ಆರ್‌ ಜಿ ಕರ್‌ ಆಸ್ಪತ್ರೆ ಪ್ರಕರಣ | ಪ್ರಕರಣ ಪೊಲೀಸರ ಕೈಯಲ್ಲಿದ್ದಿದ್ದರೆ ಆರೋಪಿಗೆ ಮರಣದಂಡನೆಯಾಗುತ್ತಿತ್ತು: ಸಿಎಂ ಮಮತಾ

ಕೋಲ್ಕತ್ತಾ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಆರ್‌ ಜಿ ಕರ್ ಆಸ್ಪತ್ರೆಯ ವೈದ್ಯೆಯ ಕೊಲೆ ಪ್ರಕರಣದ ಅಪರಾಧಿ ಸಂಜಯ್ ರಾಯ್ ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ. ಈ ತೀರ್ಪಿನಿಂದ ತನಗೆ ತೃಪ್ತಿ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

“ಜೂನಿಯರ್ ವೈದ್ಯರ ಕೊಲೆಗೆ ಸಂಬಂಧಿಸಿದ ಪ್ರಕರಣದ ಅಪರಾಧಿಗೆ ಮರಣದಂಡನೆ ವಿಧಿಸಬೇಕೆಂದು ನಾವೆಲ್ಲರೂ ಒತ್ತಾಯಿಸಿದ್ದೆವು ಆದರೆ, ಅದು ಆಗಲಿಲ್ಲ. ಈ ಪ್ರಕರಣವನ್ನು ಬಂಗಾಳ ಪೊಲೀಸರಿಂದ ಸಿಬಿಐಗೆ ಬಲವಂತವಾಗಿ ವರ್ಗಾಯಿಸಲಾಯಿತು.

ಈ ಪ್ರಕರಣದ ತನಿಖೆ ಬಂಗಾಳ ಪೊಲೀಸರ ಕೈಯಲ್ಲಿದ್ದಿದ್ದರೆ, ಅಪರಾಧಿಗೆ ಮರಣದಂಡನೆ ವಿಧಿಸಲು ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದರು. ನಿಜವಾದ ತನಿಖೆ ಹೇಗೆ ನಡೆಯಿತು ಎಂಬುದು ತಿಳಿದಿಲ್ಲ. ರಾಜ್ಯ ಪೊಲೀಸರು ತನಿಖೆ ನಡೆಸಿದ ಇಂತಹ ಅನೇಕ ಪ್ರಕರಣಗಳಲ್ಲಿ, ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಯಿತು. ಪ್ರಸ್ತುತ ತೀರ್ಪು ತೃಪ್ತಿಕರವಾಗಿಲ್ಲ” ಎಂದು ಸಿಎಂ ಮಮತಾ ಸುದ್ದಿಗಾರರಿಗೆ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು