Monday, February 2, 2026

ಸತ್ಯ | ನ್ಯಾಯ |ಧರ್ಮ

ಕೃಷಿಯನ್ನು ಕಡೆಗಣಿಸಿದ ಬಜೆಟ್: ಅಖಿಲ ಭಾರತ ಕಿಸಾನ್ ಸಭಾ

ದೆಹಲಿ: ಈ ಬಜೆಟ್‌ನಲ್ಲಿ ಕೃಷಿ ವಲಯವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ (AIKS) ಆರೋಪಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಘವು, ಕೃಷಿ ವಲಯದ ಪುನರುಜ್ಜೀವನದ ಬಗ್ಗೆ ಯಾವುದೇ ಬದ್ಧತೆಯನ್ನು ಪ್ರದರ್ಶಿಸುವಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ವಿಫಲವಾಗಿದೆ ಎಂದು ಟೀಕಿಸಿದೆ.

ಬಜೆಟ್ ಭಾಷಣದಲ್ಲಿ ಸೀತಾರಾಮನ್ ಅವರು ಕೃಷಿ ವಲಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಮತ್ತು ಸಣ್ಣ, ಅತಿಸಣ್ಣ ರೈತರ ಬಗ್ಗೆ ಕೇವಲ ಒಂದು ಬಾರಿ ಮಾತ್ರ ಪ್ರಸ್ತಾಪಿಸಿದ್ದಾರೆ ಎಂದು ಸಂಘ ಹೇಳಿದೆ.

ಕೃಷಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಬೇಕೆಂದು ಒಂದೆಡೆ ಸಚಿವರು ಹೇಳುತ್ತಲೇ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಬಜೆಟ್ ಅನ್ನು 10,281 ಕೋಟಿ ರೂ.ಗಳಿಂದ 9,967 ಕೋಟಿ ರೂ.ಗಳಿಗೆ ಇಳಿಕೆ ಮಾಡಿರುವುದನ್ನು ಸಂಘ ಟೀಕಿಸಿದೆ.

ತೆಂಗು, ಕೋಕೋ, ಗೋಡಂಬಿ, ಕಡಲೆಕಾಯಿ ಮತ್ತು ಶ್ರೀಗಂಧದ ಬೆಳೆಗಳ ಪ್ರಾಮುಖ್ಯತೆಯನ್ನು ಸಚಿವರು ಒತ್ತಿಹೇಳಿದ್ದಾರೆ. ಆದರೆ ವಾಸ್ತವವಾಗಿ ಹಿಂದೆ ಕೈಗೊಂಡಿದ್ದ ಹತ್ತಿ ತಂತ್ರಜ್ಞಾನ ಮಿಷನ್, ಹೈಬ್ರಿಡ್ ಬೀಜಗಳು ಮತ್ತು ಬೇಳೆಕಾಳುಗಳ ಮಿಷನ್‌ಗಳ ಪ್ರಸ್ತಾಪವೇ ಈ ಬಜೆಟ್‌ನಲ್ಲಿಲ್ಲ ಎಂದು ಅದು ಟೀಕಿಸಿದೆ. ಹಾಗೆಯೇ, ಉದ್ಯೋಗ ಖಾತ್ರಿ ಯೋಜನೆ (MGNREGA) ಅಥವಾ ಅದರ ಬದಲಿಗೆ ತರಲಾದ ಹೊಸ ಯೋಜನೆಯ ಬಗ್ಗೆಯೂ ಈ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದು ಎಐಕೆಎಸ್ ಟೀಕಿಸಿದೆ.

ಕೇಂದ್ರ ಬಜೆಟ್ | ನಕ್ಸಲಿಸಂ ವಿರುದ್ಧದ ಹೋರಾಟಕ್ಕೆ 3,610 ಕೋಟಿ ರೂ… ಅನುದಾನ ಹಂಚಿಕೆಯಲ್ಲಿ ಶೇ 20ಕ್ಕೂ ಹೆಚ್ಚು ಏರಿಕೆ

ನಕ್ಸಲಿಸಂ ವಿರುದ್ಧದ ಹೋರಾಟಕ್ಕೆ ಮಾರ್ಚ್ 31ನ್ನು ಗಡುವು ಎಂದು ಘೋಷಿಸಿರುವ ಕೇಂದ್ರ ಸರ್ಕಾರ, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಇದಕ್ಕಾಗಿ ಭಾರಿ ಪ್ರಮಾಣದ ಅನುದಾನವನ್ನು ಮೀಸಲಿಟ್ಟಿದೆ.

ದೇಶದಲ್ಲಿ ಎಡಪಂಥೀಯ ಉಗ್ರವಾದವನ್ನು (Left Wing Extremism) ನಿರ್ಮೂಲನೆ ಮಾಡಲು 3,610 ಕೋಟಿ ರೂ. ವ್ಯಯಿಸಲಿರುವುದಾಗಿ ತಾಜಾ ಬಜೆಟ್ ಪ್ರಸ್ತಾಪಿಸಿದೆ. ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಭದ್ರತಾ ವೆಚ್ಚಗಳು ಮತ್ತು ವಿಶೇಷ ಮೂಲಸೌಕರ್ಯ ಯೋಜನೆಗಾಗಿ ಈ ಅನುದಾನವನ್ನು ಮುಂಬರುವ ಆರ್ಥಿಕ ವರ್ಷದಲ್ಲಿ ಬಳಸಲಾಗುವುದು ಎಂದು ತಿಳಿಸಿದೆ. ಕಳೆದ ಬಜೆಟ್‌ನಲ್ಲಿ (ಪರಿಷ್ಕೃತ ಅಂದಾಜು) 3,006 ಕೋಟಿ ರೂ. ಖರ್ಚು ಮಾಡಿರುವುದಾಗಿ ಕೇಂದ್ರ ತಿಳಿಸಿದೆ. ಈ ಬಾರಿ ಅನುದಾನದ ವೆಚ್ಚವನ್ನು ಶೇಕಡಾ 20ಕ್ಕಿಂತ ಹೆಚ್ಚು ಹೆಚ್ಚಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page