ಹಾಸನ : ನಡೆಯಲಿರುವ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಕಲಿಸಲು ಜನರು ಎನ್ಡಿಎಗೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತ ಹಾಕಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿಕೆ ನೀಡಿದ್ದಾರೆ.
ಅದಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದು ನಂತರ ದೇವಾಲಯದ ಹೊರಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹದಿನಾರು ತಿಂಗಳಿನಿಂದ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ದಿನ ಸರ್ಕಾರದ ಹಣವನ್ನು ಲೂಟಿ, ದುರುಪಯೋಗ ಮಾಡುವುದರಲ್ಲಿ ನಿರತರಾಗಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ದಲಿತರ ಹಣ ನುಂಗಿದ್ದಾರೆ. ಮೈನಿಂಗ್ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಶಿಕ್ಷೆಗೆ ಒಳಗಾಗಿದ್ದಾರೆ. ಇದೆಲ್ಲಾ ನೋಡ್ತಿದ್ದರೆ ಜನ ಈ ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಅನಿಸುತ್ತದೆ. ಮೂರಕ್ಕೆ ಮೂರು ಬೈ ಎಲೆಕ್ಷನ್ ನಾವೆ ಗೆಲ್ಲುತ್ತೇವೆ. ಕಳೆದ ಹದಿನಾರು ತಿಂಗಳಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು, ನೀರಾವರಿ ಯೋಜನೆ ಯಾವುದು ಪ್ರಾರಂಭವಾಗಿಲ್ಲ. ಎಲ್ಲಾ ಕಡೆ ರಸ್ತೆಗಳು ಹಳ್ಳ ಬಿದ್ದಿದ್ದರೂ ಅದಕ್ಕೆ ಗಮನ ಕೊಡುತ್ತಿಲ್ಲ. ಮಳೆ ಬಂದು ಬೆಳೆ ಹಾನಿ ಆಗಿ ರೈತರು ಕಂಗಾಲಾಗಿದ್ದರೂ ಅದರ ಬಗ್ಗೆ ಏನು ಗಮನನೇ ಇರುವುದಿಲ್ಲ. ಬರೀ ಲೂಟಿ, ಲೂಟಿಯಲ್ಲೇ ಮುಳುಗಿದೆ. ಇದನ್ನೆಲ್ಲಾ ಗಮನಿಸುತ್ತಿರುವ ಜನರು ಬೈ ಎಲೆಕ್ಷನ್ನಲ್ಲಿ ಬುದ್ದಿ ಕಲಿಸುತ್ತಾರೆ. ಮೊನ್ನೆನೂ ಚನ್ನಪಟ್ಟಣ ಬೈ ಎಲೆಕ್ಷನ್ ನಾಮಪತ್ರ ಸಲ್ಲಿಕೆಗೆ ನಾನು ಹೋಗಿದ್ದಾಗ ಅಲ್ಲಿರುವ ಕಾರ್ಯಕರ್ತರ ಹುಮ್ಮಸ್ಸು, ನಾಮಪತ್ರ ಸಲ್ಲಿಕೆಗೆ ಮೂವತ್ತು ಸಾವಿರ ಜನ ಸೇರಿದ್ದಾರೆ. ಜನರಲ್ಲಿ ಉತ್ಸಾಹ ಇದೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಕಲಿಸಬೇಕು. ಜನ ಈ ಬಾರಿ ಎನ್ಡಿಎಗೆ ಬಿಜೆಪಿ-ಜೆಡಿಎಸ್ಗೆ ಓಟು ಮಾಡುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಚನ್ನಪಟ್ಟಣ ಬೈಎಲೆಕ್ಷನ್ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಯೋಗೇಶ್ವರ್ ಅವರು ಪ್ರತಿ ಚುನಾವಣೆಗೂ ಪಕ್ಷಾಂತರ ಮಾಡಿದ್ದು, ಏಳು ಬಾರಿ ಪಕ್ಷಾಂತರ ಮಾಡಿದ್ದಾರೆ. ಯಾವ ಪಾರ್ಟಿ ಆಡಳಿತದಲ್ಲಿ ಇರುತ್ತೋ ಅದಕ್ಕೆ ಪಲಾಯನ ಮಾಡುತ್ತಾರೆ. ಹಿಂದೆ ಬಿಜೆಪಿ ರೂಲಿಂಗ್ನಲ್ಲಿ ಇದ್ದಾಗ ಅಲ್ಲಿಗೆ ಬಂದಿದ್ದರು. ಅದರ ಹಿಂದೆ ಕಾಂಗ್ರೆಸ್ ರೂಲಿಂಗ್ನಲ್ಲಿ ಇತ್ತು ಅಲ್ಲಿಗೆ ಹೋಗಿದ್ರು. ಈಗ ಕಾಂಗ್ರೆಸ್ ಸರಕಾರವಿದ್ದು, ಅಲ್ಲಿಗೆ ಈಗ ಹೋಗಿದ್ದಾರೆ. ಅವರು ಪ್ರತಿ ಚುನಾವಣೆಗೂ ಒಂದೊಂದು ಪಾರ್ಟಿ, ಸಿಂಬಲ್ನ್ನ ಆಯ್ಕೆ ಮಾಡ್ತಾರೆ. ಶಾಶ್ವತ ಕೆಲಸ ಮಾಡುವವರನ್ನು ಜನ ಆಯ್ಕೆ ಮಾಡ್ತಾರೆ. ಅಲ್ಲಿನ ನೀರಾವರಿ ಯೋಜನೆಗೆ ಸುಮಾರು ೧೫೦ ಕೋಟಿ ಬಿಜೆಪಿ ಸರ್ಕಾರ ಕೊಟ್ಟಿದೆ. ಅದನ್ನು ನೆನಪಿಟ್ಟುಕೊಂಡು ಬಿಜೆಪಿಗೆ, ನರೇಂದ್ರಮೋದಿಗೆ, ದೇವೇಗೌಡರ ಪರವಾಗಿ ನಿಂತಿರುವ ನಿಖಿಲ್ ಕುಮಾರಸ್ವಾಮಿಗೆ ಓಟು ಮಾಡ್ತಾರೆ ಎನ್ನುವ ವಿಶ್ವಾಸವಿದೆ ಎಂದರು. ಯೋಗೇಶ್ವರ್ಗೆ ಟಿಕೆಟ್ ಕೊಡಿಸಲು ನಾನು ಸೀರಿಯಸ್ ಆಗಿ ಟ್ರೈ ಮಾಡಿದ್ವಿ. ನಮ್ಮ ಎಲ್ಲಾ ಲೀಡರ್ಗಳು ಟ್ರೈ ಮಾಡಿದ್ರು, ಅವರು ದೆಹಲಿಗೆ ಹೋಗಿದ್ರು. ಟಿಕೆಟ್ ಕೊಡ್ತಿವಿ ಅಂದ್ರು ಬೇಡ ಎಂದು ಹೊರಟು ಹೋದರು. ಪ್ರಾರಂಭದಲ್ಲಿ ಕೇಳ್ದಂಗೆ ನಾಟಕವಾಡಿ ಹೋದರು. ಮೂರು ತಿಂಗಳ ಹಿಂದನೇ ಇವೆಲ್ಲಾ ಪ್ಲಾನ್ ಮಾಡಿದ್ರು. ಮೂರು ತಿಂಗಳ ಹಿಂದೆ ಡಿ.ಕೆ. ಶಿವಕುಮಾರ್ ಜೊತೆ ಮಾತನಾಡಿದ್ರು. ಪದೇ, ಪದೇ ಡಿ.