Wednesday, December 4, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು – 43 : ಪ್ರಧಾನ ಸೇವಕರು, ಚೌಕಿದಾರರ ಕುರಿತೂ ಎಚ್ಚರವಿರಲಿ!

“…ಹಿಂದೆ ನಾಜಿ ಜರ್ಮನಿಯು ನೆರೆಯ ಪೋಲೆಂಡ್ ನಮ್ಮದು, ಆಸ್ಟ್ರಿಯಾ ನಮ್ಮದು ಎಂದು ಹೇಳುತ್ತಲೇ, ಜರ್ಮನ್‌ ಜನರಲ್ಲಿ ದ್ವೇಷ ಹುಟ್ಟಿಸಿ, ಅವುಗಳ ಮತ್ತು ಫ್ರಾನ್ಸ್, ಸ್ಕ್ಯಾಂಡಿನೇವಿಯನ್ ದೇಶಗಳ ಸಹಿತ ನೆರೆಹೊರೆಯ ದೇಶಗಳ ಮೇಲೆ ದಂಡೆತ್ತಿಹೋಗಿತ್ತು.. ಇದಕ್ಕೂ ಅಖಂಡ ಭಾರತದ ಸಂಘ ಪರಿವಾರದ ಕಲ್ಪನೆಗೂ ಇದಕ್ಕೂ ಏನಾದರೂ ಸಾಮ್ಯ ಕಾಣುತ್ತಿದೆಯೆ!?…” ನಿಖಿಲ್ ಕೋಲ್ಪೆಯವರ ಬರಹದಲ್ಲಿ. ತಪ್ಪದೇ ಓದಿ

ಇತಿಹಾಸದ ಉದ್ದಕ್ಕೂ ಸಾಮಾನ್ಯವಾಗಿ ಎಲ್ಲಾ ಸರ್ವಾಧಿಕಾರಿಗಳು- ಧರ್ಮದ ನೆಲೆಯಲ್ಲಿ (ಲಿಬಿಯಾ, ಸುಡಾನ್, ಅಫ್ಘಾನಿಸ್ತಾನ, ಈಜಿಪ್ಟ್ ಮುಂತಾದ ಮುಸ್ಲಿಂ ರಾಷ್ಟ್ರಗಳು), ಭಾಷೆಯ ನೆಲೆಯಲ್ಲಿ (ಸ್ಪೇನ್‌ನಲ್ಲಿ ಸ್ಪಾನಿಷ್- ಬಾಸ್ಕ್), ಜನಾಂಗದ ನೆಲೆಯಲ್ಲಿ (ಜರ್ಮನಿಯ ಜನಾಂಗೀಯ ರಾಷ್ಟ್ರೀಯವಾದ, ದಕ್ಷಿಣ ಆಫ್ರಿಕಾದಲ್ಲಿದ್ದ ಅಪಾರ್ಥೀಡ್ ವರ್ಣಭೇದ ನೀತಿ), ಬುಡಕಟ್ಟುಗಳ ನೆಲೆಯಲ್ಲಿ (ಹೆಚ್ಚಿನ ಆಫ್ರಿಕನ್ ದೇಶಗಳು), ಸುಳ್ಳು ತತ್ವಗಳ ನೆಲೆಯಲ್ಲಿ (ಉತ್ತರ ಕೊರಿಯಾ, ಕಾಂಬೋಡಿಯಾ ಇತ್ಯಾದಿ) ರಾಷ್ಟ್ರೀಯತೆಯ ನೆಲೆಯಲ್ಲಿ (ರಷ್ಯಾ, ಬೆಲಾರಸ್, ಇಟಲಿ, ಚಿಲಿ, ಅರ್ಜೆಂಟೀನಾ, ಮ್ಯಾನ್ಮಾರ್, ಫಿಲಿಪೈನ್ಸ್ ಇತ್ಯಾದಿ) ಅಧಿಕಾರಕ್ಕೇರಿದ್ದರು, ಮತ್ತು ಅಧಿಕಾರಕ್ಕೇರಿದ್ದಾರೆ. ನೆರೆಯ ರಾಷ್ಟ್ರಗಳನ್ನು, ಬೇರೆ, ಭಾಷೆ, ಬುಡಕಟ್ಟು, ಜನಾಂಗಗಳ ಜನರನ್ನು ಪರಸ್ಪರ ಶತ್ರುಗಳಂತೆ ಬಿಂಬಿಸಿ, ಆಂತರಿಕ ಒಗ್ಗಟ್ಟನ್ನು ಪ್ರತಿಪಾದಿಸಿ, ಆಂತರಿಕ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳನ್ನು ಮುಚ್ಚಿಹಾಕಿ, ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಸರ್ವಾಧಿಕಾರಿಗಳ ಪ್ರಮುಖ ಕಾರ್ಯತಂತ್ರ.

ಭಾರತದಲ್ಲಿ ಸರ್ವಾಧಿಕಾರಿ ಆಡಳಿತ ಎಂದಾದರೂ ಬಂದರೆ, ಅದು ಧರ್ಮ, ಜಾತಿ ಮತ್ತು ಹುಸಿ ರಾಷ್ಟ್ರೀಯತೆ ಮತ್ತು ಪೊಳ್ಳು ದೇಶಪ್ರೇಮದ ಹೆಸರಲ್ಲಿ ಬರಲಿದೆ. ಅದುದರಿಂದಲೇ ಇಲ್ಲಿ ಸದ್ಯಕ್ಕೆ ನಡೆಯುತ್ತಿರುವ ವಿದ್ಯಮಾನಗಳು ಭಯ ಹುಟ್ಟಿಸುತ್ತಿರುವುದು! ಹಿಂದೂತ್ವದ ಹೆಸರಿನಲ್ಲಿ ಮುಸ್ಲಿಂ, ಕ್ರೈಸ್ತ ಸಮುದಾಯಗಳ ದೇಶಪ್ರೇಮವನ್ನು ಶಂಕಿಸುವಂತೆ ಮಾಡಿ, ಅವುಗಳ ವಿರುದ್ಧ ಅಸಹನೆಯನ್ನು ಮೂಡಿಸುವ ಪ್ರಯತ್ನಗಳನ್ನು- ಆರ್ಯನ್ ಶ್ರೇಷ್ಟತೆಯ ಹೆಸರಿನಲ್ಲಿ ಯಹೂದಿಗಳ ವಿರುದ್ಧ ಜರ್ಮನಿಯ ಸಾಮಾನ್ಯ ಪ್ರಜೆಗಳನ್ನು ಎತ್ತಿಕಟ್ಟಿದ್ದ ಹಿಟ್ಲರನ ನಾಜಿತಂತ್ರಗಳ ಕಡೆಗೆ ಇಟ್ಟ ಹೆಜ್ಜೆ ಎಂದು ಊಹಿಸಿದರೆ ತಪ್ಪಿಲ್ಲ. ಗೋಮಾಂಸ- ಅದನ್ನು ಸಾಗಿಸುತ್ತಿದ್ದರು, ಮನೆಯ ಫ್ರಿಜ್ಜಿನಲ್ಲಿ ಗೋಮಾಂಸ ಇಟ್ಟಿದ್ದಾರೆ ಎಂಬ ಸಂಶಯ… ಇತ್ಯಾದಿ ಕ್ಷುಲ್ಲಕ ಕಾರಣಗಳಿಗಾಗಿ ಮುಸ್ಲಿಮರ ಮೇಲೆ ನಡೆದ ಗುಂಪು ದಾಳಿ ಮತ್ತು ಕೊಲೆಗಳನ್ನು ಈ ನಿಟ್ಟಿನಲ್ಲಿ ನೋಡಬೇಕು.

ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಧ್ವಂಸ, ಹಲವು ವರ್ಷಗಳ ಕಾಲ ಜೀವಂತ ಇರಿಸಿಕೊಂಡು, ಬಿಜೆಪಿಗೆ ಬಲ ನೀಡಿದ ಬಾಬ್ರಿ ಮಸೀದಿ- ರಾಮಜನ್ಮಭೂಮಿ ವಿವಾದದಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಹೊಸ ಚಾಳಿಯೊಂದು ಹುಟ್ಟಿಕೊಂಡಿದೆ. ಅದೆಂದರೆ, ಮಸೀದಿಗಳನ್ನು ಹುಡುಕಿ ಹುಡುಕಿ, ಅದು ಹಿಂದೆ ದೇವಾಲಯವಾಗಿತ್ತು ಎಂದು ವಿವಾದವೆಬ್ಬಿಸುವುದು ಮತ್ತು ದೇಶಾದ್ಯಂತ ಹಲವು ದೇವಾಲಯಗಳು ಹಿಂದೆ ಬೌದ್ಧಾಲಯಗಳಾಗಿದ್ದವು ಎಂಬ ಐತಿಹಾಸಿಕ ಸತ್ಯವನ್ನು ಮರೆಮಾಚುವುದು. ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದ, ಇತ್ತೀಚೆಗೆ ನಾಲ್ವರ ಪ್ರಾಣಕ್ಕೆ ಎರವಾದ ಸಂಬಾಲ್‌ನ ಶಾಹೀ ಮಸೀದಿ ವಿವಾದಕ್ಕೆ ಸಂಬಂಧಿಸಿದ ಹಿಂಸಾಚಾರ, ಅಜ್ಮೀರ್‌ನ ಖ್ವಾಜಾ ಮೊಯ್ನುದ್ದೀನ್ ಚಿಸ್ತಿಯವರ ದರ್ಗಾದ ಅಡಿಯಲ್ಲಿ ಶಿವ ಮಂದಿರ ಇದೆಯೆಂಬ ವಿವಾದ… ಹೀಗೆ ದೇಶದಾದ್ಯಂತ ದಿನಕ್ಕೊಂದರಂತೆ ಅಲ್ಲಲ್ಲಿ ಇಂತಾ ವಿವಾದಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಹಿಂಸಾಚಾರ ಎಬ್ಬಿಸಿ ಕೋಮು ಧ್ರುವೀಕರಣ ಮಾಡುವುದೇ ಇಂತಾ ವಿವಾದಗಳನ್ನು ಹುಟ್ಟಿಸುವುದರ ಮೂಲ ಉದ್ದೇಶ ಎಂದು ಬೇರೆ ಹೇಳಬೇಕಾಗಿಲ್ಲ.

‘ಹಿಂದೂ ಒಂದು’ ಎನ್ನುವ ಘೋಷಣೆಯ ಬೆನ್ನಲ್ಲೇ, ಕುದುರೆ ಮೇಲೆ ಕುಳಿತರು, ಬೂಟುಧರಿಸಿದರು, ಬಾವಿಯ ನೀರು ತೆಗೆದರು ಇತ್ಯಾದಿ ನೆಪಗಳನ್ನು ಮುಂದಿಟ್ಟು ಸವರ್ಣೀಯರು ದಲಿತರನ್ನು ಥಳಿಸಿದ ಬೆತ್ತಲೆಗೊಳಿಸಿದ, ಕೊಂದ ಘಟನೆಗಳಿಗೆ ಬೇರೇನು ವಿವರಣೆ ಕೊಡೋಣ!? ಜರ್ಮನಿಯಲ್ಲಿಯೂ ಅಲೆಮಾರಿ ಜಿಪ್ಸಿಗಳನ್ನು ನಿಷ್ಪ್ರಯೋಜಕ ಕೀಳು ಜನಾಂಗ ಎಂದು ಕಂಡಕಂಡಲ್ಲಿ ತಂಡೋಪತಂಡವಾಗಿ ಕೊಲ್ಲಲಾಗಿತ್ತು. ಇವೆಲ್ಲವೂ ನಡೆಯುವುದು ಆರ್ಯನ್ ಜನಾಂಗೀಯ ಶ್ರೇಷ್ಟತೆಯ ವ್ಯಸನದಿಂದ ಮತ್ತು ನಮ್ಮ ಸಂವಿಧಾನವನ್ನು ಮೀರಿದ ಸಾಮಾಜಿಕ ಶ್ರೇಣೀಕರಣವನ್ನು, ತಾರತಮ್ಯದ ಗುಲಾಮಗಿರಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ. ಉಡುಪಿ ಮಠದ ಸ್ವಾಮೀಜಿಯೊಬ್ಬರು ಇತ್ತೀಚಿಗೆ “ನಮಗೆ ಗೌರವ ಕೊಡುವ ಸಂವಿಧಾನ ಬೇಕು” ಎಂದು ನೀಡಿದ ಹೇಳಿಕೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಇಲ್ಲಿ “ನಮಗೆ” ಎಂದರೆ ಯಾರಿಗೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಲವ್ ಜೆಹಾದ್, ಲ್ಯಾಂಡ್ ಜೆಹಾದ್, ಹಲಾಲ್ ಜೆಹಾದ್, ಹಿಜಾಬ್ ಜೆಹಾದ್ ಇತ್ಯಾದಿ ಕಪೋಲಕಲ್ಪಿತ ಪದಪುಂಜಗಳ ಉದ್ದೇಶವೂ ಕೋಮು ಉದ್ವಿಗ್ನತೆಯನ್ನು ಹರಡುವುದು. ಇದು ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಸ್ಥಿರವಾಗಿರುವ “ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆಯನ್ನು ಖಾತರಿಪಡಿಸಲು, ಅವರೆಲ್ಲರಲ್ಲೂ (ಭಾರತೀಯರೆಲ್ಲರಲ್ಲೂ) ಭ್ರಾತೃತ್ವದ ಭಾವನೆ ಮೂಡಿಸುವುದಕ್ಕಾಗಿ” ಎಂಬ ಮೂಲ ಕಲ್ಪನೆಗೇ ವಿರುದ್ಧವಾಗಿದೆ.

