Wednesday, December 4, 2024

ಸತ್ಯ | ನ್ಯಾಯ |ಧರ್ಮ

ಜಾತಿ ಜನಗಣತಿ, ಒಳಮೀಸಲಾತಿ: ಮುಖ್ಯಮಂತ್ರಿಗಳ ಒಳಮರ್ಮ


ಸಾಮಾಜಿಕ ನ್ಯಾಯದ ಪರ ಒಲವು ಮತ್ತು ಬಲಾಡ್ಯರ ಬ್ಲಾಕ್‌ಮೇಲ್‌ ದ್ವಂದ್ವದಲ್ಲಿ ಸಿದ್ದರಾಮಯ್ಯ

ಲೇಖನ: ರಾಜೇಶ್‌ ಮಲವಳ್ಳಿ

ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಗೆಲುವು ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊಸ ಉತ್ಸಾಹವನ್ನು ತಂದಂತೆ ಕಾಣುತ್ತಿದೆ. ಮುಡಾ, ವಾಲ್ಮೀಕಿ ಹಗರಣಗಳ ಸುಳಿಗಳಲ್ಲಿ ಸಿಲುಕಿ ಸ್ವಲ್ಪ ಆತಂಕ ಮತ್ತು ಇರಿಸು ಮುರಸಿಗೆ ಒಳಗಾದಂತೆ ಕಾಣುತ್ತಿದ್ದ ಸಿದ್ದರಾಮಯ್ಯ ಕಳೆದ ಕೆಲದಿನಗಳಿಂದ ಮತ್ತೆ ಪುಟಿದೆದ್ದಿದ್ದಾರೆ. ಅವರು ಮಾಧ್ಯಮದವರ ಮುಂದೆ ಮೇಜು ಕುಟ್ಟಿ ಮಾತನಾಡುವ ಮೂಲಕ ವಿರೋಧ ಪಕ್ಷಗಳಿಗೆ ಮತ್ತು ಪಕ್ಷದೊಳಗಿನ ಆಂತರಿಕ ವಿರೋಧಿಗಳಿಗೆ ವಿಭಿನ್ನ ಸಂದೇಶಗಳನ್ನು ನೀಡತೊಡಗಿದ್ದಾರೆ. ಇದರ ಬೆನ್ನಲ್ಲೇ ಅವರ ಅಭಿಮಾನಿಗಳು ಡಿಸೆಂಬರ್‌ 5ರಂದು ಹಾಸನದಲ್ಲಿ ಸಿದ್ದರಾಮಯ್ಯನವರಿಗೋಸ್ಕರ ಬೃಹತ್‌ ಸ್ವಾಭಿಮಾನಿ ಸಮಾವೇಶವನ್ನು ಏರ್ಪಡಿಸಿದ್ದಾರೆ. ಹೆಸರಿಗೆ ಕಾಂಗ್ರೆಸ್‌ ಸಮಾವೇಶವಾದರೂ ಸ್ವರೂಪದಲ್ಲಿ ಇದು ಸಿದ್ದರಾಮಯ್ಯನವರ ಕೂರ್ಚಿಯನ್ನು ಭದ್ರಪಡಿಸಲು ಮತ್ತು ಅವರ ಹಿಂದೆ ಅಹಿಂದ ವರ್ಗದ ಅಚಲ ಬೆಂಬಲ ಹಾಗೂ ಸಿದ್ದರಾಮಯ್ಯನವರ ಜನಪ್ರೀಯತೆಯನ್ನು ಸಾಬೀತುಪಡಿಸುವುದೇ ಆಗಿದೆ.

ಆ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ಗೂ ಸಿದ್ದರಾಮಯ್ಯನವರು ನನ್ನನ್ನು ಹಗುರವಾಗಿ ಪರಿಗಣಿಸದಿರಿ ಎಂಬ ಸಂದೇಶವನ್ನು ನೀಡಲು ಬಯಸಿರುವುದು ಸ್ಪಷ್ಟ. ಮಹಾರಾಷ್ಟ್ರ, ಹರಿಯಾಣ ಚುನಾವಣಾ ಸೋಲಿನ ನಂತರ ಕಾಂಗ್ರೆಸ್‌ ಹೈಕಮಾಂಡ್‌ ತರಾತುರಿಯಲ್ಲಿ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಧೈರ್ಯ ಮಾಡಲಾರದು. ಇಡಿ ಭಾರತದಲ್ಲಿ ಕಾಂಗ್ರೆಸ್‌ ಪಕ್ಷದ ಒಬಿಸಿ ಮುಖಂಡರಲ್ಲಿ ಸಿದ್ದರಾಮಯ್ಯ ಮತ್ತು ಅಶೋಕ್‌ ಗೆಹ್ಲೋಟ್‌ ಅಗ್ರಗಣ್ಯರು. ರಾಜಸ್ಥಾನ ಚುನಾವಣೆ ಸೋಲಿನ ನಂತರ ಗೆಹ್ಲೋಟ್‌ ಕೊಂಚ ಹಿನ್ನಡೆಯನ್ನು ಅನುಭವಿಸಿದ್ದಾರೆ. ಈ ಹೊತ್ತಿನಲ್ಲಿ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನ ಭದ್ರವಾಗಿದೆ ಎಂದು ಹೇಳಬಹುದು.

ಬಣ ರಾಜಕೀಯದ ಕೆಸರೆರಚಾಟದಲ್ಲಿ ಮುಳುಗಿರುವ ಬಿಜೆಪಿ ಮತ್ತು ಚನ್ನಪಟ್ಟಣ ಸೋಲಿನಿಂದ ಕಂಗೆಟ್ಟಿರುವ ಜೆಡಿಎಸ್ ಈಗ ತಮ್ಮ ಆಂತರಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವಲ್ಲಿ ಹೆಣಗಾಡುತ್ತಿವೆ. ಹೀಗಿರುವಾಗ ಡಿಸೆಂಬರ್‌ 9 ರಿಂದ ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಸರ್ಕಾರ ಉಪಚುನಾವಣೆಗಳ ಗೆಲುವು ಮತ್ತು ಒಂದು ಮುಕ್ಕಾಲು ವರ್ಷಗಳ ಅವಧಿಯಲ್ಲಿಯೇ ದುರ್ಬಲ ವಿರೋಧ ಪಕ್ಷಗಳನ್ನು ಎದುರು ಇಟ್ಟುಕೊಂಡು ಅಧಿವೇಶನಕ್ಕೆ ಅಣಿಯಾಗುತ್ತಿವೆ.

ಕಳೆದ ಮುಂಗಾರು ಅಧಿವೇಶನದಲ್ಲಿ ಸರ್ಕಾರವನ್ನು ಅಲ್ಲಾಡಿಸಿದ್ದ ಮುಡಾ ಹಗರಣದ ಕಾವು ಇಳಿದಿದೆ. ಮುಖ್ಯಮಂತ್ರಿ ಬದಲಾವಣೆ ಎನ್ನುವ ಚರ್ಚೆ ಕೂಡ ತಣ್ಣಗಾಗಿದೆ. ಈ ಹೊತ್ತಿಗೇ ಜಾತಿ ಗಣತಿ ವರದಿ ಚರ್ಚೆ ಮುನ್ನೆಲೆಗೆ ಬರಬೇಕಿದೆ. ಗ್ಯಾರಂಟಿಗಳ ಗೆಲುವಿನ ಕಥೆ ಈಗ ಹಳಸಲಾಗಿದೆ, ಜವಾಬ್ದಾರಿಯುತ ಸರ್ಕಾರವೊಂದು ಕೇವಲ ಆರ್ಥಿಕ ಸಬಲೀಕರಣಕ್ಕೆ ಮಾತ್ರ ಸೀಮಿತವಾಗದೇ ಸಾಮಾಜಿಕ ಬದಲಾವಣೆ ಮತ್ತು ಕ್ರಾಂತಿಗೆ ಮುನ್ನುಡಿಯನ್ನು ಬರೆಯಬೇಕು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿಯವರ ಎನ್‌ಡಿಎ ಸರ್ಕಾರ ಏನಕೇನ ಪ್ರಕಾರೇಣ ತನ್ನ ಉದ್ಧೇಶಿತ ಮಸೂದೆಗಳನ್ನು ಜಾರಿಗೆ ತರಲು ಪ್ರತಿ ಅಧಿವೇಶನವನ್ನು ಬಳಸಿಕೊಳ್ಳುತ್ತಿದೆ. ಹೀಗಿರುವಾಗ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ತಾನು ಕಳೆದ ಚುನಾವಣೆಯಲ್ಲಿ ನೀಡಿದ ಬರವಸೆಯನ್ನು ಈಡೇರಿಸಲು ಹಿಂದೇಟು ಹಾಕುತ್ತಿದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸರಕಾರ ಜಾತಿ ಗಣತಿಯನ್ನು ಜಾರಿಗೊಳಿಸುತ್ತೇವೆ ಎನ್ನುವ ಭರವಸೆಯನ್ನು ಜನತೆಗೆ ನೀಡಿತ್ತು. ಅಷ್ಟೇ ಅಲ್ಲ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿಯನ್ನು ನಡೆಸುವ ಹೇಳಿಕೆಯನ್ನು ರಾಹುಲ್‌ ಗಾಂಧಿ ಕೂಡ ನೀಡಿದ್ದರು. ರಾಜ್ಯದಲ್ಲಿ ಭರ್ಜರಿ ಬಹುಮತದ ಜೊತೆಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಆದರೆ ಈಗ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪರಿಣಾಮಕಾರಿ ಪಾತ್ರವಹಿಸಬಹುದಾದ ಜಾತಿ ಗಣತಿಯನ್ನು ಸಂಪುಟದ ಮುಂದೆ ಮಂಡಿಸಿ, ಅದನ್ನು ಜಾರಿಗೊಳಿಸಲು ಸರಕಾರ ಅಂಜುತ್ತಿದೆ.

ಜಾತಿ ಗಣತಿಯನ್ನು ಜಾರಿಗೊಳಿಸಿಯೇ ಸಿದ್ಧ’’ ಎಂದು ಇತ್ತೀಚೆಗೆ ಸಿದ್ದರಾಮಯ್ಯ ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿ ಸುಮಾರು 8 ತಿಂಗಳು ಕಳೆದಿದೆ. ಅದರ ಬೆನ್ನಲ್ಲೇ ಸರ್ಕಾರ ಏಕಸದಸ್ಯ ಸಮಿತಿಯೊಂದನ್ನು ರಚಿಸಿ ಬೀಸೋ ದೊಣ್ಣೆಯಿಂದ ಪಾರಾಗುವ ನಾಜೂಕಿನ ನಡೆ ಅನುಸರಿಸುತ್ತಿದೆ.

ಜಾತಿಗಣತಿ ಮತ್ತು ಎಸ್ಸಿ ಒಳಮೀಸಲಾತಿ ಸಂಬಂಧ ಸಿದ್ದರಾಮಯ್ಯನವರ ಮುಂದೆ ಹೊರಗಿನ ಸಮಸ್ಯೆಗಳಿಗಿಂತ ಆಂತರಿಕ ಸವಾಲುಗಳೇ ಅಧಿಕಗೊಂಡಿರುವಂತೆ ಕಾಣುತ್ತಿದೆ. ಹಾಗಿದ್ದರೆ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ‌ಗಣತಿ ವಿಚಾರದಲ್ಲಿ ಗಟ್ಟಿನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಗಮನಿಸೋಣ.

ಅಕ್ಟೋಬರ್‌ 15 ರಂದು ಜಾತಿ ಜನಗಣತಿ ವರದಿ ಸಚಿವ ಸಂಪುಟದ ಮುಂದೆ ಚರ್ಚೆಗೆ ಬಂದ ಬೆನ್ನಿಗೇ ಕೆಲವು ಅಪಸ್ವರಗಳು ಸರಕಾರದೊಳಗಿಂದಲೇ ಎದ್ದವು. ‘‘ಜಾತಿ ಗಣತಿ ವಿಚಾರದಲ್ಲಿ ಸಿಎಂ ಎಚ್ಚರಿಕೆಯ ಹೆಜ್ಜೆ ಇಡಬೇಕು’’ ಎಂದು ಒಕ್ಕಲಿಗ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ ಮುಖಂಡರು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಅವರು ‘‘ನಾವು ಹಳೇ ಜಾತಿ ಗಣತಿ ಒಪ್ಪುವುದಿಲ್ಲ. ಸರಕಾರ ಹೊಸದಾಗಿ ಗಣತಿ ಮಾಡಲಿ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ವೀರಶೈವ ಲಿಂಗಾಯತರ ಒಳ ಪಂಗಡಗಳನ್ನು ಬೇರೆಬೇರೆಯಾಗಿ ಗಣತಿ ಮಾಡಿ ವೀರಶೈವ ಲಿಂಗಾಯತರ ಒಟ್ಟು ಸಂಖ್ಯೆ ಕಡಿಮೆ ತೋರಿಸಲಾಗಿದೆ’’ ಎಂದು ಹೇಳಿದ್ದಾರೆ.

ಒಕ್ಕಲಿಗರ ಸಂಘಟನೆ ಈಗಾಗಲೇ ಜಾತಿ ಗಣತಿಯನ್ನು ವಿರೋಧಿಸಿ ಹೇಳಿಕೆಯನ್ನು ನೀಡಿದೆ. ಒಕ್ಕಲಿಗ ಸಮುದಾಯದ ಮುಖಂಡರು ಪಕ್ಷಾತೀತವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಕಾಂತರಾಜು ವರದಿಯನ್ನು ವಿರೋಧಿಸಿ ಮನವಿ ಪತ್ರವನ್ನು ನೀಡಿವೆ. ಲಿಂಗಾಯತ ಸಂಘಟನೆಗಳು ಕೂಡ ಒಳಗೊಳಗೆ ಜಾತಿ ಗಣತಿಯ ವಿರುದ್ಧ ಕತ್ತಿ ಮಸೆಯುತ್ತಿವೆ.

ಆರಂಭದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಜಾತಿ ಗಣತಿ ವರದಿಯ ವಿರುದ್ಧ ತೀವ್ರ ಹೇಳಿಕೆಗಳನ್ನು ನೀಡಿತ್ತು. ‘ಜಾತಿ ಗಣತಿ ಹಿಂದೂ ಸಮಾಜವನ್ನು ಒಡೆಯುತ್ತದೆ’ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ‘ಜಾತಿ ಗಣತಿಗಾಗಿ ಅನಗತ್ಯವಾಗಿ ಸಮಯ ಮತ್ತು ಹಣವನ್ನು ಕಾಂಗ್ರೆಸ್ ಸರಕಾರ ವ್ಯಯಿಸಿದೆ’ ಎಂದು ದೂರಿದ್ದರು. ಆದರೆ, ಈಗ ಬಿಜೆಪಿ ಈ ಕುರಿತು ಮೌನವಾಗಿದೆ. ಯಾಕೆಂದರೆ, ಕೇಂದ್ರದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಜಾತಿ ಗಣತಿಯ ಕುರಿತು ಮೃದು ನಿಲುವು ತಾಳಿದ್ದಾರೆ. ಕೇಂದ್ರ ಸರಕಾರದ ಆಪ್ತ ಮಿತ್ರರಾದ ನಿತೀಶ್ ಕೂಮಾರ್ ಅವರು ಜಾತಿ ಗಣತಿಯ ಬೆಂಬಲಿಗರಾಗಿರುವುದರಿಂದ, ಅದನ್ನು ವಿರೋಧಿಸುವುದು ಕೇಂದ್ರ ಸರಕಾರಕ್ಕೆ ಕಷ್ಟಕರವಾಗಿದೆ. ಅಲ್ಲದೆ, ದೇಶಾದ್ಯಾಂತ ಜಾತಿ ಗಣತಿಗಾಗಿ ಒತ್ತಾಯಗಳು ಹೆಚ್ಚಾಗುತ್ತಿರುವುದರಿಂದ, ಜಾತಿ ಗಣತಿಯನ್ನು ಹಿಂದೂ ವಿರೋಧಿ ಗಣತಿಯೆಂದು ಕರೆದ ಮೋದಿ ಅವರೇ ತಮ್ಮ ಹೇಳಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಆರೆಸ್ಸೆಸ್ ಕೂಡ ಜಾತಿ ಗಣತಿಯ ಕುರಿತು ಸತತವಾಗಿ ಮಾರ್ಗದರ್ಶನ ನೀಡುತ್ತಿದೆ. ಈ ಕಾರಣದಿಂದಲೇ, ಜಾತಿ ಗಣತಿ ವರದಿ ಜಾರಿಯಾಗಬೇಕು ಎಂಬ ಒತ್ತಾಯಕ್ಕೆ ರಾಜ್ಯದ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಲು ಹಿಂಜರಿಯುತ್ತಿದ್ದಾರೆ.

ವಿಪರ್ಯಾಸವೆಂದರೆ, ಕಳೆದ ಒಂದು ವರ್ಷದಿಂದ ಜಾತಿಗಣತಿಯ ವಿರುದ್ಧ ಕಾಂಗ್ರೆಸ್ ಸರಕಾರದೊಳಗಿಂದಲೇ ಭಿನ್ನಮತಗಳು ಕೇಳಿ ಬರುತ್ತಿವೆ. ಇಂದು ಜಾತಿ ಗಣತಿ ವರದಿಗಾಗಿ ಸಿದ್ದರಾಮಯ್ಯ ಅವರಿಗೆ ಬಿಜೆಪಿಯ ಭಯವಿಲ್ಲ. ಬದಲಿಗೆ, ತನ್ನ ಸರಕಾರದೊಳಗಿರುವ ನಾಯಕರ ಕುರಿತಂತೆ ಆತಂಕವಿದೆ. ವರದಿಯ ಕಾರಣದಿಂದ ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ಕಾಂಗ್ರೆಸ್‌ನೊಳಗೆ ಬಂಡೆದ್ದರೆ ಅದರಿಂದ ಸರಕಾರಕ್ಕೆ ಧಕ್ಕೆಯಾಗಬಹುದು ಎಂದು ಅವರು ಭಯಪಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ಬಿ. ಕೆ. ಹರಿಪ್ರಸಾದ್ ಅವರು ‘‘ಸರಕಾರ ಬಿದ್ದರೆ ಬೀಳಲಿ, ಜಾತಿ ಗಣತಿ ವರದಿ ಜಾರಿ ಮಾಡಲೇ ಬೇಕು’’ ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಒತ್ತಾಯಿಸಿದ್ದಾರೆ.

ಇದೀಗ, ಕಾಂಗ್ರೆಸ್ ನಾಯಕರು ಕೆಲವು ಪ್ರಶ್ನೆಗಳಿಗೆ ಉತ್ತರಿಸಲೇಬೇಕಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಜಾತಿ ಗಣತಿಯನ್ನು ಜಾರಿಗೊಳಿಸುವುದಾಗಿ ಭರವಸೆಯೊಂದಿಗೆ ಮತ ಯಾಚನೆ ಮಾಡಿದ್ದರು. ಇದೀಗ ಜಾತಿ ಗಣತಿ ಜಾರಿಗೆ ಹಿಂದೇಟು ಹಾಕಿದರೆ ಜನಸಾಮಾನ್ಯರನ್ನು ವಂಚಿಸಿದಂತಾಗುತ್ತೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಶೋಷಿತ ಸಮುದಾಯದ ಪ್ರತಿನಿಧಿ ಎಂದು ಕರೆದುಕೊಳ್ಳುತ್ತಾರೆ. ಜಾತಿ ಗಣತಿ ಶೋಷಿತ ಸಮುದಾಯದ ಹಿತಾಸಕ್ತಿಯನ್ನು ಹೊಂದಿದೆ. ಈ ಹಿತಾಸಕ್ತಿಯನ್ನು ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಬಲಿಕೊಡುತ್ತಾರೆಯೆ?

ಎಲ್ಲಕ್ಕಿಂತ ಮುಖ್ಯವಾಗಿ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಜಾತಿ ಗಣತಿಯನ್ನು ದೇಶಾದ್ಯಂತ ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್‌ಗಾಂಧಿ ಜಾತಿಗಣತಿಯ ಅಗತ್ಯವನ್ನು ಒತ್ತಿ ಹೇಳಿದರು. ಹೀಗಿರುವಾಗ, ‘‘ಜಾತಿ ಗಣತಿ ವರದಿ ಜಾರಿಗೊಳಿಸಿಯೇ ಸಿದ್ಧ’’ ಎಂದು ಇತ್ತೀಚಿನ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಜಾತಿ ಗಣತಿ ವರದಿಯನ್ನು ಜಾರಿಗೊಳಿಸುವಲ್ಲಿ ಸಿದ್ದರಾಮಯ್ಯ ಅವರನ್ನು ಈವರೆಗೆ ತಡೆದವರು ಯಾರು? ಎನ್ನುವುದನ್ನು ಮಾತ್ರ ಅವರು ಸ್ಪಷ್ಟಪಡಿಸಿಲ್ಲ. ‘‘ಈ ಹಿಂದೆ ನಡೆಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ ವರದಿ ನನ್ನ ಕೈ ಸೇರಿದ್ದು ಶೀಘ್ರದಲ್ಲೇ ಕ್ಯಾಬಿನೆಟ್‌ನಲ್ಲಿ ಇಟ್ಟು ಜಾರಿಗೆ ತರುತ್ತೇನೆ. ಜಾತಿ ಗಣತಿ ವರದಿ ನಮ್ಮ ಪಕ್ಷದ ಅಜೆಂಡಾ’’ ಎಂದು ಅವರು ಕೆಲ ತಿಂಗಳ ಹಿಂದೆ ಹೇಳಿದ್ದರು.

ಈ ರೀತಿಯ ಹೇಳಿಕೆಯನ್ನು ಅವರು ಹಿಂದೆಯೂ ಹಲವು ಬಾರಿ ನೀಡಿರುವುದರಿಂದ ಇತ್ತೀಚೆಗೆ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ವಿಪರ್ಯಾಸವೆಂದರೆ, ದೇಶದಲ್ಲೇ ಮೊದಲಿಗೆ ಜಾತಿ ಗಣತಿಯನ್ನು ನಡೆಸಿರುವುದು ಕರ್ನಾಟಕ. ನಮ್ಮ ರಾಜ್ಯದಲ್ಲಿ ನಡೆದ ಬಳಿಕ ಬಿಹಾರದಲ್ಲಿ ಈ ಗಣತಿ ನಡೆಯಿತು. ಆದರೆ, ವರದಿ ಮೊದಲು ಮಂಡನೆಯಾದದ್ದು ಬಿಹಾರದಲ್ಲಿ. 2015ರಲ್ಲಿ ಸಿದ್ದರಾಮಯ್ಯ ಸರಕಾರವೇ ಜಾತಿ ಗಣತಿಗೆ ಆದೇಶ ನೀಡಿತ್ತು. ಆದರೆ ಈ ವರದಿಯನ್ನು ಸ್ವೀಕರಿಸಲು ಆ ಬಳಿಕದ ಸರಕಾರಗಳು ಹಿಂದೇಟು ಹಾಕಿದವು.

ವಿಪರ್ಯಾಸವೆಂದರೆ, ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರದ ಅವಧಿಯಲ್ಲೂ ಜಾತಿ ಗಣತಿ ವರದಿ ನನೆಗುದಿಗೆ ಬಿತ್ತು. ಇದೇ ಸಂದರ್ಭದಲ್ಲಿ ಜಾತಿ ಗಣತಿಯ ಅಧಿಕೃತತೆಯನ್ನು ಕೆಲವರು ಪ್ರಶ್ನಿಸತೊಡಗಿದರು. ‘‘ವರದಿ ಸೋರಿಕೆಯಾಗಿದೆ’’ ಎಂದು ಕೆಲವರು ಆರೋಪಿಸಿದ್ದರೆ, ಸಮೀಕ್ಷೆಗೆ ಬಳಸಿದ ಮಾನದಂಡವೇ ಸರಿಯಿಲ್ಲ ಎಂದು ಕೆಲವರು ತಕರಾರು ತೆಗೆಯಿದ್ದರು. ಅವರಿಗೆ ಜಾತಿ ಗಣತಿ ವರದಿಯನ್ನು ಸರಕಾರ ಸ್ವೀಕರಿಸುವುದೇ ಬೇಡವಾಗಿತ್ತು.

ಕಾಂಗ್ರೆಸ್ ತನ್ನ ಒಳಗಿರುವ ನಾಯಕರಿಗೆ ಹೆದರಿಯೇ ಜಾತಿ ಗಣತಿ ವರದಿಯನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾ ಬಂದಿದೆ ಬಿಜೆಪಿಯಂತೂ ಜಾತಿ ಗಣತಿಯ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಬಂದಿರುವುದರಿಂದ, ಅದು ವರದಿಯನ್ನು ಸ್ವೀಕರಿಸಿ ಜಾರಿಗೊಳಿಸುವ ಪ್ರಶ್ನೆಯೇ ಬರುವುದಿಲ್ಲ. ಜಾತಿ ಗಣತಿಯ ಕುರಿತಂತೆ ಕಾಂಗ್ರೆಸ್‌ನೊಳಗಿರುವ ಭಿನ್ನಾಭಿಪ್ರಾಯಗಳಿಂದ ಅರ್ಥವಾಗುವುದೇನೆಂದರೆ, ಜಾತಿಗಣತಿಯ ಅಗತ್ಯ ಮತ್ತು ಅನಿವಾರ್ಯತೆಯ ಬಗ್ಗೆ ಕಾಂಗ್ರೆಸ್‌ನೊಳಗಿರುವ ನಾಯಕರಿಗೆ ಪ್ರಾಥಮಿಕ ಅರಿವೂ ಇಲ್ಲ.

ಇಂದು ರಾಜ್ಯದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ಬಿಜೆಪಿ ಮತ್ತು ಆರೆಸ್ಸೆಸ್‌ನ ಪಿತೂರಿಯ ಪರಿಣಾಮವಾಗಿ ಜಾತಿಗಣತಿಯ ವಿರುದ್ಧ ಮಾತನಾಡುತ್ತಿದೆ. ನೇರವಾಗಿ ವಿರೋಧಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಆರೆಸ್ಸೆಸ್ ನಾಯಕರು ಬಲಾಢ್ಯ ಜಾತಿ ಸಂಘಟನೆಯೊಳಗಿರುವ ತಮ್ಮ ಪ್ರತಿನಿಧಿಗಳಿಂದ ಮಾತನಾಡಿಸುತ್ತಿದ್ದಾರೆ.

ಇವರಿಗೆ ಕಾಂಗ್ರೆಸ್‌ನೊಳಗಿರುವ ಆಯಾ ಜಾತಿ ಮುಖಂಡರು ಉತ್ತರ ನೀಡಬೇಕೇ ಹೊರತು, ಆ ಪ್ರತಿನಿಧಿಗಳ ಪರವಾಗಿ ಕಾಂಗ್ರೆಸ್ ಪಕ್ಷವನ್ನೇ ಬ್ಲ್ಯಾಕ್‌ಮೇಲ್ ಮಾಡುವಂತಹ ಸ್ಥಿತಿಗೆ ಇಳಿಯಬಾರದು. ಅಂತಹ ನಾಯಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕಾಂಗ್ರೆಸ್ ವರಿಷ್ಠರು ಹಿಂಜರಿಯಬಾರದು.

ವರದಿ ಜಾರಿಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡುತ್ತಿರುವಾಗಲೇ, ಅತ್ತ ಒಕ್ಕಲಿಗರ ಸಂಘಟನೆಯೊಂದು ‘‘ಹೊಸದಾಗಿ ಸಮೀಕ್ಷೆ’’ಯನ್ನು ಮಾಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟಿದೆ. ವರದಿಯೊಳಗೆ ಏನಿದೆ, ಎಲ್ಲಿ ತಪ್ಪಾಗಿದೆ ಎನ್ನುವುದು ಇನ್ನೂ ಸ್ಪಷ್ಟವಿಲ್ಲದೇ ಇರುವಾಗ ಸಂಘಟನೆ, ಸಮೀಕ್ಷೆ ಸರಿಯಿಲ್ಲ ಎಂದು ತಕರಾರು ತೆಗೆಯುವುದೇ ವಿಚಿತ್ರವಾಗಿದೆ.

ಆಳದಲ್ಲಿ ಆ ಸಂಘಟನೆಗೆ ವರದಿಯಲ್ಲಿರುವ ಸತ್ಯಾಂಶಗಳು ಬಹಿರಂಗವಾಗುವುದು ಮತ್ತು ಜಾರಿಗೊಳ್ಳುವುದು ಬೇಡವಾಗಿದೆ. ಇಂದು ಈ ವರದಿಯನ್ನು ಕುಂಟು ನೆಪ ತೆಗೆದು ತಿರಸ್ಕರಿಸುವ ಸಂಘಟನೆಗಳು ನಾಳೆ ಹೊಸದಾಗಿ ಸಮೀಕ್ಷೆ ನಡೆದರೂ ಅದನ್ನೂ ಅದು ಬೇರೆ ಬೇರೆ ನೆಪಗಳನ್ನು ಒಡ್ಡಿ ತಿರಸ್ಕರಿಸುವುದರಲ್ಲಿ ಅನುಮಾನವಿಲ್ಲ.

ವಿಪರ್ಯಾಸವೆಂದರೆ, ಕಾಂಗ್ರೆಸ್‌ನೊಳಗಿರುವ ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ಈಗಲೂ ಸಮೀಕ್ಷೆಯ ಬಗ್ಗೆ ತಮ್ಮ ತಮ್ಮ ಜಾತಿ ಸಂಘಟನೆಗಳ ಮನವೊಲಿಸುವುದರಲ್ಲಿ ವಿಫಲವಾಗಿದ್ದಾರೆ. ಜಾತಿ ಗಣತಿಯನ್ನು ಜಾರಿಗೊಳಿಸುವಲ್ಲಿ ಸಿದ್ದರಾಮಯ್ಯ ತನ್ನ ಪಕ್ಷದೊಳಗಿರುವ ಬಲಿಷ್ಟ ಜಾತಿ ಶಕ್ತಿಗಳಿಗೆ ಹೆದರುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಒಂದೆಡೆ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿಯ ಪರವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿಗಣತಿಯನ್ನು ನಡೆಸುವುದಾಗಿ ರಾಹುಲ್‌ಗಾಂಧಿ ಭರವಸೆಯನ್ನು ನೀಡಿದ್ದಾರೆ.

ಕಳೆದ ಸೆಪ್ಟಂಬರ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಕೂಡ ಜಾತಿ ಗಣತಿಯ ಬಗ್ಗೆ ಮೃದು ನಿಲುವು ತಳೆದಿದ್ದಾರೆ. ಹೀಗಿರುವಾಗ, ರಾಜ್ಯದಲ್ಲಿ ಪೂರ್ಣ ಪ್ರಮಾಣದ ಜನಬೆಂಬಲವಿರುವ ಕಾಂಗ್ರೆಸ್ ಸರಕಾರಕ್ಕೆ ಜಾತಿ ಗಣತಿಯ ಕುರಿತಂತೆ ಸ್ಪಷ್ಟ ನಿಲುವಿಗೆ ಬರಲು ಸಾಧ್ಯವಾಗದೇ ಇರುವುದು ದೊಡ್ಡ ಹಿನ್ನಡೆಯಾಗಿದೆ.

ಒಳಮೀಸಲಾತಿ ಬಗೆಹರಿಯದ ಗೊಂದಲ


ಸಾಮಾಜಿಕ ನ್ಯಾಯ ಎನ್ನುವ ಪದಗುಚ್ಛ ಕಾಂಗ್ರೆಸ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಳ ಆಪ್ಯಾಯಮಾನವಾದುದು. ಒಳ ಮೀಸಲು ಕೂಡ ಸಾಮಾಜಿಕ ನ್ಯಾಯದ ಭಾಗ. ಈ ಸೌಲಭ್ಯಕ್ಕಾಗಿ ಕಾಂಗ್ರೆಸ್‌ನಲ್ಲಿರುವ ಎಸ್‌ಸಿ ಎಡಗೈ ಪಂಗಡದವರು ಹಲವು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಬಲಗೈ ಪ್ರಾಬಲ್ಯವಿರುವುದರಿಂದ ನ್ಯಾಯಯುತವಾದ ಈ ಬೇಡಿಕೆ ಸಂಬಂಧದಲ್ಲಿ ದೃಢ ನಿರ್ಧಾರ ಕೈಗೊಳ್ಳಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಒಳಮೀಸಲಾತಿಯ ಬಗ್ಗೆಯೂ ರಾಜ್ಯ ಸರಕಾರ ಗೊಂದಲದಲ್ಲಿದೆ. ಸುಪ್ರೀಂಕೋರ್ಟ್ ಒಳ ಮೀಸಲಾತಿ ಅನುಷ್ಠಾನದ ಜವಾಬ್ದಾರಿಯನ್ನು ರಾಜ್ಯಗಳ ಮೇಲೆ ಹಾಕಿದಾಗ, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದರು. ದಲಿತ ಸಮುದಾಯದ ಒಂದು ಗುಂಪು ಒಳ ಮೀಸಲಾತಿಯ ಬೇಡಿಕೆಯಿಟ್ಟಾಗ ರಾಜ್ಯ ಸರಕಾರಗಳು ಕೇಂದ್ರ ಮತ್ತು ಸುಪ್ರೀಂಕೋರ್ಟ್‌ನ ಕಡೆಗೆ ಕೈತೋರಿಸಿದ್ದವು.

ಇತ್ತೀಚೆಗೆ, ಸುಪ್ರೀಂಕೋರ್ಟ್ ಹಸಿರು ನಿಶಾನೆ ನೀಡಿದ ನಂತರ, ಸರ್ಕಾರ ಮೀನಾಮೇಷ ಎಣಿಸುತ್ತಿದೆ. ತೆಲಂಗಾಣದಲ್ಲಿ ಈಗಾಗಲೇ ಅಲ್ಲಿನ ಕಾಂಗ್ರೆಸ್ ಸರಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಅಧ್ಯಯನ ಮಾಡಿ ಶಿಫಾರಸು ಮಾಡಲು ಒಂದು ಸಂಪುಟ ಉಪ ಸಮಿತಿಯನ್ನು ರಚಿಸಿದೆ. ಪರಿಶಿಷ್ಟ ಜಾತಿಗಳ ವಿವಿಧ ಸಂಘಸಂಸ್ಥೆಗಳಿಂದ ಈ ಸಮಿತಿ ಈಗಾಗಲೇ ಹೇಳಿಕೆಗಳನ್ನು ಆಹ್ವಾನಿಸಿದೆ. ಕನಿಷ್ಠ ಇಷ್ಟನ್ನಾದರೂ ಮಾಡಲು ರಾಜ್ಯ ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ? ಎನ್ನುವ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.

ದೇವರಾಜ ಅರಸು ಅವರ ಅನುಯಾಯಿ ಎಂದು ಹೇಳಿಕೊಳ್ಳುತ್ತ ಆಗಾಗಾ ರಾಮ್‌ ಮನೋಹರ್‌ ಲೋಹಿಯಾ ಅವರ ಚಿಂತನೆಗಳನ್ನು ಸದನದ ಒಳಗೆ ಮತ್ತು ಸಾರ್ವಜನಿಕ ಜೀವನದಲ್ಲಿ ವ್ಯಕ್ತಪಡಿಸುವ ಸಿದ್ದರಾಮಯ್ಯನವರು ಜಾತಿ ಜನಗಣತಿ ಮತ್ತು ಎಸ್‌ಸಿ ಎಸ್ಟಿ ಒಳಮೀಸಲಾತಿ ಕುರಿತು ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳುವ ಸಮಯ ಬಂದಿದೆ.

ಸಿದ್ದರಾಮಯ್ಯನವರು ಜನರಿಗೆ ಮಾತು ನೀಡಿದಂತೆ ತಮ್ಮ ಮಾತಿಗೆ ಬದ್ಧರಾಗಿ ಐತಿಹಾಸಿಕ ನಿರ್ಣಯ ಕೈಗೊಂಡರೆ ಅವರು ಸದಾ ಪಠಿಸುವ ಸಾಮಾಜಿಕ ನ್ಯಾಯಕ್ಕೆ ಒಂದು ಅರ್ಥ ಬರಲಿದೆ. ಇಲ್ಲವಾದರೆ ತಮ್ಮ ಕುರ್ಚಿ ಕಾಪಾಡಿಕೊಳ್ಳುವ ಆತಂಕದಲ್ಲಿ ತಮ್ಮ ವಿಚಾರ ಧಾರೆ, ಜನರಿಗೆ ನೀಡಿದ ವಚನಗಳಿಂದ ಹಿಂದೆ ಸರಿದರೆ ನೂರರಲ್ಲಿ ಒಬ್ಬರಾಗಿ ಇತಿಹಾಸದಲ್ಲಿ ಕಳೆದುಹೋಗಲಿದ್ದಾರೆ.

ಕರ್ನಾಟಕ ಈಗಾಗಲೇ 23 ಮುಖ್ಯಮಂತ್ರಿಗಳನ್ನು ಕಂಡಿದೆ, ಇನ್ನೂ ಅನೇಕರು ಆ ಸಾಲಿಗೆ ಸೇರುತ್ತಾರೆ. ಇವರ ನಡುವೆ ವಿಶೇಷ ಎನ್ನಿಸುವ ಮತ್ತು ಇತಿಹಾಸ ತನ್ನನ್ನು ಹೇಗೆ ಗುರುತಿಸಬೇಕು ಎಂದು ನಿರ್ಧರಿಸುವ ಅವಕಾಶ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಯಲ್ಲೇ ಇದೆ. ಜಾತಿ ಗಣತಿ, ವರದಿಯನ್ನು ಸಂಪುಟದಲ್ಲಿ ಮಂಡಿಸಿ ಅದನ್ನು ಜಾರಿಗೊಳಿಸುವ ಮತ್ತು ಒಳಮೀಸಲಾತಿ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುವ ವಿಷಯದಲ್ಲಿ ಮುಖ್ಯಮಂತ್ರಿಯವರು ಇನ್ನಾದರೂ ಇಚ್ಛಾಶಕ್ತಿಯನ್ನು ಪ್ರಕಟಿಸಬೇಕಾಗಿದೆ.

ಈಗ ಮೂಡಾ, ವಾಲ್ಮೀಕಿ ಬಿಸಿ ಇಳಿದಿದೆ, ಸದ್ಯಕ್ಕೆ ಮುಖ್ಯಮಂತ್ರಿಯ ಬದಲಾವಣೆ ಚರ್ಚೆ ಹಿನ್ನೆಲೆಗೆ ಸರಿದಿದೆ. ಉಪಚುನಾವಣೆ ಸೋಲಿನ ನಂತರ ಬಿಜೆಪಿ ಮತ್ತು ಜೆಡಿಎಸ್‌ ತಮ್ಮ ಆಂತರಿಕ ಒಳಜಗಳಗಳನ್ನು ನಿವಾರಿಸುವುದರಲ್ಲಿ ಹೆಣಗುತ್ತಿವೆ. ಇದೇ ಸಮಯದಲ್ಲಿ ಸಿದ್ದರಾಮಯ್ಯನವರಿಗೆ ಜಾತಿ ಜನಗಣತಿ, ಒಳಮೀಸಲಾತಿ, ಸಾಮಾಜಿಕ ಬದಲಾವಣೆ, ಮೀಸಲಾತಿಯ ಕಾನೂನುಗಳನ್ನು ಜಾರಿಗೆ ತರಲು ಸುವರ್ಣಾವಕಾಶ. ಸಮಾಜದ ಎಲ್ಲಾ ವರ್ಗವನ್ನು ತೃಪ್ತಿಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಗಾಂಧಿ, ಅಂಬೇಡ್ಕರ್‌, ಅಬ್ರಾಹಂ ಲಿಂಕನ್‌ ವರೆಗೆ ಎಲ್ಲ ನಾಯಕರು ಪ್ರಗತಿಪರ ಮತ್ತು ಸಾಮಾಜಿಕ ಬದಲಾವಣೆಗಳನ್ನು ತರಲು ಮುಂದಾದಾಗ ಸಾಮಾಜದ ಪ್ರಿವಿಲೇಜ್ಡ್‌ ವರ್ಗಗಳಿಂದ ಕಠು ವಿಮರ್ಶೆ ಮತ್ತು ವಿರೋಧವನ್ನು ಎದುರಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಏನು ಹೊರತಾಗಿಲ್ಲ. ಇದರ ಅರಿವು ಅವರಿಗಿದೆ.

ಆಂತರಿಕ ವಿರೋಧವನ್ನು ನಿಭಾಯಿಸಲಾಗದೇ, ವೊಕ್ಕಲಿಗ-ಲಿಂಗಾಯತ ಸಮುದಾಯದ ಕೋಪಕ್ಕೆ ಗುರಿಯಾಗುವ ಆಂತಂಕದಲ್ಲಿ ಮುಖ್ಯಮಂತ್ರಿಯವರು ದ್ವಂದ್ವದಲ್ಲಿ ಸಿಲುಕಿದಂತಿವೆ. ಈ ಸಮುದಾಯಗಳು ಕಾಂಗ್ರೆಸ್‌ ಅಥವಾ ಸಿದ್ದರಾಮಯ್ಯನವರನ್ನು ಎಂದೂ ಕೂಡ ದೊಡ್ಡ ಮಟ್ಟದಲ್ಲಿ ಬೆಂಬಲಿಸಿಲ್ಲ. ಕೆಲವು ಸ್ಥಳೀಯ ಕಾರಣದಿಂದ ಅಲ್ಲಲ್ಲಿ ಒಂದಷ್ಟು ವೊಕ್ಕಲಿಗ ಮತ್ತು ಲಿಂಗಾಯತ ಮತಗಳು ಕಾಂಗ್ರೆಸ್‌ಗೆ ಬಂದಿವೆ. ಅವು ಆಡಳಿತ ವಿರೋಧಿ ಮತಗಳೇ ಹೊರತು ಕಾಂಗ್ರೆಸ್‌ ನ ಕೋರ್‌ ವೋಟ್‌ಗಳಲ್ಲ. ಇಂದಿರಾಗಾಂಧಿಯವರ ಅವಧಿಯಿಂದ ಇತ್ತೀಚಿನ 2024 ರ ಲೋಕಸಭಾ ಚುನಾವಣೆ ವರೆಗೆ ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತಿರುವುದು ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳೂ. ಜೊತೆಯಲ್ಲಿ ಜಾತಿ ಗಣತಿ ಮತ್ತು ಎಸ್‌ಸಿ ಒಳ ಮೀಸಲಾತಿ ಯಾವುದೇ ಸಮುದಾಯದ ಹಕ್ಕುಗಳನ್ನು ಕಿತ್ತುಕೊಳ್ಳುವುದಿಲ್ಲ. ಹೀಗಿರುವಾಗ ಇದನ್ನು ಸರ್ಕಾರ ಜನಸಾಮಾನ್ಯರಿಗೆ ಅರ್ಥಮಾಡಿಸಬೇಕು.

ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿಯವರು ಲೋಕಸಭೆ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಜಸಂಖ್ಯೆಗೆ ಅನುಸಾರ ಅಧಿಕಾರ ಮತ್ತು ಪ್ರಾತಿನಿಧ್ಯಕ್ಕೆ ಒತ್ತಾಯಿಸಿದ್ದರು. ಮುಖ್ಯಮಂತ್ರಿಯವರು ಈ ನಿಲುವಿಗೆ ಸಹಮತ ಹೊಂದಿದ್ದಾರೆ ಎಂಬುದನ್ನು ಕ್ರಿಯೆಯ ಮೂಲಕ ಸಾಬೀತುಪಡಿಸಬೇಕು. ಇನ್ನೂ ಕಾಲ ಮಿಂಚಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಿವಂಗತ ದೇವರಾಜ ಅರಸು ಅವರ ದಾರಿಯಲ್ಲಿ ನಡೆಯಲು ಮುಕ್ತ ಅವಕಾಶವಿದೆ. ಇದಕ್ಕೆ ಧೃಢವಾದ ರಾಜಕೀಯ ಇಚ್ಛಾಶಕ್ತಿ ಒಂದು ಬೇಕಿದೆ.

ಲೇಖನ: ರಾಜೇಶ್‌ ಮಲವಳ್ಳಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page