ಚುನಾವಣಾ ಬಾಂಡ್‌ನಿಂದ ಬಿಜೆಪಿಯ 8000 ಕೋಟಿ ರೂ.ಲೂಟಿ ಬಯಲು: ಉದ್ಧವ್‌ ಠಾಕ್ರೆ

ಮುಂಬೈ: ಎಸ್‌ಬಿಐನ ಚುನಾವಣಾ ಬಾಂಡ್‌ಗಳಿಂದಾಗಿ ಬಿಜೆಪಿಯ 8000 ರೂ. ಭ್ರಷ್ಟಾಚಾರದ ಲೂಟಿ ಬಯಲಾಗಿದೆ ಎಂದು ಶೀವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.

ದಕ್ಷಿಣ ಮುಂಬೈನ ಕೋಲಾಬಾದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಬಿಜೆಪಿಯು ಚುನಾವಣಾ ಬಾಂಡ್‌ ಯೋಜನೆಯಿಂದಾಗಿ ₹8,000 ಕೋಟಿ ಲೂಟಿ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮೀರಿಸಿದೆ ಎಂದು ದೂರಿದರು.

ಬಿಜೆಪಿ ವಿಕಸಿತ ಭಾರತದ ಕನಸು ತೋರಿಸುತ್ತಿದೆ. ಇವರ ಕನಸು ಬಿಸಿಲುಗುದುರೆಯಿದ್ದಂತೆ. ಈ ಮೂಲಕ ಬಿಜೆಪಿಯು ಇನ್ನಷ್ಟು ಲೂಟಿ ಮಾಡಲು ಇನ್ನೂ ಐದು ವರ್ಷಗಳ ಕಾಲ  ಅಧಿಕಾರದಲ್ಲಿರುವುದಕ್ಕೆ ಬಯಸುತ್ತದೆ. ಮತದಾರರಾದ ನೀವು ಈ ದೇಶವನ್ನು ಮತ್ತೆ ಲೂಟಿಕೋರರ ಕೈಗೆ ಕೊಡುತ್ತಿರೋ ಬಿಡುತ್ತಿರೋ ನಿಮಗೆ ಬಿಟ್ಟದ್ದು ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಮುಖ ಕಂಪನಿಗಳು ದೇಶದ ವಿವಿಧ ಭಾಗಗಳಲ್ಲಿ ಗುತ್ತಿಗೆ ಪಡೆದಿವೆ. ಚುನಾವಣಾ ಬಾಂಡ್‌ಗಳ ರೂಪದಲ್ಲಿ ಬಿಜೆಪಿಗೆ ದೇಣಿಗೆ ನೀಡುವಂತೆ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತದೆ. ದೇಣಿಗೆ ನೀಡದಿದ್ದರೆ ಕಂಪನಿಗಳ ಕೆಲಸ ಆಗುವುದಿಲ್ಲ. ಹೀಗಾಗಿ ಕಂಪನಿಗಳು ಹೆದರಿಕೊಂಡು ದೇಣಿಗೆ ನೀಡಿವೆ ಎಂದು ಅವರು ಆರೋಪಿಸಿದರು.

ನಾನು ಗುಜರಾತ್‌ ವಿರೋಧಿಯಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಆ ರಾಜ್ಯವನ್ನು ದೇಶದ ಇತರ ರಾಜ್ಯಗಳ ವಿರುದ್ಧ ಎತ್ತಿ ಕಟ್ಟುವುದನ್ನು ಬಿಡಬೇಕು.. ಮಹಾರಾಷ್ಟ್ರಕ್ಕೆ ಬರುವ ಎಲ್ಲ ಯೋಜನೆಗಳನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಅವರು ಆರೋಪಿಸಿದರು.

Related Articles

ಇತ್ತೀಚಿನ ಸುದ್ದಿಗಳು