Friday, June 14, 2024

ಸತ್ಯ | ನ್ಯಾಯ |ಧರ್ಮ

ಚಿತ್ರದುರ್ಗದಲ್ಲಿ ಸೆ.10 ರಂದು ಮಕ್ಕಳೊಡನೆ ನಾವು- ಬೃಹತ್‌ ಮೆರವಣಿಗೆ

ಚಿತ್ರದುರ್ಗ: ಇತ್ತೀಚೆಗೆ ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಈ ಕಾಲದ ಮಕ್ಕಳಿಗೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನುವ ಪ್ರಶ್ನೆ ಕಾಡುವಂತಾಗಿದೆ. ಇದರಿಂದ ಸುಮಾರು ಹೆಣ್ಣು ಮಕ್ಕಳು ನೊಂದು ಕಣ್ಣೀರಿಡುವಂತಾಗಿದೆ. ಈ ರೀತಿ ಬಲಿಷ್ಠರ ಮುಷ್ಟಿಗೆ ಸಿಕ್ಕಿ, ನೊಂದು, ಉಸಿರುಗಟ್ಟಿ ಬದುಕುತ್ತಿರುವ ಎಳೆಯ ಜೀವಿಗಳಿಗೆ ಸಾಂತ್ವನ, ದೈರ್ಯ ಹಾಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ದಿನಾಂಕ :10-9-2022ರಂದು ಮೈಸೂರಿನ ಒಡನಾಡಿ ಸಂಸ್ಥೆ ಚಿತ್ರದುರ್ಗದಲ್ಲಿ “ಮಕ್ಕಳೊಡನೆ ನಾವು” ಎನ್ನುವ ಬೃಹತ್ ಜಾಥಾ ಹಮ್ಮಿಕೊಂಡಿದೆ.
“ಮಕ್ಕಳೊಡನೆ ನಾವು” ಎಂಬ ಬೈಕ್‌ ಮೆರವಣಿಗೆಯನ್ನು, ಶನಿವಾರ ಮಧ್ಯಾಹ್ನ 12 ಗಂಟೆಗೆ ಚಿತ್ರದುರ್ಗದ ಕನಕ ಸರ್ಕಲ್‌, ಬರಗೇರಮ್ಮ ದೇವಸ್ಥಾನದ ಹತ್ತಿರ, ಹೊಳಲ್ಕೆರೆ ರಸ್ತೆಯಿಂದ ಆರಂಭಗೊಂಡು ಚಿತ್ರದುರ್ಗದ ಮುಖ್ಯ ರಸ್ತೆಯ ಮೂಲಕ ಬಾಲ ಭವನ (CWC) ತಲುಪಲಿದೆ.

ಮೈಸೂರು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಅವರ ಸಮ್ಮುಖದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಮೆರವಣಿಗೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಿಂದ ಸಂವೇದನಶೀಲ ಮನಸುಳ್ಳವರು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಎಲ್ಲರೂ ಸ್ವಯಂಪ್ರೇರಿತರಾಗಿ ಭಾಗವಹಿಸುವಂತೆ ಜನತೆಗೆ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಕರೆಕೊಟ್ಟಿದ್ದಾರೆ.

ಸಂಸ್ಥೆಯು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಹೀಗಿದೆ:

ಆತ್ಮೀಯ ಮಿತ್ರರೇ ಹಾಗೂ ಸಮಾನ ಮನಸ್ಕ ಪ್ರಗತಿಪರ, ಸಾಮಾಜಿಕ ಬದಲಾವಣೆಯಲ್ಲಿ ತೊಡಗಿಸಿಕೊಂಡ ಸಂಘ ಸಂಸ್ಥೆಗಳ, ಜನಪರ ಸಂಘಟನೆಗಳ ಪದಾಧಿಕಾರಿಗಳೇ, ತಮಗೆಲ್ಲರಿಗೂ ಒಡನಾಡಿಯ ನಮಸ್ಕಾರಗಳು.

ಇತ್ತೀಚೆಗೆ ತಳಮಟ್ಟದ, ದುರ್ಬಲ ಕುಟುಂಬಗಳಿಗೆ ಸೇರಿದ ಇಬ್ಬರು ಮುಗ್ಧ ಬಾಲಕಿಯರ ಮೇಲೆ ಎಸಗಲಾಗಿದ್ದ ಲೈಂಗಿಕ ದೌರ್ಜನ್ಯವನ್ನು ಬಯಲಿಗೆಳೆದು ಅದನ್ನು ಕಾನೂನಿನ ಚೌಕಟ್ಟಿಗೆ ತರುವಲ್ಲಿ ನಿಮ್ಮೆಲ್ಲರಂತೆಯೇ ಮಕ್ಕಳ ಘನತೆಯುಕ್ತ ಬಾಳ್ವೆಗೆ ಹಂಬಲಿಸುವ ಒಡನಾಡಿಯು ಪ್ರಾಮಾಣಿಕವಾಗಿ ಶ್ರಮಿಸಿರುವುದನ್ನು ತಾವೆಲ್ಲರೂ ಗಮನಿಸಿ, ತಾರ್ಕಿಕವಾಗಿ ಚಿಂತಿಸಿ, ಸಕಾಲಿಕವಾಗಿ ನಮಗೂ, ನೊಂದ ಮಕ್ಕಳಿಗೂ ಬೆಂಬಲವನ್ನು ನೀಡಿರುತ್ತೀರಿ. ಅದಕ್ಕಾಗಿ ಅನಂತಾನಂತ ವಂದನೆಗಳು.

