Friday, June 20, 2025

ಸತ್ಯ | ನ್ಯಾಯ |ಧರ್ಮ

ಕೋವಿಡ್ ಸಾವಿನ ಸಂಖ್ಯೆಯಲ್ಲಿ ಸುಳ್ಳು ಲೆಕ್ಕ ಕೊಟ್ಟ ಬಿಜೆಪಿ ಸರ್ಕಾರ : PAC ವರದಿ (ವರದಿಯಲ್ಲಿವೆ ಆಘಾತಕಾರಿ ಅಂಶಗಳು)

WHO ಒಪ್ಪಿಗೆ ನೀಡದಿದ್ದರೂ Ivermectin ಟ್ಯಾಬ್ಲೆಟ್ ಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿ ಮಾಡಲಾಗಿದೆ. ಪಿಎಂ ಕೇರ್ಸ್ ಫಂಡ್ ಮೂಲಕ ನೀಡಲಾದ ವೆಂಟಿಲೇಟರ್ ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂಬುದನ್ನು ಸಮಿತಿ ಕಂಡುಹಿಡಿದಿದೆ.

2020 ಹಾಗೂ 2021 ರ ಅವಧಿಯಲ್ಲಿ ಸಂಭವಿಸಿದ ಭೀಕರ ಕೋವಿಡ್ ಸೋಂಕಿನಲ್ಲಿ ಅಂದಿನ ಬಿಜೆಪಿ ಸರ್ಕಾರ ಮಾಡಿದ ಅಕ್ರಮಗಳನ್ನು PAC ವರದಿ ಬಹಿರಂಗಪಡಿಸಿದೆ. ವಿಶೇಷವಾಗಿ ಆ ಸಂದರ್ಭದಲ್ಲಿ ಆದ ಸಾವಿನ ಸಂಖ್ಯೆಯಲ್ಲಿ ಆಗಿನ ಸರ್ಕಾರ ಕಡಿಮೆ ಲೆಕ್ಕ ನೀಡಿದೆ ಎಂದು ರಾಜ್ಯ ಶಾಸಕಾಂಗದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC) ವರದಿ ತಿಳಿಸಿದೆ. ಜುಲೈ 17, ಸೋಮವಾರ ಕರ್ನಾಟಕ ಅಸೆಂಬ್ಲಿಯಲ್ಲಿ ವರದಿಯನ್ನು ಮಂಡಿಸಿದ ಸಮಿತಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋವಿಡ್ ಸಂದರ್ಭದ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿದೆ.

ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆಗೆ ಬಿಡ್ ಗಳಲ್ಲಿ ಆಯ್ಕೆಯಾದ ಕಂಪನಿಗಳು, ವೈದ್ಯಕೀಯ ಉಪಕರಣಗಳನ್ನು ದುಬಾರಿ ಬೆಲೆಗೆ ಖರೀದಿಸಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಬೇಡಿಕೆ ಇದ್ದ ಔಷಧಿಗಳನ್ನೂ ಪೂರೈಸಿಲ್ಲ. ಅಗತ್ಯವಿಲ್ಲದಿದ್ದಾಗ ಹೆಚ್ಚು ಔಷಧಿಗಳನ್ನು ಖರೀದಿಸಲಾಗಿದೆ ಎಂದು ಸಮಿತಿ ಹೇಳಿದೆ. ಸಮಿತಿಯು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ ಮತ್ತು ಈ ಬಗ್ಗೆ ಸ್ವತಂತ್ರ ತನಿಖೆಗೂ ಕೂಡ ಒತ್ತಾಯಿಸಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಹಾಗೂ ಡಾ.ಕೆ.ಸುಧಾಕರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದ 2020 ರ ಸಂದರ್ಭದಲ್ಲಿ ಮೊದಲು ಕಾಂಗ್ರೆಸ್ ಸಚಿವ ಎಚ್‌ಕೆ ಪಾಟೀಲ್ ನೇತೃತ್ವದಲ್ಲಿ ಮತ್ತು ನಂತರ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ, ಕೋವಿಡ್ -19 ಗೆ ಸಂಬಂಧಿಸಿದ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಯಿತು.

ಕೋವಿಡ್ ಕಾರಣದಿಂದಾದ ಸಾವುಗಳು ಸಂಖ್ಯೆ ತೀರಾ ಕಡಿಮೆ ವರದಿ ಮಾಡಿದ್ದಕ್ಕಾಗಿ ಆರೋಗ್ಯ ಇಲಾಖೆಯನ್ನು ಟೀಕಿಸುವ ಸಂದರ್ಭದಲ್ಲಿ, ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸಾವುಗಳು ಹೆಚ್ಚು ಎಂದು ಸಮಿತಿಯು ಕಂಡುಹಿಡಿದಿದೆ. “ದೇಶದ ಬೇರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರವು ಅತಿ ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿದೆ. ಅಷ್ಟೆ ಅಲ್ಲದೆ ಸೋಂಕಿತ ರೋಗಿಗಳನ್ನು ಪತ್ತೆಹಚ್ಚುವಲ್ಲಿ ವಿಳಂಬ, ಪರೀಕ್ಷಾ ಸಾಮರ್ಥ್ಯದಲ್ಲಿ ವಿಫಲ, ಪರೀಕ್ಷಾ ವರದಿಗಳನ್ನು ನೀಡುವಲ್ಲಿ ವಿಳಂಬ, ಔಷಧದ ಕೊರತೆ ಮತ್ತು ಆಮ್ಲಜನಕದ ಕೊರತೆಯಂತಹ ರಾಜ್ಯದ ಚಿಕಿತ್ಸಾ ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆಯೂ ಸಮಿತಿ ಬಹಿರಂಗಪಡಿಸಿದೆ.

ಸಾವಿನ ಸಂಖ್ಯೆಯಲ್ಲಿ ಸುಳ್ಳು ಲೆಕ್ಕ
ಲೆಕ್ಕಪತ್ರ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯದಿಂದ ಪಡೆದ ಮಾಹಿತಿಯ ಪ್ರಕಾರ ಜನವರಿಯಿಂದ ಜುಲೈ 2020 ರವರೆಗೆ 2,69,029 ಮತ್ತು ಜನವರಿಯಿಂದ ಜುಲೈ 2021 ರವರೆಗೆ 4,26,943 ಸಾವುಗಳಲ್ಲಿ ಹಿಂದಿನ ಅವಧಿಗಿಂತ 1,57,914 ರಷ್ಟು ಹೆಚ್ಚಳವಾಗಿದೆ ಎಂದು ಸಮಿತಿಯ ತನಿಖಾ ವರದಿ ತೋರಿಸಿದೆ.

“ಆತಂಕಕಾರಿ ಸಂಗತಿಯೆಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಾವಿನ ಸಂಖ್ಯೆ ಕೇವಲ 3206 ಎಂದು ತಪ್ಪು ಮಾಹಿತಿ ನೀಡಲಾಗಿದೆ. ಸುಮಾರು 1,20,708% ಇದ್ದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಅಧಿಕಾರಿಗಳು ಘೋರ ಅನ್ಯಾಯ ಮತ್ತು ಅಪರಾಧ ಮಾಡಿದ್ದಾರೆ ಎಂದು ಸಮಿತಿ ಅಭಿಪ್ರಾಯ ಪಟ್ಟಿ ಮಾಡಿದೆ. ಈ ಮೃತರ ಕುಟುಂಬಗಳನ್ನು ಗುರುತಿಸಿ ಅವರಿಗೆ ಪರಿಹಾರ ನೀಡಲು ಪ್ರಯತ್ನಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಐವರ್ಮೆಕ್ಟಿನ್ ಔಷಧಿ ಖರೀದಿ ಗೊಂದಲ ಮತ್ತು ಭ್ರಷ್ಟಾಚಾರ
ಕೋವಿಡ್-19 ಚಿಕಿತ್ಸೆಗಾಗಿ ಶಿಫಾರಸು ಮಾಡಲಾದ ಐವರ್‌ಮೆಕ್ಟಿನ್ ಟ್ಯಾಬ್ಲೆಟ್ ಅನ್ನು ಇಲಾಖೆಯು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದೆ ಎಂದು ಸಮಿತಿಯು ಕಂಡುಹಿಡಿದಿದೆ. 2021 ರ ಸಂದರ್ಭದಲ್ಲಿ WHO, ‘ಕೋವಿಡ್ ಸೋಂಕಿತರಿಗೆ ಐವರ್ಮೆಕ್ಟಿನ್ ಔಷಧಿ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಐವರ್ಮೆಕ್ಟಿನ್ ಔಷಧಿ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ ಇಲಾಖೆ WHO ಎಚ್ಚರಿಕೆಯನ್ನು ಬದಿಗೊತ್ತಿ ಅದೇ ಔಷಧಿಗಳನ್ನು ಖರೀದಿ ಮಾಡಿದೆ‌. ಏಪ್ರಿಲ್ 2021 ರಲ್ಲಿ, WHO ಎಚ್ಚರಿಕೆ ನೀಡಿದ ನಂತರವೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 1.10 ಕೋಟಿ ಮಾತ್ರೆಗಳನ್ನು ಖರೀದಿಸಿದೆ. ಖರೀದಿಗೆ ಖರ್ಚು ಮಾಡಿದ ಮೊತ್ತ ಮತ್ತು ಅದನ್ನು ರಾಜ್ಯದಲ್ಲಿ ಎಲ್ಲಿ ವಿತರಿಸಲಾಗಿದೆ ಎಂಬ ಬಗ್ಗೆ PAC ಮಾಹಿತಿ ನೀಡಿಲ್ಲ.

ಈ ಹಿನ್ನೆಲೆಯಲ್ಲಿ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಮತ್ತು ಅನುಮಾನಾಸ್ಪದ ರೋಗಿಗಳಿಗೆ ಚಿಕಿತ್ಸಾ ವಿಧಾನವಾಗಿ ಶಿಫಾರಸು ಮಾಡುವುದನ್ನು ಮುಂದುವರಿಸಿದ ಅಧಿಕಾರಿಗಳನ್ನು ಪರಿಶೀಲಿಸಿ, ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸುವಂತೆ PAC ಶಿಫಾರಸು ಮಾಡಿದೆ. 

ವೆಂಟಿಲೇಟರ್ ಹಗರಣ
ಮೊದಲಿನಿಂದಲೂ ಗೊಂದಲದ ಗೂಡಾಗಿದ್ದ, ಇಂದಿಗೂ ಸಹ ಅದರ ಮಾಹಿತಿಯ ಬಗ್ಗೆ ಗೌಪ್ಯತೆ ತೋರ್ಪಡಿಸುವ ಪಿಎಂ ಕೇರ್ಸ್ ಫಂಡ್ ಬಗ್ಗೆಯೂ ಸಮಿತಿಯ ವರದಿ ಸಿದ್ದಪಡಿಸಿದೆ. ಅದರಂತೆ ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಕರ್ನಾಟಕಕ್ಕೆ ನೀಡಲಾದ ಸುಮಾರು 165 ವೆಂಟಿಲೇಟರ್‌ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಇದು ಸ್ಪಷ್ಟವಾಗಿ ನ್ಯಾಯಸಮ್ಮತವಲ್ಲ ಎಂದು PAC ಹೇಳಿದೆ. ಇಷ್ಟಾದರೂ ಬಡ ಮತ್ತು ಮಧ್ಯಮ ವರ್ಗದ, ಆರ್ಥಿಕವಾಗಿ ಸಬಲರಲ್ಲದ ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲೂ ಖಾಸಗಿ ಆಸ್ಪತ್ರೆಗಳು ತಮ್ಮ ವೆಚ್ಚದಲ್ಲಿ ಯಾವುದೇ ವಿನಾಯಿತಿ ನೀಡದೇ ಬಡವರಿಂದ ಸುಲಿಗೆ ಮಾಡಿವೆ. ಇಲಾಖೆಯ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗಿ ಸಾರ್ವಜನಿಕ ಹಿತಾಸಕ್ತಿ ಕಡೆಗಣಿಸಿದ್ದಾರೆ ಎಂದು ಸಮಿತಿ ಹೇಳಿದೆ.

‘ಅನೇಕ ಖಾಸಗಿ ಆಸ್ಪತ್ರೆಗಳು ಸೋಂಕಿತರ ಚಿಕಿತ್ಸೆಗಾಗಿ ಇಲಾಖೆ ನಿಗದಿಪಡಿಸಿದ ದರ ಪಟ್ಟಿಯನ್ನು ಅನುಸರಿಸದೆ ಸಾರ್ವಜನಿಕರಿಂದ ಹೆಚ್ಚಿನ ದರದಲ್ಲಿ ಹಣವನ್ನು ಸುಲಿಗೆ ಮಾಡಿವೆ ಮತ್ತು ಕೆಲವು ಸಂದರ್ಭಗಳಲ್ಲಿ ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಿಂದಿರುಗಿಸಲು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿವೆ,’ ಎಂದು ಸಮಿತಿ ಹೇಳಿದೆ. ಕೋವಿಡ್ ಮೊದಲ ಅಲೆಯಲ್ಲಿ ಎಚ್ಚೆತ್ತುಕೊಳ್ಳಬೇಕಾದ ಇಲಾಖೆ ಎರಡನೇ ಅಲೆಯಲ್ಲೂ ಎಚ್ಚೆತ್ತುಕೊಳ್ಳದ ಬಗ್ಗೆ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ. ಎರಡನೇ ಅಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಾಗ ವೆಂಟಿಲೇಟರ್‌ಗಳ ಅಲಭ್ಯತೆ, ಆಕ್ಸಿಜನ್ ಅಲಭ್ಯತೆ ಮತ್ತು ಪರಿಹಾರ ಸಾಧನಗಳ ಲಭ್ಯತೆಯಿಲ್ಲ ಎಂದು ಅದು ಸೂಚಿಸಿದೆ.

ಇಂತಹ ಗಂಭೀರ ಪರಿಸ್ಥಿತಿಯ ಹೊರತಾಗಿಯೂ, ಅಧಿಕಾರಿಗಳು ಸಮಿತಿಗೆ ನೀಡಿದ ಉತ್ತರದಲ್ಲಿ “ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆಯಿಲ್ಲ” ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಸಮಿತಿಯು ತನ್ನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲೂ ಭ್ರಷ್ಟಾಚಾರ
ತುರ್ತು ಸಂದರ್ಭದ ಹೆಲ್ತ್ ಕಿಟ್ ಗಳು, ರಕ್ತ ಪರೀಕ್ಷೆಯ ಕಿಟ್ ಗಳು, ಯುಪಿಎಸ್‌ನಂತಹ ಉಪಕರಣಗಳ ಖರೀದಿಯಲ್ಲಿ ಇತರ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶಕ್ಕೆ ಹೋಲಿಸಿದರೆ ಇಲಾಖೆಯು ಹೆಚ್ಚಿನ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿದೆ ಎಂದು ಸಮಿತಿಯು ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಕೆಲವು ಸಲಕರಣೆಗಳಿಗೆ ಅವಶ್ಯಕತೆ ಇಲ್ಲದಿದ್ದರೂ ಬಿಡ್‌ಗಳನ್ನು ಹಾಕಲಾಗಿದೆ. ಉಪಕರಣಗಳ ಆರ್ಡರ್‌ಗಳ ಒಂದು ಭಾಗವನ್ನು ಮಾತ್ರ ಪೂರೈಸಿದ ಸಂಸ್ಥೆಗಳನ್ನು ಈವರೆಗೂ ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲ. ಪರೀಕ್ಷೆಯ ಸಂದರ್ಭದಲ್ಲಿ ದೋಷಯುಕ್ತ ಉತ್ಪನ್ನಗಳು ಕಂಡುಬಂದ ಕಂಪನಿಗಳೊಂದಿಗೇ ಮತ್ತೆ ವ್ಯವಹಾರ ನಡೆಸಲಾಗಿದೆ. ಒಟ್ಟಾರೆ ಯಾವುದೇ ವೈದ್ಯಕೀಯ ಉಪಕರಣಗಳ ಸಂಗ್ರಹಣೆಯಲ್ಲಿ ಇಲಾಖೆ ಪಾರದರ್ಶಕತೆ ತೋರಿಲ್ಲ ಎಂದು ಸಮಿತಿ ಹೇಳಿದೆ.

ಬ್ಲಾಕ್ ಫಂಗಸ್ ಚಿಕಿತ್ಸೆಯಲ್ಲೂ ಗೊಂದಲ
ಕೋವಿಡ್ ಸಾಂಕ್ರಾಮಿಕದ ನಂತರ ಕಂಡುಬಂದ ಬ್ಲಾಕ್ ಫಂಗಸ್ ಪರೀಕ್ಷೆಯಲ್ಲೂ ಸಹ ಇಲಾಖೆಯ ಅವ್ಯವಹಾರವನ್ನು PAC ವರದಿ ನೀಡಿದೆ. ಬ್ಲಾಕ್ ಫಂಗಸ್ ಚಿಕಿತ್ಸೆಯಲ್ಲಿ ಬಳಸಲಾಗುವ ಆಂಫೊಟೆರಿಸಿನ್ ಔಷಧಿಯ 25,000 ಬಾಟಲುಗಳನ್ನು ಅತಿ ಕಡಿಮೆ 2 ನೇ ಬಿಡ್ ದಾರ ಮೈಲಾನ್ ಫಾರ್ಮಾಸ್ಯುಟಿಕಲ್ಸ್‌ನೊಂದಿಗೆ ಹೆಚ್ಚಿನ ಬೆಲೆಗೆ ಖರೀದಿಸಲು ಇಲಾಖೆ ಆದೇಶ ನೀಡಿದೆ ಎಂದು PAC ಕಂಡುಹಿಡಿದಿದೆ.

“ಭಾರತ್ ಸೀರಮ್ಸ್ ಮತ್ತು ಲಸಿಕೆಗಳಿಂದ ಆರ್ಡರ್ ಮಾಡಿದ 50,000 ಬಾಟಲುಗಳಲ್ಲಿ, ಅವರು ಹೆಚ್ಚು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹೇಳುವ ಮೂಲಕ ಕೇವಲ 1,092 ಬಾಟಲುಗಳನ್ನು ಪೂರೈಸಿದ್ದಾರೆ. ಅವರು ತಮ್ಮ ಆದೇಶಗಳನ್ನು ಪೂರೈಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಯಾವುದೇ ಪ್ರಯತ್ನಗಳನ್ನು ಮಾಡಲಾಗಿಲ್ಲ,” PAC ಗಮನಿಸಿದೆ.

ಔಷಧಿಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವಲ್ಲಿ ಇಲಾಖೆ ವಿಫಲವಾಗಿದೆ. ಕೋವಿಡ್-19 ಸಮಯದಲ್ಲಿ ಮಾಡಿದ ಅನೇಕ ಖರೀದಿಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನು ಇಲಾಖೆಯಿಂದ ಪಡೆಯುವಲ್ಲಿ ವಿಫಲವಾಗಿದೆ ಎಂದು PAC ಸಮಿತಿಯು ಬಹಿರಂಗಪಡಿಸಿದೆ. ಹಾಗೂ ಒಟ್ಟಾರೆ ಈ ವರದಿಗೆ ಅನುಗುಣವಾಗಿ ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಶಿಫಾರಸು ಮಾಡಲಾಗಿದೆ.
(ಆಧಾರ : TNM ಮತ್ತು PAC ವರದಿ)

Related Articles

ಇತ್ತೀಚಿನ ಸುದ್ದಿಗಳು

You cannot copy content of this page