ಕೆ. ಸುರೇಶ್ ಅವರು ಸಪ್ರೈಸ್ ಅಭ್ಯರ್ಥಿ ನಿಲ್ಲುಸ್ತಿವಿ ಅಂತಾರೆ, ಇದೆ ಸಪ್ರೈಸ್! ಅವರ ಜೊತೆ ಮಾತನಾಡಲಿಲ್ಲ ಎಂದರೆ ಈ ಡೈಲಾಗ್ ಏಕೆ ಹೊಡಿತಿದ್ರು? ಡಿ.ಕೆ.ಸುರೇಶ್ ಅವರು ನಿಲ್ಲಬೇಕಿತ್ತು, ನಿಲ್ಲಲಿಲ್ಲ. ಮುಂಚೆನೇ ಫ್ರೀ ಪ್ಲಾನ್ ಮಾಡಿಕೊಂಡಿದ್ರು. ಜೆಡಿಎಸ್, ಬಿಜೆಪಿಯವರು ಟಿಕೆಟ್ ಕೊಟ್ಟಿಲ್ಲ ಎಂದು ಸಿಂಪತಿ ಕ್ರಿಯೆಟ್ ಮಾಡಿಕೊಳ್ಳುವುದಕ್ಕೋಸ್ಕರ ಈ ನಾಟಕವನ್ನ ಆಡಿದ್ದಾರೆ. ಜನ ಬುದ್ದಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿರುವ ಜನ ಈ ಭ್ರಷ್ಟ ಸರ್ಕಾರ, ಲೂಟಿಕೋರರ ಸರ್ಕಾರಕ್ಕೆ ಬುದ್ದಿ ಕಲಿಸುತ್ತಾರೆ ಎನ್ನುವ ವಿಶ್ವಾಸ ಇದೆ. ನಿಖಿಲ್ ಅವರು ಎರಡು ಬಾರಿ ಸೋತಿದ್ದಾರೆ. ಮೂರನೇ ಬಾರಿ ಚಕ್ರವ್ಯೂಹವನ್ನು ಬೇಧಿಸುತ್ತಾರೆ. ಅರ್ಜುನನ ರೀತಿ ಹೋರಾಟ ಮಾಡ್ತಾರೆ ಅನ್ನುವ ವಿಶ್ವಾಸವಿದೆ. ಅಭಿಮನ್ಯು ಪಾತ್ರ ಬಿಟ್ಟು ಅರ್ಜುನನ ಪಾತ್ರ ಕೊಟ್ಟಿದ್ದೀವಿ. ಕುರುಕ್ಷೇತ್ರದಲ್ಲಿ ಅಭಿಮನ್ಯ ಪಾತ್ರ ತೆಗೆದುಹಾಕಿ ಅರ್ಜುನನ ಪಾತ್ರವನ್ನು ಇಟ್ಟಿದ್ದೀವಿ. ಅರ್ಜುನ ಇದನ್ನೆಲ್ಲಾ ಬೇದಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಬಿಜೆಪಿ ಎಲ್ಲಾ ನಾಯಕರು ಪೂರ್ತಿ ಪ್ರಚಾರಕ್ಕೆ ಹೋಗುತ್ತಾರೆ. ಯಡಿಯೂರಪ್ಪ ಅವರು ಮೂರು ದಿನ ಟೈಂ ಕೊಟ್ಟಿದ್ದಾರೆ. ರಾಷ್ಟ್ರ ನಾಯಕರು ಬೈ ಎಲೆಕ್ಷನ್ ಬರಲ್ಲ ಅನ್ನಿಸುತ್ತದೆ. ನಾನು, ಅಶ್ವಥ್ ನಾರಾಯಣ್, ಸದಾನಂದಗೌಡರು ನಾವೆಲ್ಲ ಒಕ್ಕಲಿಗ ನಾಯಕರು, ಲಿಂಗಾಯಿತ, ದಲಿತ, ಹಿಂದುಳಿದ ನಾಯಕರು ಹೋಗ್ತಾ ಇದ್ದೀವಿ. ನಮ್ಮ ಎಲೆಕ್ಷನ್ ಯಾವ ರೀತಿ ಫೇಸ್ ಮಾಡಿದ್ವಿ ಆ ರೀತಿ ಫೇಸ್ ಮಾಡ್ತಿವಿ. ಹಂಡ್ರೆಡ್ ಪರ್ಸೆಂಟ್ ಪ್ರತಿಷ್ಠೆಯಾಗಿರುತ್ತದೆ ಎಂದ ಅವರು, ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ನಮ್ಮ ಪೂರ್ತಿ ಏನ್ ಶಕ್ತಿ ಇದೆ ಅದನ್ನು ಹಾಕಲಾಗಿದ್ದು, ಜಯ ನಮಗೆ ಸಿಗಲಿದೆ ಎಂದು ಹೇಳಿದರು.