ಹಿಂದೆ ನಾಜಿ ಜರ್ಮನಿಯು ನೆರೆಯ ಪೋಲೆಂಡ್ ನಮ್ಮದು, ಆಸ್ಟ್ರಿಯಾ ನಮ್ಮದು ಎಂದು ಹೇಳುತ್ತಲೇ, ಜರ್ಮನ್‌ ಜನರಲ್ಲಿ ದ್ವೇಷ ಹುಟ್ಟಿಸಿ, ಅವುಗಳ ಮತ್ತು ಫ್ರಾನ್ಸ್, ಸ್ಕ್ಯಾಂಡಿನೇವಿಯನ್ ದೇಶಗಳ ಸಹಿತ ನೆರೆಹೊರೆಯ ದೇಶಗಳ ಮೇಲೆ ದಂಡೆತ್ತಿಹೋಗಿತ್ತು. ನಮ್ಮಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್ ಒಳಗೊಂಡಂತಹ ಅಖಂಡ ಭಾರತದ ಸಂಘ ಪರಿವಾರದ ಕಲ್ಪನೆಗೂ ಇದಕ್ಕೂ ಏನಾದರೂ ಸಾಮ್ಯ ಕಾಣುತ್ತಿದೆಯೆ!?

ಅಲ್ಲಿ ಮಾಡಿದಂತೆಯೇ ಇಲ್ಲಿಯೂ ಬುದ್ಧಿಜೀವಿಗಳ ಕೊಲೆಗಳು, ಅವರ ಮೇಲೆ ದಾಳಿಗಳು ನಡೆಯುತ್ತಿವೆ! ವಿರೋಧಿಸಿದವರಿಗೆ ದೇಶದ್ರೋಹಿ ಪಟ್ಟಕಟ್ಟಿ ಪಾಕಿಸ್ತಾನಕ್ಕೆ ಕಳಿಸುವ ಮಾತಾಗುತ್ತಿರುವುದು, ಕಲಬುರ್ಗಿ, ಪನ್ಸಾರೆ, ದಾಬೋಲ್ಕರ್‌, ಗೌರಿಯಂತಹ ಪತ್ರಕರ್ತರು, ವಿಚಾರವಾದಿಗಳು, ಬುದ್ಧಿಜೀವಿಗಳ ಕೊಲೆ ನಡೆಯುತ್ತಿರುವುದು, ಸುಳ್ಳು ಪ್ರಕರಣಗಳಲ್ಲಿ ದೇಶದ್ರೋಹದಂತಹ ಕರಾಳ ಕಾಯಿದೆಗಳ ಅಡಿಯಲ್ಲಿ ಜೈಲಿಗೆ ತಳ್ಳುತ್ತಿರುವುದು ಬರೇ ಕಾಕತಾಳೀಯವೇ? ಅಥವಾ ಯೋಜಿತ ಸಂಚಿನ ಭಾಗವೆ? ನಾವು ಯೋಚಿಸಬೇಕು.

ಸರ್ವಾಧಿಕಾರದ ಇನ್ನೊಂದು ಲಕ್ಷಣವೆಂದರೆ ಏಕಪಕ್ಷೀಯ ನಿರ್ಧಾರ. ಅದರಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಜಂಟಾ ಅಥವಾ ಗುಂಪಿನದ್ದೇ ಕಾರುಬಾರು. ಅವರ ನಿರ್ಧಾರಗಳನ್ನು ವಿರೋಧಿಸುವ ಧೈರ್ಯ ಮಾಡಿದವರು ಮೂಲೆಗುಂಪು. ಗಡಿಪಾರು, ಮರಣದಂಡನೆ ಇತ್ಯಾದಿಗಳು ಕ್ರೂರ ಸರ್ವಾಧಿಕಾರಗಳಲ್ಲಿ ಕಟ್ಟಿಟ್ಟ ಬುತ್ತಿ. ನಮ್ಮ ದೇಶದಲ್ಲೇ ನಡೆಯುತ್ತಿರುವ ವ್ಯಕ್ತಿಪೂಜೆಯನ್ನು ನೋಡಿದರೆ, ಇದು ಪ್ರಜಾಪ್ರಭುತ್ವವು ಪರೋಕ್ಷ ಸರ್ವಾಧಿಕಾರದತ್ತ ಹೊರಳುವ ಲಕ್ಷಣದಂತೆ ಕಾಣುತ್ತಿದೆ. ಬಿಜೆಪಿಯಲ್ಲಿಯೇ ಆಡ್ವಾಣಿ, ಯಶವಂತ ಸಿನ್ಹಾ, ಮನೋಹರ ಜೋಷಿ ಅವರಂತಹ ಹಿರಿಯ ನಾಯಕರನ್ನು ಹೇಗೆ ಬಳಸಿ ಮೂಲೆಗುಂಪು ಮಾಡಲಾಯಿತು ಎಂಬುದನ್ನು ನಾವು ಗಮನಿಸಬಹುದು.

ಇನ್ನೊಂದು ಲಕ್ಷಣವೆಂದರೆ, ಮಾನವ ಮತ್ತು ವೈಯಕ್ತಿಕ ಹಕ್ಕುಗಳ ದಮನ. ಪ್ರಜೆಯ ಅಧಿಕಾರಗಳನ್ನು ಮೊಟಕುಗೊಳಿಸುವುದು, ಅವರ ಚಲನವಲನಗಳ ಮೇಲೆ ಗುಪ್ತವಾಗಿ ಕಣ್ಣಿಡುವುದು, ಕಿರುಕುಳ ನೀಡುವುದು. ಇಂತಹ ಹಲವಾರು ಉದಾಹರಣೆಗಳನ್ನು ಓದುಗರು ಗಮನಿಸಿರಬಹುದು. ‘ನಗರ ನಕ್ಸಲ್’ ಪಿಳ್ಳೆ ನೆಪದ ಮೇಲೆ ಬುದ್ಧಿಜೀವಿಗಳ ಬಂಧನ, ಸಂಘಟಿತ ಅಪರಾಧಗಳ ಕಾಯ್ದೆಗಳ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಇತ್ಯಾದಿ ಮತ್ತಿನ್ನೇನು? ‘ಅಧಾರ್’ ಬಗ್ಗೆ ವ್ಯಕ್ತವಾಗಿದ್ದ ಅತಂಕಗಳ ಹಿಂದೆ ಇದೇ ಕಾರಣವಿದೆ. ಹತ್ತು ಹವಲು ತನಿಖಾ ಸಂಸ್ಥೆಗಳಿಗೆ ನಾಗರಿಕರ ಇ-ಮೇಲ್ ಸಹಿತ ಸಾಮಾಜಿಕ ಜಾಲತಾಣಗಳ ಮಾಹಿತಿ ಪಡೆಯುವ ಅಧಿಕಾರ ನೀಡಿರುವುದನ್ನು ಈ ಹಿನ್ನೆಲೆಯಲ್ಲಿ ನೋಡಬಹುದೆ?

ಸರ್ವಾಧಿಕಾರಗಳಲ್ಲಿ ಮಾತ್ರ ಇದು ತೀರಾ ಅತಿರೇಕಕ್ಕೆ ಹೋಗುತ್ತದೆ. ವಿರೋಧಿಗಳು ಮತ್ತು ಸರಕಾರದ ವಿರುದ್ಧ ಇರುವ ನಾಗರಿಕರನ್ನು ಗುರುತಿಸಿ, ಗುಪ್ತಚರ್ಯೆ ನಡೆಸಿ, ದಮನಿಸಲು ಹಿಟ್ಲರ್‌ನ ಜರ್ಮನಿಯಲ್ಲಿ ಅತ್ಯಂತ ಕ್ರೂರ ಗುಪ್ತ ರಾಜಕೀಯ ಪೊಲೀಸ್ ಪಡೆಯಾಗಿದ್ದ ‘ಗೆಸ್ಟಾಪೋ’ವನ್ನು ಸ್ಥಾಪಿಸಲಾಗಿತ್ತು. ಈ ಹೆಸರು ಕೇಳಿದರೆ ನಾಗರಿಕರು ಮಾತ್ರವಲ್ಲ, ಸಾಮಾನ್ಯ ಪೊಲೀಸರೂ ಗಡಗಡ ನಡುಗುತ್ತಿದ್ದರು. ಲಕ್ಷಾಂತರ ಜರ್ಮನರನ್ನು ಮತ್ತು ಆಕ್ರಮಿತ ದೇಶಗಳ ಪ್ರಜೆಗಳನ್ನು ಚಿತ್ರಹಿಂಸೆ ಮಾಡಿ ಕೊಂದ ಕುಖ್ಯಾತಿ ಈ ‘ಗೆಸ್ಟಾಪೋ’ ರಾಕ್ಷಸರಿಗಿದೆ. ಹಿಟ್ಲರ್ ಬಾಲಬಡುಕ ಹೈನ್ರಿಚ್ ಮ್ಯುಲ್ಲರ್ ಇದರ ಮುಖ್ಯಸ್ಥನಾಗಿದ್ದ. ಇಲ್ಲಿಯೂ ಇಂತವರ ಹೆಸರುಗಳು ನಿಮಗೆ ಹೊಳೆದರೆ ಅಚ್ಚರಿಯೇನಿಲ್ಲ.

ಸರ್ವಾಧಿಕಾರಕ್ಕೆ ಮಾನವ ಹಕ್ಕುಗಳ ಮೇಲೆ ಎಳ್ಳಷ್ಟು ಕಾಳಜಿ ಇರುವುದಿಲ್ಲ! ಮ್ಯಾನ್ಮಾರ್ ಉದಾಹರಣೆ ತೆಗೆದುಕೊಂಡರೆ 2008ರಲ್ಲಿ ದೇಶವು ಭಾರೀ ಚಂಡಮಾರುತಕ್ಕೆ ತುತ್ತಾಗಿ ಜನರು ಅನ್ನ, ನೀರು, ಆಶ್ರಯವಿಲ್ಲದೇ ಸಾಯುತ್ತಿದ್ದಾಗ ಅಲ್ಲಿನ ಸರ್ವಾಧಿಕಾರವು ಬರಲಿದ್ದ ಅಣಕು ಚುನಾವಣೆಯಲ್ಲಿ ಜನರು ತನ್ನನ್ನು ಗೆಲ್ಲಿಸುವ ತನಕ ಹರಿದುಬಂದ ವಿದೇಶಿ ನೆರವನ್ನು ಹಂಚದೇ ತಡೆಹಿಡಿದಿತ್ತು. ಭಾರತ ಸರಕಾರ ಸುನಾಮಿ ಮತ್ತು ಕೇರಳದ ಮಳೆ ದುರಂತ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರಗಳು ಕೊಡಮಾಡಿದ ನೆರವನ್ನೂ ತೋರಿಕೆಯ ಧಾರ್ಷ್ಯದಿಂದ ನಿರಾಕರಿಸಿರುವುದು ಓದುಗರಿಗೆ ನೆನಪಿರಬಹುದು. ಆದರೆ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುತ್ತಿರುವವರ, ಅಲ್ಲಿನ ಸಿರಿವಂತ ಶೇಖ್‌ಗಳ ಜೊತೆ ವ್ಯವಹಾರದಲ್ಲಿ ತೊಡಗಿರುವ ಬಿಲಿಯಾಧಿಪತಿ ಉದ್ಯಮಿಗಳ ಹಣ ನಮಗೆ ಆಗಬಹುದು!

ಮತ್ತೊಂದು ಲಕ್ಷಣವೆಂದರೆ ಸಮಾನಾಂತರ ವ್ಯವಸ್ಥೆ. ಜರ್ಮನಿಯಲ್ಲಿ ಸಾಮಾನ್ಯ ಸೇನಾಪಡೆಗಳಿಗೆ ಸಮಾನಂತರವಾಗಿ ‘ವಾಫೆನ್ ಎಸ್‌ಎಸ್’ ಎಂಬ ಪಡೆಗಳನ್ನು ಸ್ಥಾಪಿಸಲಾಗಿತ್ತು. ಎಸ್‌ಎಸ್ ಎಂದರೆ ‘ಶುಡ್ಝ್ ಸ್ಟ್ರಾಫೆಲ್’ ಎಂಬುದರ ಸಂಕ್ಷಿಪ್ತ. ಅದು ಅಡಳಿತ ಪಕ್ಷದ ಘಟಕ! ಅದರ ಸೇನಾ ವಿಭಾಗವೇ ವಾಫೆನ್ ಎಸ್ಎಸ್. ಇದರಲ್ಲಿ ಇದ್ದದ್ದು ಹಿಟ್ಲರನ ಕುರುಡು ಭಕ್ತರು! ‘ವರ್‌ಮ್ಯಾಕ್’ ಎಂದು ಕರೆಯಲ್ಪಡುತ್ತಿದ್ದ ಸಾಮಾನ್ಯ ಸೇನೆಯ ಹಿರಿಯ ಅಧಿಕಾರಿ ಕೂಡಾ ಈ ಎಸ್ಎಸ್‌ನ ಕಿರಿಯ ಅಧಿಕಾರಿಗೂ ಹೆದರಬೇಕಾಗಿತ್ತು! ಹೈನ್ರಿಚ್ ಹಿಮ್ಲರ್ ಎಂಬ ಬುದ್ಧಿವಂತ ಕ್ರೂರಿ ಇದರ ಮುಖ್ಯಸ್ಥನಾಗಿದ್ದ.

ಮಾಧ್ಯಮಗಳ ನಿಯಂತ್ರಣ ಸರ್ವಾಧಿಕಾರದ ಇನ್ನೊಂದು ಲಕ್ಷಣ. ನಾಜಿ ಜರ್ಮನಿಯಲ್ಲಿ ಎಲ್ಲಾ ಸರಕಾರಿ ವಿರೋಧಿ ಪತ್ರಿಕೆಗಳನ್ನು ನಿಷೇಧಿಸಿ, ಮುಟ್ಟುಗೋಲು ಹಾಕಲಾಗಿತ್ತು. ಪತ್ರಕರ್ತರನ್ನು ಜೈಲಿಗೆ ತಳ್ಳಲಾಗಿತ್ತು. ನಾಜಿ ಪಕ್ಷವೇ ಸರಕಾರದ ತುತ್ತೂರಿ ಊದುವ, ವಿರೋಧಿಗಳು ಮತ್ತು ಯಹೂದಿ, ಕಮ್ಯುನಿಸ್ಟರ ಮೇಲೆ ವಿಷಕಾರುವ ಮುಖವಾಣಿಗಳನ್ನು ನಡೆಸುತ್ತಿತ್ತು. ರೇಡಿಯೋದಲ್ಲಿ ಹಿಟ್ಲರನ ಗುಣಗಾನ ಮಾಡಿ ಅತನನ್ನು ಸರ್ವಗುಣಸಂಪನ್ನ ವಿಶ್ವನಾಯಕನಂತೆ ಬಿಂಬಿಸಲಾಗಿತ್ತು. ಸಾಹಿತ್ಯ, ಸಿನಿಮಾ, ಸಂಗೀತ, ನಾಟಕ, ನೃತ್ಯ ಇತ್ಯಾದಿ ಎಲ್ಲಾ ಕ್ಷೇತ್ರಗಳನ್ನು ನಾಜಿ ಪಕ್ಷವೇ ನಿಯಂತ್ರಿಸುತ್ತಿತ್ತು. ನಮ್ಮಲ್ಲಿನ ಮಾಧ್ಯಮಗಳ ಗುಲಾಮಿ ಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಬಗ್ಗೆ ಎಲ್ಲರಿಗೂ ಗೊತ್ತಿದೆ. ‘”ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್”, “ಕಾಶ್ಮೀರ್ ಫೈಲ್ಸ್”, “ಕೇರಳ ಫೈಲ್ಸ್,”ನಂತಾ ಪ್ರಚಾರ- ಪ್ರಚೋದನೆಯ ಚಲನಚಿತ್ರಗಳು- ಚಿತ್ರರಂಗಕ್ಕೂ ಈ ರೋಗ ವ್ಯಾಪಿಸುತ್ತಿರುವುದರ ಲಕ್ಷಣವಾಗಿದೆ.

