ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ವು ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ 50 ಸಾವಯವ ಕೃಷಿ ಕೇಂದ್ರಗಳ ಸ್ಥಾಪನೆ ಹಾಗೂ 5000 ಸಾವಯವ ಕೃಷಿಕರಿಗೆ ತರಬೇತಿ ನೀಡುವುದಾಗಿ ಸಂಘವು ಹೇಳಿತ್ತು. ಆ 50 ಕೇಂದ್ರಗಳು ಎಲ್ಲಿವೆ ಅಂತ ಗೊತ್ತಿಲ್ಲ, ಯಾರಿಗೆ ತರಬೇತಿ ಕೊಟ್ಟರೆಂಬುದೂ ತಿಳಿದಿಲ್ಲ. ಕೋಟಿ ವೃಕ್ಷ ಯೋಜನೆಯಡಿ ಒಂದೇ ಒಂದು ಗಿಡ ನೆಡಲಿಲ್ಲ. 100 ದೇಸೀ ಹಸುಗಳ ಸಂವರ್ಧನಾ ಕೇಂದ್ರಗಳನ್ನು ಸ್ಥಾಪಿಸುವ ಇವರ ಗುರಿ ಗುರಿಯಾಗಿಯೇ ಉಳಿಯಿತು. ಆದರೆ, ಅನುದಾನ ಮಾತ್ರ ಖರ್ಚಾಗಿದೆ! – ವಿಕ್ರಮ್ ತೇಜಸ್, ಪತ್ರಕರ್ತರು.
ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಸಮಗ್ರ ಅಭಿವೃದ್ಧಿ ಬಗ್ಗೆ ಆಲೋಚನೆ ಮಾಡದೇ, ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಬೆಳೆಸಲೆಂದೇ ಹಲವು ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ ಹುಟ್ಟು ಹಾಕಿದ್ದು, ಮತ್ತು ಕೋವಿಡ್-19 ಸಂದರ್ಭದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಯೋಗ ಶಿಕ್ಷಕರನ್ನಾಗಿ ನೇಮಿಸಿದ್ದೇ ಇದಕ್ಕೆ ಸಾಕ್ಷಿ.
ಕಲ್ಯಾಣ ಕರ್ನಾಟಕ ವಿಭಾಗದ 6 ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ ಹಾಗೂ ಅವಿಭಜಿತ ಬಳ್ಳಾರಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ವನ್ನು ರಚಿಸಿದರು. ಈ ಸಂಘಕ್ಕೆ ಮಾಜಿ ಸಂಸದರು ಹಾಗೂ ಮಾಜಿ ರಾಜ್ಯಸಭೆ ಸದಸ್ಯರು ಹಾಗೂ ಆರ್.ಎಸ್.ಎಸ್.ನ ಕಟ್ಟಾಳು ಬಸವರಾಜ ಪಾಟೀಲ್ ಸೇಡಂರವರನ್ನು ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಲಾಗಿತ್ತು. ಅವರಿಗೆ ಸಚಿವ ದರ್ಜೆ ಸ್ಥಾನಮಾನ ಒದಗಿಸಿ ಅಂದು ಆರ್ಥಿಕ ವರ್ಷದಲ್ಲಿ ರೂ. 500.00 ಕೋಟಿ ಅನುದಾನ ಒದಗಿಸುವುದಾಗಿ ಬಜೆಟ್ ನಲ್ಲಿ ಘೋಷಿಸಿರುತ್ತಾರೆ.
ಓರ್ವ ಅಧ್ಯಕ್ಷರು ಮತ್ತು 15 ಜನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಘದ ವಿವಿಧ ಉದ್ದೇಶಗಳನ್ನು ಜಾರಿಗೆ ತರಲು ಮಾರ್ಗದರ್ಶನ ನೀಡಲು ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಐದು ಮಂದಿ ತಜ್ಞರನ್ನು ಆಡಳಿತಾತ್ಮಕ ಸಲಹೆಗಾರರನ್ನಾಗಿ ನೇಮಿಸುತ್ತಾರೆ. ಮೇಲ್ನೋಟಕ್ಕೆ ಈ ಸಂಘದ ಗುರಿ ಮತ್ತು ಉದ್ದೇಶ ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಸಾಹಿತ್ಯ, ನೈತಿಕತೆಯನ್ನು ಕಲಿಸುವುದು, ಸ್ವಯಂ ಉದ್ಯೋಗ, ಆರೋಗ್ಯ, ಯುವ ಮತ್ತು ಮಹಿಳಾ ಸಬಲೀಕರಣ ಹಾಗೂ ಗ್ರಾಮ ಸಬಲೀಕರಣ ಮಾಡುವುದು ಅಂತ ಇದ್ದರೂ ಒಳ ಉದ್ದೇಶ ಮಾತ್ರ ಆರ್.ಎಸ್.ಎಸ್. ಗಟ್ಟಿಗೊಳಿಸುವುದು ಮತ್ತು ಅದರ ಅಂಗ ಸಂಸ್ಥೆಗಳಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ನೆರವು ನೀಡುವುದಾಗಿತ್ತು.
ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ 50 ಸಾವಯವ ಕೃಷಿ ಕೇಂದ್ರಗಳ ಸ್ಥಾಪನೆ ಹಾಗೂ 5000 ಸಾವಯವ ಕೃಷಿಕರಿಗೆ ತರಬೇತಿ ನೀಡುವುದಾಗಿ ಸಂಘವು ಹೇಳಿತ್ತು. ಆ 50 ಕೇಂದ್ರಗಳು ಎಲ್ಲಿವೆ ಅಂತ ಗೊತ್ತಿಲ್ಲ, ಯಾರಿಗೆ ತರಬೇತಿ ಕೊಟ್ಟರೆಂಬುದೂ ತಿಳಿದಿಲ್ಲ. ಕೋಟಿ ವೃಕ್ಷ ಯೋಜನೆಯಡಿ ಒಂದೇ ಒಂದು ಗಿಡ ನೆಡಲಿಲ್ಲ. 100 ದೇಸೀ ಹಸುಗಳ ಸಂವರ್ಧನಾ ಕೇಂದ್ರಗಳನ್ನು ಸ್ಥಾಪಿಸುವ ಇವರ ಗುರಿ ಗುರಿಯಾಗಿಯೇ ಉಳಿಯಿತು. ಆದರೆ, ಕಡತಗಳಲ್ಲಿ ಎಲ್ಲವೂ ನಡೆದು ಅನುದಾನ ಮಾತ್ರ ಖರ್ಚಾಗಿದೆ.

ಯುವ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕಾಗಿ ಸೆಮಿನಾರ್, ಪ್ರವಚನ ಮತ್ತು ಪ್ರೇರಣಾತ್ಮಕ ಭೋದನೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (ಕೆ.ಪಿ.ಎಸ್.ಸಿ., ಯು.ಪಿ.ಎಸ್.ಸಿ., ಬ್ಯಾಂಕ್, ಪಿ.ಯು.ಸಿ., ಸಿ.ಇ.ಟಿ., ಎನ್.ಇ.ಇ.ಟಿ., ಜೆ.ಇ.ಇ., ಇತ್ಯಾದಿ) ವಾರ್ಷಿಕ 6 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಅಂತ ಹೇಳಿದರು. ಆದರೆ, ಯಾವಾಗ ಎಲ್ಲಿ ಮಾಡಿದರೂ ಅಂತ ಮಾತ್ರ ಗೊತ್ತಾಗಲಿಲ್ಲ. ಬಡವರ ಮಕ್ಕಳಿಗಂತೂ ಇದು ದಕ್ಕಲೇ ಇಲ್ಲ. ಆದರೆ, ಅದರ ಬದಲಿಗೆ ಆರ್.ಎಸ್.ಎಸ್. ಕ್ಯಾಂಪ್ಗಳನ್ನು ನಡೆಸಿದ್ದು ಮಾತ್ರ ಅಲ್ಲಗಳೆಯುವಂತಿಲ್ಲ. ಇನ್ನು ನೈತಿಕತೆಯ ತರಬೇತಿ ಆರಂಭಿಸಿ ಬಸವಾದಿ ಶರಣರ ಸಂತರ ಹಾಗೂ ಸೂಫಿಗಳ ಜೀವನ ಆದರ್ಶ ತತ್ವಗಳನ್ನು ಹಾಗೂ ಗ್ರಾಮೀಣ ಕಲೆ ಸಂಸ್ಕೃತಿ ಉತ್ತೇಜಿಸುವ ಬದಲು ಸಾವರ್ಕರ್ ಹಾಗೂ ಗೋಲ್ವಾಲ್ಕರ್ ಪಾಠ ಮಾಡಿ ಶರಣರ ತತ್ವಾದರ್ಶಗಳಿಗೆ ಸಮಾಧಿ ಕಟ್ಟುವ ಪ್ರಯತ್ನ ಈ ಸಂಘದಿಂದ ನಡೆದಿದೆ ಎನ್ನುವ ಆಪಾದನೆಯೂ ಇದೆ.
ಮೂರು ವರ್ಷಗಳ ಕಾಲ ಜಗತ್ತನ್ನೇ ಕಾಡಿದ ಕೊರೋನಾ ಕೋವಿಡ್-19 ಎಲ್ಲರಿಗೂ ಶಾಪವಾಗಿ ಪರಿಣಮಿಸಿದರೆ, ಅದನ್ನು ಹಿಂದಿನ ಬಿಜೆಪಿ ಸರ್ಕಾರ ಹೆಣಗಳ ಮೇಲೂ ಹಣ ಲೂಟಿ ಹೊಡೆಯುವ ಮೂಲಕ ವರವಾಗಿ ಬಳಸಿಕೊಂಡಿದೆ. ಬಿಜೆಪಿಯ ಧಾರ್ಮಿಕ, ಮತ್ತು ಯೋಗ ಘಟಕ ಗುತ್ತಿಗೆ ಪಡೆದ ಸ್ವಯಂ ಘೋಷಿತ ಬಾಬಾ ರಾಮ್ದೇವ್ ಅವರ ಯೋಗ ತರಬೇತಿಯ ಸರ್ಟಿಫಿಕೇಟ್ಗಳನ್ನು ಬೇಕಾಬಿಟ್ಟಿ ಬಳಸಿಕೊಂಡು, ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರಿಗೆ ಯೋಗ ಶಿಕ್ಷಕರನ್ನಾಗಿ ನೇಮಕ ಮಾಡಿಕೊಂಡು ಗೌರವ ಧನದ ರೂಪದಲ್ಲಿ ಸರ್ಕಾರದ ಖಜಾನೆಯಲ್ಲಿರುವ ಕೋಟ್ಯಾಂತರ ರೂಪಾಯಿಯನ್ನೇ ಲೂಟಿ ಮಾಡಿದರು. ಆದರೆ, ಹೊಸ ಸರ್ಕಾರ ಜನಸಾಮಾನ್ಯರಿಗೆ ಉಪಯೋಗವಾಗದ ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ವನ್ನು ಮುಚ್ಚುವ ಮುನ್ಸೂಚನೆ ನೀಡಿದ್ದು ಸರಿಯಾದ ಕ್ರಮವೇ ಆಗಿದೆ ಎನ್ನುವುದು ಬಹುತೇಕರ ಅಭಿಪ್ರಾಯ.
ಈ ಸಂಘ ಆರಂಭವಾದಾಗಿನಿಂದಲೂ ಇದೊಂದು ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಅನುಕೂಲಕ್ಕಾಗಿ ಹಾಗೂ ಆಶ್ರಯಕ್ಕಾಗಿ ಹುಟ್ಟಿದ ಸಂಸ್ಥೆ ಎನ್ನುವುದು ಓಪನ್ ಸೀಕ್ರೆಟ್ ಆಗಿತ್ತು. ಹಾಗಾಗಿ, ಆರಂಭದಿಂದಲೂ ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸುತ್ತಾ ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ/ಬಿಟಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು, ಇದು ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗಾಗಿ ಕಾನೂನು ಬಾಹಿರವಾಗಿ ಅಸ್ತಿತ್ವಕ್ಕೆ ಬಂದ ಸಂಘ ಎಂದು ಹಲವು ಬಾರಿ ಜರಿದಿದ್ದುಂಟು. ಜನಸಾಮಾನ್ಯರಿಗೆ ಯಾವ ಪ್ರಯೋಜನವೂ ಇಲ್ಲದ ಕಳೆದ ಮೂರು ವರ್ಷದಲ್ಲಿ ನೂರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ತನಿಖೆ ಮಾಡಲು ಸದನದಲ್ಲಿಯೂ ಧ್ವನಿ ಎತ್ತಿದ್ದರು.
ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಮತ್ತು ಕೃಷಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರ ನೇಮಕಾತಿಯನ್ನು ರದ್ದುಗೊಳಿಸಿದರು. ಅಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಕುರಿತು ತನಿಖೆಗೆ ಆದೇಶಿಸಿಸಲು ಸಚಿವ ಪ್ರಿಯಾಂಕ್ ಖರ್ಗೆ ಯಶಸ್ವಿಯಾಗಿದ್ದಾರೆ.
‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ ಕೇವಲ ಒಂದು ಉದಾಹರಣೆ ಮಾತ್ರ. ಈ ದೇಶದಲ್ಲಿ ಸಂವಿಧಾನವನ್ನು ಬಳಸಿಕೊಂಡೇ ಸಂವಿಧಾನ ಬಾಹಿರ ಕೆಲಸ ಮಾಡುವ, ಶೂದ್ರರನ್ನು ಬಳಸಿಕೊಂಡೇ ಶೂದ್ರಾತೀಶೂದ್ರ, ದಲಿತ, ಮಹಿಳೆ, ಆದಿವಾಸಿ ಹಾಗೂ ಅಲ್ಪಸಂಖ್ಯಾತರನ್ನು ತುಳಿಯುವ ಸಿದ್ಧಾಂತವೊಂದು ಈ ದೇಶ ಆಳುತ್ತಿದೆ. ಒಂದೇ ಸಮುದಾಯಕ್ಕಾಗಿ ನೀತಿ ನಿರೂಪಣೆಗಳನ್ನು ರೂಪಿಸುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಶ ಈ ನಾಡಿನಲ್ಲಿ ಜೀವಪರರು ಮತ್ತು ಪ್ರಗತಿಪರರು ಕೊಂಚ ಉಸಿರಾಡುವಂತೆ ಮಾಡಿದೆ. ಆದರೆ, ನಾವು ಮಾಡಬೇಕಾದ ಕೆಲಸ ಇನ್ನೂ ಬಹಳಷ್ಟಿದೆ.
ವಿಕ್ರಮ್ ತೇಜಸ್ , ಕಲಬುರ್ಗಿ
ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು