Home ದೇಶ ಘಟನೆ ಖಂಡಿಸಿಯೂ ಸರ್ಕಾರಗಳ ವಿರುದ್ಧ ತುಟಿ ಬಿಚ್ಚದ ಸೆಲೆಬ್ರಿಟಿಗಳು

ಘಟನೆ ಖಂಡಿಸಿಯೂ ಸರ್ಕಾರಗಳ ವಿರುದ್ಧ ತುಟಿ ಬಿಚ್ಚದ ಸೆಲೆಬ್ರಿಟಿಗಳು

0

ಮಣಿಪುರದ ವಿಡಿಯೋ ʼವೈರಲ್‌ʼ ಆಗುತ್ತಿದ್ದಂತೆ ಎಲ್ಲೆಡೆಯಿಂದ ಕರುಣಾ ರಸ ಉಕ್ಕಿ ಹರಿದು ಬರುತ್ತಿದೆ. ಹೀಗೆ ಈ ಕುರಿತು ʼಅಯ್ಯೋ ಪಾಪʼ, ʼಇದು ತಲೆ ತಗ್ಗಿಸುವ ಘಟನೆʼ ಇತ್ಯಾದಿ ತಲೆಬರಹಗಳೊಡನೆ ಸೆಲೆಬ್ರಿಟಿಗಳ ಟ್ವೀಟ್‌, ಇನ್ಸ್ಟಾ ಪೋಸ್ಟುಗಳ ಮಹಾಪೂರವೂ ಹರಿದಿದೆ.

ಆದರೆ ಈ ಘಟನೆಗೆ ಜನಾಂಗೀಯ ಗುಂಪುಗಳು ಎಷ್ಟು ಕಾರಣವೋ ಪ್ರಭುತ್ವಗಳೂ ಅಷ್ಟೇ ಕಾರಣ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಎರಡೂ ತಿಂಗಳಿಗೂ ಹೆಚ್ಚು ಕಾಲದಿಂದ ಮಣಿಪುರದಲ್ಲಿ ಇಂಟರ್ನೆಟ್‌ ಇಲ್ಲ. ಅಲ್ಲಿ ಏನಾಗುತ್ತಿದೆಯೆನ್ನುವುದು ಹೊರ ಜಗತ್ತಿಗೆ ತಿಳಿಯದಿರಲು ಬೇಕಾಗಿರುವುದೆಲ್ಲವನ್ನೂ ಸರ್ಕಾರಗಳು ಮಾಡಿವೆ. ಜನರ ಕೈಗೆ ಅಪಾಯಕಾರಿ ಆಯುಧಗಳಾದ AK ಸರಣಿಯ ರೈಫಲ್‌ಗಳು, ಗುಂಡುಗಳು, ಪಿಸ್ತೂಲುಗಳು ಹೇಗೆ ತಲುಪಿದವು ಎನ್ನುವ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಇದು ಆಡಳಿತ ವೈಫಲ್ಯವಲ್ಲದಿದ್ದರೆ ಇನ್ಯಾವುದು?

ಇಂದು ಮಣಿಪುರ ಘಟನೆಯ ಕುರಿತು ಅನುಕಂಪದಿಂದ ಬರೆಯುತ್ತಿರುವ ಸೆಲೆಬ್ರಿಟಿಗಳಲ್ಲಿ ಬಹುತೇಕರು ಈ ಹಿಂದೆ UPA ಸರ್ಕಾರವಿದ್ದ ಸಮಯದಲ್ಲಿ ರಾಜಕೀಯ ಕಾರ್ಯಕರ್ತರಂತೆ ಹೇಳಿಕೆಗಳನ್ನು ಕೊಡುತ್ತಿದ್ದವರೇ ಆಗಿದ್ದಾರೆ. ಅಕ್ಷಯ್‌ ಕುಮಾರ್‌, ಅಮಿತಾಭ್‌ ಬಚ್ಚನ್‌ ಅವರುಗಳು ಇಂದು ಸರ್ಕಾರದ ವಿರುದ್ಧ ಯಾವುದೇ ಕಾರಣಕ್ಕೂ ಮಾತನಾಡುವುದಿಲ್ಲ. ಆದರೆ ಈ ಹಿಂದೆ ಅವರು ಸರ್ಕಾರದ ವಿರುದ್ಧ ಟೀಕಿಸಿ ಬರೆದಿದ್ದರು. ಇವರು ಹೀಗೆ ಟೀಕಿಸಿ ಬರೆಯದಿರುವುದರ ಹಿಂದೆ ಬಹುಸಂಖ್ಯಾತ ಬಲಪಂಥೀಯ ವಾದಿ ಅಭಿಮಾನಿಗಳನ್ನು ಕಳೆದುಕೊಳ್ಳುವ ಭಯವಿದೆ. ಮತ್ತು ರಾಜಕಾರಣಿಗಳಿರುವಂತೆ ಸರ್ಕಾರಿ ಸಂಸ್ಥೆಗಳಾದ IT, ED ಯಂತಹ ಸಂಸ್ಥೆಗಳ ಭಯವೂ ಇದೆ.

ನಿನ್ನೆ ಇದ್ದಕ್ಕಿದ್ದಂತೆ ಕೆಲವು ಬಾಲಿವುಡ್‌ ಸೆಲೆಬ್ರೆಟಿಗಳು ಜೀವ ತಳೆದು ಈಗ ʼಟ್ರೆಂಡ್‌ʼ ಆಗಿರುವ ಮಣಿಪುರ ವಿಷಯದ ಕುರಿತು ಸೆಲೆಕ್ಟಿವ್‌ ಆಗಿ ಮಾತನಾಡಿ, ಯಾರನ್ನೂ ದೂರದೆ ಈ ವಿಷಯದಲ್ಲೂ ಒಂದಷ್ಟು ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಸಾಧ್ಯವಾಗುವಂತೆ ಟ್ವೀಟ್‌, ಇನ್ಸ್ಟಾ ಪೋಸ್ಟುಗಳನ್ನು ಮಾಡಿದ್ದಾರೆ. ಸಹಜವಾಗಿಯೇ ಇದು ಮಣಿಪುರ ಮೂಲದ ಜನರನ್ನು ಕರಳಿಸಿದೆ.

https://www.instagram.com/p/Ctyvy9sNxaF/?utm_source=ig_web_copy_link&igshid=MzRlODBiNWFlZA==

ಬಾಲಿವುಡ್‌ ನಟರ ಸೋಷಿಯಲ್‌ ಮೀಡಿಯಾ ಪೋಸ್ಟುಗಳ ಕುರಿತು ಪ್ರತಿಕ್ರಿಯಿಸಿರುವ ಮಣಿಪುರಿ ನಟಿ, ಮಾಡೆಲ್‌ ಲಿನ್‌ ಲೈಶ್ರಾಮ್‌ “ನಾವು ಇಷ್ಟು ದಿನದಿಂದ ಈ ಕುರಿತು ಕೂಗುತ್ತಿದ್ದರೂ ನಿಮಗೆ ನಮ್ಮ ದನಿ ಕೇಳಲಿಲ್ಲ. ಈಗ ಇದು ಸುದ್ದಿಯಲ್ಲಿರುವುದರಿಂದಾಗಿ ಜನರ ಗಮನವನ್ನು ಸೆಳೆಯುವ ಸಲುವಾಗಿ ಈಗ ಪೋಸ್ಟ್‌ ಮಾಡುತ್ತಿದ್ದೀರ?” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮಣಿಪುರದಲ್ಲಿ ಜನಸಮೂಹವೊಂದು ರಸ್ತೆಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಭಯಾನಕ ಮತ್ತು ಆಘಾತಕಾರಿ ವಿಡಿಯೋ ಹೊರಬಿದ್ದ ನಂತರ ಇದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಬಾಲಿವುಡ್ ನಟ ಅಕ್ಷಯ್ ಕುಮಾರ್, ಕಿಯಾರಾ ಅಡ್ವಾಣಿ, ರಿತೇಶ್ ದೇಶ್‌ಮುಖ್, ಕರೀನಾ ಕಪೂರ್ ಖಾನ್, ಸಂಜಯ್ ದತ್, ವಿವೇಕ್ ಅಗ್ನಿಹೋತ್ರಿ ಮತ್ತು ಇತರರು ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಇದನ್ನು ಖಂಡಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ನಡೆದ ಅಮಾನವೀಯ ಘಟನೆ ಇದಾಗಿದೆ. ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಲಾಗಿತ್ತು. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

You cannot copy content of this page

Exit mobile version