ಈ ಒಂದು ಪ್ರಕರಣವು ಹಿಂದೆ ಘಟಿಸಿರುವ ನೂರಾರು ಭಯಾನಕ ಹಾಗೂ ಭೀಭತ್ಸ್ಯಕರವಾದ ಮಕ್ಕಳ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಪ್ರಕರಣಗಳ ಗೋರಿಯನ್ನು ಬಗೆದು ತೆಗೆದು ಸಮಾಜದ ಮುಂದಿಟ್ಟಿದೆ. ನೂರಾರು ಹೆಂಗಳೆಯರು ಕರೆ ಮಾಡಿ, ನಮ್ಮನ್ನು ಹಾರೈಸಿ, ಕಣ್ಣೀರು ಹಾಕಿ ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ನೊಂದ ಬಾಲಕಿಯರು ತಮ್ಮಂತೆಯೇ ಬಹಳಷ್ಟು ಮಕ್ಕಳಿಗೆ ಈ ದುರ್ಗತಿಯಾಗಿರುವುದನ್ನು ಹೇಳಿಕೊಂಡಿರುತ್ತಾರೆ. ಹಾಗಾಗಿ ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಆತ್ಮೀಯರೇ, ಈ ಪ್ರಕರಣಕ್ಕೆ ಮಿಡಿದು ರಾಜ್ಯ ಹಾಗೂ ದೇಶದ ಬಹಳಷ್ಟು ಮಾನವೀಯ ಮನಸುಗಳು ಹಾಗೂ ನಿಜವಾದ ಧಾರ್ಮಿಕರು ಸ್ಪಂದಿಸುತ್ತಿದ್ದಾರೆ. ಇದೊಂದು ಸಾಮಾಜಿಕ ಸಾಂಸ್ಕೃತಿಕ ಬದಲಾವಣೆಯನ್ನು ಉಂಟುಮಾಡಿ, ನಿಜ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪರ್ವಕಾಲ. ಬಲಿಷ್ಠರ ಮುಷ್ಟಿಗೆ ಸಿಕ್ಕಿ, ನೊಂದು, ಉಸಿರುಗಟ್ಟಿ ಬದುಕುತ್ತಿರುವ ಎಳೆಯ ಜೀವಿಗಳಿಗೆ ಸಾಂತ್ವನ ಹಾಗೂ ನ್ಯಾಯ ದೊರಕಿಸುವ ಸಕಾಲ! ಹಾಗಾಗಿ ನಾವೆಲ್ಲರೂ ಒಟ್ಟಾಗಿ ಒಂದೇ ದ್ವನಿಯಾಗಿ ನಿಲ್ಲಬೇಕಾಗಿದೆ. ನ್ಯಾಯ, ಸತ್ಯ ಹಾಗೂ ಮಕ್ಕಳ ಪರನಿಂತ ಸಾರ್ಥಕತೆಯನ್ನು ತಂದುಕೊಳ್ಳಬೇಕಾಗಿದೆ. ಆದುದರಿಂದ ನೊಂದ ಬಾಲಕಿಯರಿಗೆ ಸಾಂತ್ವನ ಹಾಗೂ ಅಭಯ ನೀಡಲು ಹಾಗೂ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹಿಸಲು ರಾಜ್ಯದ ನಾನಾ ಕಡೆಗಳಿಂದ ಪ್ರಜ್ಞಾವಂತ ಜನರು ಸ್ವಯಂ ಪ್ರೇರಿತವಾಗಿ ತಮ್ಮ ಸ್ವಜವಾಬ್ದಾರಿಯಿಂದ ದಿನಾಂಕ 10.9.2022 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಚಿತ್ರದುರ್ಗದ ಕನಕ ವೃತದಲ್ಲಿ ಸಮಾವೇಶಗೊಳ್ಳುತ್ತಿರುವ ಸಂದರ್ಭದಲ್ಲಿ ತಾವು ಹಾಗೂ ತಮ್ಮ ಸಂಗಡಿಗರೆಲ್ಲರೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಹರಿದು ಬಂದು ಮಾನವೀಯತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂಬುದು ನಮ್ಮ ಹಂಬಲವಾಗಿದೆ. ದಯಮಾಡಿ ಈ ವಿಚಾರವನ್ನು ಆದಷ್ಟು ಜನರಿಗೆ ತಿಳಿಸಿ. ಮಕ್ಕಳ ಪರವಾದ ಸಾಮಾಜಿಕ ಧ್ವನಿಯೊಂದು ಇತಿಹಾಸದಲ್ಲಿ ದಾಖಲಾಗಲಿ. ತಮ್ಮ ಮೂಲಕ ಮೌಲ್ಯಾಧಾರಿತ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಳುವಳಿಯೊಂದು ಉದಯಿಸುವಂತಾಗಲಿ. ಅದರ ಯಶಸ್ಸಿನ ಕೃತಾರ್ಥ ಭಾವನೆ ನಮ್ಮೆಲ್ಲರದಾಗಲಿ ಎಂದು ಆಶಿಸುತ್ತಾ ಕಾರ್ಯ ಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ.

ನಿಮ್ಮೆಲ್ಲರ ಸದಾ ನಂಬುಗೆಯ,
ಸ್ಟ್ಯಾನ್ಲಿ – ಪರಶು
ಒಡನಾಡಿ

Related Articles

ಇತ್ತೀಚಿನ ಸುದ್ದಿಗಳು