್ಗಳನ್ನು ಬಂದ್ ಮಾಡಿದರು. ಈ ವೇಳೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿರುದ್ಧವೂ ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ವಿದ್ಯಾರ್ಥಿಗಳು, ಮೋದಿಯ ಆಗಮನಕ್ಕಾಗಿ ರಸ್ತೆ ಹಂಪ್ಗಳನ್ನು ತೆರವುಗೊಳಿಸಿದ್ದರಿಂದಾಗಿ, ಬಿಬಿಎಂಪಿ ಸಂಪೂರ್ಣವಾಗಿ ವಿಶ್ವ ವಿದ್ಯಾಲಯವನ್ನು ಒತ್ತುವರಿ ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ಬಿಎಂಟಿಸಿ ಬಸ್ಗಳು ಸೇರಿದಂತೆ 70ಕ್ಕೂ ಹೆಚ್ಚು ಖಾಸಗಿ ಬಸ್ಗಳು ಜ್ಞಾನಭಾರತಿಯಲ್ಲಿ ಓಡಾಡುತ್ತಿವೆ. ಈಗಾಗಿ ಬೈಪಸ್ ರಸ್ತೆಗಳಿಗಿಂತ ವಿವಿ ರಸ್ತೆಗಳು ಮುಖ್ಯರಸ್ತೆಗಳಾಗಿದ್ದು ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದರು. ಹಾಗೆಯೇ ಸ್ಥಳಕ್ಕೆ ಕುಲಪತಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಬಂದು ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.