ಬಿಜೆಪಿ ನಾಯಕ ಆರ್ ಅಶೋಕ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷಕಂಠನಿಗೆ ಹೋಲಿಸಿರುವುದನ್ನು ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ತೀವ್ರವಾಗಿ ಟೀಕಿಸಿದ್ದು, “ʼಪ್ರಧಾನಿ ನರೇಂದ್ರ ಮೋದಿ ವಿಶ್ವಗುರು ಅಲ್ಲ, ವಿಷ ಗುರುʼ ಎಂಬ ನನ್ನ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ನೂರಕ್ಕೆ ನೂರು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದಿದ್ದಾರೆ.
ಪ್ರಧಾನಿ ಹೇಗೆ ವಿಷಗುರು ಎಂಬುದಕ್ಕೆ ನಾನಂತೂ ಸಾವಿರ ಸಮರ್ಥನೆ ಕೊಡಬಲ್ಲೆ. ಆದರೆ, ವಿಶ್ವಗುರು ಹೇಗೆ ಎಂಬ ಬಗ್ಗೆ ವಿವರಣೆ ಕೊಡಲು BJP Karnataka ನಾಯಕರುಗಳಿಗೆ ಸಾಧ್ಯವೇ? ಎಂದೂ ಅವರು ಕೇಳಿದ್ದಾರೆ.
ಆರ್ ಅಶೋಕ್ ಅವರು ಮೋದಿಯನ್ನು ವಿಶಕಂಠನಿಗೆ ಹೋಲಿಸಿದ್ದಾರೆ. ರಾಜಕೀಯ ಚರ್ಚೆಯನ್ನು ಹೇಗೆ ಮಾಡಬೇಕು ಎಂದು ಬಿಜೆಪಿಗರು ಕಲಿತುಕೊಳ್ಳಬೇಕು. ಚುನಾಯಿತ ಪ್ರತಿನಿಧಿಯಾಗಿರುವ ಪ್ರಧಾನಿಯನ್ನು ವ್ಯಕ್ತಿಪೂಜೆ ಅಥವಾ ಪೌರಾಣಿಕ ಹೋಲಿಕೆಗಳ ಮಟ್ಟಕ್ಕೆ ಇಳಿಯುವುದು ಅಸಹ್ಯಕರ. ಅಷ್ಟಕ್ಕೂ ವಿಶಕಂಠನೆಂದರೆ ಶಿವ. ಅರ್ಧಾಂಗಿ ಪರಿಕಲ್ಪನೆಯನ್ನೇ ಜಗತ್ತಿಗೆ ಸಾರಿದ ಶಿವನೆಲ್ಲಿ ? ತನ್ನ ಪತ್ನಿಯನ್ನೇ ಮನೆಗೆ ಸೇರಿಸದ ಮೋದಿಯೆಲ್ಲಿ ? ಇಂತಹ ವೈಯಕ್ತಿಕ ಚರ್ಚೆಗಳನ್ನು ಹುಟ್ಟುಹಾಕುವಂತಹ ಪರಿಸ್ಥಿತಿಯನ್ನು ಆರ್ ಅಶೋಕ್ ರಂತಹ ಬಿಜೆಪಿಯ ನಾಯಕರು ಸೃಷ್ಟಿಸುವುದು ದುರಂತ! ಎಂದು ಅವರು ಹೇಳಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಶ್ವಗುರು’ ಎಂದು ಹೊಗಳುವ ರಾಜಕೀಯವನ್ನು ನಾನು ಎಂದಿಗೂ ಒಪ್ಪುವುದಿಲ್ಲ. ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಸಾಮಾಜಿಕ ವಿಭಜನೆ, ಇಡಿ, ಸಿಬಿಐ, ಐಟಿ ಸೇರಿದಂತೆ ಸಂಸ್ಥೆಗಳ ಸ್ವಾಯತ್ತತೆ ಕುಸಿತ, ಆರ್ಥಿಕತೆಯ ಅಧಃಪತನದ ಸಂದರ್ಭದಲ್ಲಿ ‘ವಿಶ್ವಗುರು’ ಎಂಬ ಪದ ಪ್ರಚಾರದ ಘೋಷಣೆಯಷ್ಟೇ ಹೊರತು ವಾಸ್ತವವಲ್ಲ.
‘ವಿಶ್ವಗುರು’ ಎಂಬ ಪದವಿಗೆ ತಕ್ಕಂತೆ ದೇಶದ ಆರ್ಥಿಕತೆ, ಸಾಮಾಜಿಕ ಸೌಹಾರ್ದತೆ, ಸಂವಿಧಾನ ಮೌಲ್ಯಗಳು ಬಲವಾಗಿದೆಯೇ? ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಾನ್ಯತೆ ಹೆಚ್ಚಿದೆಯೇ? ಜನಜೀವನ ಸುಧಾರಿದೆಯೇ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಬೇಕು. ಆಡಳಿತದ ಫಲಿತಾಂಶಗಳಿಂದಲೇ ನಾಯಕತ್ವದ ಮೌಲ್ಯ ನಿರ್ಧಾರವಾಗಬೇಕೇ ಹೊರತು, ಬಾಲಂಗೋಚಿ ಹೊಗಳುಭಟ್ಟರಿಂದಲ್ಲ ಎಂದು ಅವರು ತಮ್ಮ ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
