Home ರಾಜ್ಯ ದ್ವೇಷ ಭಾಷಣ ತಡೆ ವಿಧೇಯಕ: ರಾಜ್ಯಪಾಲರ ಅಂಕಿತಕ್ಕೆ ಬಿಜೆಪಿ ವಿರೋಧ

ದ್ವೇಷ ಭಾಷಣ ತಡೆ ವಿಧೇಯಕ: ರಾಜ್ಯಪಾಲರ ಅಂಕಿತಕ್ಕೆ ಬಿಜೆಪಿ ವಿರೋಧ

0

ಕರ್ನಾಟಕ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ “ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆಗಟ್ಟುವಿಕೆ) ವಿಧೇಯಕ-2025” ಕ್ಕೆ ಅನುಮೋದನೆ ನೀಡಬಾರದು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ. ಈ ವಿಧೇಯಕವು ಅಸ್ಪಷ್ಟವಾಗಿದೆ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಾಮಾಜಿಕ ಸಾಮರಸ್ಯ ಕಾಪಾಡಲು ಈ ಕಾನೂನು ಅಗತ್ಯ ಎಂದು ವಾದಿಸುತ್ತಿದ್ದರೆ, ಬಿಜೆಪಿ ಇದನ್ನು ಭಿನ್ನಾಭಿಪ್ರಾಯ ಹತ್ತಿಕ್ಕುವ ಅಸ್ತ್ರ ಎಂದು ಕರೆದಿದೆ. ವಿಧೇಯಕದಲ್ಲಿ “ದ್ವೇಷ ಭಾಷಣ”ದ ವ್ಯಾಖ್ಯಾನವು ಸರಿಯಾಗಿಲ್ಲದ ಕಾರಣ, ಇದು ಪೊಲೀಸರಿಗೆ ಅತಿಯಾದ ಅಧಿಕಾರವನ್ನು ನೀಡುತ್ತದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂಬುದು ಪ್ರತಿಪಕ್ಷದ ಆತಂಕವಾಗಿದೆ.

ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಈಗಾಗಲೇ ದ್ವೇಷ ಭಾಷಣ ತಡೆಯಲು ಅವಕಾಶಗಳಿರುವಾಗ, ಪ್ರತ್ಯೇಕ ರಾಜ್ಯ ಕಾನೂನಿನ ಅಗತ್ಯವಿಲ್ಲ ಎಂದು ನಿಯೋಗವು ರಾಜ್ಯಪಾಲರಿಗೆ ತಿಳಿಸಿದೆ. ಅಲ್ಲದೆ, ಈ ವಿಧೇಯಕವು ಸಂವಿಧಾನದ ವಿಧಿ 14, 19 ಮತ್ತು 21 ರ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ವಾದಿಸಿದೆ.

ಬೆಳಗಾವಿ ಅಧಿವೇಶನದಲ್ಲಿ ಯಾವುದೇ ಸುದೀರ್ಘ ಚರ್ಚೆಯಿಲ್ಲದೆ ಈ ವಿಧೇಯಕವನ್ನು ಅಂಗೀಕರಿಸಲಾಗಿದೆ ಎಂದು ಆರ್. ಅಶೋಕ ಕಿಡಿಕಾರಿದ್ದಾರೆ. ಈ ಕಾನೂನು ಜಾರಿಯಾದರೆ ಕರ್ನಾಟಕವು ‘ಪೊಲೀಸ್ ರಾಜ್ಯ’ವಾಗಿ ಬದಲಾಗಲಿದ್ದು, ಮಾಧ್ಯಮ ಮತ್ತು ಸಾಮಾನ್ಯ ಜನರ ಧ್ವನಿಯನ್ನು ಹತ್ತಿಕ್ಕಲಾಗುವುದು. ಇದು 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

ರಾಜ್ಯಪಾಲರು ಈ ವಿಧೇಯಕಕ್ಕೆ ಸಹಿ ಹಾಕಬಾರದು ಅಥವಾ ಸಂವಿಧಾನದ ವಿಧಿ 200 ರ ಅಡಿಯಲ್ಲಿ ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

You cannot copy content of this page

Exit mobile version