ಧರ್ಮಸ್ಥಳ ಮೂಲದ ಏರೋಸ್ಪೇಸ್ ಉದ್ಯೋಗಿ ಸಾವಿನ ಪ್ರಕರಣಕ್ಕೆ ಸಿಕ್ಕ ಬಿಗ್ ಟ್ವಿಸ್ಟ್; ಸಾವಿಗೆ ಕಾರಣವಾಯ್ತೇ ಪ್ರೇಮ ವೈಫಲ್ಯ?

ಪಂಜಾಬ್ ನಲ್ಲಿ ಮೇ 17 ರಂದು ನಿಗೂಢವಾಗಿ ಸಾವನ್ನಪ್ಪಿದ ಕರ್ನಾಟಕದ ಧರ್ಮಸ್ಥಳ ಮೂಲದ ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಆಕಾಂಕ್ಷ ಸಾವಿನ ಬಗ್ಗೆ ಹಲವಷ್ಟು ಅನುಮಾನಗಳು ಹುಟ್ಟಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ನಂತರ ಅವರ ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣ ಎನ್ನಲಾಗಿದೆ.

ಆಕಾಂಕ್ಷಾ ತಾವು ಓದುತ್ತಿದ್ದ ಪಂಜಾಬ್ ನ ಪಗ್ವಾಡ ಕಾಲೇಜಿನ ಪ್ರೊ.ಮ್ಯಾಥ್ಯೂ ಅವರನ್ನು ಪ್ರೀತಿಸುತ್ತಿದ್ದರು. ಹಲವು ದಿನಗಳಿಂದ ಇಬ್ಬರ ನಡುವೆ ಇದ್ದ ಪ್ರೀತಿ ಯಾವುದೋ ಕಾರಣಕ್ಕೆ ಮುರಿದು ಬಿದ್ದಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ಮನಸ್ತಾಪಗಳು ಉಂಟಾಗಿತ್ತು. ಕಾಲೇಜಿಗೆ ಸರ್ಟಿಫಿಕೇಟ್ ತರಲು ಹೋದಾಗ ಮತ್ತೊಮ್ಮೆ ಪ್ರೊ. ಮ್ಯಾಥ್ಯೂ ಜೊತೆ ಆಕಾಂಕ್ಷ ಗಲಾಟೆ ಮಾಡಿಕೊಂಡಿದ್ದಾರೆ. ಮನನೊಂದು ಆಕಾಂಕ್ಷ ಕಾಲೇಜಿನ ಕಟ್ಟಡದಿಂದ ಜಿಗಿದು ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮಗಳ ಸಾವಿನ ಬಗ್ಗೆ ಜಲಂಧರ್ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದರು.3ನೇ ಮಹಡಿಯಿಂದ ಬಿದ್ದು ಆಕಾಂಕ್ಷಾ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆಯೇ ಆಕಾಂಕ್ಷಾ ಪೋಷಕರು ಪಂಜಾಬ್ ಗೆ ತೆರಳಿದ್ದಾರೆ.ಆಕಾಂಕ್ಷಾ ತಂದೆ ಮಗಳ ಸಾವು ಕೊಲೆಯಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಪ್ರೊ.ಮ್ಯಾಥ್ಯೂ ಅವರನ್ನು ಪೊಲೀಸರು ಹೆಚ್ಚಿನ ಮಾಹಿತಿಗೆ ವಿಚಾರಣೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಆಕಾಂಕ್ಷಾ ನಾಯರ್ ಪಂಜಾಬ್ ನ ಎಲ್.ಸಿ.ಯು ಪಗ್ವಾಡ ಕಾಲೇಜಿನಲ್ಲಿ ಓದಿದ್ದರು. ಈ ಹಿನ್ನೆಲೆಯಲ್ಲಿ ಸರ್ಟಿಫಿಕೇಟ್ ತರಲೆಂದು ಹೋಗಿದ್ದರು. ಉದ್ಯೋಗಕ್ಕಾಗಿ ಜಪಾನ್ ಗೆ ತೆರಳಲು ಆಕಾಂಕ್ಷಾ ತಯಾರಿ ನಡೆಸಿದ್ದರು. ಇದಕ್ಕಾಗಿ ಸರ್ಟಿಫಿಕೇಟ್ ಗಾಗಿ ಪಂಜಾಬ್ ಪಗ್ವಾಡಾ ಕಾಲೇಜಿಗೆ ಹೋಗಿ ಸರ್ಟಿಫಿಕೇಟ್ ಪಡೆದಿದ್ದರು.

Related Articles

ಇತ್ತೀಚಿನ ಸುದ್ದಿಗಳು