ಇತ್ತೀಚಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅವಮಾನಕರ ಸೋಲನ್ನು ಅನುಭವಿಸಿದ ಬಿಜೆಪಿ ಈಗ ತನ್ನ ಒಳ ಜಗಳದಿಂದ ಬಳಲತೊಡಗಿದೆ
ಕರ್ನಾಟಕ ಬಿಜೆಪಿಯ ಒಳಗೆ ಎಲ್ಲವೂ ಸರಿಯಿಲ್ಲವೆನ್ನುವಂತೆ ಕಾಣುತ್ತಿದೆ. ಅತ್ತ ನಿನ್ನೆ (ಜೂನ್ 28) ಕಾಂಗ್ರೆಸ್ ತನ್ನ ಎರಡನೇ ಗ್ಯಾರಂಟಿಯ ಆರಂಭದ ಸಂಭ್ರಮದಲ್ಲಿದ್ದರೆ ಇತ್ತ ಬಿಜೆಪಿ ತನ್ನ ಪಕ್ಷದ ಶಾಸಕ ಅರವಿಂದ ಬೆಲ್ಲದ ಅವರ ಆಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಮುಜುಗರ ಎದುರಿಸುತ್ತಿತ್ತು. ಈ ಆಡಿಯೋದಲ್ಲಿ ಪಕ್ಷವನ್ನು ಸೋಲಿಸಿದ್ದು ಜನರಲ್ಲ, ನಮ್ಮ ಪಕ್ಷದ ನಾಯಕರೇ ಸೋಲಿಗೆ ಕಾರಣ ಎಂದಿದ್ದಾರೆ.
“ನಮ್ಮನ್ನು ಮನೆಗೆ ಕಳುಹಿಸಿದವರು ಜನರಲ್ಲ. ನಾವು ನಮ್ಮ ಪಕ್ಷದ ನಾಯಕರಿಂದಲೇ ಸೋಲಿಸಲ್ಪಟ್ಟಿದ್ದೇವೆ. ಪಕ್ಷದ ಕಾರ್ಯಕರ್ತರು ಸರ್ಕಾರದ ಕೆಲಸದಿಂದ ಬೇಸತ್ತಿದ್ದರು. ಮುಸ್ಲಿಮರು ವೋಟ್ ಮಾಡದ ಕಾರಣ ಬಿಜೆಪಿ ಸೋತಿದೆ ಎಂದು ಕೆಲಸವರು ಹೇಳುತ್ತಾರೆ, ಆದರೆ ಮುಸ್ಲಿಮರು ಬಿಜೆಗೆ ಯಾವಾಗ ವೋಟ್ ಮಾಡಿದ್ದಾರೆ? ಸೋಲಿನ ಬಗ್ಗೆ ಪ್ರಾಮಾಣಿಕ ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಬೆಲ್ಲದ್ ಆಡಿಯೊದಲ್ಲಿ ಹೇಳಿದ್ದಾರೆ.
ಇದೇ ಕ್ಲಿಪ್ಪಿನಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಸಂವಿಧಾನಕ್ಕೆ ವಿರುದ್ಧವಾಗಿ ಮೀಸಲಾತಿ ಪಡೆದುಕೊಂಡಿದ್ದರು ಅದನ್ನು ಬಿಜೆಪಿ ಹೇಗೆ ಸರಿಪಡಿಸಿತು ಎನ್ನುವುದನ್ನು ಕೂಡಾ ಹೇಳಿದ್ದಾರೆ.
ಮುಂದುವರೆದು ಅವರು “ಎಸ್ಟಿ ಸಮುದಾಯಗಳಿಗೆ ಮೀಸಲಾಗಿರುವ 16 ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಈ ಸೋಲಿಗೆ ಕಾರಣ ಆ ಕ್ಷೇತ್ರಗಳಲ್ಲಿನ ಇತರ ಸಮುದಾಯ ಜನರನ್ನು ನಿರ್ಲಕ್ಷ್ಯ ಮಾಡಿದ್ದು” ಎಂದಿದ್ದಾರೆ.
ಮೂಲಗಳ ಪ್ರಕಾರ ಈ ಮಾತುಗಳನ್ನು ಕಾರ್ಯಕರ್ತರ ಸಭೆಯಲ್ಲಿ ಆಡಿದ್ದಾರೆ.
ಈ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಪಕ್ಷದ ಸೋಲಿಗೆ ಕಾರಣರಾದ ನಾಯಕರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಆಗ್ರಹಿಸಿ ಘರ್ಷಣೆಗೆ ಇಳಿದಿದ್ದರು.
ಇನ್ನೊಂದೆಡೆ ಕೇಂದ್ರ ಮಂತ್ರಿ ಪ್ರಲ್ಹಾದ ಜೋಷಿಯವರು ಪ್ರತಾಪ ಸಿಂಹ ಅವರಿಗೆ ಸಾರ್ವಜನಿಕವಾಗಿ ವಿವಾದಾತ್ಮಕ ವಿಷಯಗಳನ್ನು ಮಾತನಾಡದಂತೆ ಸೂಚನೆ ನೀಡಿದ್ದಾರೆ. ಏನಾದರೂ ವಿಷಯವಿದ್ದಲ್ಲಿ ಪಕ್ಷದ ಅಧ್ಯಕ್ಷರನ್ನು ಸಂಪರ್ಕಿಸುವಂತೆ ಅವರಿಗೆ ತಿಳಿಸಿದ್ದಾರೆ.
ಇದಲ್ಲದೆ ಈಶ್ವರಪ್ಪ ಕಾಂಗ್ರೆಸ್ ಪಕ್ಷದಿಂದ ಬಂದ ನಾಯಕರ ಕುರಿತು ಹಗುರವಾಗಿ ಮಾತನಾಡಿದ್ದು, ಎಮ್ಟಿಬಿ ಸುಧಾಕರ್ ವಿರುದ್ಧ ಮಾತನಾಡಿದ್ದು ಇವೆಲ್ಲವೂ ಪಕ್ಷದ ಸೋಲಿನ ನಂತರದ ಅಸೂಯೆ ಅದನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆಯೆನ್ನುವುದನ್ನು ಸೂಚಿಸುತ್ತಿದೆಯೆನ್ನುವುದು ಜನರ ಅಭಿಪ್ರಾಯ.