ಬೆಂಗಳೂರು: “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದೆ. 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈಗ ಕರ್ನಾಟಕ ಸರ್ಕಾರವೂ ಅದೇ ರೀತಿಯಲ್ಲಿ ಘೋಷಿತವಲ್ಲದ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದೆ” ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ಬುಧವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಸರ್ಕಾರ ತನ್ನ ಇಚ್ಛೆಗೆ ತಕ್ಕಂತೆ ಬಳಸುತ್ತಿದೆ. ಇಂತಹ ಪರಿಸ್ಥಿತಿ 1975ರ ತುರ್ತು ಪರಿಸ್ಥಿತಿಯ ಕಾಲದಲ್ಲೂ ಇತ್ತು. ಈಗಲೂ ಅದೇ ರೀತಿ ರಾಜಕೀಯ ಪ್ರೇರಿತ ವರ್ತನೆ ಎದ್ದು ಕಾಣುತ್ತಿದೆ” ಎಂದು ಟೀಕಿಸಿದರು.
“ಬೆಳಗಾವಿ ಅಧಿವೇಶನದ ಸಮಯದಲ್ಲಿ ವಿಧಾನ ಪರಿಷತ್ತಿನಲ್ಲಿ ಸಭಾಪತಿಗಳು ರೂಲಿಂಗ್ ನೀಡಿದ ನಂತರವೂ ನನ್ನನ್ನು ಬಂಧಿಸಲಾಯಿತು. ನನ್ನ ಮೇಲೆ ನಡೆದ ಹಲ್ಲೆಯ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದಲಿತ ಸಮುದಾಯದ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರನ್ನು 4-5 ಗಂಟೆಗಳ ಕಾಲ ಗೃಹಬಂಧನದಲ್ಲಿ ಇರಿಸಲಾಯಿತು. ಅವರ ವಿರುದ್ಧವೂ ಯಾವುದೇ ಕ್ರಮವಾಗಿಲ್ಲ. ಗೃಹ ಸಚಿವರು ಸರ್ಕಾರದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗಿದ್ದಾರೆ. ಸಚಿವರು ಭ್ರಷ್ಟಾಚಾರವನ್ನೇ ತಮ್ಮ ಸಾಧನೆ ಎಂದುಕೊಂಡಿದ್ದಾರೆ” ಎಂದು ಅವರು ಆಕ್ಷೇಪಿಸಿದರು.