Saturday, June 15, 2024

ಸತ್ಯ | ನ್ಯಾಯ |ಧರ್ಮ

ವಿವೇಕಾನಂದರ ಆಶಯದ ಮುಂದುವರಿಕೆ: ಭೂಪೇಂದ್ರನಾಥ ದತ್ತ

ಇಂದು ಸ್ವಾಮಿ ವಿವೇಕಾನಂದರ ಜನುಮ ದಿನ. ಈ ದೇಶವನ್ನು ಕ್ರಾಂತಗೊಳಿಸಿದ ಮಹಾನ್ ಕ್ರಾಂತಿಕಾರಿ ಚೇತನ ಸ್ವಾಮಿ ವಿವೇಕಾನಂದ. ಭಾರತದ ಚೈತನ್ಯದ ಪುನರುಜ್ಜೀವನದಲ್ಲಿ ಅವರ ಪಾತ್ರ ಎಲ್ಲರಿಗೂ ಗೊತ್ತು. ಆದರೆ ಅವರ ಒಡ ಹುಟ್ಟುಗಳ ಬಗ್ಗೆ ಗೊತ್ತಿದೆಯೇ? ಕೆ.ಪಿ ಸುರೇಶ ಅವರು ಬಹುತೇಕರಿಗೆ ಗೊತ್ತಿರದ ವಿವೇಕಾನಂದರ ಕಿರಿಯ ತಮ್ಮ, ಮೊದಲ ಎಡಪಂಥೀಯ ಭೂಪೇಂದ್ರನಾಥ ದತ್ತ ಅವರ ಬಗ್ಗೆ ಬರೆದಿದ್ದಾರೆ. ಓದಿ..

ಸ್ವಾಮಿ ವಿವೇಕಾನಂದರ ಕಿರಿಯ ತಮ್ಮ ಭೂಪೇಂದ್ರನಾಥ ದತ್ತ ಈ ದೇಶ ಕಂಡ ಮೊದಲ ಎಡಪಂಥೀಯರಲ್ಲೊಬ್ಬರು. ಅಣ್ಣನ ನೆರಳಲ್ಲೇ ಬೆಳೆದ ಭೂಪೇಂದ್ರನಾಥ. ಬಂಗಾಲದಲ್ಲಿ ಅನುಶೀಲನ ಸಮಿತಿ (ಗರಡಿ ಮನೆ)ಅಭಿಯಾನ ಆರಂಭವಾದಾಗ ಅರೋಬಿಂದೋ ಅವರ ತಮ್ಮ ಬಿರೇನ್‌ ಘೋಷ್‌ ಅದರ ಸಾರಥ್ಯ ವಹಿಸಿದರು. ಈ ಸಂಘಟನೆಯ ಮುಖವಾಣಿಯಾಗಿ ಜುಗಾಂತರ್‌ ಪತ್ರಿಕೆ ಆರಂಭವಾಯಿತು. ಆರಂಭದಿಂದಲೇ ಭೂಪೇಂದ್ರನಾಥ ದತ್ತ ಈ ಪತ್ರಿಕೆಯ ಸಂಪಾದಕರಾಗಿದ್ದರು. ಬೆಂಕಿ ಉಗುಳುವ, ಕ್ರಾಂತಿಗೆ ಪ್ರಚೋದಿಸುವ ಲೇಖನಗಳ ಮೂಲಕ ಈ ಪತ್ರಿಕೆ ಬೆಂಗಾಲಿಗಳ ಮನೆ ಮಾತಾಯಿತು. ಹಾಗೇ ಬ್ರಿಟಿಷರ ಕೆಂಗಣ್ಣಿಗೂ ತುತ್ತಾಯಿತು. ಅರೊಬಿಂದೋ ಘೋಷ್‌  ಜೊತೆ ಭೂಪೇಂದ್ರನಾಥ ಕೂಡಾ ಬಂಧಿತರಾದರು.

ಈ ಸಂಚಿನಲ್ಲಿ ಅಪ್ರೂವರ್‌ ಆಗಿದ್ದ ನರೇಂದ್ರನಾಥ ಗೋಸ್ವಾಮಿ ಎಂಬ ದ್ರೋಹಿಯನ್ನು ಆಗಲೇ ಆರೋಪಿಗಳಾಗಿ ಜೈಲಿನಲ್ಲಿದ್ದ ಕನ್ನಯ್ಯಾಲಾಲ್‌ ದತ್ತ ಮತ್ತು ಸತ್ಯೇಂದ್ರನಾಥ ಬೋಸ್‌ ಜೈಲಲ್ಲೇ ಗುಂಡಿಟ್ಟು ಕೊಂದರು. ಈತನ ಸಾವಿನಿಂದಾಗಿ ಅರೊಬಿಂದೋ ಅವರ ಮೇಲೆ ಸಾಕ್ಷ್ಯಾಧಾರವಿಲ್ಲದೇ ಅವರ ಬಿಡುಗಡೆಯಾಯಿತು.

“ನಮ್ಮ ಮಾತೃಭೂಮಿಯನ್ನು ಗುಲಾಮಗಿರಿಯ ಕಳಂಕದಿಂದ ಬಿಡುಗಡೆಗೊಳಿಸಲು ಪ್ರಾಣ ತ್ಯಾಗಕ್ಕೂ ಸಿದ್ಧವಿರುವ ಸಾವಿರ ಬಂಗಾಳಿಗಳು ಬೇಕು ಎಂದು ಕೇಳುವುದು  ಹೆಚ್ಚೇ? ಎಷ್ಟು ಜನ ಬ್ರಿಟಿಷ್ ಅಧಿಕಾರಿಗಳಿದ್ದಾರೆ? ದೃಢ ನಿರ್ಧಾರ ಮಾಡಿದರೆ ಒಂದೇ ದಿನದಲ್ಲಿ ಬ್ರಿಟಿಷ್ ಆಡಳಿತಕ್ಕೆ  ಅಂತ್ಯ ಹಾಡಬಹುದು” ಎಂಬ  ಕರೆ ಈ ಪತ್ರಿಕೆಯಲ್ಲಿತ್ತು. ಪತ್ರಿಕಾ ಲೇಖನಗಳ ಮೂಲಕ ಬ್ರಿಟಿಷ್ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿದ್ದಾರೆಂಬ ಆರೋಪದ ಮೇಲೆ ಬ್ರಿಟಿಷ್ ಸರಕಾರ ಭೂಪೇಂದ್ರನಾಥ  ದತ್ತ ಅವರಿಗೆ ಒಂದು ವರ್ಷದ ಕಠಿಣ ಸಜೆ ವಿಧಿಸಿತು. ವಿಚಾರಣೆಯ ಸಂದರ್ಭದಲ್ಲಿ ದತ್ತ ಅವರು, “ ನನ್ನ ದೇಶಕ್ಕೆ ನನ್ನ ಕರ್ತವ್ಯ ಎಂದು ನಾನು ಭಾವಿಸಿರುವುದನ್ನು ಮಾಡಿದ್ದೇನೆ. ಅದನ್ನು ನಿರಾಕರಿಸುವುದಿಲ್ಲ. ಈ ಎಲ್ಲಾ ಲೇಖನಗಳಿಗೂ ನಾನೇ ಜವಾಬ್ದಾರ” ಎಂದು ಹೇಳಿಕೆ ನೀಡಿದರು.

ದತ್ತ ಅವರು ಬಿಡುಗಡೆಯಾಗುವ ವೇಳೆಗೆ  ಆಲಿಪೂರ್‌ ಬಾಂಬು ಸಂಚಿನ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಭೂಪೇಂದ್ರ ಮತ್ತೆ  ಸಿಕ್ಕಿ ಬೀಳಬಾರದು ಎಂದು ಭಗಿನಿ ನಿವೇದಿತಾ, ದತ್ತ ಅವರನ್ನು ಅಮೆರಿಕಾಕ್ಕೆ ಕಳಿಸಿದರು. ಅವರು ತಮ್ಮ ಶಿಕ್ಷಣ ಮುಂದುವರಿಸಬೇಕು ಎಂಬ ಬಯಕೆಯೂ ನಿವೇದಿತಾ ಅವರಿಗಿತ್ತು. 1914ರಲ್ಲಿ ದತ್ತ ಅವರು ಬ್ರೌನ್‌ ವಿವಿಯಿಂದ ತಮ್ಮ ಸ್ನಾತಕೋತ್ತರ ಪದವಿ ಮುಗಿಸಿದರು.

 ಆ ವೇಳೆಗೆ ಒಟ್ಟಾರೆ ರಾಜಕೀಯ ಮಥನದಿಂದ ಪ್ರಭಾವಿತರಾದ ದತ್ತ ಗದ್ದರ್‌ ಸಂಘಟನೆಯೊಂದಿಗೆ ಸಂಪರ್ಕ ಬೆಳೆಸಿದರು. ಆಗ ಕಮ್ಯುನಿಸ್ಟ್‌ ಚಳವಳಿಯನ್ನು ಕಟ್ಟಲು  ವೀರೇಂದ್ರನಾಥ ಚಟ್ಟೋಪಾಧ್ಯಾಯ ( ಸರೋಜಿನಿ ನಾಯ್ಡು ಅವರ ಅಣ್ಣ)  ದುಡಿಯುತ್ತಿದ್ದರು. ಸ್ಟಾಕ್‌ ಹೋಮ್‌ನಲ್ಲಿ ನಡೆದ ಸಮಾವೇಶದಲ್ಲಿ ಭೂಪೇಂದ್ರನಾಥ ದತ್ತ ಮತ್ತು ವೀರೇಂದ್ರನಾಥ ಅವರು ಇನ್ನೂ ಕೆಲವು ಕ್ರಾಂತಿಕಾರಿಗಳೊಂದಿಗೆ ಭಾಗವಹಿಸಿದರು. 1921ರಲ್ಲಿ  ಭಾರತೀಯ ಕ್ರಾಂತಿಕಾರಿಗಳ ತಂಡದ ಭಾಗವಾಗಿ ಭೂಪೇಂದ್ರನಾಥ ದತ್ತ ಅವರು ರಷ್ಯಾಕ್ಕೆ ಭೇಟಿ ನೀಡಿದರು. 1920ರಲ್ಲೇ ಅವರು ಕಾಂಗ್ರಸ್‌ ಅಧಿವೇಶನಕ್ಕೆ  ಒಂದು ಮನವಿ ಸಲ್ಲಿಸಿ ರೈತ, ಕಾರ್ಮಿಕರನ್ನು ಸಂಘಟಿಸಬೇಕಾದ ಅಗತ್ಯದ ಬಗ್ಗೆ ಒತ್ತಾಯಿಸಿದ್ದರು.

 1924ರಲ್ಲಿ ಭೂಪೇಂದ್ರನಾಥ ಭಾರತಕ್ಕೆ ಮರಳಿದರು. ಬಂಗಾಲದಲ್ಲಿ ರೈತ, ಕಾರ್ಮಿಕರನ್ನು ಸಂಘಟಿಸಲು ಓಡಾಡುತ್ತಾ, ಯುವಕರಿಗೆ ಅಧ್ಯಯನ ತರಗತಿಗಳನ್ನೂ ನಡೆಸುತ್ತಾ ಬಂದರು. ಭೂಪೇಂದ್ರನಾಥ ದತ್ತ ಅವರು ಆ ಕಾಲದ ಬಹುತೇಕ ಎಲ್ಲಾ ರೈತ-ಕಾರ್ಮಿಕ ಚಳವಳಿಗಳ ಸೂತ್ರಧಾರಿಯಾಗಿ, ಸಂಘಟಕರಾಗಿ ಕೆಲಸ ಮಾಡಿದರು. ಖರಗ್‌ ಪುರ್‌ ರೈಲ್ವೇ ಕಾರ್ಮಿಕರ ಸಂಘಟನೆ, ಟಿಸ್ಕೊ ಕಾರ್ಮಿಕ ಸಂಘಟನೆಗಳನ್ನು ಕಟ್ಟಿದ್ದಲ್ಲದೇ  ಬಂಗಾಲದಲ್ಲಿ ಕಾರ್ಮಿಕ ದಿನಾಚರಣೆ ಎಲ್ಲೆಡೆ ಹಬ್ಬುವಲ್ಲಿ ಪ್ರಮುಖ ಪಾತ್ರ ವಹಿಸಿದರು.    Workers and Peasants Party (WPP) ಯಲ್ಲೂ ದುಡಿದರು. WPP ಈ ದೇಶದ ಮೊದಲ ರೈತ-ಕಾರ್ಮಿಕ ರಾಜಕೀಯ ಪಕ್ಷವಾಗಿ ಪ್ರಭಾವಿಯಾಗಿತ್ತು ಎಂಬುದನ್ನು ಮರೆಯಕೂಡದು.

ಅಸಹಕಾರ ಚಳವಳಿ ಮತ್ತು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಅವರು, 1931ರ ಕಾಂಗ್ರೆಸ್‌ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳ ನಿರ್ಣಯಕ್ಕೆ ಬೇಕಾದ ಹಕ್ಕುಗಳ ಕರಡನ್ನು ತಯಾರಿಸಿದ್ದರು.. 1937ರಿಂದ1940ರ  ವರೆಗೆ ಬಂಗಾಳದ  ಕಿಸಾನ್‌ ಸಭಾದ  ಅಧ್ಯಕ್ಷರಾಗಿ ರೈತ ಸಂಘಟನೆಯನ್ನು ಕಟ್ಟಿದರು. 1927ರಲ್ಲೇ ಅವರು ಕಲ್ಕತ್ತಾ ಟ್ರಾಮ್‌ ವೇ ಕಾರ್ಮಿಕರ ಸಂಘದ ಸ್ಥಾಪಕರಾಗಿ ಹಲವು ವರ್ಷ ಅದರ ಅಧ್ಯಕ್ಷರಾಗಿದ್ದರು. AITUC ನ ಉಪಾಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದರು. ಇದರ ಸ್ಥಾಪನೆಯ ಮೊದಲ ವರ್ಷ ನೆಹರೂ ಅಧ್ಯಕ್ಷರಾಗಿದ್ದರೆ ಎರಡನೇ ವರ್ಷ ಸುಭಾಶ್‌ ಚಂದ್ರ ಬೋಸ್‌ ಅಧ್ಯಕ್ಷರಾಗಿದ್ದರು. ಭೂಪೇಂದ್ರನಾಥ ಕಮ್ಯುನಿಸ್ಟ್‌ ಪಕ್ಷದ ಸದಸ್ಯರಾಗಿರಲಿಲ್ಲ. ಆದರೆ  ಚಿಂತನೆ, ಬರವಣಿಗೆ ಮತ್ತು ಕೆಲಸಗಳಲ್ಲಿ ಪೂರ್ಣವಾಗಿ ಕಮ್ಯುನಿಸ್ಟ್‌ ಪಕ್ಷ ಮತ್ತು ಗೆಳೆಯರೊಂದಿಗೆ ದುಡಿದಿದ್ದರು.

1904ರಲ್ಲೇ ಅವರು “ ವಿವೇಕಾನಂದ- ಒಬ್ಬ ಸಮಾಜವಾದಿ ಚಿಂತಕ “ ಎಂಬ ಪುಟ್ಟ ಕೃತಿಯನ್ನು ಬೆಂಗಾಲಿಯಲ್ಲಿ ಪ್ರಕಟಿಸಿದ್ದರಂತೆ. ಭೂಪೇಂದ್ರನಾಥ ದತ್ತ ಅವರು ಜರ್ಮಿನಿಯ ವಿವಿಯಿಂದ ಮಾನವ ಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿ ಪಡೆದರು. ಪ್ರಾಯಶಃ  Anthropology ಯಲ್ಲಿ ಡಾಕ್ಟರೇಟ್‌ ಪಡೆದ ಮೊದಲ ಭಾರತೀಯ ಭೂಪೇಂದ್ರನಾಥ ದತ್ತ!

 1941 ರಲ್ಲಿ Friends of Soviet Union ಎಂಬ ಸಂಸ್ಥೆ ಸ್ಥಾಪನೆಯಾದಾಗ ಭೂಪೇಂದ್ರನಾಥ ಅದರ ಮೊದಲ ಅಧ್ಯಕ್ಷರಾಗಿದ್ದರು. ದತ್ತ ಅವರು ಸಮಾಜ ಶಾಸ್ತ್ರ, ಚರಿತ್ರೆ, ರಾಜಕೀಯ ಶಾಸ್ತ್ರಗಳ ಮೇಲೆ ಪಾಂಡಿತ್ಯಪೂರ್ಣ ಕೃತಿಗಳನ್ನು ಪ್ರಕಟಿಸಿದರು. ಬಹುಭಾಷಾ ವಿದ್ವಾಂಸರಾಗಿದ್ದ ಭೂಪೇಂದ್ರನಾಥ ಬೆಂಗಾಲಿ, ಹಿಂದಿ, ಇಂಗ್ಲಿಷ್, ಜರ್ಮನ್‌ ಮತ್ತು ಇಟಾಲಿಯನ್‌ ಭಾಷೆಗಳಲ್ಲೂ ಕೃತಿ ರಚನೆ ಮಾಡಿದ್ದರು. ಭಾರತೀಯ ಸಮಾಜ ಪದ್ಧತಿ ( ಬೆಂಗಾಲಿ)  Dialectics of Hindu ritualism.. Studies in Indian Social Polity. Swami Vivekananda, Patriot-prophet: A Study ಅವರ ಪ್ರಮುಖ ಕೃತಿಗಳು ಸ್ವಾಮಿ ವಿವೇಕಾನಂದ ಅವರ ಬಗ್ಗೆ ಭೂಪೇಂದ್ರನಾಥ ಬರೆದ ಜೀವನ ಚರಿತ್ರೆ ಇಂದಿಗೂ ಅಧಿಕೃತ ಎನ್ನಿಸಿದೆ.

ಎಂದೂ ರಾಜಕೀಯ ಪಕ್ಷಗಳ ಸದಸ್ಯರಾಗದೇ ಉಳಿದ ಭೂಪೇಂದ್ರನಾಥ ಮಾರ್ಕ್ಸ್‌ ನ ಹಲವಾರು ಕೃತಿಗಳನ್ನು ಬೆಂಗಾಲಿಗೆ ಅನುವಾದಿಸಿದರು. ಅವರು ಯಾವುದೇ ಪ್ರಶಸ್ತಿ, ಪೆನ್ಶನ್‌ ಪಡೆಯಲು ನಿರಾಕರಿಸಿದ್ದರು.

ವಿವೇಕಾನಂದರ ತಮ್ಮ, ಮಹೇಂದ್ರನಾಥ ದತ್ತ ಕೂಡಾ ಪರಮ ಸಾಹಸಿ. ಇಂಗ್ಲೆಂಡಿನಲ್ಲಿ ಓದುತ್ತಿದ್ದ ಮಹೇಂದ್ರನಾಥ ಬಿಡಿಗಾಸಿಲ್ಲದೇ ಅರ್ಧ ಜಗತ್ತು ಬರಿಗಾಲಲ್ಲಿ ಸುತ್ತಿದ್ದರು. ವಿವೇಕಾನಂದ ಅವರ ಮರಣ ವಾರ್ತೆಯ ಬಳಿಕ ಕಲ್ಕತ್ತಾಕ್ಕೆ ಮರಳಿದ ಮಹೇಂದ್ರನಾಥ ರಾಮಕೃಷ್ಣ ಆಶ್ರಮವನ್ನು ಕಟ್ಟಿ ಬೆಳೆಸಲು ಕೆಲಸ ಮಾಡಿದರು.

ಭೂಪೇಂದ್ರನಾಥ ದತ್ತ ಅವರು ತಮ್ಮ ಅಣ್ಣನೊಂದಿಗೆ (ಮಹೇಂದ್ರನಾಥ ದತ್ತ) ಕೊಲ್ಕತ್ತಾದ ತಮ್ಮ ಪಿತ್ರಾರ್ಜಿತ ಮನೆಯಲ್ಲೇ ಕೊನೆವರೆಗೂ ನೆಲೆಸಿದ್ದರು. ಈ ಇಬ್ಬರೂ ಬ್ರಹ್ಮಚಾರಿಗಳೇ.! ಎಷ್ಟು ಸರಳ ಅಂದರೆ ನೆರೆಕರೆಯವರು ಈ ಸಹೋದರರಿಗೆ ಊಟ ತಿಂಡಿ ವ್ಯವಸ್ಥೆ ಮಾಡುತ್ತಿದ್ದರು. ಅನಾರೋಗ್ಯವಾದರೆ ಮತ್ತೆ, ನೆರಕರೆಯವರೇ ಅವರ ಯೋಗಕ್ಷೇಮ ನೋಡಿ ಕೊಳ್ಳುತ್ತಿದ್ದರು. ಇಂಥಾ ಅಪೂರ್ವ ಕ್ರಾಂತಿಕಾರಿ ಭೂಪೇಂದ್ರನಾಥ ದತ್ತ 1961ರಲ್ಲಿ, ಅಂದರೆ ತಮ್ಮ 81ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

ತಮ್ಮ ದೊಡ್ಡಣ್ಣ ವಿವೇಕಾನಂದರಿಂದ ಅಪಾರವಾಗಿ ಪ್ರಭಾವಿತರಾಗಿದ್ದ ಭೂಪೇಂದ್ರನಾಥ, ತಮ್ಮ ಸಹೋದರ ಸ್ವಾಮಿ ವಿವೇಕಾನಂದ ಎಡಪಂಥೀಯರಿಗಿಂತಲೂ ಹೆಚ್ಚು ಕ್ರಾಂತಿಕಾರಿ ಎಡ ಧೋರಣೆ ಹೊಂದಿದ್ದರು ಎಂದು ಸತತವಾಗಿ ಪ್ರತಿಪಾದಿಸಿದ್ದರು.

ಕೆ.ಪಿ ಸುರೇಶ

ಚಿಂತಕರು

Related Articles

ಇತ್ತೀಚಿನ ಸುದ್ದಿಗಳು