Friday, June 14, 2024

ಸತ್ಯ | ನ್ಯಾಯ |ಧರ್ಮ

ಯಡಿಯೂರಪ್ಪ ಆಪ್ತ ರೇಣುಕಾಚಾರ್ಯರಿಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ; ಉಳಿದವರಿಗೇಕಿಲ್ಲ?

ಬಿಜೆಪಿ ಪಕ್ಷದ ಹೀನಾಯ ಸೋಲಿನ ಹತಾಶೆಗೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರೆ ಇತ್ತ ಬಿಜೆಪಿ ಶಿಸ್ತು ಸಮಿತಿ ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ರೇಣುಕಾಚಾರ್ಯ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಹೇಳಬೇಕೆಂದರೆ ಕೇವಲ ರೇಣುಕಾಚಾರ್ಯ ಮಾತ್ರವಲ್ಲ, ಬಿಜೆಪಿ ಪಕ್ಷದ ಸಿ.ಟಿ.ರವಿ, ಪ್ರತಾಪ್ ಸಿಂಹ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಈಶ್ವರಪ್ಪ, ಸೋಮಣ್ಣ ಇನ್ನೂ ಹಲವು ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಇವರೆಲ್ಲ ಪಕ್ಷದ ಸೋಲಿಗೆ ಕಾರಣ ಆಗಿರೋದು ಬಿಜೆಪಿ ಪಕ್ಷದವರೇ ಹೊರತು ಬೇರಾರೂ ಅಲ್ಲ ಅಂತಲೇ. ಬಿಜೆಪಿ ಪಕ್ಷ ಈಗ ಒಡೆದ ಮನೆಯಂತಾಗಿದ್ದು ಹಿರಿಯ ನಾಯಕ ಎನಿಸಿಕೊಂಡ ಯಡಿಯೂರಪ್ಪ ಮಾತ್ರ ಇಲ್ಲಿ ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ ಇರುವುದು ಆಶ್ಚರ್ಯ ತಂದಿದೆ.

ಚುನಾವಣೆಗೂ ಮುನ್ನ ಯಡಿಯೂರಪ್ಪರನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಈಗ ಮಾತ್ರ ಅವರನ್ನು ಯಾವ ನಾಯಕರೂ ಗಣನೆಗೆ ತಗೆದುಕೊಳ್ಳದೇ ಇರುವುದು ಭವಿಷ್ಯದಲ್ಲಿ ಯಡಿಯೂರಪ್ಪ ಸ್ಥಾನಮಾನದ ಬಗ್ಗೆ ಅನುಮಾನ ಹುಟ್ಟುವಂತಾಗಿದೆ. ಯಡಿಯೂರಪ್ಪ ಮಾತ್ರವಲ್ಲ ಈಶ್ವರಪ್ಪ ಕೂಡಾ ಅಲ್ಲೊಂದು ಇಲ್ಲೊಂದು ಹೇಳಿಕೆ ನೀಡಿ ತಣ್ಣಗಿರುವುದು ಬಿಜೆಪಿ ಪಕ್ಷದಲ್ಲಿ ಯಾವುದೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುತ್ತಿವೆ.

