ಬಿಜೆಪಿ ಪಕ್ಷ ದೆಹಲಿಯ AAP ಸರ್ಕಾರವನ್ನು ಕೆಡವಲು ಆಪರೇಷನ್ ಕಮಲದಂತಹ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ವಿರುದ್ಧ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೇಲೆ ಭ್ರಷ್ಟಾಚಾರದ ಆರೋಪದಿಂದ ಸಿಬಿಐ, ಇಡಿಯಂತಹ ಸರ್ಕಾರಿ ಸ್ವಾಯತ್ತ ಸಂಸ್ಥೆಗಳನ್ನು ರಾಜಕೀಯದಾಟಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದೆ. ನಾವು ಯಾವುದೇ ತನಿಖೆಗೂ ಸಿದ್ಧರಿದ್ದೇವೆ. ಕಳೆದ 14 ಗಂಟೆಗಳ ಕಾಲ ನಿರಂತರ ದಾಳಿ ನಡೆದರೂ ಒಂದು ಪೈಸೆಯೂ ಪತ್ತೆಯಾಗಿಲ್ಲ, ಯಾವ ಆಭರಣ, ನಗದು, ಅಕ್ರಮ ಆಸ್ತಿಪತ್ರಗಳು ಕಂಡುಬಂದಿಲ್ಲ. ನಮ್ಮ ಪಕ್ಷದ ನಾಯಕರನ್ನು ಕಟ್ಟಿ ಹಾಕಲು, ಒತ್ತಡಕ್ಕೆ ಸಿಕ್ಕಿಸಲು ನಡೆಸಿದ ಈ ದಾಳಿ ಸ್ಪಷ್ಟವಾಗಿ ರಾಜಕೀಯ ಪ್ರೇರಿತ ಎಂದು ಕೇಜ್ರಿವಾಲ್ ದೂರಿದ್ದಾರೆ.
ಇದರ ಜೊತೆಗೆ ಬಿಜೆಪಿ ಮೇಲೆ ಆಪರೇಷನ್ ಕಮಲದ ಗಂಭೀರ ಆರೋಪ ಮಾಡಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೋವಾ, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಮಧ್ಯ ಪ್ರದೇಶ, ಬಿಹಾರ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ಮೇಘಾಲಯ ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರ ಉರುಳಿಸಿದ ಖ್ಯಾತಿ ಬಿಜೆಪಿಗೆ ಇದೆ. ಜನ ಬಹುಮತ ನೀಡಿ ಸರ್ಕಾರ ರಚಿಸಿದರೆ, ಬಿಜೆಪಿ ಅದನ್ನು ಉರುಳಿಸಿದ ಸರಣಿ ಹಂತಕನ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಪಕ್ಷವನ್ನು ಗಂಭೀರವಾಗಿ ಆರೋಪಿಸಿದೆ.
ಕಳೆದ ಕೆಲವು ದಿನಗಳಿಂದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡಾ ಬಿಜೆಪಿ ಪಕ್ಷ ತನ್ನನ್ನು ಪಕ್ಷಕ್ಕೆ ಆಹ್ವಾನಿಸಿದೆ. ಬಿಜೆಪಿಗೆ ಸೇರಿದ್ದೇ ಆದರೆ ನಿಮ್ಮ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಎಂದು ಸ್ಪೋಟಕ ಮಾಹಿತಿ ಹೊರಹಾಕಿದ್ದರು.