ಸರ್ವಾಧಿಕಾರದ ಅರಂಭಿಕ ಲಕ್ಷಣಗಳಲ್ಲಿ ಒಂದೆಂದರೆ, ಪಕ್ಷದ ಕಾರ್ಯಕರ್ತರ ಗೂಂಡಾ ಪೊಲೀಸ್‌ಗಿರಿ. ಜರ್ಮನಿಯಲ್ಲಿ ಮೊದಲೇ ಉಲ್ಲೇಖಿಸಿದಂತಹ ಎಸ್‌ಎಸ್ ಪಡೆಗಳನ್ನು ಸ್ಥಾಪಿಸಲಾಗಿತ್ತು. ಇದನ್ನು ಮೊದಲು ಸ್ಥಾಪಿಸಿದ್ದು 1925ರಲ್ಲಿ- ಪಕ್ಷದ ಸಭೆಗಳಿಗೆ ಸೆಕ್ಯೂರಿಟಿ ಗಾರ್ಡುಗಳಾಗಿ! ವೃತ್ತಿಪರ ಗೂಂಡಾಗಳು, ನಿರುದ್ಯೋಗಿ ಕುರುಡು ಭಕ್ತರು ದೇಶ ಪ್ರೇಮದ ಹೆಸರಿನಲ್ಲಿ, ಜನಾಂಗೀಯ ಶ್ರೇಷ್ಟತೆಯ ಹೆಸರಿನಲ್ಲಿ ವಿರೋಧಿಗಳ ಸದ್ದಡಗಿಸುತ್ತಿದ್ದರು. ಇದೇ ಮುಂದೆ ಸರಕಾರಿ ಗೂಂಡಾಪಡೆಯಾಯಿತು.

ಜೊತೆಗೆ ಯೂತ್‌ ಲೀಗ್, ವಿಮೆನ್ಸ್ ಲೀಗ್ ಇತ್ಯಾದಿ ಬೇರೆ ಬೇರೆ ಹೆಸರುಗಳಲ್ಲಿ ಹಲವು ಸಂಘಟನೆಗಳನ್ನು ರಚಿಸಲಾಗಿತ್ತು. ಉದ್ದೇಶ ಮಾತ್ರ ಒಂದೇ! ನಮ್ಮಲ್ಲಿ ಈ ಬೆಳವಣಿಗೆಯನ್ನು ಸ್ಪಷ್ಟವಾಗಿ ಕಾಣಬಹುದು! ಆ ಸೇನೆ, ಈ ದಳ, ಆ ಪರಿಷತ್ ಎಂದು ಅನೇಕ ಸಂಘಟನೆಗಳು- ಉದ್ದೇಶ ಮಾತ್ರ ಒಂದೇ! ಅವರಿಗಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿದರೆ, ಇಲ್ಲಿಯೂ ಬರೇ ‘ದಂಡ’ ಸಾಕಾಗದೆಂದು ಸರಕಾರಿ ಆಶ್ರಯದಲ್ಲಿ ರಾಜಾರೋಷವಾಗಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇವೆಲ್ಲವೂ ಏನನ್ನು ಸೂಚಿಸುತ್ತವೆ?!

ಇನ್ನೊಂದು ವಿಷಯವೆಂದರೆ, ಸರ್ವಾಧಿಕಾರಿಗಳು ಯಾವತ್ತೂ ತಮ್ಮನ್ನು ಹಾಗೆಂದು ಕರೆದುಕೊಂಡಿಲ್ಲ. ದೇವರ ಪ್ರತಿನಿಧಿ, ಧರ್ಮರಕ್ಷಕ, ದೇಶರಕ್ಷಕ, ಅಧ್ಯಕ್ಷ, ವಿಶ್ವ ಗುರು, ಹಿಟ್ಲರನಂತೆ ಪರಮೋಚ್ಛ ನಾಯಕ (ಫ್ಯುರರ್) ಇತ್ಯಾದಿ ಕರೆದುಕೊಂಡಿದ್ದಾರೆ. ಅದುದರಿಂದ ನಾವು ವಿಶ್ವಗುರುಗಳು, ಪ್ರಧಾನ ಸೇವಕರು, ಚೌಕಿದಾರರ ಕುರಿತೂ ಎಚ್ಚರದಿಂದ ಇರಬೇಕಾದ ಅಗತ್ಯವಿದೆ. ವ್ಯಕ್ತಿ ಪೂಜೆ, ಟಪೋರಿ ಮನುಷ್ಯರನ್ನು ಮನುಷ್ಯನನ್ನು ಕಟ್ಟುಕತೆಗಳ ಮೂಲಕ ದೈವತ್ವಕ್ಕೇರಿಸುವುದು ಸರ್ವಾಧಿಕಾರದ ಕಣ್ಣಿಗೆ ರಾಚುವ ಲಕ್ಷಣಗಳು. ತೀರಾ ತಡವಾಗುವ ಮೊದಲು ಎಚ್ಚರ ಹೊಂದಲು ಇದು ಸಕಾಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page