ಅಷ್ಟಕ್ಕೂ ರೇಣುಕಾಚಾರ್ಯ ನೀಡುತ್ತಿರುವ ಹೇಳಿಕೆ ಬಿಜೆಪಿ ಪಕ್ಷ ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶವಾಗಿದ್ದರೆ ಬಿಜೆಪಿ ಮಾತ್ರ ಇದನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ‘ಸಿದ್ದವಿಲ್ಲ’ ಎನ್ನುವುದಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಆಪ್ತರ ಸಲಹೆಗಳು ಇಲ್ಲಿ ನಗಣ್ಯ ಎನ್ನಿಸಿವೆ. ಅದೇ ಕಾರಣಕ್ಕೆ ಮುರುಗೇಶ್ ನಿರಾಣಿ, ಯತ್ನಾಳ್ ರಂತಹ ನಾಯಕರು ಬೀದಿಯಲ್ಲಿ ನಿಂತು ಕಚ್ಚಾಡುತ್ತಿದ್ದರೂ ಅವರಿಗೆ ನೀಡದ ನೋಟಿಸ್, ಯಡಿಯೂರಪ್ಪ ಕಟ್ಟಾ ಬೆಂಬಲಿಗ ಎನ್ನಿಸಿಕೊಂಡ ರೇಣುಕಾಚಾರ್ಯ ಅವರಿಗೆ ಏಕೆ ಎಂಬುದು ಪ್ರಶ್ನಾರ್ಹ ವಿಚಾರವಾಗಿದೆ.

ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಡಳಿತ ವೈಖರಿ, ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆಯ ಉಸ್ತುವಾರಿ ವಹಿಸಿದ್ದ ಮಾಜಿ ಸಚಿವ ಡಾ. ಕೆ. ಸುಧಾಕರ್, ಕರ್ನಾಟಕ ಚುನಾವಣೆ ಸಹ ಉಸ್ತುವಾರಿಯಾಗಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹೀಗೆ ವಿವಿಧ ನಾಯಕರ ವಿರುದ್ಧ ಟೀಕೆ ಮಾಡಿದ ಆರೋಪದ ಮೇಲೆ ರೇಣುಕಾಚಾರ್ಯ ಶಿಸ್ತು ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಂತೆ ನೋಟಿಸ್ ಸಿಕ್ಕ 7 ದಿನಗಳ ಒಳಗೆ ಶಿಸ್ತು ಸಮಿತಿಗೆ ಹಾಜರಾಗಿ ಉತ್ತರ ನೀಡಬೇಕೆಂದು ಸೂಚಿಸಿದೆ.

