ಬಕ್ಸಾರ್ (ಬಿಹಾರ): ಇಲ್ಲಿನ ಕೊರಾನ್ಸರೈ ಪೊಲೀಸ್ ಠಾಣೆಯ ಕೊಠಡಿಯೊಂದರಲ್ಲಿ 70 ವರ್ಷದ ವ್ಯಕ್ತಿಯೊಬ್ಬರು ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ಅಧಿಕಾರಿ ನೀರಜ್ ಕುಮಾರ್ ಸಿಂಗ್, ‘ನಿಗೂಢ ಸನ್ನಿವೇಶದಲ್ಲಿʼಈ ಘಟನೆ ಸಂಭವಿಸಿದ್ದು, ಜನಾಕ್ರೋಶಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಠಾಣಾಧಿಕಾರಿ (ಎಸ್ಎಚ್ಒ) ಜುನೈದ್ ಆಲಂ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ವ್ಯಕ್ತಿಯನ್ನು ಬಕ್ಸರ್ನ ಕೊಪ್ವಾ ಗ್ರಾಮದ ನಿವಾಸಿ ಯಮುನಾ ಸಿಂಗ್ ಎಂದು ಗುರುತಿಸಲಾಗಿದೆ.
ಗ್ರಾಮಸ್ಥರ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ವ್ಯಕ್ತಿಯನ್ನು ಪೊಲೀಸ್ ಠಾಣೆಯ ಕಂಪ್ಯೂಟರ್ ಕೊಠಡಿಯಲ್ಲಿ ಇರಿಸಲಾಗಿತ್ತು. ಆದರೆ ಆತ ಸ್ವಲ್ಪಸಮಯದ ನಂತರ ಕೊಠಡಿಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ಆತನನ್ನು ಕೆಳಗಿಳಿಸಿ ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು, ಆದರೆ ನೇಣು ಬಿಗಿದುಕೊಂಡ ಕಾರಣ ಉಸಿರು ಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ತನ್ನ ತಂದೆ ಸಾವಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪುತ್ರ ಅರುಣ್ ಸಿಂಗ್, ಪೊಲೀಸರ ಚಿತ್ರಹಿಂಸೆಯಿಂದಾಗಿ ನನ್ನ ತಂದೆ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.
ನಂತರ ಕಸ್ಟಡಿ ಸಾವಿನ ವಿಚಾರ ತಿಳಿದ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ವ್ಯಕ್ತಿಗೆ ನ್ಯಾಯ ಕೊಡಿಸುವಂತೆ ದುಮ್ರಾನ್-ವಿಕ್ರಮ್ಗಂಜ್ ರಸ್ತೆಯನ್ನು ಎರಡು ಮೂರು ಗಂಟೆಗಳ ಕಾಲ ತಡೆಹಿಡಿದಿದ್ದರು.