ಕಳೆದ ಒಂದು ವಾರದಿಂದ ಸುದ್ದಿಯಲ್ಲಿರುವ ಮುಸ್ಲಿಮ್ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕಾಲೇಜು ಸ್ಥಾಪನೆ ಕುರಿತ ವಿಷಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ. ಎಮ್. ಇಬ್ರಾಹಿಮ್ ಪ್ರತಿಕ್ರಿಯಿಸಿದ್ದು, ʼಇದಕ್ಕೆ ತನ್ನ ವಿರೋಧವಿದೆಯೆಂದು ಹೇಳಿದ್ದಾರೆ.ʼ
ಕಲಬುರ್ಗಿಯಲ್ಲಿ ಈ ಕುರಿತು ಸುದ್ದಿಗಾರರೊಡನೆ ಮಾತನಾಡುತ್ತಿದ್ದ ಅವರು, “ವಕ್ಫ್ ಬೋರ್ಡ್ ಕಾಲೇಜು ಸ್ಥಾಪಿಸಬಾರದೆಂದೇನಿಲ್ಲ. ಆದರೆ ಕೇವಲ ಮುಸ್ಲಿಂ ವಿದ್ಯಾರ್ಥಿಗಳಿಗಷ್ಟೇ ಪ್ರವೇಶ ಕೊಡುವ ಕಾಲೇಜುಗಳನ್ನು ಸ್ಥಾಪಿಸಬಾರದು, ಇದಕ್ಕೆ ನನ್ನ ವಿರೋಧವಿದೆ,” ಎಂದರು.
ಮುಂದುವರೆದು ಮಾತನಾಡಿದ ಅವರು, “ಒಂದು ವೇಳೆ ವಕ್ಫ್ ಬೋರ್ಡ್ ಏನಾದರೂ ಅಂತಹ ತೀರ್ಮಾನ ಮಾಡಿದಲ್ಲಿ ಅದನ್ನು ಪ್ರತಿಭಟಿಸುವವರಲ್ಲಿ ನಾನು ಮೊದಲಿಗನಾಗಿರುತ್ತೇನೆ,” ಎಂದೂ ಹೇಳಿದರು.
ರಾಜ್ಯದ ಎಲ್ಲ ಮಕ್ಕಳಿಗೂ ಕಲಿಯುವ ಹಕ್ಕಿದ್ದು, ಕೇವಲ ಒಂದು ಧರ್ಮಕ್ಕಾಗಿ ಕಾಲೇಜು ತೆರೆಯುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಒಂದು ವಾರದ ಹಿಂದೆ ರಾಜ್ಯದಲ್ಲಿ ವಕ್ಫ್ ಬೋರ್ಡ್ ವತಿಯಿಂದ 8 ಕಾಲೇಜುಗಳು ತೆರೆಯಲಿದ್ದು ಅಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಕಾಲೇಜಿಗೆ ಬರಬಹುದು ಎನ್ನುವ ಮಾಹಿತಿಯುಳ್ಳ ಸುದ್ದಿ ಓಡಾಡುತ್ತಿದಾರೂ, ಆ ಸುದ್ದಿಯನ್ನು ಮುಖ್ಯಮಂತ್ರಿಯವರೇ ನಿರಾಕರಿಸಿದ್ದರು. ಅವರ ನಿರಾಕರಣೆಯ ನಂತರವೂ ಆ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದ್ದವು. ಈಗ ಆ ಹೇಳಿಕೆಗಳ ಸಾಲಿಗೆ ಸಿ. ಎಮ್. ಇಬ್ರಾಹಿಮ್ ಅವರ ಹೇಳಿಕೆಯೂ ಸೇರಿಕೊಂಡಿದೆ.