ನಮ್ಮ ಎಲ್ಲ ಬೆಂಬಲಿಗರಲ್ಲಿ ಕ್ಷಮೆ ಕೋರುತ್ತೇನೆ: ಪೊಲೀಸ್ ಲಾಠಿಚಾರ್ಜ್ ಬೆನ್ನಲ್ಲೇ ಸಿಜೆಪಿ ಸಂಸ್ಥಾಪಕ ದೀಪ್ಕೆ ಹೇಳಿಕೆ

ದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸತ್ತಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯ ವೇಳೆ ಘರ್ಷಣೆ, ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ನಡೆದ ಮರುದಿನ, ಮಂಗಳವಾರದಂದು ಆ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಮ್ಮ ಬೆಂಬಲಿಗರಲ್ಲಿ, ವಿಶೇಷವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರಲ್ಲಿ ಕ್ಷಮೆಯಾಚಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಪೋಸ್ಟ್ ಮಾಡಿರುವ ದೀಪ್ಕೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರ ಮೇಲೆ ಪುರುಷ ಪೊಲೀಸರು “ತೀವ್ರವಾಗಿ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.

“ನಮ್ಮ ಎಲ್ಲ ಬೆಂಬಲಿಗರಲ್ಲಿ, ವಿಶೇಷವಾಗಿ ಪುರುಷ ಪೊಲೀಸ್ ಅಧಿಕಾರಿಗಳಿಂದ ಕ್ರೂರವಾಗಿ ಏಟು ತಿಂದ ಹೆಣ್ಣುಮಕ್ಕಳಲ್ಲಿ ನಾನು ಕ್ಷಮೆ ಕೋರುತ್ತೇನೆ” ಎಂದು ಅವರು ಹೇಳಿದ್ದಾರೆ.

ಪರಿಸ್ಥಿತಿಯನ್ನು ಸಿಜೆಪಿ ನಾಯಕತ್ವ ಇಂತಹುದೇ ರೀತಿಯಲ್ಲಿ ಇನ್ನು ಉತ್ತಮವಾಗಿ ನಿಭಾಯಿಸಬಹುದಿತ್ತು ಎಂಬುದನ್ನು ಒಪ್ಪಿಕೊಂಡ ದೀಪ್ಕೆ, ಪೊಲೀಸರ ಈ ಕ್ರಮದಿಂದ ಪ್ರತಿಭಟನಾಕಾರರನ್ನು ಸೂಕ್ತವಾಗಿ ರಕ್ಷಿಸಲು ತಾನು ವಿಫಲನಾಗಿದ್ದೇನೆ ಎಂದು ಹೇಳಿದ್ದಾರೆ.

“ನಾವು ಇದನ್ನು ಇನ್ನೂ ಉತ್ತಮವಾಗಿ ನಿಭಾಯಿಸಬಹುದಿತ್ತು. ದೆಹಲಿ ಪೊಲೀಸರ ಅಮಾನವೀಯ ಕೃತ್ಯಗಳಿಂದ ನಿಮ್ಮನ್ನು ರಕ್ಷಿಸಲು ನಾನು ಇನ್ನು ಉತ್ತಮವಾಗಿ ಪ್ರಯತ್ನಿಸಬೇಕಿತ್ತು” ಎಂದಿದ್ದಾರೆ.

ಇದರೊಂದಿಗೆ, ಗಾಯಗೊಂಡ ಪ್ರತಿಭಟನಾಕಾರರು ತಮ್ಮನ್ನು ‘ಡೈರೆಕ್ಟ್ ಮೆಸೇಜ್’ ಮೂಲಕ ಸಂಪರ್ಕಿಸುವಂತೆ ಕೋರಿರುವ ದೀಪ್ಕೆ, ಪ್ರತ್ಯೇಕವಾಗಿ ಪ್ರತಿಯೊಬ್ಬರೊಂದಿಗೂ ಮಾತನಾಡಿ ವೈಯಕ್ತಿಕವಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ರಕ್ಷಿಸಲು ಸರ್ಕಾರ ಬಲಪ್ರಯೋಗ ಮಾಡುತ್ತಿದೆ ಎಂದು ಸಿಜೆಪಿ ಸಂಸ್ಥಾಪಕ ಆರೋಪಿಸಿದ್ದಾರೆ. ಸರಣಿ ಪರೀಕ್ಷಾ ಅಕ್ರಮಗಳು ಹಾಗೂ ಅಡಚಣೆಗಳ ನಡುವೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿರುವುದಕ್ಕೆ ಪ್ರಧಾನ್ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂಬ ತಮ್ಮ ಪಕ್ಷದ ಆರೋಪವನ್ನು ಅವರು ಪುನರುಚ್ಚರಿಸಿದ್ದಾರೆ. (ಆದರೆ ಈ ಆರೋಪವು ಸ್ವತಂತ್ರವಾಗಿ ದೃಢಪಟ್ಟಿಲ್ಲ).

ಪೋಲಿಸರ ಈ ದಬ್ಬಾಳಿಕೆಯಿಂದಾಗಿ ಸಂಘಟನೆಯು ತನ್ನ ಹೋರಾಟವನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ದೀಪ್ಕೆ ಸ್ಪಷ್ಟಪಡಿಸಿದ್ದಾರೆ.

“ನಾವೆಲ್ಲರೂ ನಿಮ್ಮ ಪರವಾಗಿ ಹೋರಾಟವನ್ನು ಮುಂದುವರಿಸಲಿದ್ದೇವೆ” ಎಂದು ಅವರು ಹೇಳಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ಸಿಜೆಪಿ ಬೆಂಬಲಿಗರು ಸೋಮವಾರ ಸಂಸತ್ತಿನತ್ತ ಮೆರವಣಿಗೆ ನಡೆಸಲು ಯತ್ನಿಸಿದ್ದರು. ಮಧ್ಯ ದೆಹಲಿಯಲ್ಲಿ ಪ್ರತಿಭಟನಾಕಾರರು ಭದ್ರತಾ ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದಾಗ ಪೊಲೀಸರು ಅಶ್ರುವಾಯು ಮತ್ತು ಲಾಠಿಚಾರ್ಜ್ ಬಳಸಿದ್ದರು.

ಸಂಸತ್ತಿನ ವರ್ಷಾಕಾಲದ ಅಧಿವೇಶನದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ನಿರ್ಬಂಧಗಳು ಅಗತ್ಯವಾಗಿದ್ದವು ಹಾಗೂ ಈ ಪಾದಯಾತ್ರೆಗೆ ಯಾವುದೇ ಅಧಿಕೃತ ಅನುಮತಿ ಇರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಕಲ್ಲು ತೂರಾಟ ಮತ್ತು ಮುಖಾಮುಖಿ ನಡೆದ ಘಟನೆಗಳು ವರದಿಯಾಗಿವೆ.

ಸರ್ಕಾರವು ಸಿಜೆಪಿ ಜೊತೆ ಮಾತುಕತೆ ಆರಂಭಿಸಿದ್ದರೂ ಸಹ ಈ ಪಾದಯಾತ್ರೆ ನಡೆದಿದೆ. ಪಕ್ಷದ ಪ್ರತಿನಿಧಿಗಳು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದು, ನಡ್ಡಾ ಅವರು ಪ್ರತಿಭಟನೆಯನ್ನು ಅಂತ್ಯಗೊಳಿಸಿ ಶಾಂತಿ ಸ್ಥಾಪಿಸಲು ನೆರವಾಗುವಂತೆ ಮನವಿ ಮಾಡಿದ್ದರು.

Related Articles

ಇತ್ತೀಚಿನ ಸುದ್ದಿಗಳು