ಚುನಾವಣಾ ಹೊಸ್ತಿಲಲ್ಲಿ ಇರುವ ಗುಜರಾತ್ ನಲ್ಲಿ ರಾಜಕೀಯ ಕಾವು ರಂಗೇರಿದೆ. ಭಾರತ್ ಜೋಡೋ ಯಾತ್ರೆಗೆ 2 ದಿನಗಳ ಬ್ರೇಕ್ ಕೊಟ್ಟಿರುವ ರಾಹುಲ್ ಗಾಂಧಿ (Rahul Gandhi) ರಾಜಕೋಟ್ ನಲ್ಲಿ ಗುಜರಾತ್ ಮೋರ್ಬಿ ಸೇತುವೆ (Morbi Bridge) ದುರಂತವನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ನಲ್ಲಿ ಮೋರ್ಬಿ ಸೇತುವೆ ದುರಂತ ನಡೆದು 150 ಜನರ ದುರ್ಮರಣವಾಗಿದೆ. ಅಂತಹ ದುರ್ಘಟನೆ ನಡೆದು ಇಷ್ಟು ದಿನವಾದರೂ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬುದೂ ಇನ್ನೂ ನಿಗೂಢ. ಇದು ಬಿಜೆಪಿ ಸರ್ಕಾರದ ಆಡಳಿತ ವೈಖರಿ ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಂದುವರಿದು ‘ಇದು ಖಂಡಿತಾ ರಾಜಕೀಯ ವಿಚಾರವಲ್ಲ. ನೊಂದವರಿಗೆ ನ್ಯಾಯ ಕೊಡಬೇಕಾದದು ಸರ್ಕಾರದ ಕರ್ತವ್ಯ. ಆದರೆ ಸೇತುವೆ ದುರಂತಕ್ಕೆ ಕಾರಣ ಆದವರ ಮೇಲೆ ಇಲ್ಲಿಯವರೆಗೂ ವಿಚಾರಣೆಗೆ ಕರೆದಿಲ್ಲ, FIR ಕೂಡಾ ದಾಖಲಾಗಿಲ್ಲ. ಯಾವುದೇ ಮಹತ್ವದ ಕ್ರಮ ಕೂಡಾ ಜರುಗಿಸಿಲ್ಲ. ಹೀಗಿದ್ದ ಮೇಲೆ ಬಿಜೆಪಿ ಪಕ್ಷದ ಮೇಲೆ ಯಾವ ಭರವಸೆ ಉಳಿಸಿಕೊಳ್ಳಬೇಕು’ ಎಂದು ಜನತೆಗೇ ಪ್ರಶ್ನೆ ಮುಂದಿಟ್ಟಿದ್ದಾರೆ.
“ಮೋರ್ಬಿ ಸೇತುವೆ ದುರಂತದ ಪ್ರಮುಖ ಆರೋಪಿಗಳು ಬಿಜೆಪಿ ಪಕ್ಷದ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಹಾಗಾಗಿ ಅವರಿಗೆ ಸರ್ಕಾರದ ಅಡಿಯಲ್ಲೇ ಭದ್ರತೆ ಸಿಗುತ್ತಿದೆ. ಈ ಸಂಬಂಧ ಇಬ್ಬರು ಕಾವಲುಗಾರರನ್ನು ಬಂಧಿಸಿ ತಮ್ಮ ಪರಾಕ್ರಮ ತೋರಿಸಿದ್ದಾರೆ. ಹಳೆಯದಾದ ಸೇತುವೆ ರಿಪೇರಿಗೆ 2 ಕೋಟಿ ಹಣ ಬಿಡುಗಡೆಯಾಗಿದ್ದರೂ ಕಳಪೆ ಕಾಮಗಾರಿ ನಡೆಸಿ 150 ಜನರ ದುರಂತ ಸಾವಿಗೆ ಕಾರಣರಾಗಿದ್ದಾರೆ. 150 ಜನರ ಸಾವಿಗೆ ಬಿಜೆಪಿ ಪಕ್ಷ ಕೂಡಾ ನೇರ ಹೊಣೆ ಹೊರಬೇಕಾಗುತ್ತದೆ.” ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ರಾಹುಲ್ ಗಾಂಧಿಯವರು ಅಮೋಘ 75 ನೇ ದಿನವನ್ನು ಪೂರೈಸಿ ನವೆಂಬರ್ 21 ಮತ್ತು 22 ಕ್ಕೆ ಗುಜರಾತ್ ರಾಜ್ಯದ ಚುನಾವಣೆಯ ಕಡೆಗೆ ಮುಖ ಮಾಡಿದ್ದಾರೆ. ಸಧ್ಯ ಗುಜರಾತ್ ನ ರಾಜಕೋಟ್ ನಲ್ಲಿ ಚುನಾವಣಾ ರ಼್ಯಾಲಿಯಲ್ಲಿ ಭಾಗವಹಿಸಿ ಆಡಳಿತರೂಢ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ನಲ್ಲಿ ಚುನಾವಣೆ ಅಬ್ಬರ ಮುಂದುವರಿದಿದೆ. ಒಂದು ಕಡೆ ಆಡಳಿತಾರೂಢ ಬಿಜೆಪಿ ಅದೇ ನರೇಂದ್ರ ಮೋದಿಯವರನ್ನು ಚುನಾವಣಾ ಪ್ರಚಾರದ ಅಸ್ತ್ರವನ್ನಾಗಿ ಬಳಸಿದರೆ ಇತ್ತ ಕಾಂಗ್ರೆಸ್ ಆಡಳಿತ ಪಕ್ಷದ ಲೋಪಗಳನ್ನು ಎತ್ತಿ ಹಿಡಿದು ಜನರ ಮುಂದೆ ಹೋಗುತ್ತಿದೆ. ತಾನೇನು ಕಡಿಮೆ ಎಂಬಂತೆ ಆಪ್ ಕೂಡಾ ದೆಹಲಿಯ ಅಭಿವೃದ್ಧಿ ಮಾದರಿಯನ್ನು ರಾಜ್ಯದ ಮುಂದಿಟ್ಟು ಎರಡು ಬಲಿಷ್ಠ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಸಿದ್ದವಾಗಿದೆ.
ಇನ್ನು ಭಾರತ್ ಜೋಡೋ ಯಾತ್ರೆ ಗುಜರಾತ್ ರಾಜ್ಯದಲ್ಲಿ ಹಾದು ಹೋಗದ ಬಗ್ಗೆ ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ. ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆ ಇಲ್ಲಿಂದಲೇ ಹಾದು ಹೋಗಿದ್ದರೆ ಇನ್ನಷ್ಟು ಪರಿಣಾಮಕಾರಿ ಸಂದೇಶ ಕೊಡಬಹುದಿತ್ತು ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ.