Friday, June 20, 2025

ಸತ್ಯ | ನ್ಯಾಯ |ಧರ್ಮ

ಭಾರತಕ್ಕೆ ಎಂಟರ ಗಂಟು, ಟಿ20 ಸರಣಿ ಸಮಬಲ

ಮಳೆಯಿಂದಾಗಿ ತಲಾ 8 ಓವರ್ ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದೆ ಅಬ್ಬರದ ಆಟವಾಡಿದರು. ಅವರಿಗೆ ಸ್ಪಿನ್ನರ್ ಅಕ್ಸರ್ ಪಟೇಲ್, ಜಸ್ಪೀತ್ ಬುಮ್ರಾ ಮತ್ತು ಎರಡೇ ಬಾಲ್ ಆಡಿದರೂ ನಾಲ್ಕು ಜನ ಮೆಚ್ಚುವಂಥ ಆಟವಾಡಿದ ದಿನೇಶ್ ಕಾರ್ತಿಕ್ ಬೆಂಬಲ ನೀಡಿದರು. ಇದರ ಫಲವಾಗಿ ಭಾರತ ಎರಡನೇ ಟಿ 20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.

ನಾಗ್ಪುರದಲ್ಲಿ ಮಳೆ ಬಂದು ಔಟ್ ಫೀಲ್ಡ್ ಒದ್ದೆಯಾದ ಕಾರಣ ಪಂದ್ಯ ತಡವಾಗಿ ಆರಂಭಗೊಂಡಿತು. ಅಷ್ಟು ಹೊತ್ತಿಗೆ ಸಾಕಷ್ಟು ಸಮಯ ಕಳೆದುಕೊಂಡಿದ್ದರಿಂದ ಎರಡೂ ತಂಡಗಳಿಗೆ ಕೇವಲ ಎಂಟು ಓವರ್  ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು.

ಟಾಸ್ ಗೆದ್ದು ಆಸ್ಟ್ರೇಲಿಯಾಗೆ ಬ್ಯಾಟಿಂಗ್ ಕೊಟ್ಟ ಭಾರತಕ್ಕೆ ಸ್ಪಿನ್ನರ್ ಅಕ್ಸರ್ ಪಟೇಲ್ ಮತ್ತು ಬುಮ್ರಾ ಆಸರೆಯಾದರು. ಆದರೆ ಕೊನೆಯ ಓವರ್ ನಲ್ಲಿ ಹರ್ಷಲ್ ಪಟೇಲ್ ದುಬಾರಿಯಾದ ಕಾರಣ ಮತ್ತು ಮ್ಯಾಥ್ಯೂ ವೇಡ್ ಅವರ ಕೆಚ್ಚಿನ ಆಟದ ಕಾರಣ, ಆಸ್ಟ್ರೇಲಿಯಾ ಭಾರತಕ್ಕೆ ಗೆಲ್ಲಲು 91 ರನ್ ಗಳ ಗುರಿ ನೀಡಿತು. ಅಬ್ಬರದಿಂದಲೇ ಬ್ಯಾಟಿಂಗ್ ಶುರು ಮಾಡಿದ ನಾಯಕ ರೋಹಿತ್ ಮತ್ತು ರಾಹುಲ್ ಮೊದಲನೇ ಓವರ್ ನಲ್ಲೇ 20 ರನ್ ದೋಚಿದರು. 3 ಓವರ್ ಮುಗಿದಿದ್ದರೂ ಭಾರತ ತಂಡ ಒಂದೂ ಬೌಂಡರಿ ಗಳಿಸಿರಲಿಲ್ಲ, ಆದರೆ ಬದಲಾಗಿ 5 ಭರ್ಜರಿ ಸಿಕ್ಸರ್ ಸಿಡಿಸಿತ್ತು.  ಇನ್ನೊಂದು ಕಡೆ ವಿಕೆಟ್ ಬೀಳುತ್ತಿದ್ದರೂ ನಾಯಕ ರೋಹಿತ್ ಕೊನೆಯವರೆಗೂ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ರಾಹುಲ್ , ಕೊಹ್ಲಿ, ಸೂರ್ಯಕುಮಾರ್ ಯಾದವ್, ಪಾಂಡ್ಯ ವಿಫಲರಾದರೂ ಕೊನೆಯಲ್ಲಿ ಡಿಕೆ ಅಬ್ಬರದ ಸಣ್ಣ ಝಲಕ್ ಪ್ರೇಕ್ಷಕರಿಗೆ ಸಿಕ್ಕಿತು. ಕೊನೆಯ ಓವರ್ ನಲ್ಲಿ 9 ರನ್ ಗಳ ಅವಶ್ಯಕತೆ ಇದ್ದಾಗ,  ಡಿಕೆ ಗೆ ಬ್ಯಾಟಿಂಗ್ ಅವಕಾಶ ಸಿಕ್ಕಿತು. ಆದರೆ, ಹೆಚ್ಚಿನ ಲೆಕ್ಕಾಚಾರಕ್ಕೆ ಆಸ್ಪದ ಕೊಡದೇ ಡಿಕೆ, ಮೊದಲ ಬಾಲನ್ನು ಸಿಕ್ಸರ್ ಗೆ ಅಟ್ಟಿ, ಎರಡನೇ ಬಾಲ್ ನಲ್ಲಿ ಬೌಂಡರಿ ಬಾರಿಸಿ ಎರಡೇ ಬಾಲಿನಲ್ಲಿ ಪಂದ್ಯ ಮುಗಿಸಿ ತಮ್ಮ ಫಿನಿಷರ್ ಪಟ್ಟವನ್ನು ಹೈಲೈಟ್ ಮಾಡಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ರೋಹಿತ್ ಶರ್ಮಾ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಸರಣಿಯ ಕಟ್ಟ ಕಡೆಯ ಮತ್ತು ನಿರ್ಣಾಯಕ ಫೈನಲ್ ಪಂದ್ಯ ಸೆಪ್ಟೆಂಬರ್ 25ರ ಭಾನುವಾರ ಹೈದರಾಬಾದ್ ನಲ್ಲಿ ನಡೆಯಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page