Thursday, June 19, 2025

ಸತ್ಯ | ನ್ಯಾಯ |ಧರ್ಮ

ಜಾತಿ ಸಮೀಕ್ಷೆ ಸಮಾಜವನ್ನು ವಿಭಜಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಅ.07: ಜಾತಿ ಗಣತಿ ಸಮಾಜವನ್ನು ವಿಭಜಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಾತಿ ಗಣತಿ ಸಮಾಜವನ್ನು ವಿಭಜಿಸುತ್ತದೆ ಎಂದು ಪ್ರಧಾನಿಗಳು ಹೇಳಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಬಡತನ ನಿವಾರಣೆ ಕಾರ್ಯಕ್ರಮ ರೂಪಿಸುವಾಗ ಸಮ ಸಮಾಜ ನಿರ್ಮಾಣ ಮಾಡಬೇಕು. ಸ್ವಾತಂತ್ರ್ಯ ಬಂದು 76 ವರ್ಷಗಳ ನಂತರ ಈಗ ಯಾವ ಜಾತಿ ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ಯಾವ ಸ್ಥಿತಿಗತಿಯಲ್ಲಿದೆ ಎಂದು ತಿಳಿಯಬೇಕು.

ನಮ್ಮದು ಜಾತಿ ವ್ಯವಸ್ಥೆಯ ಸಮಾಜ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಸಮಾನತೆ ಎದುರಿಸುತ್ತಿರುವ ಜಾತಿಗಳನ್ನು ಮುಖ್ಯವಾಹಿನಿಗೆ ತರಲು ಅಂಕಿಅಂಶಗಳು ಅಗತ್ಯ. ಅದಕ್ಕಾಗಿ ಜಾತಿಗಣತಿ ಮಾಡಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ- ಆರ್ಥಿಕ ಸಮೀಕ್ಷೆ ಹಾಗೂ ಜಾತಿ ಸಮೀಕ್ಷೆ ಆಗಬೇಕು. ಇದು ಖಂಡಿತವಾಗಿಯೂ ಸಮಾಜವನ್ನು ಒಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ನವೆಂಬರ್ ನಲ್ಲಿ ಜಾತಿ ಸಮೀಕ್ಷೆ ವರದಿ ಸಲ್ಲಿಕೆ

ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಸಲ್ಲಿಸಿದ ವರದಿಯನ್ನು ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ವೀಕರಿಸಿರಲಿಲ್ಲ. ಈಗ ಅಧ್ಯಕ್ಷರು ಬದಲಾಗಿದ್ದು, ಅವರಿಗೆ ಕಾಂತರಾಜು ಮಾದರಿಯ ವರದಿಯನ್ನು ಸಲ್ಲಿಸುವಂತೆ ಹೇಳಿದ್ದೇನೆ. ಅವರು ಇದಕ್ಕೆ ಸ್ಪಂದಿಸಿದ್ದು, ಅವರು ನವೆಂಬರ್ ತಿಂಗಳಿನಲ್ಲಿ ವರದಿ ನೀಡುವುದಾಗಿ ಹೇಳಿದ್ದಾರೆ ಎಂದರು.

ಪ್ರತ್ಯೇಕ ವರ್ಗ; ಸಮೀಕ್ಷೆ ವರದಿ ಬಂದ ನಂತರ ಪರಿಶೀಲನೆ

ಬಹಳ ಹಿಂದುಳಿದವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ವರ್ಗಬೇಕೆನ್ನುವ ಕುರಿತು ಕರ್ನಾಟಕದಲ್ಲಿ ಬೇಡಿಕೆಯಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ಅದನ್ನು ಮಾಡಲು ಮೊದಲು ಹಿಂದುಳಿದ ವರ್ಗಗಳ ಸಮೀಕ್ಷೆ ವರದಿ ಬರಬೇಕು. ಅದು ಬಂದ ನಂತರ ಆ ಕುರಿತು ಪರಿಶೀಲಿಸಲಾಗುವುದು” ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page