ಅಷ್ಟಕ್ಕೂ ರೇಣುಕಾಚಾರ್ಯ ನೀಡಿದ ಹೇಳಿಕೆ ಏನು ಎಂದು ನೋಡುವುದಾದರೆ

  • ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈರನ್ನು ಗುರಿಯಾಗಿಸಿಕೊಂಡು ಅಣ್ಣಾಮಲೈ ಏನು ಹೀರೋನಾ? ಒಂದು ಗ್ರಾಮ ಪಂಚಾಯ್ತಿ ಚುನಾವಣೆ ಗೆಲ್ಲಲಾಗದವರು ಇಲ್ಲಿ ಬಂದು ನಮಗೆ ಚುನಾವಣಾ ಪಾಠ ಹೇಳ್ತಾರೆ ಎಂದು ಕಿಡಿಕಾರಿದ್ದರು.
  • ಚುನಾವಣೆ ಬಳಿಕ ನೈತಿಕ ಹೊಣೆ ಹೊತ್ತು ನಳಿನ್ ಕುಮಾರ್ ಕಟೀಲ್ ಅವರು ರಾಜೀನಾಮೆ ನೀಡಬೇಕಿತ್ತು. ಆದರೆ ಅದಾಗುತ್ತಿಲ್ಲ. ಬದಲಾಗಿ ಕಾರ್ಯಕರ್ತರ ಮೇಲೆ ಗದರಿದರೆ ಪಕ್ಷದಲ್ಲಿ ಆದ ತಪ್ಪು ಸರಿಯಾಗುವುದಿಲ್ಲ ಎಂದು ನಳಿನ್ ಕುಮಾರ್ ಮೇಲೆ ಆರೋಪಿಸಿದ್ದರು.
  • 10 ಕೆಜಿ ನೀಡುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಕೊನೆಗೆ 4 ಕೆಜಿಗೆ ಬಂದ ಬಗ್ಗೆಯೂ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದರು. ಹಾಗೆಯೇ ಚುನಾವಣೆಗೆ ಮುನ್ನ ನೀವು ಕೊಟ್ಟ ಭರವಸೆಗಳು ಏನು? ಎಂತಹವರನ್ನು ಇಟ್ಟುಕೊಂಡು ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಣಾಳಿಕೆಯನ್ನು ಸಿದ್ಧಪಡಿಸಿದಿರಿ? ಎಂದು ಡಾ.ಸುಧಾಕರ್ ಮೇಲೂ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದರು.
  • ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಬೀದಿ ಬೀದಿ ಸುತ್ತಿಸಿ ಚುನಾವಣಾ ಪ್ರಚಾರ ಮಾಡಿಸಿದಿರಿ. ಏಕೆ ನಿಮಗೆ ರಾಜ್ಯ ನಾಯಕರ ಮೇಲೆ ನಂಬಿಕೆ ಇರಲಿಲ್ಲವೇ? ಕೇವಲ ಆಯನೂರಿನ ಸಮಾವೇಶಕ್ಕೆ 25 ಸಾವಿರ ಜನರನ್ನು ಸೇರಿಸಲು ನನಗೆ ಸೂಚನೆ ನೀಡಿದ್ದರು. ಬೇರಾವ ನಾಯಕರಿಗೆ ಅಷ್ಟು ಜನರನ್ನು ಸೇರಿಸಲು ಹೇಳಿದ್ದಾರೆ ತಿಳಿಸಿ ಎಂದು ಬಿಜೆಪಿ ಹೈಕಮಾಂಡ್ ಗೇ ಪ್ರಶ್ನೆ ಎಸೆದಿದ್ದಾರೆ.
  • ಚುನಾವಣೆಯಲ್ಲಿ ಸೋತ ಸಚಿವ ಡಾ. ಕೆ. ಸುಧಾಕರ್ ಮನೆಗೆ ಬಸವರಾಜ ಬೊಮ್ಮಾಯಿ ಹೋಗಿ ಸಮಾಧಾನ ಹೇಳುತ್ತಾರೆ. ಯಾಕೆ ಸುಧಾಕರ್ ಅವರೊಬ್ಬರೇ ಚುನಾವಣೆ ಸೋತಿರುವುದೇ?, ನಾವ್ಯಾರೂ ಸೋತಿಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರ ಮೇಲೂ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ
  • ಇನ್ನು ಎಷ್ಟೋ ಮಂದಿ ಹಾಲಿ ಶಾಸಕರಿಗೆ ಟಿಕೇಟ್ ನೀಡದೇ ಇರುವುದು ಪಕ್ಷದ ಸೋಲಿಗೆ ಕಾರಣ. ಅದೂ ಸಹ ಸೋಮಣ್ಣ, ಈಶ್ವರಪ್ಪರಂತಹ ನಾಯಕರು ವಿಧಾನಸಭೆ ಮೆಟ್ಟಿಲು ಹತ್ತಬೇಕಿತ್ತು. ಅಂತಹವರನ್ನು ಬಿಜೆಪಿ ಪಕ್ಷ ಮೂಲೆಗುಂಪು ಮಾಡಿದೆ ಎಂಬ ರೀತಿಯಲ್ಲಿ ಬಿಜೆಪಿ ಹೈಕಮಾಂಡ್ ನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.

ಅಷ್ಟಕ್ಕೂ ರೇಣುಕಾಚಾರ್ಯ ಹೇಳಿದ ಮಾತುಗಳಲ್ಲಿ ಅಂತಹ ತಪ್ಪೇನಿದೆ ಎಂಬುದು ಅವರ ಆಪ್ತ ವಲಯದವರ ಪ್ರಶ್ನೆ. ಚುನಾವಣೆಯಲ್ಲಿ ಸೋತು ತಿಂಗಳು ಕಳೆದರೂ ಒಂದು ಆತ್ಮಾವಲೋಕನ ಸಭೆ ಕರೆಯದ ಬಿಜೆಪಿ ಈಗ ಯಡಿಯೂರಪ್ಪ ಬೆಂಬಲಿಗ ಎಂಬ ಕಾರಣಕ್ಕೆ ನೋಟಿಸ್ ಜಾರಿ ಮಾಡಿದೆ. ಇದು ಸ್ಪಷ್ಟವಾಗಿ ಯಡಿಯೂರಪ್ಪ ಅವರ ಆಪ್ತ ಬಳಗಕ್ಕೆ ಬಿಜೆಪಿ ಕೊಡುತ್ತಿರುವ ಮತ್ತೊಂದು ಆಘಾತ ಎಂಬುದರಲ್ಲಿ ಅನುಮಾನವಿಲ್ಲ. ಹಾಗೊಂದು ವೇಳೆ ನೋಟಿಸ್ ಜಾರಿ ಮಾಡುವುದೇ ಆದರೆ ಸಿ.ಟಿ.ರವಿಗೆ, ಈಶ್ವರಪ್ಪ, ಪ್ರತಾಪ್ ಸಿಂಹ, ಯತ್ನಾಳ್, ನಿರಾಣಿ ಅವರಿಗೆ ಯಾಕಿಲ್ಲ ಎಂಬ ಅನುಮಾನ ಹುಟ್ಟುವಂತಾಗಿದೆ.

ಹೇಳಬೇಕೆಂದರೆ ಯಡಿಯೂರಪ್ಪ ನಂತರ ರಾಜ್ಯ ಬಿಜೆಪಿಯಲ್ಲಿ ಎಲ್ಲರನ್ನೂ ಹಿಡಿದಿಟ್ಟುಕೊಳ್ಳಬಲ್ಲ ಸಮರ್ಥ ನಾಯಕನ ಕೊರತೆಯಿದೆ. ಒಂದು ಕಡೆ ಜಗದೀಶ್ ಶೆಟ್ಟರ್ ರಂತಹ ಹಿರಿಯರಿಗೂ ಟಿಕೆಟ್ ನೀಡದೇ ಉದ್ದೇಶಪೂರ್ವಕವಾಗಿ ಅವರನ್ನು ದೂರ ತಳ್ಳಿದ್ದು ಕೂಡಾ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಒಂದು ಕಾಲದಲ್ಲಿ ಬಿಜೆಪಿದ ಭದ್ರವಾದ ಓಟ್ ಬ್ಯಾಂಕ್ ಆಗಿದ್ದ ಲಿಂಗಾಯತರನ್ನು ದೂರ ತಳ್ಳಿದ್ದು, ಇತ್ತೀಚಿನ ದಿನಗಳಲ್ಲಿ ಬಿಜೆಪಿ ಲಿಂಗಾಯತರ ವಿರೋಧಿ ಎಂಬ ಆರೋಪ ಎದುರಿಸಿದ್ದರ ಜೊತೆಗೆ ನಿರಂತರವಾಗಿ ಲಿಂಗಾಯತ ನಾಯಕರನ್ನು ನಿರ್ಲಕ್ಷಿಸಿದ್ದೂ ಸಹ ಬಿಜೆಪಿ ಸೋಲಿನ ಪ್ರಮುಖ ಕಾರಣಗಳಲ್ಲಿ ಒಂದು ಎಂಬುದು ಸ್ಪಷ್ಟ. ಈಗ ರೇಣುಕಾಚಾರ್ಯರನ್ನು ಗುರಿಯಾಗಿಸಿ ನೋಟಿಸ್ ನೀಡಿರುವುದೂ ಸಹ ಯಡಿಯೂರಪ್ಪ ಆಪ್ತ ಎಂಬ ಕಾರಣಕ್ಕೆ ಎಂಬುದು ರೇಣುಕಾಚಾರ್ಯ ಬೆಂಬಲಿಗರ ಅಭಿಪ್ರಾಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು