Friday, June 20, 2025

ಸತ್ಯ | ನ್ಯಾಯ |ಧರ್ಮ

ವೀರೇಂದ್ರ ಹೆಗ್ಗಡೆಯವರಿಂದ ಸಿ ಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಪತ್ರ!

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 14 ನೇ ಬಜೆಟ್ ನ ಫಲಶೃತಿಯನ್ನು ಶ್ಲಾಘಿಸಿ, ಶಕ್ತಿ ಯೋಜನೆಗೆ ಸಿಕ್ಕಿರುವ ಜನ ಮನ್ನಣೆಗೆ ಮೆಚ್ಚುಗೆ ಸೂಚಿಸಿ ಅಭಿನಂದನಾ ಪತ್ರವನ್ನು ಬರೆದಿದ್ದಾರೆ.

‘ಅನೇಕ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮ ನೀಡಿದ್ದೀರಿ. ಧರ್ಮಸ್ಥಳ ಕ್ಷೇತ್ರಕ್ಕೆ ಬರುತ್ತಿರುವ ಭಕ್ತರು, ವಿಶೇಷವಾಗಿ ಮಹಿಳೆಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಅನೇಕ ಮಹಿಳೆಯರು ನಿಮ್ಮ ಹೆಸರಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ. ಜೈನ ಸಮುದಾಯಕ್ಕೆ ನೀಡಿದ ವಿಶೇಷ ಅನುಧಾನದ ಬಗ್ಗೆ ಸಮುದಾಯದ ಪರವಾಗಿ ಅಭಿನಂದನೆಗಳು. ಅವಕಾಶ ಇದ್ದಾಗ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆದು ಹೋಗಬೇಕೆಂದು ಅಪೇಕ್ಷೆ ಪಡುತ್ತೇನೆ..’ ಎಂಬುದಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ವಿಶೇಷವಾಗಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ “ಶಕ್ತಿ” ಯೋಜನೆಯಿಂದ ರಾಜ್ಯದ ತೀರ್ಥಕ್ಷೇತ್ರಗಳಿಗೆ ಭಕ್ತಾದಿಗಳ ಸಂಖ್ಯೆ ಹೆಚ್ಚಿದೆ ಎಂದು ಮಾಧ್ಯಮಗಳು ಮೇಲಿಂದ ಮೇಲೆ ವರದಿ ಬಿತ್ತರಿಸಿದ್ದವು. ಶುರುವಿನಲ್ಲಿ ಬಿಜೆಪಿ ಪಕ್ಷದ ಕೆಲವು ನಾಯಕರೂ ಸಹ ಶಕ್ತಿ ಯೋಜನೆ ಒಂದು ಜನಪರ ಯೋಜನೆ ಎಂದೂ ಹೇಳಿಕೆ ನೀಡಿದ್ದರು.

ಆದರೆ ಇತ್ತೀಚೆಗೆ ಬಿಜೆಪಿ ತನ್ನ ವರಸೆ ಬದಲಿಸಿ ಶಕ್ತಿ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸಂಸ್ಥೆಗಳು ಈ ಯೋಜನೆಯಿಂದ ನಷ್ಟಕ್ಕೆ ಒಳಗಾಗುತ್ತಿವೆ ಎನ್ನುತ್ತಿದೆ. ಸಧ್ಯ ಬಿಜೆಪಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆ ಆದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಈ ಪತ್ರದ ನಂತರ ಬಿಜೆಪಿಯವರ ಮುಂದಿನ ವರಸೆಯ ಬಗ್ಗೆ ಕುತೂಹಲ ಮೂಡಿಸಿದೆ.

ಅಗತ್ಯವಾಗಿ ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ ಜೂನ್ 16 ರಂದು ಸೌಜನ್ಯ ಪ್ರಕರಣದ ಆರೋಪಿ ಎಂದೇ ಪ್ರಕರಣದಲ್ಲಿ ಹೆಸರು ಬಂದಿದ್ದ ಸಂತೋಷ್ ರಾವ್ ಅವರನ್ನು ಸಿಬಿಐ ಕೋರ್ಟ್ ದೋಷಮುಕ್ತಗೊಳಿಸಿ ಮಹತ್ವದ ತೀರ್ಪು ನೀಡಿತ್ತು. ಆ ನಂತರ ಒಡನಾಡಿ ಸಂಸ್ಥೆ ಮತ್ತು ತಿಮರೋಡಿ ಜಂಟಿಯಾಗಿ ಸೌಜನ್ಯ ಪ್ರಕರಣಕ್ಕೆ ಮರುಜನ್ಮ ನೀಡಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವೀರೇಂದ್ರ ಹೆಗ್ಗಡೆಯವರ ಈ ಪತ್ರ ಕುತೂಹಲ ಕೆರಳಿಸಿದೆ.

ಹತ್ತು ವರ್ಷಗಳ ಹಿಂದಿನ ಸೌಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ವೀರೇಂದ್ರ ಹೆಗ್ಗಡೆಯವರ ಸಂಬಂಧಿಗಳು ಎಂಬ ಆರೋಪ ಬಲವಾಗಿ ಕೇಳಿ ಬಂದಿತ್ತು. ಈಗ ಕಾಂಗ್ರೆಸ್ ಸರ್ಕಾರವಿದ್ದು, ಪ್ರಕರಣಕ್ಕೆ ಮರುಜೀವ ಪಡೆಯಬಹುದಾದ ಹಿನ್ನೆಲೆಯಲ್ಲಿ ಈ ಪತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page