Friday, June 20, 2025

ಸತ್ಯ | ನ್ಯಾಯ |ಧರ್ಮ

ಶಬರಿಮಲೆ ಪ್ರಧಾನ ಅರ್ಚಕರ ಹುದ್ದೆಯ ನೇಮಕಾತಿಯಲ್ಲಿ ಜಾತಿ ತಾರತಮ್ಯ : ಪ್ರಕರಣ ವಿಚಾರಣೆ ಮುಂದೂಡಿಕೆ

ಕೇರಳ: ತಿರುವಾಂಕೂರು ದೇವಸ್ವಂ ಮಂಡಳಿಯವರು ಜಾತಿ ಆಧಾರವಾಗಿ ಶಬರಿಮಲೆ ದೇಗುಲದ ಪ್ರಧಾನ ಅರ್ಚಕರ ಹುದ್ದೆಗೆ ಆಯ್ಕೆ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ದಿನಾಂಕವನ್ನು ಕೇರಳ ಹೈಕೋರ್ಟ್‌ ಮುಂದೂಡಿದೆ.

ತಿರುವಾಂಕೂರು ದೇವಸ್ವಂ ಮಂಡಳಿಯು, ಮೇ 27, 2021ರಲ್ಲಿ ಅಧಿಸೂಚನೆಯೊಂದನ್ನು ಹೊರಡಿಸಿ, ಶಬರಿಮಲೆ ಧರ್ಮಶಾಸ್ತಾ ದೇವಸ್ತಾನ ಮತ್ತು ಮಲ್ಲಿಕಪುರಂ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರ ಹುದ್ದೆಗೆ ಮಲಯಾಳ ಬ್ರಾಹ್ಮಣ ಸಮುದಾಯದ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿತ್ತು.

ಈ ಅಧಿಸೂಚನೆಯನ್ನು ಪ್ರಶ್ನಿಸಿ, ಜುಲೈ 2021ರಲ್ಲಿ ವಕೀಲ ಬಿ.ಜಿ ಹರೀಂದ್ರನಾಥ್‌ ಅವರ ಮೂಲಕ  ಸಲ್ಲಿಸಲಾದ ಮನವಿಯೊಂದು ಇದು ಸಂವಿದಾನದ 14,15,16,17 ಮತ್ತು 21ನೇ ವಿಧಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯನ್ನು ದೂರಿತ್ತು.

ಈ ಕುರಿತು ಶನಿವಾರದಂದು ಕೇರಳ ಹೈಕೋರ್ಟ್‌ನಲ್ಲಿ ವಿಶೇಷ ಕಲಾಪ ನಡೆಸಲಾಗಿದ್ದು, ಹರೀಂದ್ರನಾಥ್‌ ಅವರು ತಿರುವಾಂಕೂರು ದೇವಸ್ವಂ ಮಂಡಳಿಯ ನೇಮಕಾತಿ ನಿಯಮಗಳ ಆಧಾರದ ಮೇಲೆ ತಮ್ಮ ವಾದವನ್ನು ಮಂಡಿಸಿದ್ದಾರೆ. ಇತರ ಅರ್ಜಿದಾರರ ಪರವಾಗಿ, ಡಾ. ಮೋಹನ್‌ ಗೋಪಾಲ್‌ರವರು ಮಾತನಾಡಿದ್ದು, ಮಂಡಳಿಯ ಈ ಅಧಿಸೂಚನೆಯು  ಸಂವಿಧಾನಕ್ಕೆ  ಹೇಗೆ ವಿರೋಧವಾಗಿದೆ ಎಂಬುದರ ಬಗ್ಗೆ ತಮ್ಮ ವಾದವನ್ನು ಮಂಡಿಸಿದ್ದಾರೆ.

ಎನ್‌.ಆದಿತ್ಯನ್‌ನ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಆಡಳಿತದಲ್ಲಿರುವ ಶಿವನ ದೇವಾಲಯದಲ್ಲಿ ಅರ್ಚಕರಾಗಿ ಮಲಯಾಳೇತರ ಬ್ರಾಹ್ಮಣರನ್ನು ನೇಮಿಸುವ  ಹಕ್ಕನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಇದೀಗ ಅದೇ ಮಂಡಳಿಯ ಅಡಿಯಲ್ಲಿ ಬರುವ ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರ ಹುದ್ದೆಗೆ ಮಲಯಾಳ ಬ್ರಾಹ್ಮಣ ಸಮುದಾಯದರಿಗೆ ಮಾತ್ರ ಅವಕಾಶ ಯಾಕೆ? ಎಂಬುದೇ ಪ್ರಥಮ ವಾದವಾಗಿದೆ.

ʼಶಬರಿಮಲೆ ಎಲ್ಲಾ ಜಾತಿ ಮತ್ತು ಧರ್ಮದ ಜನರು ನಡೆದುಕೊಳ್ಳುವ ದೇವಾಲಯ, ಹಾಗಿರುವಾಗ ಈ ನಿರ್ಬಂಧ ಏಕೆ? ಎಂದು ಮೋಹನ್‌ ಗೋಪಾಲ್‌ ಪ್ರಶ್ನಿಸಿದ್ದು, ದೇವಸ್ಥಾನವನ್ನು  ಈ ಅಸ್ಪೃಶ್ಯತೆ ಆಚರಣೆಯಿಂದ ಮುಕ್ತಗೊಳಿಸಬೇಕು ಎಂದು ತಮ್ಮ ವಾದವನ್ನು ಮಂಡಿಸಿದ್ದಾರೆ.

ಶನಿವಾರದಂದು ಈ ಅರ್ಜಿಯ ಕುರಿತು ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾ.ಅನಿಲ್‌ ಕೆ ನರೇಂದ್ರನ್‌ ಮತ್ತು ನ್ಯಾ.ಪಿ.ಜಿ ಅಜಿತ್‌ಕುಮಾರ್‌ ಅವರಿದ್ದ ಪೀಠವು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 17,2022ಕ್ಕೆ ದಿನಾಂಕವನ್ನು ಮುಂದೂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page